೯೦
ಯಶೋಧರ ಚರಿತೆ
ಅಗೆವೊಯ್ದ ಚಂದ್ರಮಂಡಲ-
ದಗೆಗಳವೊಲ್ ಕಾರಮುಗಿಲ ಕಿಳ್ಸರಿಗಳವೊಲ್
ಸೊಗಯಿಸಿದುವು ಬೆಳ್ಗೊಡೆ ಕಂ
ಬಗಂಬದೊಳ್ ಕೊಂಬುಗೊಂಬಿನೊಳ್ ಪೆರ್ಮಿಡಿಗಳ್ 4
ಎಲೆ ಸುಲಿದೆಡೆಗಳ್ ಕಣ್ ಕ-
ಣ್ಗೆಲೆಯೆಡೆ ಗಂಟೊಡೆದು ಮೊನಸಿ ನನೆಕೊನೆದು ಮುಗು-
ಳಲರ್ದು ಮಳೆದುಂಬಿಗಂ ತೆಂ-
ಬೆಲರ್ಗಂ ಮುದ್ದಾದುವಲ್ಲಿ ಪೊಸಮಲ್ಲಿಗೆಗಳ್ 5
ಪೊಂಬಾಳೆ ಚಾಮರಂ ಚಂ
ದ್ರಂ ಬೆಳ್ಗೊಡೆ ಕೇಳಿಶಿಖರಿ ಸಿಂಹಾಸನಮಾ-
ಯ್ತೆಂಬಿನೆಗಮಂಗಜಂ ಮಾ-
ವೆಂಬ ಕುಮಾರಂಗೆ ಪಟ್ಟಮಂ ಕಟ್ಟಿಸಿದಂ 6
_____
ತಾಳ, ಹೊಸ ಹೂಗಳ ಸುಂದರ ದೃಶ್ಯ ಇವುಗಳಿಂದ ಅವನು ರಾಜನ ಮನಸ್ಸನ್ನು ವಿನೋದಗೊಳಿಸಿದನು. 4. ಉದ್ಯಾನದ ಪ್ರತಿಯೊಂದು ಕಂಬದಲ್ಲಿಯೂ ಬೆಳ್ಗೊಡೆ ಸೊಗಸಾಗಿ ತೋರುತ್ತಿತ್ತು. ಅದನ್ನು ಕಾಣುವಾಗ ಚಂದ್ರಮಂಡಲದ ಅಗೆಗಳನ್ನು ಅಲ್ಲಲ್ಲಿ ನೆಟ್ಟಿಟ್ಟಂತೆ ಹೃದಯಂಗಮವಾಗಿತ್ತು. ಹಾಗೆಯೇ ಮಳೆಗಾಲದ ಮೋಡಗಳಿಂದ ಮಳೆಹನಿಗಳು ಉದುರಿದಂತೆ ಪ್ರತಿಯೊಂದು ಮರದ ಕೊಂಬೆಯಲ್ಲೂ ದೊಡ್ಡ ದೊಡ್ಡ ಮಿಡಿಗಳು ಶೋಭಿಸುತ್ತಿದ್ದುವು. 5. ಎಲೆಯುದುರಿದ ಸ್ಥಳಗಳಲ್ಲಿ ಕಣ್ಣು ಕಣ್ಣುಗಳಲ್ಲಿ, ಎಲೆಯ ಎಡೆಯಲ್ಲಿ ಮಲ್ಲಿಗೆಯ ಬಳ್ಳಿ ಗಂಟೊಡೆಯಿತು. ಅದೇ ಗಂಟು ಮೊನಚಾಗಿ ನನೆಕೊನೆವೋಯಿತು. ಆ ಬಳಿಕ ಮುಗುಳು ಕಾಣಿಸಿಕೊಂಡು ಅದೇ ಅರಳತೊಡಗಿತು. ಈ ಹೊಸಹೂಗಳು ಮರಿದುಂಬಿಗಳಿಗೂ ದಕ್ಷಿಣಾನಿಲಕ್ಕೂ ಮುದ್ದಾದುವು. 6. ಮಾವೆಂಬ ರಾಜಕುಮಾರನಿಗೆ ಕಾಮನು ಪಟ್ಟಕಟ್ಟಿಸಿದನು. ಆಗ ಹೊಂಬಾಳೆ ಚಾಮರವಾಗಿ ಬೀಸಿತು. ಎತ್ತಿದ ಬೆಳ್ಗೊಡೆಯಾಗಿ ಚಂದ್ರನು ಶೋಭಿಸಿದನು. ನರ್ತಿಸುವ ನವಿಲೇ ಸಿಂಹಾಸನವಾಗಿ ಪರಿಣಮಿಸಿತು.