೩೩೦
ವೈಶಾಖ
ಪದಾರ್ಥಕ್ಕೂ ಈಚೀಚೆಗೆ ಧಾರಣೆವಸಿ ಹೆಚ್ತಾನೆ ಇದೆ. ಈ ಬೆಲೆಗಳಲ್ಲಿ ಸಂಪಾದ್ನೆ, ವೆಚ್ಚ ಎರಡನ್ನೂ ತೂಗಿಸೋದು ನಮಗೆ ಸಾಧ್ಯವಾಗ್ತಾ ಇಲ್ಲ”- ಎಂದು ಬೇರೆ ಶುರು ಮಾಡಿದ್ದಾರೆ!... ಆದ್ದರಿಂದಲೆ ಪೌರೋಹಿತ್ಯದ ಜೊತೆಗೆ ವೆಂಕಣ್ಣನವರು ರೈತಜನರಿಗೆ ಕಾಗದ ಪತ್ರ ಬರೆದು ಕೊಟ್ಟು ಅಲ್ಪಸ್ವಲ್ಪ ಮೇಲುಸಂಪಾದನೆಗೂ ಅವಕಾಶ ಮಾಡಿಕೊಂಡಿದ್ದಾರೆ!...
“ಇದ್ಯಾಕೆ ಸೋಮಿ, ಸುಮ್ಮನೆ ತಿಂಗಳ ಬೆಳಕ ನ್ವಾಡ್ತ ತಿಂತುಬಿಟ್ರಿ?..... ನಾ ಕ್ಯಳಿದ ಪ್ರಸ್ನೆಗೆ ಒಂದುತ್ರ ಯೋಳಿ, ಸೋಮಿ.’
“ನೋಡಯ್ಯ, ಇದು ವೈಶಾಖ ಮಾಸ. ಈ ದಿವಸ ಹುಣ್ಣಿಮೆ... ಹುಂ. ಅದೇನು ವಿಷಯ ಹೇಳು- ಒಳ್ಳೇದೊ ಕೆಟ್ಟದೊ ಅನಂತರ ಲೆಖ್ಖ ಹಾಕಿ ಹೇಳ್ತೇನೆ.”
“ನ್ವಾಡಿ ಜೋಯಿಸರೆ, ನಾನೊಂದು ಜೊತೆ ಎತ್ತು ಕರೀದಿ ಮಾಡ್ತಾ ಇವ್ನಿ. ಪರಮಾಸಿ ಜೋಡಿ. ಯಾವುತ್ತೂ ಒಳ್ಳೆ ಅರಬ್ಬಿಠಾಕಣ ಇದ್ದಂಗವೆ. ಇವೊತ್ತು ಬುಟ್ಟರೆ, ಆ ಕೊಡೊ ಬಡ್ಡೀ ಹೈದ ಮನಸ್ಸ ಬದ್ಲಾಯಿಸಿ ಬುಡ್ತಾನೆ... ಅಯ್ಯೊ, ಬುಡ್ತಾನೆ ಅನಾದೇನು-ಅವನು ಯೋಳೇಬುಟ್ಟ: ಇವೊತ್ತು ಮಾತು ಮುಗಿಸಿ, ಪುರ್ತಾ ದುಡ್ಡು ಕ್ವಟ್ಟರೆ, ಎತ್ತಿನ ಜೋಡಿ ನಿನ್ನದು. ಬ್ಯಾರೆಯೋರು ಕೇಳ್ತಾ ಅವರೆ. ನಾಳೀಕೆ ಈ ಜೋಡಿ ನಿನ್ನ ಕೈ ತೆಪ್ಪಿದ್ರೆ ಮಾತ್ರ ನನ್ನ ನೀನು ದೂಸಣೆ ಮಡಬ್ಯಾಡದು- ಅಂತ!- ಅದ್ಕೆ ಸೋಮಿ. ನಿಮ್ಮ ಕ್ಯಾಲಕ್ಕೆ ಬಂದೆ. ಅಟ್ಟಿ ತಾವಿಕೆ ಹ್ವಾಗಿದ್ದೆ. ಕೆರೆ ಕಡೀಕೆ ಈಗ ತಾನೆ ವೋದರು, ಅಂತಾವ ನಿಮ್ಮ ಹಿರೀ ಎಣ್ಣುಯೊಳ್ತು. ಅದ್ಕೆ ನಿಮ್ಮ ಇಂದಗುಟ್ಟೇನೆ ಬಂದೆ,”
“ಹುಂ.....” ಎಂದು ಜೋಯಿಸರು ಹೂಗುಟ್ಟಿ, ಏನೋ ಗಾಢವಾಗಿ ಆಲೋಚಿಸುವವರಂತೆ ಕೆಂಡದ ಉಂಡೆಯಾಗಿ ಹೊಲೆಯುತ್ತ ಮೂಡಲ ದಿಕ್ಕಿನಿಂದ ಬಾನಿನಲ್ಲಿ ಮೇಲೇರಿದ ಚಂದ್ರಬಿಂಬವನ್ನೆ ದಿಟ್ಟಿಸುತ್ತಿದ್ದು, ನಂತರ,
“ಇದು ಕೊಂಚ ಲೆಖ್ಖ ಹಾಕಬೇಕು, ಕೆರೆ ಕಡೆ ಹೋಗಿ ಬರ್ತೀನಿ. ಇನ್ನೊಂದು ಅರ್ಧ ಮುಕ್ಕಾಲು ಗಂಟೆ ಬಿಟ್ಟು ನಮ್ಮ ಹಟ್ಟಿಗೆ ಬಂದುಬಿಡು” ಎಂದು ಕಾಲ್ತೇಗೆಯುವುದುರಲ್ಲಿದ್ದರು.
ಜೋಯಿಸರಿಗೆ ದೈಹಿಕ ಬಾಧೆಯ ಆತುರವಾದರೆ, ಬಿಳಿಗಿರಿಗೆ ಆ ದಿನ ಎತ್ತಿನ ಒತೆ ಕೊಳ್ಳಲು ಪ್ರಶಸ್ತವೊ ಇಲ್ಲವೊ ಎಂದು ತಿಳಿಯುವ ಕಾತರ. ಇಂದ್ಕೆ ಇಂಗೇ ಯಾರನೂ ಕ್ಯಾಳದೆ ಅಟ್ಟೀಲೆ ಇದ್ದ ಒಂಟಿ ಎತ್ತಿನ ಜೊತೆಗೆ ಇನ್ನೊಂದು ಎತ್ತ ಕೊಂಡು, ಅದು ಚಪ್ಪೆರೋಗ ಬಂದು ನಿಗರಿಕೊಂಡಿತ್ತು!