ವಿಷಯಕ್ಕೆ ಹೋಗು

ಪುಟ:Uttara Karnataka Janapada Kathegalu.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಮ್ಯಕಥೆಗಳು

19

ಉಂಡು, ಸ್ವಸ್ಥವಾಗಿ ಬಂಕಿನಲ್ಲಿ ಮಲಗಿಕೊಂಡನು. ಅಪ್ಪನೂ ಮಲಗಿಕೊಂಡನು.

ಕಳ್ಳನ ಮಗಳು ಯೋಚಿಸಿ ಆತನ ಕಡೆ ಬಂದು - ``ನಡೆ, ಒತ್ತರಮಾಡು. ಮನೆಯಲ್ಲಿ ಎರಡು ಕುದುರೆ ಅವೆ. ಒಂದು ಚೌವೀಸಹರಿ ಓಡುವ ಕುದುರೆ, ಇನ್ನೊಂದು ಬಾರಾಹರಿ ನಡೆಯುವ ಕುದುರೆ. ನೀನು ಚೌವೀಸ ಹರಿ ನಡೆಯುವ ಕುದುರೆ ತಗೊಂಡು ಊರ ಹೊರಗೆ ಬಾ. ನಾ ಅಲ್ಲಿ ಇರತೀನಿ. ಇಬ್ಬರೂ ಕೂಡಿ ಮುಂದಕ್ಕೆ ಹೋಗೋಣು.

ಕತ್ತಲೆಯಲ್ಲಿ ಗಡಬಡಿಸಿ ಆತನು ಚೌವೀಸಹರಿಯ ಕುದುರೆಬಿಟ್ಟು ಬಾರಾಹರಿ ನಡೆಯುವ ಕುದುರೆ ಬಿಟ್ಟುಕೊಂಡು ಬಂದನು. ``ಹೀಂಗ್ಯಾಕೆ ಮಾಡಿದೀ ಎಂದು ಕಳ್ಳನಮಗಳು ಕೇಳಿದಳು. ಇಬ್ಬರೂ ಕುದುರೆ ಮೇಲೆ ಕುಳಿತುಕೊಳ್ಳುತ್ತಲೆ ಬಾರಾಹರಿ ಕುದುರೆ ಒಂದೇ ಓಟದಲ್ಲಿ ಹೋಗಿ ನಿಂತುಬಿಟ್ಟಿತು.

ತನ್ನ ಮನೆಯಲ್ಲಿ ಆ ಹುಡುಗ ಮತ್ತು ಮಗಳು ಇಲ್ಲದ್ದನ್ನು ನೋಡಿ ಕಳ್ಳನು, ಚೌವೀಸಹರಿ ನಡೆಯುವ ಕುದುರೆ ಹತ್ತಿ ಹೊರಟನು. ಒಮ್ಮಿಂದೊಮ್ಮೆ ಅವರಿದ್ದಲ್ಲಿಗೆ ಬಂದನು.

``ಈಗ ನಮ್ಮಪ್ಪ ಹೊಂಟಾನ. ನೀ ಗಪ್ಪನೆ ಗಿಡ ಏರಿ ನಿಲ್ಲು. ಆತನು ಕುದುರೆ ಬಿಟ್ಟು ನಿನ್ನ ಹಿಡೀಲಿಕ್ಕೆ ಬರತಾನ. ಅದಕ್ಕಿಂತ ಮೊದಲೇ ನಾನು ಕುದುರೆ ಹತ್ತಿ ಗಿಡದ ಕೆಳಗೆ ಬರತೀನಿ. ನೀ ಆಗ ಗಿಡದ ಮೇಲಿಂದ ಕುದುರೆ ಮ್ಯಾಗ ಜಿಗಿ ಎಂದು ಕಳ್ಳನ ಮಗಳು ಆತನಿಗೆ ಹೇಳಿಟ್ಟಿದ್ದಳು.

ಕುದುರೆಯ ಮೇಲೆ ಕಳ್ಳ ಬಂದಾಗ ಅವನ ಮಗಳು ಅಲ್ಲೇ ನಿಂತಿದ್ದಳು - ``ಎಲೆ ಮಗಾ, ನೀ ಹಿಂಗ್ಯಾಕ ಬಂದೀ ? ನಿನಗೆ ಈಸು ದಿನ ಜೋಕೆ ಜನ ಮಾಡಿದ್ದು ಸುಳ್ಳು ಮಾಡಿದೆಲ್ಲ ? ಎಂದಾಗ ಕಳ್ಳನ ಮಗಳು ಹೇಳುತ್ತಾಳೆ - ``ಅಪ್ಪ, ಈತ ಈಗ ಗಿಡ ಏರ್ಯಾನ ನೋಡಪ್ಪ ಬದಮಾಶ. ನನಗೆ ಓಡಿಸಿಕೊಂಡು ಬಂದಾನ ನೋಡಪ್ಪ.

ತಂದೆ ಕಳ್ಳನ ಕಡೆಗೆ ಹೊರಟನು. ಮಗಳು ಚೌವೀಸಹರಿ ಓಡುವ ಕುದುರೆಯೇರಿ, ಹುಡುಗನೇರಿದ ಗಿಡದ ಕೆಳಗೆ ನಿಲ್ಲಿಸಿ, ಅವನನ್ನೂ ಕರಕೊಂಡು ಕುದುರೆಗೆ ಸಪ್ ಎಂದು ಚಬಕಿಯಿಂದ ಹೊಡೆದು ಓಡಿಸಿದಳು.

ಚೌವೀಸಹರಿ ಓಡುವ ಕುದುರೆಯೇರಿ ಮಗಳು ಹೋಗಿದ್ದನ್ನು ಕಳ್ಳ ನೋಡಿದನು. ಇವರಂತೂ ದಕ್ಕಿ ಹೋದರು. ಇನ್ನು ನನ್ನ ಹಣೆಬರಹ ಏನಾಗಬೇಕು ಎಂದು ಹಳಹಳಿಪಟ್ಟನು.