ವಿಶಾಲಾಕ್ಷಿ, 'ಪ್ರಬುದ್ಧ ಕರ್ಣಾಟಕ'ದ ಸಂಚಿಕೆಯನ್ನೂ ಲೇಖನದ ಮೂರು ಪ್ರತಿಗಳನ್ನೂ ತೆಗೆದು ಒತ್ತಟ್ಟಿಗೆ ಇರಿಸಿದಳು. ತರಗತಿಯಲ್ಲಿ ಟಿಪ್ಪಣಿ ಬರೆದುಕೊಳ್ಳಲು ಹಾಳೆಗಳು ಕೆಲವು, ಪೆನ್ನು, ಒಯ್ಯುವುದು ಹೇಗೆ ? ಶೋಕಿ ಚೀಲವಿತ್ತು. ಬಳಸುತ್ತಿದ್ದುದು ಕಡಮೆ, ಆದರೆ ಅದರೊಳಗೆ ಇವೆಲ್ಲ ಹಿಡಿಸಲಾರವು, ಪೆನ್ನು ಹಾಳೆಗಳನ್ನಷ್ಟೆ ಹೊರಗಿರಿಸಿ, ಅವನ್ನು ಯಾವುದಾದರೂ ಪೇಪರಿನೊಳಗೆ ಭದ್ರವಾಗಿ ಸುತ್ತಿ ದಾರ ಬಿಗಿಯುವುದೇ ಸರಿ. ಅದರೊಳಗೇನಿದೆ ಎಂಬುದು ಸಹಾಧ್ಯಾಯಿಗಳಿಗೆ ಗೊತ್ತಾಗಬಾರದು....
“ಮಾರ್ಕೆಟ್ಟಿನಿಂದ ಏನಾದರೂ ತರಬೇಕೇನಮ್ಮ?”
ಸಾಮಾನು ಯಾವುದಾದರೂ ತೀರಿದೆಯೇ ಎಂದು ನಾಗಮ್ಮ ಒಂದು ಕ್ಷಣ ಯೋಚಿಸಿದರು, ಒಂದೂ ಹೊಳೆಯಲಿಲ್ಲ.
“ನೆನಪಾಗೋಲ್ವಲ್ಲೇ....?
“ಹೋಗಲಿಬಿಡು, ಚಂದ್ರನಿಗೆ ಹೇಳಿ ಭಾನುವಾರ ತರಿಸಿದರಾಯ್ತು.”
“ತರಕಾರಿ ಮುಗಿದಿದೆ.”
“ಅಲ್ಲಿಂದಲೇ ತರಲೋ ? ಅಥವಾ ಬೆಳಗ್ಗೆ ಮಾಡ್ಕೊಂಡು ಬಂದಾಗ?
“ಸಾಕು, ಸಾಕು, ಇಲ್ಲೇ ಕೊಂಡರಾಯ್ತು, ಮುಗಿದಿದೆ ಅಂತ ಹೇಳ್ಳೆ, ಅಷ್ಟೆ.”
ಮಗಳು ಚಿಲ್ಲರೆ ದುಡ್ಡೆಣಿಸಿ, ಹೊರಬೀಳಲು ಅಣಿಯಾಗಿ, ಚಪ್ಪಲಿ ಮೆಟ್ಟಿ ಕೊಳ್ಳುತ್ತಿದ್ದಂತೆ, ನಾಗಮ್ಮ ಕೇಳಿದರು
“ಎಷ್ಟು ಹೊತ್ತಿಗೆ ಬರ್ತೀಯಾ ?” “ಗಿರಿಜಾಬಾಯಿಯನ್ನು ನೋಡಿ, ಹಾಗೇ ಮಾತಾಡಿಸ್ಕೊಂಡು...”
“ಆದಷ್ಟು ಬೇಗೈ ಬಂದ್ವಿಡು.”
“ಹೂನಮ್ಮ”.
ಎಲ್ಲ ವಿವರಗಳೂ ಯಾಕೆ ಎಂದು, ನರ್ಮದೆಯನ್ನು ಕಾಣಹೋಗುವ ವಿಷಯ ವಿಶಾಲಾಕ್ಷಿ ತಾಯಿಗೆ ಹೇಳಲಿಲ್ಲ. ಹೊಸ್ತಿಲು ದಾಟಿ ಹೊರಬೀಳುತ್ತ ಅವಳೆಂದಳು ;
“ಬರ್ತೀನಿ.”
ಸ್ಲೇಟು ಪುಸ್ತಕಗಳನ್ನು ಚೀಲದಲ್ಲಿ ತುಂಬಿ, ಎಳೆಯರ ಶಾಲೆಗೆ ಲಂಗತೊಟ್ಟು