152
ಕ್ವಡೊ ಮಾಮೂಲ ಬಿಸಾಕಿ, ಈ ಮಾಲ ತಟಾಯಿಸೊ ಬಾರ ನಿಮ್ಮದು!... ಮೈಸೂರ್ನ ಶ್ರೀನಿವಾಸಯ್ನ ಕೋಠೀಲಿ ಶ್ರೀಗಂಧದ ತುಂಡುಗಳ ಇಳುಕಿ, ಆಳಿಗೆ ಐದೈದು ರೂಪಾಯಿ ಈಸುಗನ್ನಿ- ಮೈಸೂರಿಗೋದಾಗ ನಾನು ಲೆಕ್ಕ ಚುಕ್ತಾ ಮಾಡ್ಕತ್ತೀನಿ. ಅಂಗೇಯ ಮೈಸೂರು ಪಟ್ಟಣದಲ್ಲಿ ಗಾಡಿಮೇಲೆ ಹೇರಿರೊ ಸವುದೆ ಮಾರಿ ಬಂದ ದುಡ್ನಲ್ಲಿ, ಮೂರು ಮೂರು ರೂಪಾಯಿ ತಕ್ಕಂದು ಮಜಾ ಮಾಡ್ಕಂಬನ್ನಿ... ಉಂ” - ನಂಜೇಗೌಡರು ಅನ್ನಾದೆ ತಡ,
“ಅಂಗೇ ಆಗ್ಲಿ. ನಾವಿನ್ನು ಬತ್ತೀವಿ ಕನ್ರಯ್ಯ” ಅಂದು ಮಾರಿಗುಡಿ ಅಣ್ಣಂದೀರು ಗಾಡಿಗಳ ದೌಡಾಯಿಸಿದ್ರು. ಗಾಡಿಗಳು ವೋಟು ದೂರ ವೋಗೋದ್ನೇ ನ್ವಾಡ್ತಿದ್ದು, ನಸ್ಯ ಮೂಸಿ, ನಂಜೇಗೌಡರು ಊರ ದಿಕ್ಕೆ ವೊಂಟರು...
ಅಪ್ಪೊಯ್, ಯೇನೇನು ಕರಾಮತ್ತು ನಡೀತದೆ ಈ ಊರ್ನಲ್ಲಿ! – ಇಂಗೆ ನಡೀತದೆ ಅಂತ ಯಾರ್ಯಾರೊ ಗುಸುಗುಟ್ಟೋದ ಲಕ್ಕನೂ ಕೇಳಿದ್ದ. ಮಾತ್ರ ತನ್ನ ಕಣ್ಣಾರ ಕಂಡಿರನಿಲ್ಲ... ತಲೆ ತೂಗ್ತ, ಲಕ್ಕ ಹಲಸಿನ ಮರದ ಸಂದಿನಿಂದ ವೋರಿಕೆ ಬಂದು ಕೆರೆ ಓಣೀಗೆ ಇಳಿದ. ಕಳ್ಳಿ ಬೇಲಿ ಒತ್ತಿನಲ್ಲಿ ಸತ್ತು ಬಿದ್ದಿದ್ದ ಹಾವಿನ ಅತ್ರವೆ ಕುಂತು ಬೊಡ್ಡ ತಲೆ ಕೆಟ್ಟೋದಂಗೆ ವಸಿ ವೊತ್ತು ಬುಟ್ಟೂ ಬುಟ್ಟು ಬೊಗಳ್ತಾನೆ ಇತ್ತು. ಲಕ್ಕ ಕಣ್ಣಿಗೆ ಬಿದ್ದೇಟಿಗೆ, ಅದು ಅವನ ಸಮೀಪ ಬಂದು ನಿಂತು, ಸತ್ತು ಬಿದ್ದ ಹಾವನೆ ನ್ವಾಡ್ತ ಪುನಾ ಜೋರಾಗಿ ಬೊಗಳ್ತು. ಲಕ್ಕ, ಅದಕ್ಕೊಂದು ಒತ್ತ ಕ್ವಟ್ಟು, “ಬಾ ಬಾ-ನೀ ಇಂಗೆ ಬೊಗಳ್ತಾ ಕುಂತಿದ್ರೆ, ಇದ್ಯಾವ ತಿಕ್ಲು ಅಂದಾರು” ಸಿಡುಕಿ, ಮುಂದುಮುಂದಕೆ ಸಾಗ್ತಾ ಇದ್ದಂಗೆ ಬೊಡ್ಡ ಉರುಳಾಡ್ತ ಎದ್ದು, ಅವನೆ ಇಂಬಾಲಿಸ್ತು. ಆದ್ರೆ ಹೊಲಗೇರಿ ತಿರುವುಗಂಟ ತುಸ ತುಸ ದೂರಕೆ ವೋದಂಗೆಲ್ಲ ತಿರುತಿರುಗಿ ಬೊಗಳೋದು ಬುಡನೇ ಇಲ್ಲ!
ಲಕ್ಕ ಮತ್ತೆ ಬಂದು ಗುಡ್ಲ ಬಾಜೂನಲ್ಲಿದ್ದ ಬಂಡೆ ಏರಿ ಕುಂತ. ಚಾಪೆ ಎಣೆಯೊ ಎಂಗಸರು-ಮಾತು, ಪರಸಂಗ ಎಲ್ಲಾನು ನಿಲ್ಲುಸಿ ಪದ ಯೋಳಕ್ಕೆ ಸುರು ಮಾಡಿದ್ರು. ಆಗಲೆ ಒಬ್ಬೊಬ್ಬರೂವೆ ಅತ್ರ ಅತ್ರ ಅರ್ದದಷ್ಟು ಚಾಪೆ ಎಣೆದಿದ್ರು. ಬಾಣದಲ್ಲಿ ತಿಂಗಳ ಮಾವ ಆಗಲೆ ಮ್ಯಾಕ್ಕೆ ಬಂದು ಗುಂಡಗೆ ಥಳಥಳ ತೂಗ್ತಿದ್ದ. ಆ ಚಂದ್ರನ ಬೆಳಕು ಅರ್ದ ಎಣೆದ ಬೆಳ್ಳನೆ ಚಾಪೆಗೊಳ ಮ್ಯಾಲೆ ಬೆಳಗಿ ಅವುನ್ನ ಇನ್ನೂ ಬೆಳ್ಳಗೆ ಮಾಡಿತ್ತು. ಕಯ್ಯಲ್ಲಿ ಇಡುವ ನಾಕು ನಾಕು ಗರಿಗಳ, ತಮ್ಮ ಬೆರಳುಗಳಿಮದ ಮದ್ಯಕ್ಕೆ ನುಗ್ಗುಸಿ ನುಗ್ಗುಸಿ ತಗೀತ ಇದ್ದ ಆ ಎಂಗಸರ ಕಯ್ಯಿ ಚಳುಕದಲ್ಲಿ ಚಾಪೆಗಳು ನಿರುಮಾಣ ಆಯ್ತಿದ್ದುದ