ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಷ್ಟಪ್ರಧಾನರು
ಶಿವಾಜಿ ರೂಪಿಸಿದ ರಾಜ್ಯಾಂಗದ ಅತಿ ಪ್ರಧಾನವಾದ ಅಂಶ. ಅಷ್ಟಪ್ರಧಾನರು ಅಂದರೆ ಎಂಟು ಜನ ಮಂತ್ರಿಗಳು. ಅವರ ಕಾರ್ಯಗಳು ಹೀಗಿವೆ :
1. ಪೇಶ್ವೆ ಅಥವಾ ಮುಖ್ಯಪ್ರಧಾನಿ : ರಾಜ್ಯದ ಸಾಧಾರಣ ವ್ಯವಹಾರಗಳು ಮತ್ತು ರಾಷ್ಟ್ರದ ಹಿತ.
2. ಅಮಾತ್ಯ ಅಥವಾ ಅರ್ಥ ಸಚಿವ : ರಾಜ್ಯದ ಹಣಕಾಸಿನ ಲೆಕ್ಕಪತ್ರಗಳು.
3. ಮಂತ್ರಿ ಅಥವಾ ಮಜಿನಾವಿಸ್ : ರಾಜನ ಮತ್ತು ರಾಜಸಭೆಯ ಮುಖ್ಯ ಕಲಾಪಗಳ ಒಕ್ಕಣೆ.
4. ಸಚಿವ ಅಥವಾ ಸುರ್ನಿಸ್ : ರಾಜನ ಪತ್ರವ್ಯವಹಾರಗಳು, ರಾಜ್ಯದ ಆಯವ್ಯಯ.
5. ಸುಮಂತ್ ಅಥವಾ ದಬೀರ್ ಪರದೇಶ ವ್ಯವಹಾರ.
6. ಸೇನಾಪತಿ ಅಥವಾ ಸರ್ನೌಬತ್: ಮುಖ್ಯ ಸೈನ್ಯಾಧಿಕಾರಿ.
7. ಪಂಡಿತರಾವ್ ಅಥವಾ ಧನಾಧ್ಯಕ್ಷ : ಮತವಿಷಯ.
8 ನ್ಯಾಯಾಧೀಶ: ಮುಖ್ಯ ನ್ಯಾಯಾಧಿಪತಿ.
ಇವರಲ್ಲಿ ಮೊದಲ ನಾಲ್ಕು ಮಂತ್ರಿಗಳು ರಾಜಸಭೆಯಲ್ಲಿ ಸಿಂಹಾಸನದ ಬಲಭಾಗದಲ್ಲೂ ಉಳಿದವರು ಎಡಭಾಗದಲ್ಲೂ ಕುಳಿತಿರಬೇಕಾಗಿತ್ತು. ನ್ಯಾಯಾಧೀಶ, ಪಂಡಿತರಾವ್ ಇಬ್ಬರ ಹೊರತು ಮಿಕ್ಕ ಮಂತ್ರಿಗಳು ಸೈನ್ಯಾಧಿಕಾರಿಗಳಾಗಿ ಯುದ್ಧಗಳಲ್ಲಿ ಪಾತ್ರವಹಿಸುತ್ತಿದ್ದರು. ಅಷ್ಟಪ್ರಧಾನಿಗಳ ಮಂಡಲದ ವಿಷಯ ಶುಕ್ರನೀತಿಯಲ್ಲಿದೆ.