ಎದುರು ಬದಿಯಲ್ಲಿ ಬಲು ಹಳೆಯದಾದೊಂದು ಸಂಸಾರ-ಭಾವಚಿತ್ರವಿತ್ತು. ನಾಗಮ್ಮ ಮತ್ತು ಅವರ ಯಜಮಾನರು, ಚಡ್ಡಿ ಧರಿಸಿದ್ದ ರಾಜು, ಲಂಗ ತೊಟ್ಟಿದ್ದ ವಿಶಾಲಿ, ತಾಯಿಯ ತೊಡೆಯ ಮೇಲಿದ್ದ ಕೂಸು ಚಂದ್ರ. ಆಗ ಇನ್ನೂ ಜಯನ ಆಗಮನವಾಗಿರಲಿಲ್ಲ.
ವಿಶಾಲಿ ಅಂದಿದ್ದಳು :
ಈ ಚಿತ್ರ ಚೆನ್ನಾಗಿದೆಯಮ್ಮ ನಮ್ಮ ತಂದೆದನ್ನು ಅಷ್ಟೇ ಬೇರೆ ತೆಗೆದು, ದೊಡ್ಡದಾಗಿ ಮಾಡಿಸೋಕು ಕಮಲ್ ಸ್ಟುಡಿ ಯೋನವರು ಚೆನ್ನಾಗಿ ಮಾಡ್ಕೊಡ್ತಾರೆ.
ಎಷ್ಟು ಖರ್ಚಾಗಬಹುದು ?-ಎಂದು ನಾಗಮ್ಮ ಕೇಳಿರಲಿಲ್ಲ. ಒಳ್ಳೆಯ ಕೆಲಸಕ್ಕೆ ಖರ್ಚು ಎಷ್ಟಾದರೇನಂತೆ ? ಯೋಚಿಸಲೇಬಾರದು ಆ ವಿಷಯ. ತನ್ನ ದೇವರ ಚಿತ್ರ, ದೊಡ್ಡದಾಗಿ, ಮನೆಗೇ ಶೋಭೆಯಾಗಿ.......
“ಅಮ್ಮಾ, ಏನ್ಮಾಡ್ತಿದೀಯಾ? ಬಡಿಸು ನಂಗೆ.”ನುಡಿದ.
ಅವಸರವಾಗಿ ಒಳಕ್ಕೆ ಬಂದು, ತಾಯಿಯ ಬಳಿಸಾರಿ, ಜಯರಾಮು ಹಾಗೆ ನುಡಿದ
ಸರಿಯಾಗಿ ಕೈಕಾಲು ತೊಳೆಯುವ ವ್ಯವಧಾನವೂ ಇಲ್ಲ ಅವನಿಗೆ
ತಮ್ಮ ಸುತ್ತಲೂ ನೇಯತೊಡಗಿದ್ದ ಯೋಚನೆಗಳ ನೆನಪುಗಳ-ಬಲೆಗಳ ನ್ನೆಲ್ಲ ಬದಿಗೆ ಸವರಿ, ಲಗುಬಗೆಯಿಂದ ನಾಗಮ್ಮ ಅಡುಗೆ ಮನೆಯತ್ತ ನಡೆದರು.
ಮಗನ ಒದ್ದೆ ಪಾದಗಳನ್ನು ನೋಡಿ ಅವರೆಂದರು :
“ಸರಿಯಾಗಿ ಒರಸ್ಕೋಬಾರದೇನೋ ?”
“ಇರಲಿ, ಬಿಡಮ್ಮ.”
ತಾಯಿಯಬಳಿ ಹೆಚ್ಚು ಸಲಿಗೆ ಕಿರಿಯವನಿಗೆ ಅವರಿಗೂ ಆತ ಮುದ್ದಿನಮಗ
....ಉಣ್ಣುತ್ತ ಜಯರಾಮು ಕೇಳಿದ :
“ಅಕ್ಕ ಕಾಲೇಜಿಗೆ ಹೋದಳಾ ?”
" ಹೂಂ."
“ನಿನ್ನ ಊಟ ಆಯ್ತಾ ?”
“ಇನ್ನೂ ಇಲ್ಲವಪ್ಪ.”
ಚಂದ್ರ ಉಂಡುಹೋದನೆ?-ಎಂದು ಜಯರಾಮು ಇನ್ನು ಕೇಳಬೇಕು. ಅಷ್ಟರಲ್ಲಿ, ಆತ ಬಂದನೆಂಬುದಕ್ಕೆ ಸಾಕ್ಷಿಯಾಗಿ, ಹೊರಗೆ ಸೈಕಲ್ಲಿನ ಸದ್ದಾಯಿತು.