ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಮೃತ

ವಿಕಿಸೋರ್ಸ್ದಿಂದ

ಅಮೃತ ದೇವದಾನವರು ಕ್ಷೀರಸಮುದ್ರವನ್ನು ಮಥಿಸಿದಾಗ ಲಕ್ಷ್ಮಿ, ಚಂದ್ರ, ಐರಾವತ, ಉಚ್ಚೈಃಶ್ರವಸ್, ಹಾಲಾಹಲ ಮುಂತಾದುವುಗಳ ಜೊತೆಗೆ ಉದ್ಭವಿಸಿದುದು. ಚಂದ್ರ ಅಮೃತಭರಿತ ಎಂದು ಹಿಂದೂಗಳ ನಂಬಿಕೆ. ಕದ್ರುವಿನಿಂದ ತನ್ನ ತಾಯಿಯನ್ನು ಮುಕ್ತಗೊಳಿಸುವುದಕ್ಕಾಗಿ ಗರುಡ ಇದನ್ನು ದೇವಲೋಕದಿಂದ ಅಪಹರಿಸಿದ. ಶ್ರೀ ಕೃಷ್ಣನೂ ಇದನ್ನು ಉದಂಕ ಮಹರ್ಷಿಯ ತೃಪ್ತ್ಯರ್ಥವಾಗಿ ತರಿಸಿಕೊಟ್ಟ. ಇದನ್ನು ಕುಡಿದವರು ಮರಣವನ್ನು ಗೆಲ್ಲಬಲ್ಲರೆಂದೂ ಇದು ಸ್ವರ್ಗದಲ್ಲಿನ ದೇವತೆಗಳ ಪಾನೀಯವೆಂದೂ ನಂಬಿಕೆ. (ಆರ್.)