ನರ್ಮದೆ ಹಿಂದೆ ಎಂತಹ ಹೆಣ್ಣಾಗಿದ್ದಳೆಂಬುದನ್ನು ವಿಶಾಲಾಕ್ಷಿಯ ಬಣ್ಣನೆಯಿಂದ ತಿಳಿದಿದ್ದ ಗಿರಿಜಾಬಾಯಿ ತಮ್ಮಷ್ಟಕ್ಕೇ ಮುಗುಳು ನಕ್ಕರು. ಬಣ್ಣದ ಚಿಟ್ಟೆಯಂತೆ ಕಂಡ ನರ್ಮದೆಯನ್ನು ಹಿಂದೆಯೊಮ್ಮೆ ದಸರಾ ವಸ್ತು ಪ್ರದರ್ಶನದಲ್ಲಿ ಕಂಡಿದ್ದುಇನ್ನೂ ಅವರಿಗೆ ನೆನಪಿತ್ತು. ತಾಯ್ತನದ ಫಲವಾಗಿ ಅವಳಲ್ಲಾದ ಅಪೂರ್ವ ಬದಲಾವಣೆಯ ವಿಷಯವನ್ನೂ ಅವರು ತಿಳಿದಿದ್ದರು. ಮುಗ್ಧ ಹೃದಯದಿಂದ ತನ್ನೆಲ್ಲ ಒಲವನ್ನೂ ಬಾಲ್ಯದ ಗೆಳತಿಗಾಗಿ ಕೊಟ್ಟಿದ್ದವಳು ವಿಶಾಲಾಕ್ಷಿ. ಪ್ರತಿಯಾಗಿ ಏನನ್ನೂ ಅಪೇಕ್ಷಿಸಿರಲಿಲ್ಲ ಎಂದೂ, ಗೆಳತಿಯ ವರ್ತನೆಯಿಂದ ಒಮ್ಮೊಮ್ಮೆ ಮನಸ್ಸು ನೊಂದಾಗಲೂ ಬೇರೊಬ್ಬರೊಡನೆ ದೂರಿಕೊಂಡಿರಲಿಲ್ಲ. ಹೀಗಿದ್ದರೂ, ಲೋಕಾನುಭವಿಯಾದ ಗಿರಿಜಾಬಾಯಿ ನರ್ಮದೆಯನ್ನು ಸರಿಯಾಗಿ ತಿಳಿದುಕೊಳ್ಳಲು ಶಕ್ತರಾಗಿದ್ದರು.
[ಈ ವಿಶಾಲಾಕ್ಷಿ ಇನ್ನೂ ಎಳೇ ಮಗುವೇ, ವಯಸ್ಸು-ಮಾತ್ರ.... ಮುರಲಿ ತನ್ನದೇ ಶಿಶುವೇನೋ ಎನ್ನುವಷ್ಟು ಇವಳಿಗೆ ಉತ್ಸಾಹ, ಒಳಗೆ ಬಯಕೆಗಳೇ ಇಲ್ಲವೆಂದೆ ? ಇದ್ದರೂ ಈ ಸಮಸ್ಯೆಗೆ ಪರಿಹಾರ ? ಪ್ರೀತಿಯ ಈ ಖಣಿಯ ಒಡೆಯನಾಗುವವನು, ಇವಳ ಕೈಹಿಡಿಯುವವನು, ನಿಜವಾಗಿಯೂ ಅದೃಷ್ಟಶಾಲಿಯೇ ಸರಿ, ಆದರೆ ಅಂಥವನು ಎಂದು ಬರುವ ? ಎಂದು ?”]
“ನಿಮ್ಮನ್ನೊಮ್ಮೆ ಕರಕೊಂಡು ಬರಬೇಕೂಂತ ನರ್ಮದಾ ಹೇಳಿದಾಳೆ, ಕಣ್ರೀ,
“ಆ ?”
[ಯಾವ ಯೋಚನೆಯಲ್ಲಿದ್ದರೋ] ?
“ಗಿರಿಜಾಬಾಯಿಯನ್ನೂ ಒಮ್ಮೆ ಕರಕೊಂಡುಬಾ ಅಂದ್ಲು ನರ್ಮದಾ..?
ಆಗಲಿ, ಅದಕ್ಕೇನಂತೆ ? ಒಂದು ದಿವಸ ಹೋಗೋಣ.”
ಮನೆಯೊಳಗೆ ಮಸಕಾಯಿತು. ಕತ್ತಲು ಕವಿಯುತ್ತ ಬಂದಿತ್ತು ಹೊರಗೆ
“ರಮಾ, ಸ್ವಿಚ್ ಹಾಕೇ.
ವಿಶಾಲಾಕ್ಷಿ ಗಡಬಡಿಸಿ ಎದ್ದಳು.
“ಹೊತ್ತಾಗೋಯ್ತು ! ಅಮ್ಮ ಹಾದಿನೋಡ್ತಾ ಇದ್ದಾರೆ.”
ಗಿರಿಜಾಬಾಯಿಯೂ ಎದ್ದು, ಕ್ಯಾಲೆಂಡರಿನ ಮೊಳೆಗೆ ತೂಗಹಾಕಿದ್ದ ತಮ್ಮ ಕೈಗಡಿಯಾರದ ಜಡೆ ನೋಡಿ ಅಂದರು.