250
ಕೃಷ್ಣಶಾಸ್ತ್ರಿಗಳು ಕೊಂಚ ವಿಚಲಿತರಾದಂತೆ,
“ಈಗ-?... ಈಗ ಏನಾಗಿದೆ?” ಕೇಳಿದರು.
ಪುರೋಹಿತರ ನುಡಿಗಳ ಸುಳಿವು ಸಿಕ್ಕದೆ, ಒಳಗೆ ಸ್ವಲ್ಪ ಅಧೀರರೂ ಆದರು.
“ತಾಂಬೂಲ ಹಾಕಿಕೊಳ್ಳಿ, ಹೇಳ್ತೇನೆ” ವೆಂಕಣ್ಣಜೋಯಿಸರು ಎಲೆ ಅಡಿಕೆ ತಟ್ಟೆಯನ್ನು ಮುಂದೆ ಸರಿಸಿ ಹುಸಿನಗುತ್ತ ನುಡಿದರು.
ಜೋಯಿಸರು ಹುಸಿ ನಕ್ಕಾಗ, ಅದರಲ್ಲಿ ಏನೊ ಕೊಂಕು ಅಡಗಿದೆ ಎಂದು ಕೃಷ್ಣಶಾಸ್ತ್ರಿಗಳು ಅನುಭವದಿಂದ ಎಂದೊ ಅರಿತಿದ್ದರು.
“ಬೇಡಿ-ನಾನು ಎಲೆ ಅಡಿಕೆ ಹಾಕುವುದನ್ನು ತ್ಯಜಿಸಿದ್ದೇನೆ-“ ನಿರಾಕರಿಸುತ್ತ, ಗಂಭೀರವಾಗಿ ನುಡಿದರು.
ಜೋಯಿಸರಿಗೆ ಸೋಜಿಗವೆನಿಸಿತು.
“ಇದೇನು ವಿಚಿತ್ರ. ಎಲೆ ಅಡಿಕೆಗೂ ನಿಮಗೂ ಪ್ರಾಣ. ನಿಮ್ಮ ಬಾಯಿ ಸದಾಕಾಲವೂ ತಾಂಬೂಲ ರಾಗ ರಂಜಿತವಾಗಿಯೆ ಇರಬೇಕು, ಅಂಥಾದ್ದರಲ್ಲಿ ಎಂದಿನಿಂದ ಈ ತಾಂಬೂಲ ವೈರಾಗ್ಯ?”
“ಬಿಟ್ಟು ಕೆಲವು ಕಾಲ ಆಯ್ತು... ವಯಸಾಗ್ತಾ ಆಗ್ತ ಈ ಚಟಗಳನ್ನ ಒಂದೊಂದಾಗಿ ಬಿಡುವುದು ಕ್ಷೇಮ, ಅಲ್ಲವೆ?.... ಅದಿರಲಿ ಜೋಯಿಸರೆ. ನೀವು ಅದೇನೊ ಹೇಳಲಿಕ್ಕೆ ಹೊರಟ ಹಾಗಿತ್ತಲ್ಲ. ಏನು ವಿಷಯ?”
“ಅದೇ ಹೇಳ್ತಿದ್ದೆನಲ್ಲ- ನಿಮ್ಮ ರುಕ್ಮಿಣಿಯ ಕೇಶಮುಂಡನ ವಿಚಾರ.”
“ಅದು ಆಯ್ತಲ್ಲ. ಪುನಹ ಅದರ ಪ್ರಸ್ತಾಪದಿಂದ ಯಾವ ಸಾರ್ಥಕ್ಯ?”
“ಅದರ ಪ್ರಸ್ತಾಪ ಈಗೆ ಪ್ರಕೃತ ಆಗಿರೋದ್ದರಿಂದಲೇ ಆ ಸುದ್ದಿಯನ್ನು ಮತ್ತೆ ಎತ್ತಬೇಕಾಯಿತು. ನೀವು ಆಗಲೇ ಕೇಶಮುಂಡನ ಮಾಡಿಸಿದ್ದರೆ ಈ ಹಗರಣ ಆಗುತ್ತಲೆ ಇರಲಿಲ್ಲ ಎಂದು ಕಾಣತ್ತೆ...”
ಜೋಯಿಸರ ಬಾಯಿ ಕಟ್ಟಿತು. ಮಾತುಗಳು ಹೊಟ್ಟೆಯೊಳಗೇ ಸತ್ತಿದ್ದವು. ಈ ಜೋಯಿಸರಿಗೆ ತನ್ನ ಮತ್ತು ರುಕ್ಮಿಣಿಯ ಸಂಬಂಧದ ಸುಳಿವು ಏನಾದರೂ ಬಿದ್ದರಬಹುದೆ?... ಅದು ಹೇಗೆ ಪ್ರಕಟವಾಗಲು ಸಾಧ್ಯ?... ರುಕ್ಮಿಣಿಯಂತೂ ಪ್ರಕಟಿಸುವಂತಿಲ್ಲ... ರುಕ್ಮಿಣಿ ಮತ್ತು ತಾವು ಇಬ್ಬರನ್ನು ಉಳಿದು ಇನ್ನೊಂದು ನರಪಿಳ್ಳೆಗೆ ಇದು ತಿಳಿಯುವ ಸಂಭವವೇ ಇಲ್ಲ!...
ಬಾಯಿಗೆ ಒತ್ತರಿಸಿದ ಎಲೆ ಅಡಿಕೆಯ ಜೊತೆಗೆ ಇನ್ನೂ ನಾಲ್ಕು ಎಲೆಗಳಿಗೆ ಸುಣ್ಣ ಹಚ್ಚಿ ದವಡೆಗೆ ಸೇರಿಸುತ್ತ, ವೆಂಕಣ್ಣ ಜೋಯಿಸರು,