ಪುಟ:Mysore-University-Encyclopaedia-Vol-2-Part-1.pdf/೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಕನ್ನಡ ವಿಶ್ವಕೋಶ

            ಸಂಪುಟ ಎರಡು

ಆಲಂಪುರ: ಆಂಧ್ರಪ್ರದೇಶದ ಕರ್ನೂಲು ಪಟ್ಟಣಕ್ಕೆ ಸು.13 ಕಿಮೀ ದೂರದಲ್ಲಿ ತುಂಗಭದ್ರಾನದಿಯ ಪಶ್ಚಿಮ ದಡದಲ್ಲಿದೆ. ಭಾರತದ ದೇವಾಲಯಗಳ ಉಗಮ ಮತ್ತು ವಿಕಾಸವನ್ನು ಅಧ್ಯಯನ ಮಾಡಲು ಇಲ್ಲಿನ ದೇವಾಲಯಗಳು ಬಹು ಸಹಾಯಕವಾಗಿವೆ. ಈ ದೃಷ್ಟಿಯಿಂದ ಇದು ಪಟ್ಟದಕಲ್ಲಿನಷ್ಟೇ ಗಮನಾರ್ಹವಾದುದು. ಇಲ್ಲಿ ಪಟ್ಟದಕಲ್ಲಿನ ಪಾಪನಾಥ ದೇವಾಲಯವನ್ನು ಹೋಲುವ ಅನೇಕ ದೇವಾಲಯಗಳಿವೆ. ಇವುಗಳಲ್ಲಿ ಬಾಗುಳ್ಳ ಶಿಖರ, ಅಮಲಕ, ಗೂಡು ಮುಂತಾದವನ್ನು ಕಾಣಬಹುದು. ಚೌಕನೆಯ ಆಚ್ಛಾದಿತ ಹಜಾರಗಳು, ಅಪ್ಸರಶಿಲ್ಪಗಳಿಂದ ಕೂಡಿದ ಕಂಬಗಳಲ್ಲಿ ದಕ್ಷಿಣಾಪಥದ ಗುಹಾಂತರ ದೇವಾಲಯಗಳ ಪ್ರಭಾವವನ್ನು ಕಾಣಬಹುದು. ಸು.6 ಕಿಮೀ ದೂರದಲ್ಲಿ ದ್ರಾವಿಡ ಶೈಲಿಯ ಶಿಖರಗಳನ್ನುಳ್ಳ ಅನೇಕ ದೇವಾಲಯಗಳಿವೆ. ಈ ಶಿಖರಗಳು ಹಂತಗಳಿಂದ ಕೂಡಿದ್ದು, ಮೇಲೆ ಹೋದಂತೆ ಕಿರಿದಾಗುತ್ತವೆ. ಇಲ್ಲಿನ ಶಿಲ್ಪಗಳೂ ಮನೋಹರವಾಗಿವೆ. ಜಿಂಕೆಯ ಬೇಟೆ, ಗಾಂಧರ್ವಶಿಲ್ಪ, ಶಿವಪಾರ್ವತಿ, ಗಣೇಶ, ಬ್ರಹ್ಮ ಮುಂತಾದ ಶಿಲ್ಪಗಳು ಗಮನಾರ್ಹವಾದುವು. ಈ ದೇವಾಲಯಗಳು ಮತ್ತು ಶಿಲ್ಪಗಳು ಚಾಳುಕ್ಯ ಶೈಲಿಯಲ್ಲಿವೆ. ಇಲ್ಲಿನ ದೇವಾಲಯಗಳಲ್ಲಿ ಮುಖ್ಯವಾದುದು ಭೀಮಶಂಕರ ದೇವಾಲಯ. ಈಗಲೂ ಪೂಜೆ ನಡೆಯುತ್ತಿರುವ ಈ ದೇವಾಲಯದ ಶಿಖರ ಭದ್ರವಾಗಿದ್ದರೂ ಅದರ ಮೇಲಿನ ಕೆತ್ತನೆಯ ಅನೇಕ ಪದರ ಸುಣ್ಣಬಣ್ಣಗಳಿಂದ ಮರೆಯಾಗಿದೆ. ಇತ್ತೀಚಿನ ಕಟ್ಟಡಗಳು ಈ ಮಂದಿರದ ಸುಂದರವಾದ ವಾಸ್ತುಶೈಲಿಯನ್ನು ಮರೆಗೊಳಿವೆ. ಮತ್ತೊಂದು ದೇವಾಲಯವಾದ ಕುಮಾರಬ್ರಹ್ಮ ಮಂದಿರವನ್ನು ವಾನರ, ಆನೆ, ಹಂಸ ಮುಂತಾದ ಪ್ರಾಣಿಗಳ ಕೆತ್ತನೆಪಟ್ಟಿಕೆಗಳಿಂದ ಅಲಂಕೃತವಾದ ಜಗಲಿಯ ಮೇಲೆ ಕಟ್ಟಲಾಗಿದೆ. ಮುಖಮಂಟಪ ಮತ್ತು ನವರಂಗಗಳಾದ ಆನಂತರ ಇರುವ ಗರ್ಭಗೃಹ 76,660 ಚದರಗಳಿದ್ದು ಪ್ರದಕ್ಷಿಣ ಮಾರ್ಗದಿಂದ ಆವೃತವಾಗಿದೆ. ಈ ಮಂದಿರದ ಸ್ತಂಭಗಳು ಅಜಂತ ಎಲ್ಲೋರಗಳ ಸ್ತಂಭಗಳನ್ನು ಬಹುವಾಗಿ ಹೋಲುತ್ತವೆ. ಮುಖ ಮಂಟಪದಲ್ಲಿ ಕೆತ್ತಲಾಗಿರುವ ಪ್ರೇಮಿಗಳ ಶಿಲ್ಪಗಳು ಮಾನವಜೀವನದ ಚಿತ್ರಣಗಳಾಗಿವೆ. ಮಂದಿರದ ಒಳಭಾಗದಲ್ಲಿ ಸಪ್ತಮಾತೃಕೆಯರನ್ನು ರೂಪಿಸಿದೆ; ಗರ್ಭಗೃಹದಲ್ಲಿ ಲಿಂಗವನ್ನು ಪ್ರತಿಷ್ಟಾಪಿಸಲಾಗಿದೆ. ಮತ್ತೊಂದು ದೇವಾಲಯವಾದ ಅರ್ಕಬ್ರಹ್ಮ ಮಂದಿರದ ಸ್ತಂಭಗಳು ಗಮನಾರ್ಹವಾಗಿದ್ದು ದಕ್ಷಿಣಾ ಪಥದ ಗುಹಾಂತರ ದೇವಾಲಯಗಳ ಸ್ತಂಭಗಳನ್ನು ಹೋಲುತ್ತವೆ. ಈ ಗುಂಪಿನಲ್ಲಿ ಕೊನೆಯದಾದ ವೀರಬ್ರಹ್ಮಮಂದಿರದ ಹೊರಭಾಗ ಸುಂದರವಾದ ಕೆತ್ತನೆಗಳಿಂದ ತುಂಬಿದೆ. ಇವುಗಳಲ್ಲಿ ಬೇರೆ ಬೇರೆ ಭಂಗಿಗಳಲ್ಲಿರುವ ನಾಲ್ಕು ಆನೆಗಳೂ ಚಾಮರಾಧಾರಿಣಿ ಸ್ತ್ರೀವಿಗ್ರಹಗಳೂ ಗೂಡುಗಳೂ ತಳಭಾಗದಲ್ಲಿರುವ ಮಾನವ ಮುಖಗಳೂ ಬಹಳ ಆಕರ್ಷಣೀಯವಾಗಿದ್ದು ದ್ರಾವಿಡ ಲಕ್ಷಣಗಳನ್ನು ಬಿಂಬಿಸುತ್ತವೆ. ದ್ರಾವಿಡ ದೇಶದ ಎಲ್ಲೆಯಲ್ಲಿರುವ ಈ ದೇವಾಲಯಗಳಲ್ಲಿ ದ್ರಾವಿಡ ಶೈಲಿಯ ಲಕ್ಷಣಗಳು ಕಂಡುಬಂದರೂ ಅಲ್ಲಿನ ಶಿಖರಗಳು ಔತ್ತರೇಯ ಪ್ರಭಾವವನ್ನೂ ಒಳಭಾಗ ಪಶ್ಚಿಮ