ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅತ್ತಿಮಬ್ಬೆ

ವಿಕಿಸೋರ್ಸ್ದಿಂದ

ಅತ್ತಿಮಬ್ಬೆ ಪ್ರಾಚೀನ ಕರ್ಣಾಟಕದ ಸ್ತ್ರೀಯರಲ್ಲಿ ಅಗ್ರಗಣ್ಯಳು. ಕಾಲ ಕ್ರಿಸ್ತಶಕ ಹತ್ತನೆಯ ಶತಮಾನದ ಉತ್ತರಾರ್ಧ ಮತ್ತು ಹನ್ನೊಂದನೆಯ ಶತಮಾನದ ಪೂರ್ವಾರ್ಧ. ಅಂದರೆ ಅವಳು ಚಾಳುಕ್ಯ ಚಕ್ರವರ್ತಿ ಅಹವಮಲ್ಲ ತೈಲಪ (973-997), ಅವನ ಮಗ ಇರಿವ ಬೆಡಂಗ ಸತ್ಯಾಶ್ರಯರ (997-1008) ಕಾಲದಲ್ಲಿದ್ದಳು. ಅವಳ ಆಶ್ರಯದಲ್ಲೆ ರನ್ನಕವಿ ತನ್ನ ಅಜಿತಪುರಾಣವನ್ನು ಬರೆದದ್ದು (993). ಅವಳು ಲಕ್ಕುಂಡಿಯಲ್ಲಿ ಬಸದಿಯನ್ನು ಕಟ್ಟಿಸಿ ಅದಕ್ಕೆ ದತ್ತಿಗಳನ್ನು ಬಿಡಿಸಿದ್ದು 1007ರಲ್ಲಿ ಎಂದು ಅಲ್ಲಿಯ ಶಾಸನದಿಂದ ತಿಳಿದುಬರುತ್ತದೆ.

ಅವಳ ಬಗ್ಗೆ ಅನೇಕ ಸಂಗತಿಗಳು ರನ್ನನ ಅಜಿತಪುರಾಣದಿಂದಲೂ ಅವನೇ ಬರೆದಿರಬಹುದಾದ ಲಕ್ಕುಂಡಿಯ ಶಾಸನದಿಂದಲೂ ತಿಳಿದುಬರುತ್ತವೆ. ಈಕೆಯ ತೌರುಮನೆಯ ಹಲವು ಸಂಗತಿಗಳು ಪೊನ್ನನ ಶಾಂತಿಪುರಾಣದಿಂದ ತಿಳಿದುಬರುತ್ತವೆ. ಜೊತೆಗೆ, ಅವಳಾದ ಮೇಲೆ ರಚಿತವಾದ ಬ್ರಹ್ಮಶಿವನ ಸಮಯಪರೀಕ್ಷೆಯೂ ಏಳೆಂಟು ಶಾಸನಗಳೂ ಅತ್ತಿಮಬ್ಬೆಯನ್ನು ಕೊಂಡಾಡಿವೆ.

ಅತ್ತಿಮಬ್ಬೆಯ ತಂದೆಯ ತಂದೆ ನಾಗಮಯ್ಯ. ಈಗ ಆಂಧ್ರಪ್ರದೇಶಕ್ಕೆ ಸೇರಿರುವ ವೆಂಗಿಮಂಡಲದ ಕಮ್ಮೆನಾಡಿನ ಪುಂಗನೂರಿನವನು. ಜೈನ ಬ್ರಾಹ್ಮಣ. ಇವನ ಮಕ್ಕಳು ಮಲ್ಲಪಯ್ಯ ಮತ್ತು ಪೊನ್ನಮಯ್ಯ. ಮಲ್ಲಪಯ್ಯ ಪಂಡಿತ ಮಂಡಳಿಗಂ ಕವಿಮಂಡಳಿಗಂ ತನ್ನ ಮನೆ ತವರ್ಮನೆಯೆನೆ ಬಾಳಿದವನು. ಈ ಸೋದರರಿಬ್ಬರ ಆಶ್ರಯದಲ್ಲಿ ಪೊನ್ನ ಶಾಂತಿಪುರಾಣವನ್ನು ಬರೆದ. ಪೊನ್ನಮಯ್ಯ ತನ್ನ ದೊರೆ ತೈಲಪನಿಗಾಗಿ ಕಾವೇರಿ ತೀರದ ಯುದ್ಧದಲ್ಲಿ ಪ್ರಾಣವನ್ನು ಒಪ್ಪಿಸಿದ. ಇವರಲ್ಲಿ ಮಲ್ಲಪಯ್ಯ ಮತ್ತು ಅಪ್ಪಕಬ್ಬೆಯರ ಮಗಳೇ ಅತ್ತಿಮಬ್ಬೆ.

ಅತ್ತಿಮಬ್ಬೆಯನ್ನು ಅವಳ ತಂಗಿ ಗುಂಡಮಬ್ಬೆಯ ಜೊತೆಯಲ್ಲಿ ಚಾಲುಕ್ಯ ಚಕ್ರವರ್ತಿ ಅಹವಮಲ್ಲನ ಭುಜಾದಂಡದಂತಿದ್ದ ನಾಗದೇವನಿಗೆ ಕೊಟ್ಟಿದ್ದರು. (ಈ ನಾಗದೇವ ಚಾಲುಕ್ಯ ಚಕ್ರವರ್ತಿಯ ಮಹಾಮಂತ್ರಿ ಧಲ್ಲಪನ ಹಿರಿಯ ಮಗ). ಹೀಗೆ ಅವಳನ್ನು ಕೊಟ್ಟ ಮತ್ತು ತಂದುಕೊಂಡ ಮನೆತನಗಳೆರಡೂ ಪ್ರಖ್ಯಾತವಾಗಿದ್ದುವು. ಅತ್ತಿಮಬ್ಬೆಗೆ ಅಣ್ಣಿಗದೇವನೆಂಬ ಕಿರಿ ವಯಸ್ಸಿನ ಮಗನೂ ಇದ್ದ. ಆದರೆ ಅವಳು ಇನ್ನೂ ಯೌವನದಲ್ಲಿರುವಾಗಲೇ ಅವಳ ಗಂಡ ನಾಗದೇವ ಸ್ವರ್ಗಸ್ಥನಾದ. ಆಗ ಅವಳ ತಂಗಿ ಗುಂಡಮಬ್ಬೆ ಅಕ್ಕನನ್ನು ಕಷ್ಟದಿಂದ ಒಪ್ಪಿಸಿ, ತಾನು ಗಂಡನೊಡನೆ ಸಹಗಮನ ಮಾಡಿದಳು.

ಪತಿಯ ಅಗಲಿಕೆಯಿಂದ ಜರ್ಝರಿತಳಾದ ಅತ್ತಿಮಬ್ಬೆ ಕಲ್ಲುಮನಸ್ಸು ಮಾಡಿ ಮಗನ ಲಾಲನೆ ಪಾಲನೆಗೋಸ್ಕರ ಉಳಿದಳು. ಆದರೆ ಉಗ್ರವ್ರತನೇಮಾದಿಗಳಲ್ಲಿ ದೇಹವನ್ನು ಬಳಲಿಸಿದಳು; ತನ್ನ ಬಳಿಯಿದ್ದ ಐಶ್ವರ್ಯವನ್ನು ಉದಾರವಾಗಿ ಜೈನಧರ್ಮಕ್ಕಾಗಿ ವ್ಯಯಿಸಿದಳು. ಅವಳು ಮಾಡಿದ ಧಾರ್ಮಿಕಕಾರ್ಯಗಳಲ್ಲಿ ಕೆಲವು ಇಂತಿವೆ: ಮಣಿಖಚಿತವಾದ 1,500 ಜಿನ ಪ್ರತಿಮೆಗಳನ್ನು ಮಾಡಿಸಿ ದಾನ ಮಾಡಿದಳು; ಲಕ್ಕುಂಡಿಯಲ್ಲಿ ದೊಡ್ಡ ಬಸದಿಯನ್ನು ಕಟ್ಟಿಸಿದಳು; ರನ್ನನಿಂದ ಅಜಿತಪುರಾಣವನ್ನು ಹೇಳಿಸಿದ್ದಲ್ಲದೆ, ತನ್ನ ತಂದೆ ಪೊನ್ನನಿಂದ ಹೇಳಿಸಿದ್ದ ಶಾಂತಿ ಪುರಾಣ ಹಸ್ತಪ್ರತಿಗಳ ಅಭಾವದಿಂದ ಜನರಲ್ಲಿ ಪ್ರಚಾರವಾಗದಿರುವ ಸಂಗತಿಯನ್ನು ಗಮನಿಸಿ ಅದರ ಸಾವಿರ ಪ್ರತಿಗಳನ್ನು ಮಾಡಿಸಿ ಹಂಚಿಸಿದಳು.

ಅವಳು ತನ್ನ ತಪಸ್ಸು ನಿಷ್ಠೆ ಔದರ್ಯ ತ್ಯಾಗ ಧರ್ಮಾನುರಾಗ ಕಾವ್ಯಪ್ರೇಮ ಇತ್ಯಾದಿಗಳಿಂದ ತನ್ನ ಕಾಲದ ಜನರ ಕಣ್ಣಲ್ಲಿ ಅದ್ಭುತ ವ್ಯಕ್ತಿಯಾದಳು. ಅವಳು ಮೆರೆದ ಪವಾಡಗಳನ್ನು ಅವಳ ಆಶ್ರಯದಲ್ಲಿದ್ದ ರನ್ನನೂ ಅವಳ ಶಾಸನವೂ ಕೊಂಡಾಡಿವೆ. ಜಿನನನ್ನು ಹೊತ್ತು ತಂದ ಅವಳನ್ನು ಕಂಡ ಗೋದಾವರಿ ತನ್ನ ಪ್ರವಾಹವನ್ನು ಉಡುಗಿಸಿತು; ಇದರಿಂದಾಗಿ ತೈಲಪ ತನ್ನ ಸೈನ್ಯದೊಡನೆ ನದಿಯನ್ನು ದಾಟುವುದು ಸಾಧ್ಯವಾಯಿತು. ಮದಿಸಿದ ಆನೆ ಅವಳ ಪಾದಗಳಿಗೆ ಶರಣಾಗಿ ಎರಗಿತು. ಅಕಸ್ಮಾತ್ ನದಿಯಲ್ಲಿ ಬಿದ್ದುಹೋದ ಜಿನಬಿಂಬ ಎಂಟು ದಿನಗಳಲ್ಲಿ ಕೈಗೆ ಬಂದಿತು (ಆ ಎಂಟು ದಿನವೂ ಅವಳು ಉಪವಾಸವಿದ್ದಳು). ಶ್ರವಣಬೆಳಗೊಳದ ಗೊಮ್ಮಟ ವಿಗ್ರಹವನ್ನು ನೋಡುವವರೆಗೆ ಅನ್ನವನ್ನು ತ್ಯಜಿಸುವೆನೆಂಬ ನಿಯಮವನ್ನು ಪಾಲಿಸಿ, ದರ್ಶನಕ್ಕಾಗಿ ಪರ್ವತವನ್ನು ಹತ್ತಿದಾಗ ಅವಳ ಮಾರ್ಗಾಯಾಸ ಪರಿಹಾರಕ್ಕಾಗಿ ಅಕಾಲವೃಷ್ಟಿಯೂ ಆಯಿತು. ಇವು ಅವಳು ಮಾಡಿದಳೆಂದು ಹೇಳಲಾದ ಕೆಲವು ಪವಾಡಗಳು. ಹೀಗೆ ಅತ್ತಿಮಬ್ಬೆ ಈಚಿನವರ ಕಣ್ಣಲ್ಲಿ ಮಾತ್ರವಲ್ಲ, ತನ್ನ ಕಾಲದಲ್ಲಿಯೇ ಪವಾಡ ವ್ಯಕ್ತಿಯಾಗಿ ಪರಿಣಮಿಸಿದ್ದಳು. ಚಕ್ರವರ್ತಿ ಪೂಜಿತೆಯೂ ಆಗಿದ್ದಳು.

ಅವಳಾದ ಮೇಲೆ ಹುಟ್ಟಿದ ಅನೇಕ ಶಾಸನಗಳಲ್ಲಿಯೂ ಬ್ರಹ್ಮಶಿವನ ಸಮಯ ಪರೀಕ್ಷೆಯಲ್ಲಿಯೂ ಅವಳನ್ನು ಮನಸಾರೆ ಕೊಂಡಾಡಲಾಗಿದೆ. ಅವಳು ನಾಡಿನಲ್ಲಿ ಶೀಲ ಅನುಪಮಗುಣ ಔದಾರ್ಯ ಅಭಿಮಾನಗಳಿಗೆ ಸಂಕೇತವಾಗಿ ಬಾಳಿದಳು. ಮುಂದಿನ ಜನಾಂಗದ ಮೇಲೆಯೂ ತನ್ನ ಪ್ರಭಾವನ್ನು ಬೀರಿದ ಮಹಾವ್ಯಕ್ತಿಗಳಲ್ಲಿ ಇವಳೂ ಒಬ್ಬಳು. (ಎಂ.ಸಿ.)