ಸಮಗ್ರ ಕಾದಂಬರಿಗಳು
೨೬೧
ಫಳಾರ ಮಾಡಿದರು ಅವಳ ಬೊಸಿರಾದ್ಲು. ಅಯ್ಯನೋರು ಬೋಸಿರು ತೆಗೆಸಕೆ, ಔಸದ ಕ್ವಡಿಸಿದರು. ಅದೇನು ಎಡವಟ್ಟಾಯ್ತೊ, ಹೆಣ್ಣು ಎರಡೇ ದಿನದಲ್ಲಿ ಪ್ರಾಣ ಬಿಡ್ತು!...” ಎಂದು ಕುಹಕ ಆಡಿದರು. ಬಹುಮಂದಿ ಬುಳ್ಳಪ್ಪನಂಥವರ ಆಪಾದನೆಯನ್ನು ನಂಬಲಿಲ್ಲ. ಅದರ ಚಂದ್ರಿಯ ಸಾವಿನ ಕಾರಣ ನಿಗೂಢವಾಗಿಯೇ ಉಳಿಯಿತು. ಚಂದ್ರಿ ಸತ್ತನಂತರ ಮಠದಿಂದ ಕಪನಯ್ಯ ದೂರವಾದದ್ದು ಮತ್ತು ನಂಜೇಗೌಡ ಮಠಕ್ಕೆ ಈಗ ಹತ್ತಿರವಾದದ್ದು ಕೆಲವರ ಅನುಮಾನಕ್ಕೆ ಅವಕಾಶವೀಯಿತು. ಚಂದ್ರಿಯ ಚಿಕ್ಕಪ್ಪ ನಂಜೇಗೌಡ ಚಂದ್ರಿಯ ಸಾವನ್ನೇ ಒಂದು ಅಸ್ತ್ರ ಮಾಡಿಕೊಂಡು ಶಿವಪಾದಪ್ಪನವರನ್ನು ತನ್ನ ಅಂಕೆಯಲ್ಲಿ ಇಟ್ಟುಕೊಂಡಿದ್ದಾನೆ ಎಂಬ ಗುಲ್ಲೂ ಅಲ್ಲಲ್ಲಿ ಕೇಳಿಬಂದಿತ್ತು. ಲಕ್ಕನ ಕಿವಿಗೂ ಅ ಸುದ್ದಿ ಬಿದ್ದು ‘ಅವರಿವರ ಸುದ್ದಿ ನಂಗ್ಯಾಕೆ?... ನಂಗಿರಾದೆ ನಂಗೆ ಭಾರವಾಗಿ ಕುಂತದೆ. ಅದ್ನೇಯ ನಾ ಹ್ವರನಾರೆ’ ಎಂದು ಕೊಂಡಿದ್ದ.
ಅದೇನೆ ಇರಲಿ. ಅಂತೂ ಕಪನಯ್ಯನ ಸಾವಿನಿಂದ ಲಕ್ಕನ ನ್ಯಾಯ ಆ ರಾತ್ರಿ ನಡೆಯದೆ ಮುಂದಕ್ಕೆ ಹೋಗುವಂತಾಯಿತು. ಕಪನಯ್ಯನ ಕ್ರಿಯಾದಿಗಳು ಮುಗಿಯುವ ತನಕ ಆ ನ್ಯಾಯವನ್ನು ಪಂಚಾಯಿತಿದಾರರು ಎತ್ತಿಕೊಳ್ಳುವಂತಿರಲಿಲ್ಲ. ಏಕೆಂದರೆ, ನಂಜೇಗೌಡರು ಊರಿನ ಅತ್ಯಂತ ಪ್ರಮುಖ ಯಜಮಾನರುಗಳಲ್ಲಿ ಒಬ್ಬರು. ಅವರಿಲ್ಲದೆ ಊರಿನಲ್ಲಿ ಇಂಥ ಪ್ರಮುಖ ನ್ಯಾಯ ನಡೆಯುವುದಾದರೂ ಹೇಗೆ?
ಕ್ರಿಯಾದಿಗೋಳು ಮುಗಿಯೋವರ್ಗೆ, ನ್ಯಾಯದ ಇಚಾರ ಚಿಂತಿಸ್ತಾ ಕುಂತರೆ ಸುಕವೇನ? ಮುಂದೆ ಆಗೋದ್ದಕೆ ಹೆದರಿ ಈಗ್ಲೆ ಯಾಕೆ ಸಾಯಬೇಕು?- ಲಕ್ಕ ಎದೆಯ ಕಲ್ಲು ಮಾಡಿಕಂಡ. ತನ್ನೋಟಿಗೆ ತಾನು ತನ್ನ ಕೆಲ್ಸ ಕಾರ್ಯದಲ್ಲಿ ತೊಡಗ್ದ. ಬ್ಯಾರು ಯಾರೂ ಕರೀದಿದ್ರೂವೆ, ಕೇಶವಯ್ಯ ಮಾತ್ರ” ನ್ಯಾಯ ಆದಮೇಲೆ ತಪ್ಪಿತಸ್ಥ ಅಥವ ಅಲ್ಲ ಎಂದು ತೀರ್ಮಾನ ಆಗೋದು. ಅದಕ್ಕೆ ಮುನ್ನ ಅಲ್ಲವಲ್ಲ? ಕೋರ್ಟಿನಲ್ಲೂ ಹಾಗೇನೆ ತಾನೆ?... ಅಲ್ಲಿಯವರೆಗೆ ನೀನು ಸುಮ್ಮನೆ ನಮ್ಮ ತೋಟಕ್ಕೆ ಬಂದು ಅದು ಇದು ಚಿಲ್ಲರೆ ಪಲ್ಲರೆ ಕೆಲಸ ಮಾಡಿ ಹೋಗ್ತಾ ಇರು.” – ಇಂಗೆ ಉರಿದುಂಬಿಸಿ ತನ್ನ ತ್ವಾಟದ ಕೆಲುಸಕ್ಕೆ ಕರೆದೊಯ್ತಾ ಇದ್ದ.
ಆ ದಿನಗೋಳಲ್ಲೂ ಕುಂದೂರಯ್ಯ ಒಂದೊಂದು ದಪ ಕುಳವಾಡಿ ಕೆಲುಸಕ್ಕೆ ತನ್ನ ಪತ್ಯಾಗಿ ಲಕ್ಕನೇ ನೇಮುಸ್ತಿದ್ದ. ಅಂತಾ ಒಂದು ಬೆಳದಿಂಗ್ಳ ನಾತ್ರೆ ಲಕ್ಕ ಕಯ್ಲಿ ಕೋಲು ಕೋಲು ಇಡುದು ಬೊಡ್ಡನ ಸಂಗಾಟ ಊರ್ನಲ್ಲಿ ಗಸ್ತು