213
ಮನಸ್ಸು ಕಲಸಿಹೋಗಿತ್ತು. ಕಾಡಿನಲ್ಲಿ ಬಿದಿರು ಒಂದಕ್ಕೊಂದು ಮಸೆದಾಗ, ಸಣ್ಣದಾಗಿ ಕಾಣಿಸಿಕೊಂಡ ಕಿಡಿ, ಗಾಳಿ ಬೀಸಿದಂತೆ ಭುಗಿಲ್ಲನೆ ಜ್ವಾಲೆಯಾಗುವಂತೆ, ಅವನ ದೇಹಕ್ಕೂ ಬಿಸಿಯೇರಿತ್ತು... ಎಲ್ಲ ಮುಗಿದ ನಂತರ ಮಳೆ ಸುರಿದಾಗ ಆರುವ ಕಾಳ್ಗಿಚ್ಚಿನಂತೆ ಮತ್ತೆ ಆರಿ ತಣ್ಣಗಾಗಿತ್ತು.
ರುಕ್ಮಿಣಿಯು ಲಕ್ಕನ ಮೈಮೇಲಿನಿಂದ ಹೊರಳಿ ಮಗ್ಗುಲಾಗಿ, ಎದ್ದು ಕುಳಿತು, ಸೀರೆಯನ್ನು ಸರಿಪಡಿಸಿಕೊಳ್ಳುತ್ತಿದ್ದಳು., ದಡಬಡನೆ ಎದ್ದ ಲಕ್ಕ ಚಡ್ಡಿಯ ಗುಂಡಿಯನ್ನು ಹಾಕಿ, ದಟ್ಟಿಯನ್ನು ಜೋಪಾನವಾಗಿ ಉಟ್ಟು, ಗಾಡಿಯ ಒಳಗಿನ ಗೂಟಕ್ಕೆ ಸೆಕ್ಕಿಸಿದ್ದ ಹಗ್ಗಳನ್ನು ಕೈ ಗೆತ್ತಿಕೊಳ್ಳುತ್ತ, ಸಾವಧಾನವಾಗಿ ಹೋಗುತ್ತಿದ್ದ ಎತ್ತುಗಳನ್ನು ಚುರುಕುಗೊಳಿಸಿದ ಮಳೆ ನಿರರ್ಗಳವಾಗಿ ಹುಯ್ಯುತ್ತಲೆ ಇತ್ತು.
ಈ ಹೊಸ ಅನುಭವದಿಂದ ಚುರುಕುಗೊಂಡ ಅವನ ಮನಸ್ಸು ಹಳೆಯ ಅನುಭವವೊಂದನ್ನುನೆನೆಯತೊಡಗಿತು:
ಆಗ ಅವನಿನ್ನೂ ತಲೆಕೆದರಿ, ಗೊಣ್ಣೆ ಸುರಿಸಿಕತ್ತ ಚಡ್ಡಿ ಇಕ್ಕಂಡು ತಟ್ಟಾಡ್ತ ಇದ್ದ ಹೈದ. ಅತ್ತು ವಯಸ ಇರಬೈದು. ಕೆಂಗಣ್ಣಪ್ಪನ ಅಟ್ಟೀಲಿ ಜೀತಕ್ಕಿದ್ದ ಕಾಲ. ಆ ಗೌಡನ ಎಮ್ಮೆ ದನ ಯೆಲ್ಲಾನೂವೆ ಅಟ್ಟಕಂಡು ಅವ ಮೇಯಿಸಕ್ಕೆ ಅಡವಿಗೊಗಿದ್ದ. ಬಾಕಿ ಹೈಕಳ ಸಂಗಾಟ ಸಿವಾಚಾರದ ಗಂಗಿಯೂ ಬಂದಿದ್ದಳು- ಅವತ್ತು ಭಾನುವಾರ. ಮಟಕ್ಕೆ ರಜ ಅಲ್ವ, ಅದ್ಕೆ... ಕಾಡ್ನಲ್ಲಿ ವೋಟೋಟು ದೂರಕೆ ಬ್ಯಾರೆ ಬ್ಯಾರೆ ಗುಂಪಾಗಿ ನಾವೆಲ್ಲ ಹೈಕಳೂವೆ ದನ ಮೇಯಿಸ್ತಾ ಇವಿ. ಇದ್ದಕಿದ್ದಂಗೆ ಇವೋತ್ತಿನಂತದ್ದೆ ಮಳೆ ಗಟ್ಟಿಸಿ ಕೆಡವಿಬುಟ್ತು. ನಾವೆಲ್ಲರೂವೆ ಕಾಡಿಗೆ ವೊಂಟಾಗ ಮಳೆ ಸುಳುವೇ ಇರನಿಲ್ಲ ಅದುಕೇ ಕೆಲವು ಹೈಕಳಂಗೆ ಗಂಗಿ, ನಾನು ಏಡು ಆಳೂವೆ ಗೊರಗ ತಂದಿರನಿಲ್ಲ. ಮಳೆ ಏಟ ತಡೀನಾರ್ತೆ ವಸಿ ಹೈಕಳು ಮರ, ಮಂಟಿ, ಮೆಳೆ, ಮರೆಗೋಗಿ ಕುಂತೊ. ವಸಿ ಹೈಕಳು, ಗೊರಗು ತಂದಿದ್ತೋವು. ಗೊರಗಾಕಂಡಿದ್ರೂವೆ, ಅಟ್ಟಾಡೊ ಮಳೇಲಿ ದಪ್ಪಾನೆ ಮರಗೊಳ ಮರೆಗೋಗಿ ನಿಂತೊ. ದನಗೊಳೆಲ್ಲ ಮೆಳೆ ಮರೆಗೆ ವತ್ತರುಸಿ ನಿಂತೊ. ಗಂಗಿ, ನಾನು ಏಡಾಳೂವೆ ಒಟ್ಟಿಗೇಯ ದನ ಮೇಯಿಸ್ತಿದ್ದೋರು, ದೌಡು ವೋಡುದು, ಉಲಿಗುತ್ತೀಲಿ ಆಸ್ರಯ ಪಡೆದೊ. ಆ ಉಲಿಗುತ್ತಿ ಮ್ಯಾಲೆಲ್ಲ ಹಂಬು ಅಡಕ್ವಾಗಿ ಚಪ್ಪರದಂಗೆ ಸುತ್ತಾಲು ಮೂರು ಕಡೀಕೆ ಎಣೆಕಂಡು ವಳುಗಡೆ ಒಂದು ಅದಿನಾರು ಮೆಟ್ಟಿನ ಉಲಿ ನಿಸುರಾಗಿ ಕಾಲು ಚಾಚಿ ಬಿದ್ದುಕೊಬೈದಿತ್ತು. ಸಣ್ಣ ಪುಟ್ಟ ಕರಿ ಅಸುರು ಎಲೆಗೊಳೆಲ್ಲ ಒಂದಕ್ಕೊಂದು, ಒಂದರ ಮ್ಯಾಕ್ಕೊಂದು ತಗಲಿ, ವತ್ತೊತ್ತಾಗಿ ಜಮಾಯ್ಸಿ, ಮ್ಯಾಗಿನಿಂದ ಒಂದು ತೊಟ್ಟು ಮಳೇನೂವೆ ವಳೀಕೆ ಬೀಳದಂಗೆ