ಸಮಗ್ರ ಕಾದಂಬರಿಗಳು
೨೮೧
ಇನ್ನೆತ್ತಲೊ ಹೊರಟುಹೋಗುತ್ತಿದ್ದ ಅವಧೂತನೊಬ್ಬ ತನ್ನ ಪಾಡಿಗೆ ತಾನು, ಊರೊಳಗಿನ ಒಂದು ಬೀದಿಯಿಂದ ಇನ್ನೊಂದು ಬೀದಿಗೆ ತಿರುಗುತ್ತಿದ್ದ... ಲಂಗೋಟಿಯೊಂದನ್ನುಳಿದು ಅವನ ಮೈಮೇಲೆ ಒಂದು ಚೂರು ಬಟ್ಟೆಯಿಲ್ಲ. ಇವನು ಯಾರೊ, ಎಂತೊ ಯಾರಿಗೂ ತಿಳಿಯದು. ಇವನೊಬ್ಬ ನಿಗೂಢ ಮನುಷ್ಯ. ಯಾರಾದರೂ ನಿಮ್ಮ ಸ್ಥಳ ಯಾವುದು? ಎಂದು ಪ್ರಶ್ನಿಸಿದರೆ- ನೆಲವೇ ನನ್ನ ಮನೆ, ಆಕಾಶವೇ ನನ್ನ ಹೊದಿಕೆ, ಎಂದುಬಿಡುತ್ತಿದ್ದ... ಒಟ್ಟಿಯಲ್ಲಿ ಹಕ್ಕಿಯಂಥ ಬುದುಕು. ಯಾರ ಹಂಗೂ ಇಲ್ಲ, ಯಾವ ಭಯವೂ ಇಲ್ಲ... ಆ ಅವಧೂತನನ್ನು ನೋಡುತ್ತಿದ್ದಂತೆಯೆ, ರುಕ್ಮಿಣಿಯ ಒಡಲಾಳದಲ್ಲಿ ‘ನಾನು ಸಹ ಈತನ ಹಾಗೆ ನಿರ್ಭೀತಿಯಿಂದ ಇರಲು ಸಾಧ್ಯವಾಗಿದ್ದರೆ?’ ಎಂದೆನಿಸಿತ್ತು.
ಮನೆ ಸೇರಿ, ಅಡಿಗೆ ಊಟಗಳ ಕರ್ಮ ಮುಗಿಸಿ, ರುಕ್ಮಿಣಿಯು ಹಾಸಿಗೆಗೆ ಮಗ್ಗಲು ಕೊಟ್ಟಳು ಎಂಥೆಂಥವೊ ಯೋಚನೆಗಳು, ಅಸ್ಪಷ್ಟ ಯಾತನೆಗಳು- ಅವಳ ಮನಸ್ಸಿಗೆ ಲಗ್ಗೆ ಹಾಕಿ, ಅಲ್ಲಿ ಚಿಂತನೆಯ ಕ್ರೂರ ಎಳೆಗಳಿಂದ ಜಡೆ ಹೆಣೆಯುತ್ತ, ಹೆಣೆದ ಜಡೆಯನ್ನು ಆಲಸ್ಯದಿಂದ ಬಿಚ್ಚುತ್ತ, ಮತ್ತೆ ಹೆಣೆಯುವ ಕ್ರಿಯೆಯಲ್ಲಿ ತೊಡಗಿ, ರುಕ್ಮಿಣಿಯ ಒಳಗನ್ನು ಕ್ಷತವಿಕ್ಷತಗೊಳಿಸಿ ಆ ರಾತ್ರಿಯ ನಿದ್ರೆಯನ್ನು ಪುರ್ತಿಯಾಗಿ ಬಡಿದೋಡಿಸಿದ್ದವು!
- * * *
ಅತ್ತ ರಾಚನ ಸರಾಪಿನ ಅಂಗಡಿಯಲ್ಲಿ ನಿಶೆ ಏರುತ್ತಿರುವಂತೆ, ಗೋಸು ಸಾಬರಿಗೂ ಅವರ ಸ್ನೇಹಿತ ಕರಿಯಪ್ಪನೂ ಸರಾಪಿನ ಅಮಲಿನಲ್ಲಿ ವಾಗ್ವಾದಕ್ಕೆ ಆರಂಭಿಸಿ ಪರಸ್ಪರ ವೈಯಕ್ತಿಕ ಟೀಕೆಗೂ ಇಳಿದಿದ್ದರು. ಉಳಿದವರು ಕೇಕೆ ಹಾಕಿ ನಗುತ್ತ, ಇನ್ನೂ ಕೊಂಚ ಸರಾಪನ್ನು ಹೆಚ್ಚಾಗಿಯೇ ಹೀರುತ್ತಿದ್ದರು. ಆ ಸ್ನೇಹಿತರಿಬ್ಬರ ಕಲಹ ಉಳಿದವರಿಗೆ ತಮಾಷೆ ಒದಗಿಸಿ, ರಾಚನ ಅಂಗಡಿ ಎಂದಿಗಿಂತ ಇಂದು ಉತ್ಸಾಹಭರಿತವಾಗಿತ್ತು. ಅವರ ಪೈಪೋಟಿಯ ವಿಶೇಷ ಲಾಭ ಪಡೆದವನೆಂದರೆ, ಅಂಗಡೆ ಮಾಲೀಕ ರಾಚ! ಮೊಗೆ ಮೊಗೆ ಹೆಂಡ ಗಿರಾಕಿಗಳ ಗಂಟಲುಗಳಲ್ಲಿ ಇಷ್ಟು ದಿನಗಳಿಂದಲೂ ಬೇಗ ಇಳಿಯುತ್ತಿದ್ದುದನ್ನು ಕಂಡು ಹಿಗ್ಗಿದ ರಾಚ, ತಾನೂ ಒಂದು ಬಿಸಿ ಬಿಸಿ ಚಾಪೀಸು ಕಡಿಯುತ್ತ ಆನಂದಿಸುತ್ತಿದ್ದನು!
ಕಲಹಕ್ಕೆ ಕಾರಣ ತೀರ ಕ್ಷುದ್ರ. ಗೋಸು ಸಾಬರು ಕರಿಯಪ್ಪ ಇಬ್ಬರೂ ಶಕುನಿ ಕೊಪ್ಪಲು ಗರಡಿಯಲ್ಲಿ ಸಾಮು ಮಾಡಿದವರೆ. ಇಬ್ಬರೂ ಸಮಬಲರು. ಹಿಂದೆ ಪ್ರಾಯದವರಾಗಿದ್ದಾಗ ಅಖಾಡಕ್ಕೆ ಇಳಿದರೆ ಒಮ್ಮೆ ಗೋಸು ಸಾಬರಿಗೆ ಇನ್ನೊಮ್ಮೆ ಕರಿಯಪ್ಪನಿಗೆ ಜಯ ಲಭಿಸುತ್ತಿತ್ತು. ಹಿಂದೆ ನಡೆದ ಒಂದು ಕುಸ್ತಿಯಲ್ಲಿ