ಪುಟ:Vimoochane.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ಆ ಸಾಹಿತ್ಯ ಸೃಷ್ಟಿಯ ವೇದನೆ ಯಾರಿಗೆ ಗೊತ್ತಿರ್ತದೆ ಹೇಳಿ?
ಮುದ್ದಾಗಿ ಮುದ್ರಣವಾದ ಮೇಲೆಯೇ ನಾವು ಓದೋದು."
"... .... .... ...."
"ಚೊಚ್ಚಲ ಸಂಭ್ರಮ. ಹೆಸರು ಮೊದಲೇ ಗೊತ್ತಾಗಿರ್ತದೆ. ಅಲ್ಲವೆ ಸಾರ್?"
"ಅಂಥ ಮೋಹವೇ ಇಲ್ಲದ ನಿರ್ವಿಕಾರ ನಾನು. ಆತುರವಿಲ್ಲದವನು.
ಆತ್ಮ ಪ್ರಶಂಸೆ ಅಂತ ನಗಬೇಡಿ ದಯವಿಟ್ಟು.......ನೀವು
ಕೇಳಿದಿರಿ, ಹೇಳೋಣ. 'ವಿಮೋಚನೆ' ಅಂತ ಹೆಸರಿಟ್ಟಿದೀನಿ."
ಅವರು ಹಸ್ತಪ್ರತಿಯ ಮೊದಲ ಹಾಳೆಯನ್ನೋದಿದರು-ಅರ್ಪಣೆಯ ವಿಷಯ.

"ಓ!" ಅದು ಅವರಿಂದ ಹೊರಟ ಆಶ್ಚರ್ಯದ ಉದ್ಗಾರ.
ನನ್ನನ್ನು ನೋಡಿ ಅವರು ಮುಗುಳುನಕ್ಕರು.
"ಅದು ಸ್ಟಂಟ್ ಅಲ್ಲ ಇವರೆ. ಗುಣವನ್ನು ಕಂಡು ಮತ್ಸರ
ಪಡುವವನು ಅನಾಗರಿಕ. ಇದ್ದುದನ್ನು ಇದ್ದಂತೆ ಹೇಳಲಾಗದವನು
ದುರ್ಬಲ. ನನ್ನ ಜಾತಿ ಬೇರೆ. ಕನ್ನಡ ಸಾಹಿತ್ಯದಲ್ಲಿ ಕಾದಂಬರಿಯ
ಬಯಲು ಈ ದಿನ ಮುಖ್ಯವಾಗಿದ್ದರೆ ಅದಕ್ಕೆ, ಆ ಹೊಲದಲ್ಲಿ ಮೊದಲು
ಉಳುಮೆ ಮಾಡಿದವರೇ ಕಾರಣರು. ಅವರೆಲ್ಲ ಆಧುನಿಕ ಕನ್ನಡ ಸಾಹಿ
ತ್ಯದ ಹುಟ್ಟಿನೊಡನೆಯೆ ಬರಹಗಾರರಾಗಿ ಹುಟ್ಟಿದವರು.ಹಳೆಯ
ಹುಲಿಗಳು. ಅಲ್ಲವೆನ್ನುತ್ತೀರಾ?"
"ನೀವು ಹೇಳುತ್ತಿರೋದು ನಿಜ"
"ಈ ದಿನ ಕಾದಂಬರಿಯ ಹೊಲದಲ್ಲಿ ಎಂಥ ಬೆಳೆ ಬೆಳೆಯು
ತ್ತಿದೆ ಎನ್ನುವುದು ಬೇರೆ ವಿಷಯ . ಒಳ್ಳೆಯ ಫಸಲು ಬರುವಂತೆ
ಮಾಡುವುದು ನಮ್ಮ ನಿಮ್ಮ ಕರ್ತವ್ಯ. ಆದರೆ ಕಾಡು ಕಡಿದು
ಕನ್ನಡ ಸಾಹಿತ್ಯದ ಭೂಮಿಯನ್ನು ವಿಸ್ತರಿಸಿ ಕಾದಂಬರಿಯ ಹೊಲ
ವನ್ನು ನಮ್ಮದಾಗಿ ಮಾಡಿಕೊಟ್ಟ ಕನ್ನಡದ ಪ್ರಮುಖ ಕಾದಂಬರಿ
ಕಾರರಿಗೆ ನಾವು ಗೌರವ ಸೂಚಿಸಬೇಕು. ಅದು ನ್ಯಾಯವಾದ್ದು.
ಅಂತಹ ನಮ್ಮ ಕಾದಂಬರಿಕಾರರಲ್ಲಿ ಕಾರಂತ ಮತ್ತು ಅನಕೃ