ವಿಷಯಕ್ಕೆ ಹೋಗು

ಪುಟ:Vyshakha.pdf/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

84 ನಾಳೆ ಸಿಕ್ಕೇ ಸಿಗ್ತಾರೆ. ತಾನು ಮೈಸೂರಿಗೆ ಹಿಂದಿರುಗುವುದರ ಒಳಗೆ ಅವರನ್ನ ಹಣ್ಣುಗಾಯಿ ನೀರುಗಾಯಿ ಆಗುವ ಹಾಗೆ ಬಡಿದು, ಅವರು ಊರಿನಲ್ಲಿ ಇನ್ನು ಎಂದೆಂದಿಗೂ ಇಂಥ ದುಷ್ಕೃತ್ಯ ನಡೆಸದ ಹಾಗೆ ಮಾಡಬೇಕು, ಎನ್ನಿಸಿತಂತೆ. ಆದರೆ ತಕ್ಷಣ ವಿವೇಕ ಉದ್ರೇಕಕ್ಕೆ ಕಡಿವಾಣ ಹಾಕತಂತೆ... ಹೌದು, ಅವರನ್ನು ಶಿಕ್ಷಿಸಲು ಹೋಗಿ, ಅನ್ಯಾಯವಾಗಿ ಆ ಬಾಲಕಿಯ ಮಾನ ಕಳೆದಂತಾಗುವುದಿಲ್ಲವೆ? ಎಂಬ ಚಿಂತೆ ಹುಟ್ಟಿ, ಯಾರಿಗೂ ಪ್ರಕಟಿಸುವುದಿಲ್ಲವೆಂದು ಜಾನಕಿಗೆ ಧೈರ್ಯ ತುಂಬಿ, ಉಪಾಯವಾಗಿ ಹೊಳೆಯ ಆಚೆಯ ದಡದಲ್ಲಿ ಹರಿಗಲು ನಿಲ್ಲುವ ತಾಣದವರೆಗೂ ಅವಳನ್ನು ಕರೆದು ತಂದಿದ್ದನಂತೆ. ಆ ಬಳಿಕೆ ಹೊಳೆಯ ಮಧ್ಯದಲ್ಲಿ ಹರಗಲು ದಡ ಮುಟ್ಟವವರೆಗೂ ಕಾದಿದ್ದು, ಅವಳನ್ನು ಅದರೊಳಗೆ ಹತ್ತಿಸಿ ಕುಳ್ಳಿರಿಸಿದನಂತೆ. ಹರಿಗಲು ಈಚೆ ದಡ ಸೇರುವವರೆಗೂ ಶ್ಯಾಮನಿಗೆ ಆತಂಕ-ಎಲ್ಲಿ ಜಾನಕಿ ಹರಿಗಲಿನಿಂದ ಹೊಳೆಗೆ ಹಾರಿಬಿಡುವಳೊ ಎಂದು!... ಅಂತೂ ಹೀಗೆ ಮೈಯೆಲ್ಲ ಕಣ್ಣಾಗಿ ಕಾವಲಿದ್ದು, ಹರಿಗಲು ಅವರನ್ನು ಈಚೆ ದಡದಲ್ಲಿ ಇಳಿಸಿದಾಗ, ವೀರಾಂಜನೆಯ ಗುಡಿ ಸಮೀಪ, ಯಥಾಪ್ರಕಾರ ಶಾಲೆಗೆ ಚಕ್ಕರ್ ಹೊಡೆದು, ಶೇಷ ಇನ್ನೂ ಕೆಲವರು ಹುಡುಗರೊಂದಿಗೆ ಚಿನ್ನಿ ಆಡುತ್ತಿದ್ದುದು ಕಾಣಿಸಿತಂತೆ. ಹಾಳಾದವನು ಇವನಾದರೂ ಜೊತೆಗೆ ಇದ್ದಿದ್ದರೆ ಈ ಅನಾಹುತ ತಪ್ಪುತ್ತಿತ್ತಲ್ಲ ಎಂದು ಶ್ಯಾಮನಿಗೆ ಅನ್ನಿಸಿತ್ತಂತೆ.

ನಡೆದ ಸಂಗತಿಯನ್ನೆಲ್ಲ ನನಗೆ ಈ ಪರಿಯಲ್ಲಿ ವರ್ಣಿಸಿ, ಶ್ಯಾಮ ಕೊನೆಯದಾಗಿ-

“ಹುಡುಗಿಗೆ ತುಂಬಾ ಘಾಸಿಯಾಗಿದೆ. ಎಲ್ಲಿ ಅವಳು ಪ್ರಾಣ ಕಳೆದು ಕೊಳ್ತಾಳೊ ಎನ್ನುವ ಚಿಂತೆ ನನ್ನನ್ನು ಬಾದಿಸ್ತಾ ಇದೆ, ರುಕ್ಮಿಣಿ. ನಿಮ್ಮ ಅತ್ತಿಗೆಗೂ ಅಣ್ಣನಿಗೂ ಹೇಳು- ಈ ವಿಚಾರ ಬಹಿರಂಗ ಮಾಡದೆ ಗೋಪ್ಯವಾಗಿಟ್ಟು, ಹುಡಿಗೀನ ಆದಷ್ಟು ಜಾಗ್ರತೆ ಲಗ್ನಮಾಡಿ ಕಳಿಸುವ ಏರ್ಪಾಡು ಮಾಡಬೇಕು” ಎಂದ.

ಶ್ಯಾಮ ಹೊರಟುಹೋಗುತ್ತಲೂ ಎಣ್ಣೆನೀರು ಎರದುಕೊಳ್ಳುತ್ತಿದ್ದ ಅತ್ತಿಗೆ ಬಚ್ಚಲು ಕೋಣೆಯಿಂದ ಹೊರಬರುವವರೆಗೂ ನಾನು ಉದ್ವೇಗದಿಂದಲೇ ಕಾದಿದ್ದೆ. ಅವಳು ತಲೆಗೂದಲ ತೇವವನ್ನು ಒತ್ತಿ ತೆಗೆಯುತ್ತಿರುವಾಗ, “ಕೊಂಚ ಹೀಗೆ ಬರ್ತೀರ, ಅತ್ತಿಗೆ?” ಅಂದೆ. ನನ್ನ ದನಿಯಲ್ಲಿದ್ದ ಆತಂಕವನ್ನು ನನ್ನ ಪಿಸು ಮಾತನ್ನು ಗಮನಿಸಿ, ಕಳವಳಗೊಂಡ ಅತ್ತಿಗೆ ಸದ್ದಿಲ್ಲದೆ ನನ್ನೊಂದಿಗೆ ಬಂದಳು. ನಾವಿಬ್ಬರೂ ಸಾತು ಮಲಗುವ ಕೋಣೆ ಸೇರುತ್ತಲೂ ನಡೆದ ವಿಚಾರವನ್ನು