ವಿಷಯಕ್ಕೆ ಹೋಗು

ಪುಟ:Vyshakha.pdf/೩೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮಗ್ರ ಕಾದಂಬರಿಗಳು

೩೧೭

ಗಂಗಪ್ಪನು ತನ್ನ ಅಂಗೈಯಲ್ಲಿ ಉಂಡೆನಶ್ಯಕ್ಕೆ ಬೆಣ್ಣೆ ಸುಣ್ಣ ಎರಡನ್ನೂ ಹಾಕಿ ತೀಡಿ ತಯಾರಿಸಿದ ಹುಡಿನಶ್ಯದಲ್ಲಿ ಒಂದು ಚಿಟಿಕೆ ತೆಗೆದು ಮೂಗಿಗೇರಿಸಿ, ಎಷ್ಟೋ ದಿನಗಳ ನಶ್ಯ ಸಿಂಬಳಗಳ ಮಿಶ್ರಣದಿಂದ ತನ್ನ ಮೊದಲಿನ ಹಸಿರು ಬಣ್ಣವನ್ನು ಕಳೆದುಕೊಂಡಿದ್ದ ಚೈಚೌಕದಲ್ಲಿ ಮೂಗಿನ ಹೊಳ್ಳೆಗಳನ್ನು ಆ ಕೊನೆಯಿಂದ ಈ ಕೊನೆಗೆ ಒರೆಸಿಕೊಳ್ಳುತ್ತ ಎದ್ದ ಶ್ಯಾನುಭೋಗರು,

“ಕೇಶವಯ್ಯನೋರು ಹೇಳೋದು ಸಮಂಜಸವಾಗೇ ಇದೆ. ನಮ್ಮೆದುರಿಗೇ ಲಕ್ಕ ನಿಂತಿದಾನೆ. ಇವನ್ನನ್ನೇ ಕೇಳಿಬಿಡೋಣ. ಇವನೇ ಇರುವಾಗ ಈ ವಿಚಾರದಲ್ಲಿ ರುಕ್ಮಿಣೀನ ವಿವರಣೆ ಕೇಳೋದು ಕೊಂಕಣ ಸುತ್ತಿ ಮೈಲಾರಕ್ಕೆ ಹೋದ ಹಾಗಾಗುತ್ತೆ. ಅದು ನನ್ನ ದೃಷ್ಟೀಲೂ ಅನಗತ್ಯ...” ಎನ್ನುತ್ತಿರುವಾಗಲೇ ಅವರಿಗೆ ಸೀನು ಬಂದಿತು.

ಶ್ಯಾನುಭೋಗರು ಸೀತರೆ ಒಂಟೊಂಟಿ ಸೀನುವವರಲ್ಲ. ಕಡಿಮೆ ಎಂದರೆ ನಾಲ್ಕು. ಹೆಚ್ಚು ಬಂದಾಗ ಏಳು, ಎಂಟಕ್ಕೆ ಇರುತ್ತಿರಲಿಲ್ಲ. ಈಗಳಿಗೆ ಅವರ ಮೂಗು ಹೆಚ್ಚವರಿ ಸೀನುವ ವೇಳೆ. ಅಲ್ಲಿ ನೆರೆದ ಸಭಿಕರಿಗೆ ಅವರ ಸೀನು ಮೋಜೆಸಿನಿ, ಬಿಗುವಿನಿಂದ ಕೂಡಿದ್ದ ವಾತಾವರಣವನ್ನು ಕೊಂಚ ಹಗುರಗೊಳಿಸಿತು. ಒಂದು, ಎರಡು, ಮೂರು...... ಎಂದು ಎಣಿಸುತ್ತಿದ್ದ ಕೇಶವಯ್ಯ ಅಕ್ಕಪಕ್ಕದಲ್ಲಿ ಕುಳಿತ ಯಜಮಾನರನ್ನು ಉದ್ದೇಶಿಸಿ,

“ಇವರ ಹಾಗೆ ನಾನು ಸೀತಿದ್ದರೆ, ನನ್ನ ದೇಹದ ನೀರಿನ ಜೊತೆಗೆ ನನ್ನ ರಕ್ತವೂ ಹೊರಗೆ ಬಂದು, ನಾನು ಇಷ್ಟರಲ್ಲೆ ಘನಾ ಆಗಿಬಿಡ್ತಿದ್ದೆ” ಎಂದೆ.

ಆಗ ನಂಜೇಗೌಡ,

“ಅದ್ಕೆ ಅಲ್ವ ಕೇಶವಯ್ಯಾರೆ, ಯಾರಾರು ನಮ್ಮ ಊರ್ನಲ್ಲಿ ಜಾಸ್ತಿ ಸೀತರೆ, ‘ಓ ಓ ಸ್ಯಾನುಭೋಗರ ಸೀನು ಬತ್ತಾ ಅವೆ’ ಅಂತ ಹೆಸರಿಟ್ಟಿರೋದು?” ಎಂದ.

ಚಾವಡಿಯ ಒಳಗೆ ಎದ್ದ ನಗೆಯ ಅಲೆಗೆ ತಮ್ಮ ನಗೆಯನ್ನೂ ಬೆರಿಸಿ, ಅನಂತರ ಲಕ್ಕನನ್ನುದ್ದೇಶಿಸಿ, ಶ್ಯಾನುಭೋಗರು,

“ಏನಪ್ಪ ಲಕ್ಕ, ಈಗ ನಿನ್ನ ಮೇಲೆ ಬಂದಿರೋರ ಆಪಾದನೆ ವಿಷಯದಲ್ಲಿ, ನೀನು ಏನು ಹೇಳೀಯೆ?” ಎಂದು ಕೇ:ಳಿದರು. ಅದಕ್ಕೆ ಲಕ್ಕನಿಂದ ಯಾವ ಪ್ರತಿಕ್ರಿಯೆಯೂ ಬರಲಿಲ್ಲ.

“ಊರು ಬಿಟ್ಟು ಗಾಡೀಲಿ ನೀವಿಬ್ಬರೇ ಕಾಡುಹಾದಿ ಹಿಡಿದಿದ್ದಾಗ, ಏನು ನಡೀತು?”