೨೮೨
ವೈಶಾಖ
ತಾನ ಜಯಶೀಲನಾದೆನೆಂದು ಗೋಸು ಸಾಬರೂ, ಇಲ್ಲ ತಾನೇ ಗೆದ್ದೆದೆಂದು ಕರಿಯಪ್ಪನೂ ವಾಗ್ಯುದ್ಧಕ್ಕೆ ಇಳಿದಿದ್ದರು. ಕುಡಿತದ ಆಮಲಿನಲ್ಲಿ ಮಾತು ಎಲ್ಲಿಂದೆಲ್ಲಗೋ ಹೋಗಿತ್ತು.
“ನೀವು ಮಟಮಟ ಮದ್ಯಾನ್ನ ಕುಂಪಣಿಯೋರ್ಗೆ ರಾಜ್ಯ ವಪ್ಪಿಸಿದೋರಲ್ವ ಸಾಬರೆ?- ಅದೇಟು ನಿಸೂರು ಕ್ವಚ್ಚೀರಿ. ಸಮ್ಕಿರಿ...” ಎಂದು ಕರಿಯಪ್ಪ, ಟಿಪ್ಪು ಸುಲ್ತಾನ ರಾಜ್ಯ ಕಳೆದುಕೊಂಡ ಸಂದರ್ಭವನ್ನತ್ತಿ ಚುಚಿದ.
ಗೋಸು ಸಾಬರ ಪಿತ್ಥ ನೆತ್ತಿಗೇರಿತು.
“ಏಯ್ ಕರಿಯಪ್ಪ-ನೀವು ವಕ್ಕಲಿಗರು, ಬೂದುಗುಂಬಳಕಾಯಿ ಬೇಳೀನಾರ್ದೆ ಸ್ರೀ ರಾಮಚದ್ರಂಗೆ ನಿಮ್ಮ ಹೆಡತೀರು ತಾಲೀನು ಮುಕ್ಕಸ ತಕ್ಕಡಿಗೆ ಆಕಿ, ವಪ್ಪಿಸಿದ್ದು ಮರೆತೋಯ್ತು...?”
ಕರಿಯಪ್ಪ, “ಇನ್ನೊಂದು ವೊಗೆ ಸರಾಪು ಆಕ್ರೀ” ಎಂದು ರಾಚನಿಗೆ ಹೇಳಿ, “ಸಾಹೇಬ್ರೆ, ಅದ್ಯಲ್ಲ ಬ್ಯಾಡ. ಅವತ್ತು ನಾ ಗೆದ್ದೆನೊ, ನೀವು ಗೆದ್ರೂ ಅನ್ನಾದು ಈಗ ಬ್ಯಾಡ. ಈಗ ಈ ರಾಚನ ಅಂಗಡೀನೆ ಆಖಾಡ ಮಾಡಿಕಳಾವ. ಯಾನಂತಿರಿ?” ಎನ್ನುತ್ತ ಮತ್ತೆ ರಾಚ ಕೊಟ್ಟ ಹೆಂಡವನ್ನು ಹೀರಿದ.
ಅಂಗಡಿಯೊಳಗೆ ಕುಳಿತಿದ್ದ ಗಿರಾಕಿಗಳು ಗೋಸು ಸಾಬರು ಕರಿಯಪ್ಪನ ಸವಾಲಿಗೆ ಏನು ಜವಾಬು ಕೊಡುವರೊ ಎಂಬ ಕುತೂಹಲದಿಂದ ಗೋಸು ಸಾಬರ ಮುಖವನ್ನೆ ಕಾತರದಿಂದ ನೋಡುತ್ತಿದ್ದರು.
ಗೋಸು ಸಾಬರು ಇನ್ನೊಂದು ಮೊಗೆ ತರಿಸಿ ಕುಡಿದು,
“ಓ ಬೇಷಕ್ಕಾಗಿ, ನಾನೂ ತಯಾರ್ ಇದ್ದಿನಿ-“ ಎಂದು ಎದ್ದರು. ಸರಾಪಿನ ಮಹಿಮೆ ಅತಿಯಾಗಿ, ಅವರ ಕಾಲುಗಳು ಸವಾಧಿನ ತಪ್ಪಿದವು. ತೂರಾಡಿ ತೂರಾಡಿ ತುಪಕ್ಕನೆ ಕೆಳಗೆ ಬಿದ್ದರು.
ಹೀಗೆಯೇ ಎದ್ದು ನಿಲ್ಲಲು ಪ್ರಯತ್ನಿಸಿದ ಕರಿಯಪ್ಪನೂ ಓಲಾಡುತ್ತ ಒಂದೆರಡು ಹೆಜ್ಜೆ ಮುಂದಿಟ್ಟು ಆಯ ತಪ್ಪಿ ಗೋಸು ಸಾಬರ ಪಕ್ಕದಲ್ಲೇ ಉರುಳಿಕೊಂಡನು.
ನೆರೆದಿದ್ದ ಗಿರಾಕಿಗಳಿಗೆ ಖುಷಿಯೋ ಖುಷಿ, ಕೇಕೆ ಹಾಕಿ, ಚಪ್ಪಾಳೆ ತಟ್ಟಿದರು. “ಇವತ್ತೀಗ ತಿಕೀಟೇ ಇಲ್ದ ನಾಟಕ!” ಎಂದು ನಲಿದರು.
ಸರಾಪು ಈ ದಿನ ನಿತ್ಯಕ್ಕಿಂತ ಅಧಿಕವಾಗಿ ಬಿಕರಿಯಾದ್ದು ರಾಚನಿಗೇನೊ ಸಂತೋಷ ತಿಂದಿತ್ತು. ಆದರೆ ಏಳಲು ಪ್ರಯತ್ನಿಸಿ ನೆಲಕ್ಕುರುಳಿದ ಗೋಸು ಸಾಬರಿಗೂ ಕರಿಯಪ್ಪನಿಗೂ ಅನಂತರದ ಕೆಲವೇ ನಿಮಿಷಗಳಲ್ಲಿ ನಿದ್ರೆ ಹತ್ತಿತ್ತು.