೪೫
ಯಶೋಧರ ಚರಿತೆ
ವರಮಂಚ ಮಣಿದ್ಯುತಿಧೃತ
ಮರಾಳಿಕಾತೂಳತಳ್ವದೊಳ್ ತಾಮೆಸೆದರ್
ಸುರಚಾಪಚ್ಛವಿ ಸುತ್ತಿದ
ಶರದಭ್ರದೊಳೆಸೆವ ಖಚರದಂಪತಿಗಳವೊಲ್ 22
ನಡೆ ಸೋಂಕಿದ ಕಡೆಗಣ್ಗಳ
ಕುಡಿವೆಳಗಿಂ ಬಿಡುವ ಬೆಮರೊಳಂ ಪದದೊಳಮೇಂ
ತಡವಾದರೊ ಕೌಮುದಿ ಕ
ಣ್ಣಿಡೆ ಕರಗುವ ಚಂದ್ರಕಾಂತ ಮಣಿಪುತ್ರಿಕೆವೊಲ್ 23
ತನುಸೋಂಕಾಲಿಂಗನ ಚುಂ
ಬನದೆ ಸುರತದಿಂ ಸವಿ ರತಪ್ರೌಢಿಯಿನಾ
ತನುವಂ ಮರೆಯಿಸೆ ಅರಿಯದೆ
ಮನೋಜನಾಡಿಸುವ ಜಂತ್ರದಂತಿರೆ ನೆರೆದರ್ 24
_____
ಈ ದಂಪತಿಗಳು ಕಾಣುತ್ತಿದ್ದರು. 22. ರತ್ನ ಖಚಿತವಾದ ಚೆಲುವಿನ ಮಂಚದ ಕಾಂತಿ ಹಂಸತೂಲಿಕಾತಲ್ಪವನ್ನು ಇನ್ನಷ್ಟು ಸೊಗಸುಗೊಳಿಸಿತ್ತು. ಅದರ ಮೇಲೆ ಅವರಿಬ್ಬರೂ ಕುಳಿತಾಗ ಕಾಮನ ಬಿಲ್ಲಿನ ಕಾಂತಿ ಪಸರಿಸಿಕೊಂಡಿರುವ ಶರತ್ಕಾಲದ ನಿರ್ಮಲ ಮೇಘಮಾಲೆಯ ಮೇಲೆ ಮೆರೆಯುವ ಗಂಧರ್ವದಂಪತಿಗಳಂತೆ ಶೋಭಿಸುತ್ತಿದ್ದರು. 23. ಒಬ್ಬರು ಇನ್ನೊಬ್ಬರನ್ನು ಒಲುಮೆಯಿಂದ ನೋಡುತ್ತಿದ್ದರು. ಅವರಿಬ್ಬರ ಕಟಾಕ್ಷದ ಬೆಳಕಿನ ಕುಡಿ ಪರಸ್ಪರರಿಗೆ ಸೋಂಕಿ, ಅವರಿಬ್ಬರೂ ಬೆವರತೊಡಗಿದರು, ತಿಂಗಳ ಬೆಳಕು ಚಂದ್ರಕಾಂತಮಣಿಯ ಬೊಂಬೆಗೆ ತಾಗಿದಾಗ ಅದು ಕರಗಿ ನೀರು ಸುರಿಸುವಂತೆ. 24. ಒಬ್ಬರ ದೇಹ ಇನ್ನೊಬ್ಬರ ದೇಹಕ್ಕೆ ತಾಗಿತು ; ಪರಸ್ಪರ ಆಲಿಂಗಿಸಿಕೊಂಡರು ; ಚುಂಬಿಸಿದರು. ಕಂಠಧ್ವನಿ ಸವಿಯಾಗಿ ಕೇಳತೊಡಗಿತು. ಇಂತಹ ಸಮಾಗಮ ಪ್ರೌಢಿಯಿಂದ ಅವರಿಬ್ಬರೂ ಮೆಯ್ಮರೆತರು. ಅವರಿಗೆ ಯಾವುದರ ಅರಿವೂ ಇಲ್ಲವಾಯಿತು. ಕಾಮನು ಕುಣಿಸುವ ಯಂತ್ರದಂತೆ ಅವರಿಬ್ಬರೂ ಒಂದುಗೂಡಿದರು. 25. ಸಂಭೋಗಸುಖವು ಅವರಿಗೆ