ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅರಿಸ್ಟೈಡೀಸ್

ವಿಕಿಸೋರ್ಸ್ದಿಂದ

ಅರಿಸ್ಟೈಡೀಸ್ : ಪ್ರ ಶ.ಪೂ. 6ನೆಯ ಶತಮಾನಪೂರ್ವದ, ಪ್ರಾಚೀನ ಅಥೆನ್ಸ್ ರಾಜ್ಯದ ಉಜ್ಜ್ವಲ ರಾಷ್ಟ್ರನಾಯಕ; ಅಥೆನ್ಸಿನ ಸಂಯುಕರಾಜ್ಯದ (ಡೇಲಿಯನ್ ಲೀಗ್) ಸಂಸ್ಥಾಪಕ, ಮುಖಂಡ. ಪ್ರಜಾಪ್ರಭುತ್ವ-ತಂತ್ರ ನಿರೂಪಣ ಮಾರ್ಗಗಳನ್ನು ರಾಜನೀತಿ ಸಿದ್ಧಾಂತಕ್ಕೆ ರೂಢಿಮಾಡಿಕೊಟ್ಟ ಪ್ರಜಾಪ್ರಭುತ್ವವಾದಿ. ದಕ್ಷ, ಅಸಾಧಾರಣ ನಿಷ್ಪಕ್ಷಪಾತ ಆಡಳಿತಗಾರನಾಗಿದ್ದರಿಂದ ನ್ಯಾಯವಾದಿ (ದಿ ಜಡ್ಜ್) ಎಂದು ಹೆಸರು ಪಡೆದಿದ್ದಾನೆ. ಈತ ಮಧ್ಯ ಮ ತರಗತಿಯ ಸ್ಥಿತಿವಂತ ಉಂಬಳಿ ಮನೆತನವೊಂದರಲ್ಲಿಜನಿಸಿ ಅಥೆನ್ಸಿನ ನಿರಂಕುಶ ಸಾಂಪ್ರದಾಯಿಕ ಪಕ್ಷದ ಧುರೀಣನಾಗಿ ಎರಡು ಬಾರಿ ಚುನಾಯಿತ ಪ್ರಮುಖ ನಾಗಿದ್ದ. ಪ್ರ.ಶ.ಪೂ. 490ರಲ್ಲಿ ಅಥೆನ್ಸ್ ರಾಜ್ಯದ ಭೂ ಸೈನ್ಯ ಸಂಘಟನೆವನ್ನು ಅತ್ಯಂತ ದಕ್ಷತೆಯಿಂದ ಮಾಡಿದ್ದರಿಂದ ಅದು ಅಜೇಯರಾಷ್ಟ್ರವೆಂದು ಪರಿಗಣಿಸಲ್ಪಟ್ಟಿತು. ಆದರೆ ಆ ರಾಜ್ಯ ನೌಕಾಪಡೆಯ ಅಭಾವದ ಮೂಲಕ ಪರ್ಷಿಯದ ನೌಕಾದಳಗಳ ಹಾವಳಿಗಳಿಗೆ ಎದುರಾಗುತ್ತಲೇ ಇರಬೇಕಾಯಿತು. ಥೆಮಿಸೋಕಿಸ್ ಎಂಬುವನು ರಾಜ್ಯದ ವಿರೋಧಿಗುಂಪಿನ ನಾಯಕನಾಗಿ, ಆಡಳಿತವನ್ನು ಉಗ್ರವಾಗಿ ಟೀಕಿಸುತ್ತಿದ್ದ . ಅರಿಸೈಡೀಸ್ ಪ್ರಸಂಗಾವದಾನ ಚಾತುರ್ಯದಿಂದ ವಿರೋಧಿಗುಂಪಿನ ಸಮರ್ಥ ನೌಕಾದಳದ ಆಗ್ರಹವನ್ನು ಶಮನ ಮಾಡಿ ಹೊರತಳ್ಳಲ್ಪಟ್ಟಿದ್ದ ಮ್ಯಾರಥಾನಿನ ಬಂಡುಗಾರರನ್ನು ಉಪಾಯದಿಂದ ಒಲಿಸಿಕೊಂಡು ಅವರನ್ನು ತಿರುಗಿ ಸ್ವದೇಶಕ್ಕೆ ಕರೆಸಿಕೊಂಡು ರಾಷ್ರದ ಐಕ್ಯತೆವನ್ನು ಸಾಧಿಸಿ ಬಲಿಷ್ಠರಾಜ್ಯವನ್ನು ಕಟ್ಟಿದ. ಸ್ಟಾರ್ಟನ್ನವನ್ನು ಜಾಣ್ಮೆಯಿಂದ ಮನವೊಲಿಸಿಕೊಂಡು ರಕ್ಷಣಾ ವ್ಯೂಹವೊಂದನ್ನು ರಚಿಸಿ ಅಥೆನ್ಸಿನ ಅದ್ಭುತ ಗೋಡೆಗಳನ್ನು ಬಲಗೊಳಿಸಿ ರಾಜ್ಯದ ರಕ್ಷಣೆಯನ್ನು ಸಾಧಿಸಿದ. ಪ್ರ ಶ.ಪೂ. 480ರಲ್ಲಿ ಡೇಲಿಯನ್ ಲೀಗ್ ಎಂಬ ಸಂಯುಕ್ತ ಸಭೆಯನ್ನು ಸ್ಥಾಪಿಸಿ ಆ ಸಭೆಯಿಂದ ಸ್ವಯಂ ನಿರ್ಣಾಯಕ ಅಧಿಕಾರಗಳನ್ನು ಪಡೆದು ಸೈನ್ಯದಲ್ಲಿಯ ಅನೈಕ್ಯವನ್ನು ತೊಡೆದುಹಾಕಿ ಸುವ್ಯವಸ್ಥೆವನ್ನುಂಟುಮಾಡಿದ್ದಲ್ಲದೆ ಅದರ ಸಂಸ್ಥಾಪಕನಾಗಿ ಅದರ ರಕ್ಷಣೆಗೆ ಸೇರಿದ ಎಲ್ಲ ಸಂಸ್ಥಾನಗಳಿಗೂ ಸಮಾನದರ್ಜೆಯನ್ನು ಕಲಿಸಿಕೊಟ್ಟು, ನ್ಯಾಯಸಮ್ಮತ ಮತ್ತು ನಿಷ್ಪಕ್ಷಪಾತ ರೀತಿಯಲ್ಲಿ ಆಡಳಿತ ನಡೆಸಿದ. ಈತ ಶ್ರೀಮಂತರ ಪಕ್ಷಪಾತಿಯಾಗಿದ್ದನಂದು ಟೀಕಿಸಿಕೊಂಡರೂ ಅಥೆನ್ಸ್ ರಾಜ್ಯದ ಉಜ್ಜಲ ದೇಶಾಭಿಮಾನಿಯೆಂದೂ ನಾಡಿನ ಏಳ್ಗೆಗಾಗಿ ಶಮಿಸಿದ ನಿಷ್ಠುರ ರಾಷ್ರ್ಟಭಕ್ತನೆಂದೂ ರಾಜನೀತಿಸಿದ್ಧಾಂತಕ್ಕೆ ಪಜಾಪ್ರಭುತ್ವ ಮಾರ್ಗದ ಕೊಡುಗೆವನ್ನು ದಯಪಾಲಿಸಿದ ದಕ್ಷ ಸೈನಿಕನೆಂದೂ ನ್ಯಾಯನಿಷುರ ನಿಷ್ಪಕ್ಷಪಾತಿಯೆಂದೂ ಉಚ್ಚಮಟ್ಟದ ರಾಜಕಾರಣಿಯೆಂದೂ ಹೆಸರು ಪಡೆದು ರಾಜಕೀಯ ಆದರ್ಶ ವ್ಯಕ್ತಿಗಳ ಮಾಲಿಕೆಯಲ್ಲಿ ಅಗ್ರಗಣ್ಯನಾಗಿದ್ದಾನೆ. (ಟಿ.ಆರ್.ಪಿ.)