ಪುಟ:Rangammana Vathara.pdf/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

55

ತ್ತಿದ್ದ. ನಾರಾಯಣಿ ಮತ್ತು ನಾರಾಯಣಿಯ ಗಂಡ...
ವಠಾರದ ಬೇರೆ ಹೆಂಗಸರೂ ಅಷ್ಟೇ. ತಮ್ಮ ತಮ್ಮ ತಕ್ಕಡಿಯಲ್ಲಿ ಹೊಸ
ಸಂಸಾರದ ಒಡತಿಯನ್ನೂ ಒಡಯನನ್ನೂ ತೂಗಿ ನೋಡಿದರು.
ಶಂಕರನಾರಾಯಣಯ್ಯನಿಗಿಂತ ಮುಂದಿದ್ದ ಆತನ ಹೆಂಡತಿ ತನ್ನ ಗಂಡ ಬಾಡಿಗೆಗೆ
ಹಿಡಿದಿದ್ದ ಮನೆಯ ಒಳಹೊಕ್ಕು ನೋಡಿದಳು. ಇದನ್ನು ಗಮನಿಸಿದ ಕೆಲ ಹೆ೦ಗಸರು
ಮುಖಚೇಷ್ಟೆ ಮಾಡದಿರಲಿಲ್ಲ. ಹೊಸಬಳು ಅಡುಗೆ ಮನೆ, ಛಾವಣಿ, ನೆಲ, ಗೋಡೆ
ಗಳ ಪರೀಕ್ಷೆ ಮಾಡಿದಳು. ನೆಲವನ್ನು ಸಾರಿಸಿತ್ತು. ಗೋಡೆಗೆ ಅಲ್ಲಿ ಇಲ್ಲಿ ಸುಣ್ಣದ
ನೀರಿನ ಸ್ಪರ್ಶವಾದಂತಿತ್ತು.
ಭಾರದ ಸಾಮಾನುಗಳನ್ನು ಹೊರುವ ಕೆಲಸವನ್ನೆಲ್ಲ ಗುಂಡಣ್ಣನಿಗೆ ಬಿಟ್ಟು
ಶಂಕರನಾರಾಯಣಯ್ಯ ಹಗುರವಾದೆರಡು ಡಬ್ಬಗಳನ್ನು ಹೊತ್ತು ಒಳಬಂದ.
"ಸುಣ್ಣ ಬಳೆದಿದೆ ತಾನೆ?"
“ಓಹೋ !"
ಆ ಉದ್ಗಾರದಲ್ಲಿ ಅಣಕವಿತ್ತು.
ಒಂಟಿ ಎತ್ತಿನ ಗಾಡಿಹೊರಟುಹೋಯಿತು. ಮನೆಯ ಸಾಮಾನುಗಳೆಲ್ಲ ಒಳಕ್ಕೆ
ಬಂದವು. ಸಾಮಾನುಗಳನ್ನು ಹಿ೦ಬಾಲಿಸಿದ ಹುಡುಗರು ಬಾಗಿಲ ಮುಂದೆ
ನೆರೆದರು.
ಸಾಮಾನುಗಳನ್ನಷ್ಟೇ ನೋಡಿ, ಬಂದಿರುವುದು ಬಡ ಸಂಸಾರವೇ ಎಂದು
ತೀರ್ಮಾನಿಸಲು ವಠಾರದ ಹೆಂಗಸರಿಗೆ ಹೆಚ್ಚು ಹೊತ್ತು ಹಿಡಿಯಲಿಲ್ಲ.
ಅಹಲ್ಯಾ ಮತ್ತು ರಾಧಾ ಕಾಮಾಕ್ಷಿಯ ಮನೆ ಸೇರಿ ಚರ್ಚೆ ನಡೆಸಿದರು. ಚಿತ್ರ ಬರೆ
ಯುವವರ ಮನೆಯೆಂದರೆ ಹಾಗಿರಬಹುದು ಹೀಗಿರಬಹುದು ಎಂದು ಅಹಲ್ಯಾ ತರ್ಕಿಸಿ
ದ್ದಳು. ಅಂಥದೇನೂ ಈಗ ಕಾಣಲಿಲ್ಲವೆಂದು ಆಕೆಗೆ ನಿರಾಸೆಯಾಗಿತ್ತು.
ಇನ್ನೂ ಏನಾದರೂ ಕೆಲಸವಿದೆಯೇನೋ ಎಂಬಂತೆ ಗುಂಡಣ್ಣ ನಿಂತೇ ಇದ್ದ.
ಅವನ ವ್ಯಕ್ತಿತ್ವವನ್ನು ಅಷ್ಟರಲ್ಲೆ ಸೂಕ್ಷ್ಮ ನಿರೀಕ್ಷಣೆಯಿಂದ ಅಳೆದು ನೋಡಿದ್ದ ಶಂಕರ
ನಾರಾಯಣಯ್ಯ ಹೇಳಿದ:
"ಪರವಾಗಿಲ್ಲ. ಇನ್ನು ನಾವೇ ಇಟ್ಕೋತೀವಿ. ಹೋಗಿ."
ಗುಂಡಣ್ಣ ಹುಡುಗರೆಡೆಯಲ್ಲಿ ಹಾದಿ ಬಿಡಿಸಿಕೊಂಡು ಹೊರಟ. 'ಉಪಕಾರ
ವಾಯ್ತು,' 'ತೊಂದರೆ ಕೊಟ್ಟೆ' ಎಂದೆಲ್ಲ ಗುಂಡಣ್ಣನಿಗೆ ವಂದನಾರ್ಪಣೆ ಮಾಡುವ
ಅಗತ್ಯವಿಲ್ಲವೆಂದು ಶಂಕರನಾರಾಯಣಯ್ಯ ಸುಲಭವಾಗಿ ತೀರ್ಮಾನಿಸಿದ್ದ .
ಹುಡುಗರೆಲ್ಲ ಮುತ್ತಿಕೊಂಡುದರಿಂದ, ಗಾಳಿ ಬೆಳಕು ಓಡಲು ಅವಕಾಶ ದೊರೆ
ಯದೆ ಮಗು ಅಳತೊಡಗಿತು
ಅಷ್ಟರಲ್ಲೆ ರಂಗಮ್ಮ ಅಲ್ಲಿಗೆ ಬಂದು ತಲುಪಿ, ಹುಡುಗರವೇಲೆ ಎರಗಿದರು.
"ಹೋಗ್ರೋ..ಇಲ್ಲೇನು ಕೋತಿ ಕುಣೀತಿದ್ಯೆ? ಹೂಂ... ಬೀದಿಗೆ ಹೋಗಿ