ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆರ್ನಲ್ಡ್, ಮ್ಯಾಥ್ಯೂ

ವಿಕಿಸೋರ್ಸ್ದಿಂದ
ಆರ್ನಲ್ಡ್, ಮ್ಯಾಥ್ಯೂ

1822-1888. ಇಂಗ್ಲೆಂಡಿನ ಕವಿ ಮತ್ತು ವಿಮರ್ಶಕ. ರಗ್ಬಿ ಪಬ್ಲಿಕ್ ಸ್ಕೂಲಿನ ಪ್ರಸಿದ್ಧ ಮುಖ್ಯೋಪಾಧ್ಯಾಯನಾಗಿದ್ದ ಥಾಮಸ್ ಆರ್ನಲ್ಡ್‌ನ ಹಿರಿಯ ಮಗ. ಪ್ರಥಮ ಕವನ ಆಲರಿಕ್ ಅಟ್ ರೋಮ್ (1840) ರಗ್ಬಿ ಶಾಲೆಯಲ್ಲಿ ಬಹುಮಾನ ಗಳಿಸಿತು. ಬ್ಯಾಲಿಯೊಲ್ ಕಾಲೇಜಿನ ಪ್ರೌಢ ವಿದ್ಯಾರ್ಥಿಯೆನಿಸಿ ಆಕ್್ಸಫರ್ಡಿಗೆ ಹೋದ. ಅಲ್ಲಿ ಕ್ರಾಮ್ವೆಲ್ನನ್ನು ಕುರಿತು ಬರೆದ ಕವನಕ್ಕೆ ನ್ಯೂಡಿಗೇಟ್ ಬಹುಮಾನ ಬಂತು. ಓರಿಯೆಲ್ ಕಾಲೇಜಿನಲ್ಲಿ ಸ್ವಲ್ಪಕಾಲ ಫೆಲೋ ಆಗಿದ್ದ. 1849ರಲ್ಲಿ ಹೊರಬಿದ್ದ ಪ್ರಥಮ ಕವನ ಸಂಕಲನದ ಸ್ಟ್ರೇಯ್ಡ್ ರೆವೆಲ್ಲರ್ ಅಂಡ್ ಅದರ್ ಪೊಯಮ್ಸ್ ಜನಪ್ರಿಯತೆ ಗಳಿಸಲಿಲ್ಲವಾದರೂ ಅದರಲ್ಲಿ ಪ್ರಸಿದ್ಧವಾದ ದಿ ಫರ್ಸೇಕನ್ ಮರ್ಮನ್, ದಿ ಸಿಕ್ ಕಿಂಗ್ ಇನ್ ಬೊಖಾರ ಮತ್ತು ಷೇಕ್ಸಪಿಯರ್ನನ್ನು ಕುರಿತು ಸುನೀತಗಳು ಇದ್ದುವು. ಎಂಪಿಡೊಕ್ಲೀಸ್ ಆನ್ ಎಟ್ನಾ ಆಂಡ್ ಅದರ್ ಪೊಯಮ್ಸ್ (1852) ಕೂಡ ಅಷ್ಟು ಪ್ರಸಿದ್ಧವಾಗಲಿಲ್ಲ. ಸ್ವಲ್ಪ ದಿವಸಗಳಲ್ಲೇ ಇವೆರಡನ್ನೂ ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳಲಾಯಿತು. 1853ರಲ್ಲಿ ಪೊಯಮ್ಸ್ ಹೊರಬಂತು. ಮೊದಲ ಸಂಕಲನಗಳಿಂದ ಆಯ್ದ ಕೆಲವು ಕವನಗಳು, ಸೊಹ್ರಾಬ್ ಅಂಡ್ ರುಸ್ತುಂ ಮತ್ತು ದಿ ಸ್ಕಾಲರ್ ಜಿಪ್ಸಿ ಮೊದಲಾದ ಶ್ರೇಷ್ಠ ಕೃತಿಗಳು ಈ ಕವನ ಸಂಕಲನದಲ್ಲಿ ಇದ್ದುವು. ಬಾಲ್ಡರ್ ಡೆಡ್ ಕವನವಿರುವ ಪೊಯಮ್ಸ್, ಸೆಕೆಂಡ್ ಸೀರೀಸ್ 1855ರಲ್ಲೂ ಮೆರೆಪಿ-ಎ ಟ್ರಾಜಿಡಿ ಎಂಬ ನಾಟಕ 1858ರಲ್ಲೂ ಪ್ರಕಟವಾದುವು. ಸ್ನೇಹಿತನಾದ ಆರ್ಥರ್ ಕ್ಲೋನನ್ನು ಕುರಿತ ಥರ್ಸಿಸ್ ಎಂಬ ಪ್ರಸಿದ್ಧ ಶೋಕಗೀತೆಯನ್ನು ರಗ್ಬಿ ಚಾಪೆಲ್ ಕವನವನ್ನೂ ಒಳಗೊಂಡ ನ್ಯೂ ಪೊಯಮ್ಸ್ 1867ರಲ್ಲಿ ಮುದ್ರಣವಾಯಿತು. ಕೆಲಕಾಲ ಶಾಲೆಗಳ ತನಿಖಾಧಿಕಾರಿಯಾಗಿದ್ದ ಆರ್ನಲ್ಡ್ 1857ರಿಂದ 1867ರವರೆಗೆ ಆಕ್್ಸಫರ್ಡ್ನಲ್ಲಿ ಕಾವ್ಯದ ಪ್ರಾಧ್ಯಾಪಕ ಪೀಠವನ್ನು ಅಲಂಕರಿಸಿದ.


ಆರ್ನಲ್ಡನದು ವಿಚಾರ ಪ್ರಧಾನ ದೃಷ್ಟಿ. ರಮ್ಯಕಾವ್ಯಕ್ಕೆ ವಿರೋಧಿಯೂ ವಿಕ್ಟೋರಿಯನ್ ಯುಗದ ಕಾವ್ಯದ ಹೊಸ ಅಂಶಕ್ಕೆ ಹೊಂದಿಕೊಂಡಿದ್ದೂ ಆದ ವೈಚಾರಿಕತೆಯನ್ನು ಇವನಂತೆ ಬೇರೆ ಯಾರೂ ಪ್ರತಿನಿಧಿಸಿಲ್ಲ. ವಿಕ್ಟೋರಿಯನ್ ಕವಿಗಳಲ್ಲಿ ಆರ್ನಲ್ದ್‌ಗೆ ದೊಡ್ಡ ಸ್ಥಾನವಿದೆ. ಆವೇಶವಿಲ್ಲದ, ಗಂಭೀರವೂ ಉದಾತ್ತವೂ ಆದ ಶೈಲಿ ಇವನದು. ಇವನ ಗೀತೆಗಳ ಆಳದಲ್ಲಿ ಏನೋ ಭಿನ್ನತೆ ಮಿಡಿಯುತ್ತದೆ. ಸಮಾಜ ಮತ್ತು ಮತತತ್ತ್ವಗಳ ಮೇಲೆ ಈತ ಬರೆದ ಸಾಹಿತ್ಯ ಆಗಲೇ ಚರ್ಚಾಸ್ಪದವಾಗಿದ್ದು ಇವನ ಅನಂತರ ತಮ್ಮ ಪ್ರಾಶಸ್ತ್ಯ ಕಳೆದುಕೊಂಡವು. ಆದರೆ ಇವನ ಸಾಹಿತ್ಯ ವಿಮರ್ಶೆ ಮತ್ತು ಕೆಲವು ಕವನಗಳು ಇಂದೂ ಕೂಡ ಪುರಸ್ಕಾರಯೋಗ್ಯವಾಗಿವೆ.

ಮ್ಯಾಥ್ಯೂ ಆರ್ನಲ್ಡ್ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆಗಾಗಿ ಗ್ಲಾಡ್ಸ್ಟನ್ ಮಂತ್ರಿಮಂಡಲದಿಂದ ವರ್ಷಕ್ಕೆ 250 ಪೌಂಡುಗಳಂತೆ ವಿಶ್ರಾಂತಿ ವೇತನ ಪಡೆದ (1883). 1886ರಲ್ಲಿ ಉದ್ಯೋಗ ದಿಂದ ನಿವೃತ್ತನಾಗಿ 1888ರಲ್ಲಿ ಹೃದಯರೋಗದಿಂದ ನಿಧನ ಹೊಂದಿದ.

ಆರ್ನಲ್ಡ್‌ನ ಮೆರಪಿ ನಾಟಕದ ಬಗ್ಗೆ ಒಂದು ಮಾತು. ಮೆರಪಿಯ ಗಂಡನಾದ ಮೆಸಿನಿಯಾ ಅರಸನನ್ನು ಕೊಂದು ಅವಳನ್ನು ರಾಜಕೀಯ ಕಾರಣಗಳಿಗಾಗಿ ಮದುವೆಯಾ ಗಲು ಪ್ರಯತ್ನಿಸಿದ ಫಾಲಿಫಾನ್ಟೀಸ್ನ ಮೇಲೆ ಮೆರಪಿಯ ಮಗ ಮುಯ್ಯಿ ತೀರಿಸಿದುದು ನಾಟಕದ ವಸ್ತು. ನಾಟಕದಲ್ಲಿ ಸತ್ತ್ವವಿಲ್ಲ. ಇಲ್ಲಿ ಆರ್ನಲ್ಡ್ ಮೇಳಗೀತೆಗಳಿಗೆ ಪ್ರಾಸರಹಿತ ಪದ್ಯವನ್ನು ಬಳಸಿದ್ದಾನೆ. ಈ ಗೀತೆಗ ಳನ್ನು ಆರ್ನಲ್ಡ್ ಬಹು ಎಚ್ಚರಿಕೆಯಿಂದ ರಚಿಸಿದ. ಇವು ಗ್ರೀಕ್ ಮೇಳಗೀತದ ಲಯದ ಪರಿಣಾಮವನ್ನೇ ಉಂಟು ಮಾಡುವುದೆಂದು ಆರ್ನಲ್ಡ್ ಹೇಳಿ ದ್ದರೂ ಇವು ನೀರಸವಾಗಿಯೇ ಉಳಿ ದಿವೆ. ಈ ಕೃತಿಗೆ ಆರ್ನಲ್ಡ್ ಸೇರಿಸಿದ ಮುನ್ನುಡಿಯಲ್ಲಿ ಗ್ರೀಕ್ ದುರಂತನಾಟಕದ ಕಲೆಯ ಸ್ಪಷ್ಟ ಸುಂದರ ನಿರೂಪಣೆ ಇದೆ. ನಾಟಕ ಕಲೆ ಆರ್ನಲ್್ಡನಿಗೆ ಸಿದ್ಧಿಸಲಿಲ್ಲ.


ಮ್ಯಾಥ್ಯೂ ಆರ್ನಲ್ಡ್ ಯುಗವು ವಿಜ್ಞಾನವು ಗೆದ್ದುಕೊಂಡ ಹೊಸ ತಿಳಿವಳಿಕೆಯಿಂದ ಜನರ ಧಾರ್ಮಿಕ ನಂಬಿಕೆಗಳು ಅಲ್ಲಾಡಿ, ಮನಸ್ಸುಗಳು ತತ್ತರಿಸಿದ ಕಾಲ. ಟೆನಿಸನ್, ಬ್ರೌನಿಂಗ್ ಮತ್ತು ಆರ್ನಲ್ಡರು ಈ ಅನುಭವಕ್ಕೆ ವಿಭಿನ್ನ ರೀತಿಗಳಲ್ಲಿ ಸ್ಪಂದಿಸಿದರು. ಆರ್ನಲ್ಡ್‌ ಅಜ್ಞೇಯತಾವಾದಿ (ಅಗ್ನಾಸ್ಟಿಕ್) ಆದ; ದೇವರಿದ್ದಾನೆಯೋ ಇಲ್ಲವೋ ಮನುಷ್ಯನು ನಿರ್ಧರಿಸಲಾರ ಎನ್ನುವುದು ಇವನ ನಿಲುವು. ಈ ಆಧ್ಯಾತ್ಮಿಕ ತುಮುಲದಿಂದಾಗಿ ಇವನ ಕಾವ್ಯದಲ್ಲಿ ವಿಷಾದವಿದೆ. ಇವನು ನೆಮ್ಮದಿಯನ್ನು ಕಂಡುಕೊಂಡದ್ದು ಪ್ರೇಮದಲ್ಲಿ, ಸ್ನೇಹದಲ್ಲಿ. ಇಂದಿಗೂ ಜನಪ್ರಿಯವಾಗಿರುವ ಇವನ ಡೊವರ್ ಬಂಕ್ ಕವನದಲ್ಲಿ ಇದನ್ನು ಕಾಣಬಹುದು. ಥರ್ಸಿಸ್ ಮತ್ತು ದಿ ಸ್ಕಾಲರ್ ಜಿಪ್ಸಿ ಇವನ ಸ್ನೇಹಿತ ಆರ್ಥರ್ ಹ್ಯೂ ಕ್ಲಫ್ ತೀರಿಕೊಂಡಾಗ ಬರೆದ ಕವನಗಳು ಇವನ ಶ್ರೇಷ್ಠ ಕವನಗಳಲ್ಲಿ ಸೇರಿವೆ. ಥರ್ಸಿಸ್ ಒಂದು ಪ್ಯಾಸ್ಟರಲ್ ಕವನ. ಇವನ ರಗ್ಬಿ ಚ್ಯಾಪೆಲ್ ತಂದೆಯ ನೆನಪಿಗಾಗಿ ಬರೆದದ್ದು, ಮತ್ತೊಂದು ಶ್ರೇಷ್ಠ ಕವನ. ಇವನ ಸಾಧನೆ ಮಿತವಾದರೂ ಹುಟ್ಟುಕವಿ ಎನ್ನುವುದರಲ್ಲಿ ಅನುಮಾನವಿಲ್ಲ. ಸೊಹ್ರಾಬ್ ಅಂಡ್ ರುಸ್ತುಂ ಕವನ ಇವನ ಕಥೆ ಹೇಳುವ ಕೌಶಲಕ್ಕೆ ಸಾಕ್ಷಿ. ವಿ.ಸೀ ಅವರು ಕನ್ನಡದಲ್ಲಿ ಬರೆದ ಇದೇ ಹೆಸರಿನ ನಾಟಕದಿಂದ ಇದರ ಕಥೆ ಕನ್ನಡಿಗರಿಗೆ ಪರಿಚಿತ. ಇವನ ಕಾವ್ಯದಲ್ಲಿ ವಿಷಾದ ಸ್ಥಾಯಿಯಾದರೂ ಇದು ನಿರಾಶೆಯ ಕಾವ್ಯವಲ್ಲ.


ಇಂಗ್ಲಿಷ್ ಸಾಹಿತ್ಯ ವಿಮರ್ಶೆಯ ಕ್ಷೇತ್ರದಲ್ಲಿ ಮ್ಯಾಥ್ಯೂ ಆರ್ನಲ್ಡ್ ಬಹುದೊಡ್ಡ ಹೆಸರು. 17ನೆಯ ಶತಮಾನದ ಡ್ರೈಡನ್ನಂತೆ ಇವನೂ ಕವಿ ಮತ್ತು ವಿಮರ್ಶಕ. ಇವನ ಕಾಲಕ್ಕೆ ಇಂಗ್ಲಿಷ್ ಸಾಹಿತ್ಯ ವಿಮರ್ಶೆ ಬಹಳ ನೀರಸವಾಗಿ ಪ್ರಾಂತೀಯತೆಯಿಂದ ಕೂಡಿತ್ತು. ಅದಕ್ಕೆ ಸಾರ್ವತ್ರಿಕ ಹಾಗೂ ಸಾರ್ವಸಾಹಿತ್ಯಕ ರೂಪವನ್ನು ಕೊಟ್ಟವನು ಇವನೇ. ಒಂದು ಸಾಹಿತ್ಯವನ್ನು ಕುರಿತು ವಿಮರ್ಶಿಸಬೇಕಾದರೆ ಪ್ರಪಂಚದ ಇನ್ನಿತರ ಸಾಹಿತ್ಯಗಳನ್ನೂ ಅಭ್ಯಸಿಸಿರಬೇಕು ಎಂದು ಇವನ ಪ್ರತಿಪಾದನೆ. ಆಧುನಿಕ ವಿಮರ್ಶೆ ಹುಟ್ಟಿದ್ದೇ ಆರ್ನಲ್್ಡನಿಂದ ಎಂದು ಹೇಳಬಹುದು.

ಆಗಿನ ಕಾಲಕ್ಕೆ ಆರ್ನಲ್ಡ್ ತನ್ನ ಕವನ ಸಂಕಲನಗಳಿಗೆ ಬರೆದಿರುವ ಪೀಠಿಕಾರೂಪವಾದ ಬರೆಹಗಳು ಇಂಗ್ಲಿಷ್ ಸಾಹಿತ್ಯ ವಿಮರ್ಶೆಯ ಅತ್ಯುತ್ತಮ ಬರೆವಣಿಗೆಗಳಲ್ಲಿ ಶ್ರೇಷ್ಠವೆಂದು ಪರಿಗಣಿತವಾಗಿವೆ. ಕಾವ್ಯ ವಸ್ತುವನ್ನು ಅವಲಂಬಿಸಿದೆಯೇ ವಿನಾ ಆಕಾರ ಅಲಂಕಾರಗಳನ್ನಲ್ಲ ಎಂಬುದನ್ನು ಆರ್ನಲ್ಡ್ ತನ್ನ ಈ ಬರೆಹಗಳಲ್ಲಿ ಸಾಧಿಸಿದ್ದಾನೆ. ಕಾವ್ಯದಲ್ಲಿ ಮಹೋನ್ನತಿಯಿಂದ ಕೂಡಿದ ಮಹಾಶೈಲಿ ಇರಬೇಕೆಂದು ಹೇಳಿದ್ದಾನೆ. ಈ ಎರಡು ವಿಷಯಗಳಲ್ಲೂ ಗ್ರೀಕರು ಇಂಗ್ಲಿಷಿನವರಂತೆ ಮುಂದುವರೆದಿದ್ದಾರೆಂದು ಇವನ ಅಭಿಪ್ರಾಯ. ಆರ್ನಲ್ಡ್‌ನ ವಿಮರ್ಶೆಗೆ, ನಿಷ್ಕೃಷ್ಟತೆ, ಸಂಯಮ, ವಾಕ್ಶಕ್ತಿ ಇವುಗಳ ಕೊರತೆ ಇದ್ದುದರಿಂದ ಅದು ಇವನ ವಿಮರ್ಶಾಸಿದ್ಧಿ ಹಾಗೂ ಕಾವ್ಯರಚನೆಗೆ ಮಿತಿಯನ್ನುಂಟುಮಾಡಿತು.

1857ರಲ್ಲಿ ಆರ್ನಲ್ಡ್ ಆಕ್್ಸಫರ್ಡ್ ವಿಶ್ವವಿದ್ಯಾಲಯದಲ್ಲಿ ಕಾವ್ಯಭಾಗಕ್ಕೆ ಪ್ರಾಧ್ಯಾಪಕನಾಗಿ ಚುನಾಯಿಸಲ್ಪಟ್ಟ ಮೇಲೆ ಹತ್ತುವರ್ಷಗಳ ಕಾಲ ತನ್ನ ಹಿಂದಿನ ಸ್ಕೂಲ್ ಇನ್ಪ್‌ಪೆಕ್ಟರ್ ಕೆಲಸದ ಜೊತೆಗೆ ಪ್ರಾಧ್ಯಾಪಕನಾಗಿಯೂ ಸೇವೆ ಸಲ್ಲಿಸಿದ. ಈತ ವಿಶ್ವವಿದ್ಯಾಲಯದ ತನ್ನ ಭಾಷಣಗಳಲ್ಲಿ ಇಂಗ್ಲಿಷ್ ಸಾಹಿತ್ಯ ವಿಮರ್ಶೆಯ ಕುಂದುಕೊರತೆಗಳನ್ನು ಹೋಗಲಾಡಿಸಲು ಫ್ರಾನ್ಸ್ ದೇಶದ ವಿಮರ್ಶಕರ ರೀತಿ ನೀತಿಗಳ ಜೊತೆಗೆ ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿಸಿದ್ದಾನೆ.

ಈ ಭಾಷಣಗಳಲ್ಲಿ ಕೆಲವು ಇವನ ಈ ಎರಡು ಪುಸ್ತಕಗಳಲ್ಲಿ ಕಂಡುಬರುತ್ತವೆ.

  1. ಆನ್ ಟ್ರಾನ್ಸ್‌ಲೇಟಿಂಗ್ ಹೋಮರ್ (1861);
  2. ಆನ್ ದಿ ಸ್ಟಡಿ ಆಫ್ ಕೆಲ್ಟಿಕ್ ಲಿಟರೇಚರ್ (1867).

ಇಂಗ್ಲಿಷ್ ಸಾಹಿತ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ಪುರಾತನ ಹಾಗೂ ಅರ್ವಾಚೀನ ಸಾಹಿತ್ಯಕ್ಕೆ ತೀರ ಹತ್ತಿರದ ಸಂಬಂಧವನ್ನು ಈ ಪುಸ್ತಕಗಳಲ್ಲಿ ತರಲಾಯಿತು. ಕಾವ್ಯದಲ್ಲಿ ಅತ್ಯಗತ್ಯವಾದುದೂ ಅನಿವಾರ್ಯವಾದುದೂ ಏನು, ಕಾವ್ಯದ ಹಿರಿಮೆ ಏತರಲ್ಲಿದೆ ಎಂಬ ಸಮಸ್ಯೆಗಳಿಗೆ ಈ ಬರೆಹಗಳಲ್ಲಿ ವಿವರಣೆಯನ್ನು ನೀಡಿದ್ದಾನೆ. ವಿಮರ್ಶೆಯ ಧ್ಯೇಯವನ್ನು ಕುರಿತು ಹೇಳುತ್ತಾ ವಿಶ್ವದಲ್ಲೇ ನಿರ್ಲಿಪ್ತವಾದ ಯತ್ನದಿಂದ ಕೂಡಿದ ಅತ್ಯುತ್ತಮವಾದ ಆಲೋಚನೆಗಳೂ ಉಕ್ತಿಗಳೂ ಶ್ರೇಷ್ಠ ವಿಮರ್ಶೆಯ ಅಡಿಗಲ್ಲುಗಳೆಂದು ಆರ್ನಲ್ಡ್ ಪರಿಗಣಿಸಿದ್ದಾನೆ. ಜಗತ್ತಿನಲ್ಲಿ ಚಿಂತನೆ ಮತ್ತು ಅಭಿವ್ಯಕ್ತಿಯಲ್ಲಿ ಅತಿ ಶ್ರೇಷ್ಠವಾದುದರ ಅನ್ವೇಷಣೆಯೇ ಸಾಹಿತ್ಯ ವಿಮರ್ಶೆ ಎಂದ. ಆರ್ನಲ್ಡ್ ಪಾಶ್ಚಾತ್ಯ ಪ್ರಪಂಚದ ಎಲ್ಲ ಅತ್ಯುತ್ತಮ ಕಾವ್ಯಗಳನ್ನೂ ನಿಷ್ಪಕ್ಷಪಾತವಾಗಿ ಅವಲೋಕಿಸಿ, ಆಲೋಚಿಸಿ ಆ ಮೂಲಕ ಶ್ರೇಷ್ಠ ಕಾವ್ಯಗಳ ಮೂಲತತ್ತ್ವಗಳನ್ನು ಗುರುತಿಸಿದ್ದಾನಲ್ಲದೆ ಕಾವ್ಯದ ಅಭಿವ್ಯಕ್ತಿ ಅಥವಾ ಶೈಲಿಯ ವಿವಿಧ ವಿಧಾನಗಳನ್ನು ಸಾಹಿತ್ಯ ಚಿಂತಕರಿಗೆ ತೋರಿಸಿಕೊಟ್ಟಿದ್ದಾನೆ.


1865ರಲ್ಲಿ ತನ್ನ ವಿಮರ್ಶಾತ್ಮಕ ಕೃತಿಗಳಲ್ಲೆಲ್ಲ ಮುಖ್ಯವಾದ ಪ್ರಬಂಧಗಳನ್ನು ಪುಸ್ತಕರೂಪವಾಗಿ ಪ್ರಕಟಿಸಿದ ಇವುಗಳಲ್ಲಿ ಕೆಲವು ಪ್ರಬಂಧಗಳು ಆಕ್ಸ್‌ಫರ್ಡಿನಲ್ಲಿ ಪ್ರಾಧ್ಯಾಪಕನಾಗಿ ಮಾಡಿದ ಭಾಷಣಗಳ ಆಧಾರದ ಮೇಲೆ ರಚಿತವಾದವು. 1867ರಿಂದ 1877ರವರೆಗೆ ಇವನ ಮನಸ್ಸು ಧಾರ್ಮಿಕ, ರಾಜಕೀಯ ಮತ್ತು ಸಾಮಾಜಿಕ ನ್ಯೂನತೆಗಳನ್ನು ತೊಡೆದುಹಾಕುವ ಪ್ರಯತ್ನಕ್ಕೆ ತಿರುಗಿತ್ತು. ಈ ಸಮಯದಲ್ಲಿ ಹೊರಬಂದ ಕೃತಿಗಳೆಂದರೆ ಕಲ್ಚರ್ ಅಂಡ್ ಆನರ್ಕಿ, ಸೇಂಟ್ ಪಾಲ್ ಅಂಡ್ ಪ್ರಾಟೆಸ್ಟಾಂಟಿಸಮ್, ಲಿಟರೇಚರ್ ಅಂಡ್ ಡಾಗ್ಮ, ಗಾಡ್ ಅಂಡ್ ದಿ ಬೈಬಲ್, ಲಾಸ್ಟ್ ಎಸ್ಸೇಸ್ ಆನ್ ಚರ್ಚ್ ಅಂಡ್ ರಿಲಿಜನ್, ಫ್ರೆಂಡ್ಷಿಪ್ಸ್, ಗಾರ್ಲೆಂಡ್ಸ್ ಅಂಡ್ ಐರಿಷ್ ಎಸ್ಸೇಸ್. ಕೊನೆಯದಾಗಿ ಎರಡನೆಯ ವಿಮರ್ಶೆಯ ಪ್ರಬಂಧಗಳ ಸಂಕಲನ ಪ್ರಕಟವಾಯಿತು (ಎಸ್ಸೇಸ್ ಇನ್ ಕ್ರಿಟಿಸಿಸಮ್-ಸೆಕೆಂಡ್ ಸೀರೀಸ್). ಈ ಸಂಕಲನದಲ್ಲಿ ಅಮೆರಿಕಕ್ಕೆ ಪ್ರವಾಸ ಕೈಗೊಂಡು ಅಲ್ಲಿ 1883-84ರಲ್ಲಿ ಮಾಡಿದ ಭಾಷಣಗಳು ಸೇರಿವೆ.


ಮ್ಯಾಥ್ಯೂ ಆರ್ನಲ್್ಡನ ವಿಮರ್ಶೆ ದೋಷರಹಿತವೇನಲ್ಲ. ರೊಮ್ಯಾಂಟಿಕ್ ಕವಿಗಳ ಬಗ್ಗೆ ಪುರ್ವಗ್ರಹದಿಂದ ದುರಭಿಮಾನವುಳ್ಳವನಾಗಿ, ಷೆಲ್ಲಿಯ ವಿಷಯದಲ್ಲಿ ಬರೆಯುತ್ತ ಷೆಲ್ಲಿಗೆ ತುಂಬ ಅನ್ಯಾಯ ಮಾಡಿದ್ದಾನೆ. ಷೆಲ್ಲಿ ತನ್ನ ಕವಿತೆಯಲ್ಲೂ ಮತ್ತು ಜೀವನದಲ್ಲೂ ನಿಷ್ಪರಿಣಾಮಕಾರಿಯಾದ ಗಂಧರ್ವ, ಶೂನ್ಯದಲ್ಲಿ ವೃಥಾ ತನ್ನ ರೆಕ್ಕೆಗಳನ್ನು ಬಡಿಯುತ್ತ ಹಾರುತ್ತಿದ್ದಾನೆ ಎಂದು ಖಂಡಿಸಿದ್ದಾನೆ. ಈ ವಿಮರ್ಶೆ ಅಸಮರ್ಪಕವೆಂದು ಅನೇಕರು ಮನಗಂಡಿದ್ದಾರೆ. ಆರ್ನಲ್್ಡನ ವಿಮರ್ಶೆ ತನ್ನ ತತ್ತ್ವದಲ್ಲಿ ಹಾಗೂ ಬೆಲೆಗಟ್ಟುವ ಕೆಲಸದಲ್ಲಿ ರಚನಾತ್ಮಕವಾಗಿಯೇ ಇದೆ. ಇವನಿಗೆ ಧಾರ್ಮಿಕ ದೃಷ್ಟಿ ಅಧಿಕವಾಗಿ ಇದ್ದುದರಿಂದ ಕಾವ್ಯದ ಬೆಲೆ ನಿರ್ಣಯಿಸುವ ಕೆಲಸದಲ್ಲಿ ಇವನದೇ ಆದ ವಿಶಿಷ್ಟತೆಯನ್ನು ಕಾಣಬಹುದು. ಉದಾಹರಣೆಗಾಗಿ ಕಾವ್ಯಕ್ಕೆ ತನ್ನದೇ ಆದ ಲಕ್ಷಣವನ್ನು ಹೀಗೆ ನಿರೂಪಿಸಿದ್ದಾನೆ: ಕಾವ್ಯಸತ್ಯ ಮತ್ತು ಕಾವ್ಯಸೌಂದರ್ಯದ ನಿಯಮಾನುಸಾರವಾಗಿ ರೂಪುಗೊಳ್ಳುವ ಜೀವನವಿಮರ್ಶೆ ಕಾವ್ಯ. ಈ ಸಾರೋಕ್ತಿ ಸಾಧಾರಣವಾಗಿ ಸಾಹಿತ್ಯ ಜೀವನವಿಮರ್ಶೆಯಾಗಿದೆ ಎಂಬ ಉಕ್ತಿಯನ್ನು ಇನ್ನೂ ಬೆಳಗಿಸಿದೆ.


ಕಾವ್ಯದ ಗುಣಗಳಲ್ಲಿ ಗಾಢಗಾಂಭೀರ್ಯ (ಹೈ ಸೀರಿಯಸ್ನೆಸ್) ಇರಬೇಕೆಂದು ಆರ್ನಲ್್ಡ ಹೇಳಿದ್ದಾನೆ. ಅದಲ್ಲದೆ ಸ್ಟಡಿ ಆಫ್ ಪೊಯಟ್ರಿ ಎಂಬ ತನ್ನ ಪ್ರಬಂಧದಲ್ಲಿ ಚಾರಿತ್ರಿಕ ವಿಮರ್ಶೆಗೆ ಪ್ರಾಧಾನ್ಯ ಕೊಟ್ಟಿಲ್ಲ. ಒಬ್ಬ ಕವಿಯ ಕೃತಿಯನ್ನು ಕುರಿತು ವಿಮರ್ಶಿಸು ವಾಗ ಅಂಥವೇ ಕಾವ್ಯಗಳು ಇರುವುದಾದರೆ ಅವುಗಳೊಡನೆ ಹೋಲಿಸಿ ವಿಸ್ತೃತವಾಗಿಯೂ ಗಂಭೀರವಾಗಿಯೂ ವಿಮರ್ಶಿಸುವುದು ಚಾರಿತ್ರಿಕ ವಿಮರ್ಶೆ ಎನಿಸಿಕೊಳ್ಳುವುದು. ಹೀಗೆ ಚಾರಿತ್ರಿಕವಾಗಿ ವಿಮರ್ಶೆ ಮಾಡುವುದರಿಂದ ಕಾವ್ಯದ ವಿಷಯವನ್ನೇ ಮರೆತು ಅನಾವಶ್ಯಕವಾದ ಇತರ ವಿಷಯಗಳಿಗೆ ಪ್ರಾಧಾನ್ಯ ಕೊಡುತ್ತೇವೆ ಎಂಬುದು ಅವನ ವಾದ. ಇದು ವಿವಾದಾಸ್ಪದವಾದ ಸಂಗತಿ.


ಆರ್ನಲ್ಡ್ ಕಾವ್ಯಕ್ಕೆ ಬಹು ಎತ್ತರದ ಸ್ಥಾನವನ್ನು ನೀಡಿದ. ವಿಜ್ಞಾನವು ಮುಂದುವರೆದು ಧರ್ಮದ ಪ್ರಭಾವ ದುರ್ಬಲವಾದಂತೆ ಕಾವ್ಯವು ಅದರ ಸ್ಥಾನವನ್ನು ಪಡೆಯುತ್ತದೆ ಎನ್ನುವ ಅಭಿಪ್ರಾಯವನ್ನು ಪ್ರತಿಪಾದಿಸಿದ. `ಬೇರಾವುದೂ ಮಾಡದ ರೀತಿಯಲ್ಲಿ ಶ್ರೇಷ್ಠ ಕಾವ್ಯವು ನಮ್ಮನ್ನು ರೂಪಿಸುತ್ತದೆ, ನಮಗೆ ಆಧಾರವಾಗುತ್ತದೆ ಆನಂದವನ್ನು ನೀಡುತ್ತದೆ’ ಎಂದ ಆತ ವಡ್ರ್ಸ್‌ವರ್ತ್ನ ಶ್ರೇಷ್ಠ ಕವನಗಳನ್ನು ಆರಿಸಿ, ಸಂಗ್ರಹದ ಮುನ್ನುಡಿಯಲ್ಲಿ ಅವನ ಕಾವ್ಯದ ಸ್ವರೂಪವನ್ನು, ಮಹತ್ವವನ್ನು ವಿವರಿಸಿ, ವಡ್ರ್್ಸವರ್ತ್ನ ಕಾವ್ಯವನ್ನು ಸವಿಯುವುದನ್ನು ತನ್ನ ಕಾಲದ ಓದುಗರಿಗೆ ಕಲಿಸಿಕೊಟ್ಟ.


ಆರ್ನಲ್ಡ್‌ನದು ಅತಿ ನೈತಿಕತೆ. ಇವನು ಕಾವ್ಯದ ಒಳ ಅಂಶ (ಕಂಟೆಂಟ್)ಕ್ಕೆ ಪ್ರಾಧಾನ್ಯ ನೀಡಿದ, ಕಾವ್ಯಾಂಶಕ್ಕೆ ಸಾಕಷ್ಟು ಪ್ರಾಧಾನ್ಯ ನೀಡಲಿಲ್ಲ ಎಂಬ ಆಕ್ಷೇಪಣೆಯುಂಟು. ಇವನು ಕಾವ್ಯವು ಬದುಕಿನ ವಿಮರ್ಶೆ ಎಂದು ಹೇಳಿದ ಎನ್ನುವುದು ಈ ಆಕ್ಷೇಪಣೆಗೆ ಮುಖ್ಯ ಆಧಾರ. ಆದರೆ ಇವನ ಪುರ್ತಿ ವಾಕ್ಯವನ್ನು ಗಮನಿಸಬೇಕು: ಕಾವ್ಯ ಸೌಂದರ್ಯ ಮತ್ತು ಕಾವ್ಯ ಸತ್ವಗಳ ನಿಯಮಗಳಿಗೆ ಒಳಪಟ್ಟಂತೆ ಕಾವ್ಯವು ಬದುಕಿನ ವಿಮರ್ಶೆ.


ಆರ್ನಲ್ಡ್‌ನ ಅನಂತರ ಬಂದ ಟಿ.ಎಸ್.ಎಲಿಯೆಟ್ ಇವನನ್ನು ಉಗ್ರವಾಗಿ ಟೀಕಿಸಿದ್ದರೂ ಇವನ ಪ್ರಭಾವಕ್ಕೆ ಒಳಗಾಗಿದ್ದಾನೆ. ಆರ್ನಲ್ಡ್‌ನ ವಿಮರ್ಶೆಯ ಹಲವು ಅಂಶಗಳು ಎಲಿಯೆಟ್ನ ವಿಮರ್ಶೆಯಲ್ಲಿ ಸೇರಿವೆ.