ಸಮಗ್ರ ಕಾದಂಬರಿಗಳು
೨೯೧
ಮುಗುದಮ್ಯಾಲೆ ಲಕ್ಕನತ್ರ ಬೇತುಗಂಡಿದ್ದ!...
ಆದ್ರೇ ಗಂಗವ್ವ ಬಾಯ್ನಲ್ಲಿ ಬಜಾರಿ ಅದ್ರೂವೆ ಮಾನಿಸ್ಟ ಎಂಗಸು. ಹಾದೀಲಿ ಹ್ವಯ್ತಿರೋನಾಗ, ಇನ್ನೊಬ್ಬ ಗಂಡಸ ಕತ್ತೆತ್ತಿ ಮುಕ್ಕಸ ನ್ವಾಡ್ತಿರನಿಲ್ಲ!- ಈಗ ಅಡವಿಯಪ್ಪನೊಂದ್ಗೆ ಅವಳು ಕಾದಾಟಿಕೆ ನಿಂತದ್ದು ನಂಜೇಗೌಡಂಗೆ ಕ್ವಾಟೆ ನುಗ್ಗಕ್ಕೆ ಭರ್ಜರಿ ಕನ್ನ ಸಿಕ್ಕಿದಂಗಾಯ್ತು!...
ಒಂದು ಸಂತೆಜಿನ ಹುಣಸೂರ್ಗೆ ವೋಗಿದ್ದಾಗ, ನಂಜೇಗೌಡ ಸಿಕ್ಕಿ,
“ಬಾಪ್ಪ ಅಡವಿ, ನಿನ್ನ ಸಂಗಾಟ ವಸಿ ಮಾತಾಡೊದೆ” ಅಂತ ಕರದ್ರು ಕನ್ಲ, ಲಕ್ಕ. ನಂಗೆ ವೋಗಕ್ಕೆ ಇಸ್ಟ ಇರನಿಲ್ಲ, ಆದ್ರೆ ಆ ನಂಜೇಗೌಡ ಅಂದರೆ, ನಿಂಗೆ ಗ್ವತ್ತೆ ಅದಲ್ಲ ಬೋ ಪಾತಕದ ಮನಸ. ಬೇಕಾರೆ ಅವ್ನು-ಕಾಳಿಯ ಬೋಲಿ ಮಾಡ್ತಾನೆ, ಬೋಳಿಯ ಕಾಳಿ ಮಾಡ್ತಾನೆ... ಅವನ್ತಾವು ಯಾಕೆ ನಿಸ್ಟೂರ ಕಟ್ಟಿಕಾಬೇಕು ಅಂತ ನಿರ್ವಾಯಿಲ್ದೆ ಅವ್ನ ಜ್ವತೆಗೋದೆ. ಮುನೇಸ್ಟರನ ಕಾವಲ್ಗೆ ಕರಕಂಡೋಗಿ, ರಸ್ತೆ ಬಾಜೂನಲ್ಲಿರೊ ಒಂದು ಮರದ ನೆರಳ್ನಲ್ಲಿ ಕುಂಡರಿಸಿ,
“ಅಡವಿ, ಇಂದುಕೆ ನೀ ಬೋ ಸೂರನಾಗಿದ್ದ... ಆದ್ರೆ ಈಗ್ಯಾಕೆ ನಿನ್ನ ಗಂಡಸ್ತನವೆ ಹ್ವಂಟೋಗಿರೊ ಅಂಗದಲ್ಲ?” ಅಂತ ಕೆಣುಕ್ದನಂತೆ.
“ಯಾಕಣ್ಣ?” - ಪೆಚ್ಚಾಗಿ ವದರಿದ್ನಂತೆ ಅಡವಿ.
“ಅಲ್ಲ ಕನೊ, ಅಡವಿ. ಅದೇನ ನಿಮ್ಮಟ್ಟಿ ಜಗಳ ಹಾದಿ ಬೀದಿ ರಾಮಣ್ಯ ಆಗಿಬುಟ್ಟದಲ್ಲ?” ಸೌದೆ ಸೀಳೋನಾಗ ಸನಗು ಎತ್ತೋನಂಗೆ ಕೇಳಿದ್ದ ಕನ್ಲ- ಅಂದಿದ್ದ ಅಡವಿ. ಅದುಕೆ ಅಡವಿ, ಕಯ್ಯಿ ಕಯ್ಯಿ ವೋಸೀಕತ್ತ,
“ಏನು ಮಾಡಾದು ನಂಜಣ್ಣ, ಎಲ್ಲ ನನ್ನ ಅಣೆಬರಾವು”ಅಂದನಂತೆ.
“ಅದೇನು ಆ ಗಂಗಿ ನಿನ್ನ ಮಾನವ ಈ ಕೇರೀಲದ್ದಿ ಆ ಕೇರೀಲಿ ತಗೀತ ಅವಳಂತಲ್ಲ?”
“ಹಯ್ಯೊ, ಅದ ಯೋಳಿಕಂಡ್ರೆ ನಾಚಿಗ್ಗೇಡು, ಸುಮ್ಮಕಿರಣ್ಣ. ಯಾನೊ ನಮ್ಮ ಸಮ್ಮಂದದ ಎಣ್ಣು ಅಂತ ನಾನೂವೆ ಅವಳು ಆಡೊ ಮಾತ್ನೆಲ್ಲ ಎಂಗೊ ಸೈಸಿಗಂಡು ಬತ್ತಾ ಇವ್ನಿ.”
“ಕೆಟ್ಟ ಕೆಟ್ಟ ಮಾತ್ನಲ್ಲೆ ಬೋಯ್ಯಿತಾಳಂತೆ, ನಿಮ್ಮಟ್ಟಿ ಸುತ್ತಮುತ್ತಲೋರು, ನನ್ನತ್ರ ಬಂದು ಯೋಳ್ತಾನೆ ಅವ್ರೆ-ಕಿವೀಲಿ ಕ್ಯಾಳಬಾರದಂತೆ ಮಾತಾಡ್ತಾಳೆ, ಬೋ ಮಾನಗೆಟ್ಟ ಎಂಗಸು, ನಿಚ್ಚ ಇದೇ ತಲೆನೋವಾಗಿ ಬುಟ್ಟದೆ ನಮಗೆ, ಅಂತಾವ... ಮೀಸೆ ಹ್ವತ್ತಿರೊ ಆ ಗಂಡಸು ಈಪಾಟಿ ಬೋಗುಳ ಕ್ಯಾಳಿಕಂಡು ಅದ್ಯಾಕೆ ಸುಮ್ಮಕಿದ್ದಾನೊ ತಿಳೀದು, ಅಂತಾನೆ ಇರ್ತಾರೆ...”