ವಿಷಯಕ್ಕೆ ಹೋಗು

ಪುಟ:YASHODARA CHARITE.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧

ಯಶೋಧರ ಚರಿತೆ

ಸಂಕಲ್ಪ ಹಿಂಸೆಯಿಂದ ಕೊಲ್ಲಬೇಕೆಂದು ಎಣಿಸಿಕೊಂಡುದರಿಂದ ಬೇರೆ ಬೇರೆ ಜನ್ಮಗಳನ್ನು ಪಡೆದು, ನವೆದು, ಕಟ್ಟಕಡೆಗೆ ದೊರೆಯುವುದು ಎರಡನೆಯ ಸ್ವರ್ಗ ; ನಿರಂತರ ಹಿಂಸೆಯ ಬಳಿಕ ದೊರೆಯುವುದು ಮೂರನೆಯ ಸ್ವರ್ಗ ; ಅದೂ ಹಲವು ಜನ್ಮಗಳನ್ನು ಪಡೆಯದೆ. ಎನ್ನುವಾಗ ಸಂಕಲ್ಪ ಹಿಂಸೆಯೇ ದೊಡ್ಡ ಪಾಪ ; ನಿಜವಾದ ಹಿಂಸೆ ಅಷ್ಟು ದೊಡ್ಡ ಪಾಪವಲ್ಲ, ಎಂದು ತೋರಲಾರದೆ? ಇದಕ್ಕೆ ಸಮಾಧಾನ ಹಳುವುದಾದರೆ ‘ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ (ಮನುಷ್ಯರ ಬಂದನಕ್ಕೂ ಮೋಕ್ಷಕ್ಕೂ ಮನಸ್ಸೇ ಕಾರಣ) ಎಂಬ ಸೂಕ್ತಿಯನ್ನವಲಂಬಿಸಬೇಕು. ಮಾರಿದತ್ತ ಮಾಡುತ್ತಿದ್ದ ಹಿಂಸೆ ಹಿಂಸೆಯೆಂಬ ಎಣಿಕೆಯಿಂದ ಮಾಡಿದುದಲ್ಲ ; ದೇವಿಯ ಅರ್ಚನೆ ಎಂಬ ಭಾವನೆಯಿಂದ. ಯಶೋಧರನಾದರೋ, “ಜೀವದಯೆ ಜೈನ ಧರ್ಮಂ” ಎಂಬುದನ್ನು ತಿಳಿದೂ, ಹಿಟ್ಟಿನ ಕೋಳಿಯನ್ನು ಕೊಲ್ಲುವುದಕ್ಕೆ ಮನಸ್ಸುಮಾಡಿ ಅಪರಾಧವನ್ನು-ಪಾಪವನ್ನು-ಮಾಡಿದವನು ಎನ್ನಬೇಕು.

ಹಾಗೆಂದು ಯಶೋಧರನು ಬೇರೆ ಹಿಂಸೆಯನ್ನು ಮಾಡಿಲ್ಲವೆ ? ಅವನ ಅಸಿಲತೆ ರಣಧೌತವಾಗಿತ್ತು. ವಿಜಿಗೇಷು ವೃತ್ತಿ ರಾಜಧರ್ಮವಾದುದರಿಂದ ಅವನು ಆ ರೀತಿ ಶತ್ರುಗಳನ್ನು ಕೊಂದಿದ್ದಾನೆಂದೂ, ಅದು ಅಪರಾಧವಾಗುವುದಿಲ್ಲವೆಂದೂ ಇಲ್ಲಿ ಹೇಳಬಹುದೇ? ಹಾಗೆಯೇ ಅವನ ಮಗ ಯಶೋಮತಿ ಬೇಟೆಯ ನೆವದಿಂದ ಎಷ್ಟು ಜೀವಹಿಂಸೆ ಮಾಡಿಲ್ಲ? ಅವನಿಗೇನು ಗತಿಯೊದಗಿತೋ ತಿಳಿಯದು.

ಯಶೋಧರನು ಎರಡನೆಯದಾದ ಈಶಾನಕಲ್ಪಕ್ಕೆ ಮಾತ್ರ ಅರ್ಹನಾದುದಕ್ಕೆ ಅವನು ಸತ್ಯವ್ರತವನ್ನು ಪರಿಪಾಲಿಸದಿದ್ದುದೂ ಕಾರಣವಾಗಿರಬಹುದೆ? ಅಮೃತಮತಿ ಅಷ್ಟವಂಕನಲ್ಲಿ ಕಾಮುಕತೆಯಿಂದ ವ್ಯಭಿಚಾರಿಯಾದಳೆಂಬುದನ್ನು ಅವನು ತನ್ನ ತಾಯಿಗೆ ಹೇಳುವಾಗ ಕನಸಿನ ನೆವದಿಂದ ಮರೆಸಿ ಹೇಳಿದನು. ಇದರಿಂದಾಗಿ ಅವನಿಗೆ ಈಶಾನಕಲ್ಪದಲ್ಲಿ ಜನ್ಮವೊದಗಿತೋ ಏನೋ. ಯಾವ ಸಂಧರ್ಭಗಳಲ್ಲಿ ಸುಳ್ಳು ಹೇಳಬಹುದೆಂಬುದನ್ನು ಈ ಕೆಳಗಣ ಶ್ಲೋಕ ತಿಳಿಸುತ್ತದೆ:

ವಿವಾಹಕಾಲೇ ರತಿಸಂಪ್ರಯೋಗೇ

ಪ್ರಾಣಾತ್ಯಯೇ ಸರ್ವ ಧನಾಪಹಾರೇ

ವಿಪ್ರಸ್ಯಚಾರ್ಥೇಹ್ಯನೃತಂ ವದೇತ

ಪಂಚಾನೃತಾನ್ಯಾಹುರಪಾತಕಾನಿ||

(ವಿವಾಹ ಕಾಲದಲ್ಲಿ, ಸಂಭೋಗ ಸಮಯದಲ್ಲಿ, ಪ್ರಾಣಪಾಯವು ಒದಗಿದಾಗ