66 “ರುಕ್ಮಿಣಿ, ನಿನಗೂ ಸುಶೀಲೆಗೂ ದುರದೃಷ್ಟವಶಾತ್ ಹೊಂದಾಣಿಕೆ ಆಗ್ತಿಲ್ಲ. ಕೊಂಚಕಾಲ ನೀನು ನಿಮ್ಮ ತೌರಿಗೆ ಹೋಗಿ ಇದ್ದರೆ ಕ್ಷೇಮ.”
ರುಕ್ಮಿಣಿ ಚಿಂತಾಕ್ರಾಂತಳಾದಳು...ಮಾವಯ್ಯ ಯಾಕೆ ಹೀಗೆ ಹೇಳುತ್ತಿದ್ದಾರೆ?... ತನ್ನದೇನು ತಪ್ಪು ಇದರಲ್ಲಿ?... ಇನ್ನು ಮುಂದೆ ಅತ್ತೆ ಹೇಳಿದಂತೆ ಕೇಳಿಕೊಂಡು ಬಿದ್ದಿರುವುದಾಗಿ ಹೇಳಬೇಕೆಂದು ತವಕಿಸಿದವಳು. ಆದರೆ ಬಾಯೇ ಹೊರಡಲಿಲ್ಲ!...
ಮುಂದೆ ಸ್ನಾನ, ಸಂಧ್ಯಾವಂದನೆ, ಪುಜೆಪುನಸ್ಕಾರಗಳನ್ನು ಅವಸರವಸರವಾಗಿ ಮುಗಿಸಿ, ಆಳುಮಗ ಸೊಸಿಯನಿಗೆ ಲಕ್ಕನನ್ನು ಕರೆತರಲು ಅಪ್ಪಣೆ ಮಾಡಿದರು. ತಾನೂ ಸಹ ಜಾಗ್ರತೆ ಜಾಗ್ರತೆ ಸನ್ನದ್ಧಳಾಗಿ, ಅಡಿಗೆಕೊಣೆಯಲ್ಲಿ ಸೌದೆಯ ಸಣ್ಣ ಸಣ್ಣ ಸಿಗರುಗಳನ್ನು ಒಲೆಗೆ ಒಟ್ಟುತ್ತಿದ್ದ ಸುಶೀಲತ್ತೆಗೆ ಒಳಗಿನ ತಾಪವನ್ನೆಲ್ಲ ಹೇಗೊ ಬದಿಗೊತ್ತಿ,
“ಹೋಗಿ ಬರ್ತೀನಿ, ಸುಶೀಲತ್ತೆ” ಎಂದಳು. ಒಲೆಯ ಒಳಗಿನ ಸೌದೆಯ ಕೊಳ್ಳಿಗಳನ್ನು ರಭಸವಾಗಿ ಅತ್ತಿಂದಿತ್ತ ಹೊರಳಿಸುತ್ತ ರುಕ್ಮಿಣಿಯ ಮುಖವನ್ನು ಸಹ ನೋಡದೆ, ‘ಸರಿ’ ಎಂದಷ್ಟೆ ಕೊಸರಿ, “ನಾನೇನು ನಿನ್ನ ಹೋಗು ಎಂದೆನೆ?... ತಲೆ ಬೋಳಿಸಿ ಈಗಲೂ ಮಹಾರಾಯಿತಿ ಹಾಗಿರು” ಎಂದಳು.
ಆದರೆ ಅಡಿಗೆ ಮಾಡುವುದರಲ್ಲಿ ಸುಶೀಲ ಬಲು ಚೂಟಿ. ಅವರಿಗೆಲ್ಲ ಬೆಳಗಿನ ಉಪಾಹಾರದ ಜೊತೆಗೆ ದಾರಿಗೆಂದು ಆಗಲೆ ಬುತ್ತಿಯನ್ನೂ ಸಿದ್ಧಗೊಳಿಸಿದ್ದಳು... ಯಾವ ಮಾತೂ ಇಲ್ಲದೆ ಉಪಾಹಾರ ಮುಗಿದಿತ್ತು!...
ಗಾಡಿಗೆ ಕಮಾನು ಬೀಸುವುದರಲ್ಲಾಗಲಿ, ಗಾಡಿ ಹೊಡೆಯುವುದರಲ್ಲಾಗಲಿ ಆಳು ಸೊಸಿಯ, ಇನ್ನೂ ಚಿಕ್ಕ ವಯಸ್ಸಿನವನಿದ್ದು, ಅಷ್ಟು ಪರಿಣತಿ ಪಡೆದಿರಲಿಲ್ಲ. ಆ ಕಾರಣಕ್ಕಾಗಿಯೆ ಶಾಸ್ತ್ರಿಗಳು ಲಕ್ಕನನ್ನು ಕರೆಸಿದ್ದರು. ಲಕ್ಕ ಲವಲವಿಕೆಯಿಂದ ಕಮಾನು ಬಿಗಿಯುವುದನ್ನು ಮಾವಯ್ಯನೊಂದಿಗೆ ರುಕ್ಮಿಣಿಯೂ ನಿರೀಕ್ಷಿಸುತ್ತ ನಿಂತಿದ್ದಳು.ಕಮಾನು ಸಿದ್ಧವಾಗುತ್ತಲೂ ಆಳಿಗ ದನಕರು, ಎಮ್ಮೆಗಳ ಯೋಗಕ್ಷೇಮ ನೋಡಿಕೊಳ್ಳುವಂತೆ ಆಜ್ಞಾಪಿಸಿ, ಲಕ್ಕನನ್ನೇ ಗಾಡಿ ಹೊಡೆಯಲು ನೇಮಿಸಿದ್ದರು...
ರುಕ್ಮಿಣಿಯಿನ್ನೂ ಗಾಡಿಗೇ ಹತ್ತಿಲ್ಲ. ತಾನೂ ಅವರೊಡನೆ ಬರುವುದಾಗಿ ಸರಸಿ ಗಂಟುಬಿದ್ದಳು. ಶಾಸ್ತ್ರಿಗಳು ಮತ್ತು ರುಕ್ಮಿಣಿ ಪರಿಪರಿಯಲ್ಲಿ ರಮಿಸಿ ಬೇಡವೆಂದರೂ ಕೇಳದೆ ರಾಗರಾಗವಾಗಿ ರೋದಿಸತೊಡಗಿದಳು. ಕಡೆಗೆ ಕಟ್ಟೇಪುರದಿಂದ ಊರಿಗೆ ಮರಳಿದ್ದ ವೆಂಕಣ್ಣ ಜೋಯಿಸರ ಹೆಣ್ಣುಮಕ್ಕಳು ನಾಗಲಕ್ಷ್ಮಿ, ವಾಸಂತಿ, ಶಾಂತಿ ಮೂವರೂ ಸೇರಿ ಉಪಾಯವಾಗಿ “ಅವರು ಹೋದರೆ ಹೋಗ್ತಾರೆ ಬಾರೆ. ನಾವು ಆಟ ಆಡೋಣ” ಎಂದು ಪುಸಿ ಮಾಡಿ