೧೧೫
ಯಶೋಧರ ಚರಿತೆ
ಮತ್ತಂ ಧರ್ಮವಿಹಾರ ನಿ-
ಮಿತ್ತಂ ಬಂದಿರೆ ಯಶೋಧರಂ ತಮ್ಮವರ್ಗಾ
ದುತ್ತಮಗತಿಯಂ ಕೇಳ್ದು ಸು-
ದತ್ತಾಚಾರ್ಯರ ಪದಾಬ್ಜಮಂ ಪೂಜಿಸಿದಂ 79
ಜೀವದಯೆ ಎಂಬುದೆಮ್ಮಯ
ಮಾವನ ಪೆಸರಿರ್ದ ನಾಡೊಳಿರದಾತಂಗಂ
ದೇವಗತಿಯಾಯ್ತು ಸೋದರ-
ರ್ಗಾ ವೈಭವಮಾಯ್ತು ಧರ್ಮದಿಂದಾಗದುದೇಂ 80
ಎಂದು ಮನಸಂದು ಜಿನಮತ
ನಂದನದೊಳ್ ದಾನಲತೆ ದಯಾರಸದೆ ಜಗಂ
ಪಂದರೆನೆ ಪರ್ವಿ ಪೊಸಜಸ-
ದಿಂದಂ ಮರಲ್ದಿರೆ ಯಶೋಧರಂ ಬೆಳೆಯಸಿದಂ 81
_____
79. ಮತ್ತೊಮ್ಮೆ ಸುದತ್ತಾಚಾರ್ಯರು ಧರ್ಮವಿಹಾರಕ್ಕಾಗಿ ಅಲ್ಲಿಗೆ ಬಂದಿದ್ದರು. ಆಗ ಯಶೋಧರನು ತಮ್ಮವರಿಗೊದಗಿದ ಉತ್ತಮ ಗತಿಯನ್ನು ಕೇಳಿ ತಿಳಿದನು; ಗುರುಗಳ ಪಾದಕಮಲವನ್ನು ಪುಜಿಸಿದನು. 80. “ನಮ್ಮ ಮಾವನಿದ್ದ ಊರಿನಲ್ಲಿ ಜೀವದಯೆ ಎಂಬುದರ ಹೆಸರೇ ಇರಲಿಲ್ಲ. ಅಂಥವರಿಗೂ ದೇವಗತಿಯಾಯಿತು. ನನ್ನ ಅಣ್ಣ ಅಕ್ಕಂದಿರಿಗೂ ಅಂತಹ ವೈಭವವು ಸಂಭವಿಸಿತು ಎಂದಮೇಲೆ ಧರ್ಮದಿಂದ ಆಗದುದೇನಿದೆ?” ಎಂದು ಎಣಿಸಿ ಧರ್ಮಕ್ಕೆ ಮನಸ್ಸೊಪ್ಪಿಸಿದನು. 81. ಜಿನಮತ ನಂದನದಲ್ಲಿ ಅವನು ದಾನಲತೆಯನ್ನು ಬೆಳೆಯಿಸಿ ಅದಕ್ಕೆ ದಯಾರಸವನ್ನೆರೆದು ಅದನ್ನು ಜಗತ್ತಿನ ಚಪ್ಪರದಲ್ಲಿ ಹಬ್ಬಿಸಿದನು.59. ಅದರಲ್ಲಿ ಹೊಸಕೀರ್ತಿ ಹೂವಾಗಿ ಅರಳಿತು.