ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅವರೆ

ವಿಕಿಸೋರ್ಸ್ದಿಂದ

ಲೆಗ್ಯೂಮಿನೋಸೀ (ಫ್ಯಾಬೇಸೀ) ಕುಟುಂಬದ ಪ್ಯಾಪಿಲಿಯೊನೇಸೀ (ಫ್ಯಾಬಾಯ್ಡೀ) ಉಪಕುಟುಂಬಕ್ಕೆ ಸೇರಿದ ಪ್ರಸಿದ್ಧ ತರಕಾರಿ ಸಸ್ಯ (ಹೈಯಾಸಿಂತ್ ಬೀನ್, ಬೋನವಿಸ್ಟ್‌). ವೈಜ್ಞಾನಿಕ ಹೆಸರು ಲ್ಯಾಬ್ಲ್ಯಾಬ್ ಪರ್ಪ್ಯುರಿಯಸ್. ಡಾಲಿಕಾಸ್ ಲ್ಯಾಬ್ಲ್ಯಾಬ್ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಇದು ಆಫ್ರಿಕದ ಉಷ್ಣಪ್ರದೇಶದ ಮೂಲದ್ದು. ವ್ಯಾಪಕವಾಗಿ ಇದರ ಕೃಷಿ ಉಂಟು. ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ ಇದರ ಬಳಕೆ ಹೆಚ್ಚು ಪರಿಚಿತ. ಇದರ ಕಾಳು ತುಂಬ ರುಚಿಕರ ಹಾಗೂ ಜನಪ್ರಿಯ ತರಕಾರಿ ಸೊಪ್ಪು ಒಳ್ಳೆಯ ಗೊಬ್ಬರ ಹಾಗೂ ದನಗಳ ಮೇವು. ಸಾಮಾನ್ಯವಾಗಿ ಹೊಲಗಳಲ್ಲಿ ಬೆಳೆಸಲಾಗುತ್ತದೆ. ಸು.60 ಸೆಂಮೀ ಎತ್ತರಕ್ಕೆ ಬೆಳೆಯುತ್ತದೆ. ಎಲೆಗಳು ಮೂರು ಕಿರು ಎಲೆಗಳುಳ್ಳ ಸಂಯುಕ್ತ ಮಾದರಿಯವು. ಅವರೆಕಾಯಿಯ ಎಳೆಯ ಕಾಳುಗಳನ್ನು ತರಕಾರಿಯಾಗಿ ಉಪಯೋಗಿಸಲಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ನೈಟ್ರೊಜನ್, ಅನ್ನಾಂಗ `ಬಿ' ಮತ್ತು `ಸಿ' ಹಾಗೂ ಲವಣಾಂಶಗಳು.


ಮಣ್ಣು[ಸಂಪಾದಿಸಿ]

ಇದನ್ನು ನೀರು ಬಸಿದು ಹೋಗುವಂತಹ ಎಲ್ಲಾ ತರಹದ ಮಣ್ಣುಗಳಲ್ಲಿ ಬೆಲೆಯಬಹುದು


ಕಾಲ[ಸಂಪಾದಿಸಿ]

ವರ್ಷದಲ್ಲಿ ಈ ಬೆಳೆಯನ್ನು ಎರಡು ಬಾರಿ ಬೆಳೆಯಬಹುದಾದರೂ ಇದನ್ನು ಡಿಸೆಂಬರ್-ಜನವರಿ ತಿಂಗಳಲ್ಲಿ ಬೆಳೆಯುವುದೇ ಹೆಚ್ಚು.


ತಳಿಗಳು[ಸಂಪಾದಿಸಿ]

1. ಹೆಬ್ಬಾಳ ಅವರೆ- 3: ಈ ತಳಿಯನ್ನು ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನಲ್ಲಿ ಅಭಿವೃದ್ದಿ ಪಡಿಸಲಾಗಿದೆ. ಎಳೆಯ ಕಾಯಿಗಳು ಬಿತ್ತಿದ 70-75 ದಿವಸಗಳಲ್ಲಿ ಕೊಯ್ಲಿಗೆ ಬರುತ್ತದೆ. ಈ ತಳಿ ವರ್ಷದ ಯಾವುದೇ ಕಾಲದಲ್ಲಿ ಬೆಳೆಯಬಹುದು.

2. ಅರ್ಕಾ ಜಯ್ : ಈ ತಳಿಯನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಬೆಂಗಳೂರು ಅಭಿವೃದ್ದಿಪಡಿಸಿದೆ. ಗಿಡಗಳು ಗಿಡ್ಡವಾಗಿದ್ದು ಪೊದೆಯಾಕಾರದಲ್ಲಿ ಬೆಳೆಯುತ್ತವೆ. ವರ್ಷದ ಕಾಲದಲ್ಲಿಯೂ ಬೆಳೆಯಬಹುದು. ಹೂವುಗಳು ನೇರಳೆ ಬಣ್ಣವನ್ನು ಹೊಂದಿರುತ್ತವೆ. ಕಾಯಿಯು ಉದ್ದವಾಗಿದ್ದು, ತಿಳಿ ಹಸಿರು ಬಣ್ಣವನ್ನು ಹೊಂದಿದ್ದು ಬಾಗಿರುತ್ತದೆ. ನಾರಿನ ಅಂಶ ಇರುವುದು ಕಾಯಿಗಳು ಒಳ್ಳೆಯ ಅಡಿಗೆ ಗುಣಗಳನ್ನು ಹೊಂದಿವೆ. ಈ ತಳಿಗೆ ಕಡಿಮೆ ತೇವಾಂಶ ತಡೆದುಕೊಳ್ಳುವ ಶಕ್ತಿ ಇದೆ. ಬೆಳೆಯ ಅವಧಿ 75 ದಿವಸಗಳು. ಒಂದು ಹೆಕ್ಟೇರಿಗೆ 12 ಟನ್ ಇಳುವರಿ ಪಡೆಯಬಹುದು.

3. ಅರ್ಕಾ ವಿಜಯ್ : ಈ ತಳಿಯನ್ನು ಎಲ್ಲ ಕಾಲದಲ್ಲೂ ಬೆಳೆಯಬಹುದಾಗಿದೆ. ಕಾಯಿ. ಈ ತರಕಾರಿಯಾಗಿ ಉಪಯೋಗಿಸಬಹುದಾದ ತಳಿಯಾಗಿದ್ದು, ಹೂವುಗಳು ಬಿಳಿ ಬಣ್ಣದಿಂದ ಕೂಡಿವೆ. ಕಾಯಿಗಳು ಕಡು ಹಸಿರು ಬಣ್ಣದಿಂದ ಕೂಡಿದ್ದು ಪ್ರತಿ ಹೆಕ್ಟೇರಿಗೆ 50 ದಿನಗಳಲ್ಲಿ ಟನ್ ಇಳುವರಿ ಕೊಡಬಲ್ಲದು.

ಬೇಸಾಯ ಸಾಮಗ್ರಿಗಳು[ಸಂಪಾದಿಸಿ]

ಬೇಸಾಯ ಸಾಮಗ್ರಿಗಳು ಪ್ರತಿ ಹೆಕ್ಟೇರಿಗೆ
1. ಬೀಜಗಳು 30-37.5 ಕಿ.ಗ್ರಾಂ
2. ಕೊಟ್ಟಿಗೆ ಗೊಬ್ಬರ 15-20 ಟನ್
3. ಸಾರಜನಕ 25 ಕಿ.ಗ್ರಾಂ
4. ರಂಜಕ 50 ಕಿ.ಗ್ರಾಂ
5. ಪೊಟ್ಯಾಷ್ 25 ಕಿ.ಗ್ರಾಂ


ಬೇಸಾಯ ಕ್ರಮಗಳು[ಸಂಪಾದಿಸಿ]

ಭೂಮಿಯನ್ನು ಹದ ಮಾಡಿದ ಅನಂತರ 45 ಸೆಂ.ಮೀ ಅಂತರದಲ್ಲಿ ಬೋದು ಮತ್ತು ಸಾಲುಗಳನ್ನು ಸೇರಿಸಬೇಕು. ಶಿಫಾರಸ್ಸು ಮಾಡಿದ ಪೂರ್ಣ ಪ್ರಮಾಣದ ಕೊಟ್ಟಿಗೆ ಗೊಬ್ಬರ, ರಸಾಯನಿಕ ಗೊಬ್ಬರಗಳನ್ನು ಸಾಲುಗಳಲ್ಲಿ ಹಾಕಿ ಚೆನ್ನಾಗಿ ಮಣ್ಣಿನಲ್ಲಿ ಬೆರಸಬೇಕು. ನಂತರ ಸಾಲುಗಳನ್ನು ಬೀಜದಿಂದ ಕಣಕ್ಕೆ 15 ಸೆಂ.ಮೀ ಅಂತರವಿರುವಂತೆ ಬಿತ್ತನೆ ಮಾಡಬೇಕು.

ನೀರು ಮತ್ತು ಅಂತರ ಬೇಸಾಯ ಮಣ್ಣು ಮತ್ತು ಹವಾಮಾನಕ್ಕನುಗುಣವಾಗಿ 3-4 ದಿವಸಗಳಿಗೊಮ್ಮೆ ನೀರನ್ನು ಹಾಯಿಸಬೇಕು ಹಾಗೂ ಭೂಮಿಯನ್ನು ಕಳೆ ರಹಿತವಾಗಿಡಬೇಕು.

ಸಸ್ಯ ಸಂರಕ್ಷಣೆ ಕೀಟಗಳು[ಸಂಪಾದಿಸಿ]

ಕಾಯಿ ಕೊರೆಯುವ ಹುಳು ಮತ್ತು ಸಸ್ಯ ಹೇನು.


ರೋಗಗಳು[ಸಂಪಾದಿಸಿ]

ಯಾವ ಮುಖ್ಯವಾದ ರೋಗಗಳೂ ಈ ಬೆಳೆಗೆ ಬರುವುದಿಲ್ಲ.


ಹತೋಟಿ ವಿಧಾನ[ಸಂಪಾದಿಸಿ]

ಸಸ್ಯ ಹೇನುಗಳು ಹತೋಟಿಗೆ 1.7 ಮಿ.ಲೀ. ಡೈಮಿಥೊಯೇಟ್ ಅನ್ನು 1 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಕಾಯಿ ಕೊರೆಯುವ ಕೀಟವನ್ನು ಹತೋಟಿ ಮಾಡಲು ಹೂ ಬಿಡುವ ಸಮಯದಲ್ಲಿ 4 ಗ್ರಾಂ. ಕರ್ಬಾರಿಲ್ 1 ಲೀಟರ್ ನೀರನ್ನು ಬೆರೆಸಿ ಸಿಂಪಡಿಸಬೇಕಾಗುತ್ತದೆ. ಪ್ರತಿ ಹೆಕ್ಟೇರಿಗೆ 500 ಲೀಟರ್ ಸಿಂಪರಣಾ ದ್ರಾವಣ ಬೇಕಾಗುತ್ತದೆ. 15 ದಿವಸಗಳ ಅಂತರದಲ್ಲಿ 2 ಬಾರಿ ಸಿಂಪಡಿಸಬೇಕು. ಅಥವಾ ಪ್ರತಿ ಹೆಕ್ಟೇರ್ಗೆ 25 ಕಿ.ಗ್ರಾಂ ಕಾರ್ಬಾರಿಲ್ ಶೇ.25 ಧೂಳು ಅಥವಾ 25 ಕಿ.ಗ್ರಾಂ ಫೆನ್ವಲರೇಟ್ ಶೇ3ರ ಧೂಳು ಅಥವಾ 25 ಕಿ.ಗ್ರಾಂ ಮೆಲಾಥಿಯನ್ ಶೇ. 5ರ ಧೂಳನ್ನು ಹೂ ಬಿಡುವ ಸಮಯದಲ್ಲಿ 15 ದಿವಸಗಳ ಅಂತರದಲ್ಲಿ 2 ಬಾರಿ ಸಿಂಪಡಿಸಬೇಕು.


ಕೊಯ್ಲು ಮತ್ತು ಇಳುವರಿ[ಸಂಪಾದಿಸಿ]

ತರಕಾರಿಗೆ ಎಳೆಯ ಕಾಯಿಗಳನ್ನು ಕೀಳಬೇಕು. ಕಾಯಿಗಳನ್ನು 3-4 ದಿವಸಗಳ ಅಂತರದಲ್ಲಿ ಕುಯಿಲು ಮಾಡಬೇಕು. ಪ್ರತಿ ಹೆಕ್ಟೇರಿಗೆ 6000-8000 ಕಿ.ಗ್ರಾಗಳಷ್ಟು ಹಸುರು ಕಾಯಿಗಳ ಇಳುವರಿಯನ್ನು ಪಡೆಯಬಹುದು.