344
ವೈಶಾಖ
ಲಕ್ಕನಿಗೆ ಸಿಕ್ಕಾಪಟ್ಟೆ ಹೊಡೆದುದನ್ನು ನೋಡಿ ಇವಳು ಹೆದರಿರಬೇಕು. ಇದಕ್ಕೆ ಈಗ ಜ್ವರ ಬಂದಿದೆ, ಎಂದು ಶಾಸ್ತ್ರಿಗಳು ತಮ್ಮೊಳಗೇ ಅಂದುಕೊಂಡರು.
“ಅವಳಿಗೂ ಹುಷಾರಾಗಿಲ್ಲ. ಹುಣಸೂರಿಗೆ ಹೋಗಿದ್ದಾಳೆ. ಸಾಯಂಕಾಲದ ಹೊತ್ತಿಗೆ ಬಂದುಬಿಡ್ತಾಳೆ....”
“ಮತ್ತೆ ಆಗ ಯೋರದೊ ಮನೆಗೆ ಹೋಗಿದಾಳೆ ಅಂದೆ?” ಎಂದು ಕೇಳಿ ಸರಸಿ, ಶಾಸ್ತ್ರಿಗಳನ್ನು ಪೇಚಿಗೆ ಸಿಕ್ಕಿಸಿದಳು. ಅವರು,
“ಮರೆತುಹೋಗಿ ಹೇಳಿದ. ಆಗ ಜ್ಞಾಪಕ ಬಂತು. ಅವಳು ಗಾಡಿ ಕಟ್ಟಿಸಿಕೊಂಡು ಹುಣಸೂರಿನಲ್ಲಿ ಡಾಕ್ಟರ್ ಹತ್ರ ಔಷಧಿ ತಕ್ಕೊಂಡು ಬರ್ತೀನಿ ಎಂದು ಹೋಗಿದ್ದಾಳೆ. ಬಂದುಬಿಡ್ತಾಳೆ. ಬಾ. ಜೋಯಿಸರ ಮನೆಯಲ್ಲಿ, ನಿನಗೆ ಮುಖ ತೊಳೆಸಿ, ಆ ಹುಡುಗಿಯರು ನಿನ್ನನ್ನ ಚೆನ್ನಾಗಿ ನೋಡಿಕೊಳ್ತಾರೆ” ಎಂದು ಅವರು ಸುಳ್ಳಿಗೆ ಶರಣಾದಂತೆ, ಮುಂಬಾಗಿಲನ್ನು ದಢಾರನೆ ನೂಕಿ, ಅವರ ಬಂಧುಬಾಂಧವರು ಒಳನುಗ್ಗಿ,
“ಆ ಪಾತಕಿ- ರುಕ್ಮಿಣಿ, ಎಲ್ಲಿ?” ಎಂದು ಗಂಟಲು ಜೋರುಮಾಡಿದರು.
“ಅವಳು ಮನೆಯಲ್ಲಿ ಇಲ್ಲ-“ ಎಂದು ಅಪ್ರತಿಭರಾಗದೆ ಶಾಸ್ತ್ರಿಗಳು ಸಂಯಮದಿಂದ ಉತ್ತರವಿತ್ತರು.
“ಸುಳ್ಳು, ನೀವೆಲ್ಲೋ ಅವಳನ್ನು ಬಚ್ಚಿಟ್ಟಿದ್ದೀರಿ.”
“ಬೇಕಾದರೆ ನೀವೆ ಪರೀಕ್ಷೆ ಮಾಡಿಕೊಳ್ಳಿ” ಶಾಸ್ತ್ರಿಗಳು ಆ ದುಃಖದಲ್ಲೂ ಶಾಂತರಾಗಿ ನುಡಿದರು.
ಆ ಗುಂಪು ಶಾಸ್ತ್ರಿಗಳ ಮಾತನ್ನು ನಂಬದೆ ಮನೆಯ ಒಂದೊಂದು ಮೂಲೆಮುಡಕಲನ್ನೂ ಸೋದಿಸಿ ತಪಾಸಣೆ ನಡೆಸಿತು. ಕೊನೆಗೆ ಕೊಟ್ಟಿಗೆ, ಹಿತ್ತಿಲುಗಳನ್ನು ಶೋಧಿಸಿಯಾಯಿತು.
“ರುಕ್ಮಿಣಿ ಎಲ್ಲಿ?- ಗೋಪ್ಯವಾಗಿ ನೀವು ಅವಳನ್ನೆಲ್ಲಿಗೋ ರವಾನಿಸಿಬಿಟ್ಟಿದ್ದೀರಿ...” ಎಂದು ಅವರಲ್ಲಿ ಯೋರೊ ಗುಡುಗಿದರು. ಸುಬ್ರಹ್ಮಣ್ಯನೇ ಇರಬಹುದು.
“ನಾನಲ್ಲ ಅವಳನ್ನ ಕಳಿಸಿರೊನು. ಅವಳನ್ನ ಕೆರೆಗೊ ಬಾವಿಗೊ ತಳ್ಳಿರೋರು-ನೀವು!”- ಶಾಸ್ತ್ರಿಗಳು ಖಾರವಾಗಿ ನುಡಿದರು. ಅವರು ಹಾಗೆ ಹೇಳುವಾಗ ಅವರ ಒಂದೊಂದು ನುಡಿಯೂ ನರಳುತ್ತಿತ್ತು.
“ಏನು ಶಾಸ್ತ್ರಿಗಳೇ ನೀವು ಹೇಳ್ತಿರೋದು?”- ಗುಂಪಿನ ಮಂದಿ ಈಗ ಕೊಂಚ ಚಕಿತಗೊಂಡಂತೆ ಕಾಣುತ್ತಿತ್ತು.