ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆವನಿ
ಆವನಿ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ಮುಳುಬಾಗಿಲನಿಂದ ಸುಮಾರು ಹತ್ತು ಮೈಲಿ ದಕ್ಷಿಣಕ್ಕಿರುವ ಒಂದು ಪುಣ್ಯಕ್ಷೇತ್ರ. ಈ ಗ್ರಾಮದ ಪರಿಸರದಲ್ಲಿಯೂ ಸಮೀಪದ ಬೆಟ್ಟದ ಮೇಲೆಯೂ ಇರುವ ಅನೇಕ ದೇವಾಲಯಗಳು ಮತ್ತು ಶಿಲಾಶಾಸನಗಳು ಇದರ ಪ್ರಾಚೀನ ಪ್ರಾಮುಖ್ಯವನ್ನು ಸಾರುತ್ತವೆ. ಊರಿನ ಪೂರ್ವದ ಹೆಸರು ಅಹವನೀಯ, ಆವಣ್ಯ, ಆವಣೆ ಇತ್ಯಾದಿಯಾಗಿದ್ದಿತೆಂದು ಶಾಸನಗಳಿಂದ ತಿಳಿದುಬರುತ್ತದೆ. ಸ್ಥಳೀಯ ನಂಬಿಕೆಗಳ ಪ್ರಕಾರ ಈ ಗ್ರಾಮ ಮತ್ತು ಸುತ್ತಮುತ್ತಲ ಪ್ರದೇಶ ಪುರಾಣಪ್ರಸಿದ್ಧವಾದ ಅವಂತಿಕಾ ಕ್ಷೇತ್ರ : ವಾಲ್ಮೀಕಿ ಋಷಿಯ ಆಶ್ರಮವಿದ್ದುದು ಇಲ್ಲಿಯ ಬೆಟ್ಟದಲ್ಲಿಯೇ ; ರಾಮ ಲಂಕೆಯನ್ನು ಗೆದ್ದು ಅಯೋಧ್ಯೆಗೆ ಹಿಂತಿರುಗುವ ಹಾದಿಯಲ್ಲಿ ಇಲ್ಲಿಗೆ ಬಂದಿದ್ದನಂತೆ ; ಸೀತಾದೇವಿ ಗಂಡನಿಂದ ಕಾಡಿಗೆ ಕಳುಹಿಸಲ್ಪಟ್ಟಾಗ ಇಲ್ಲಿ ಬಂದು ತಂಗಿ ಲವಕುಶರಿಗೆ ಜನ್ಮವಿತ್ತಳೆಂದೂ ಲವಕುಶರು ರಾಮನ ಯಜ್ಞಾಶ್ವವನ್ನು ಕಟ್ಟಿ ರಾಮನೊಡನೆ ಇಲ್ಲಿಯೇ ಯುದ್ಧಮಾಡಿದರೆಂದೂ ಐತಿಹ್ಯ. ಈ ಘಟನೆಗಳಿಗೆ ಸಂಬಂಧಪಟ್ಟಂತೆ, ಈ ಸುತ್ತಿನ ಅನೇಕ ತಾಣಗಳು ವಾಲ್ಮೀಕಿಯ ಕುಟೀರ, ಲವಕುಶರ ತೊಟ್ಟಿಲು, ಸೀತೆಯ ಅಡುಗೆಪಾತ್ರೆ, ಅವಳು ಬಟ್ಟೆಯೊಗೆಯುತ್ತಿದ್ದ ಕೊಳ, ಲವಕುಶರು ಯಜ್ಞಾಶ್ವವನ್ನು ಕಟ್ಟಿದ ಬಂಡೆ, ರಾಮಲಕ್ಷ್ಮಣರು ಕುಳಿತಿದ್ದ ಬಂಡೆ-ಇತ್ಯಾದಿಯಾಗಿ ಪ್ರಸಿದ್ಧವಾಗಿವೆ.
ಅತ್ಯಂತ ಪ್ರಾಚೀನ ದೇವಾಲಯಗಳು ಬೆಟ್ಟದ ನೈಋತ್ಯದಲ್ಲಿ ಒಂದು ದೊಡ್ಡ ಪ್ರಾಂಗಣದ ಮಧ್ಯೆ ಇವೆ. ಇವೆಲ್ಲವೂ ಶೈವ ದೇವಾಲಯಗಳು. ಮಧ್ಯದಲ್ಲಿ ಪಾರ್ವತೀ ದೇವಾಲಯವೂ ಅದರ ಸುತ್ತಲೂ ರಾಮೇಶ್ವರ, ಲಕ್ಷ್ಮಣೇಶ್ವರ, ಭರತೇಶ್ವರ, ಶತ್ರುಘ್ನೇಶ್ವರ, ಸುಗ್ರೀವೇಶ್ವರ, ಅಂಜನೇಶ್ವರ ಮುಂತಾದ ಗುಡಿಗಳಿವೆ. ಇವುಗಳಲ್ಲಿ ಲಕ್ಷ್ಮಣೇಶ್ವರ ಗುಡಿ ಅತ್ಯಂತ ಸುಂದರ ಕಟ್ಟಡ. ಗರ್ಭಗೃಹ, ಅಂತರಾಳ ಮತ್ತು ನವರಂಗವಿರುವ ಈ ಗುಡಿಯ ಹೊರಮೈಯ ಸುತ್ತಲೂ ಬುಡದಲ್ಲಿ ಆನೆ, ಸಿಂಹ, ಯಾಳಿ, ಮಕರ, ಕುದುರೆಲಾಳದಾಕೃತಿಯ ಕಮಾನುಗಳು-ಇವುಗಳಿಂದ ಅಲಂಕೃತವಾದ ಆರು ಪಟ್ಟಿಕೆಗಳಿವೆ. ಮೇಲೆ ಅಲ್ಲಲ್ಲಿ ಯಕ್ಷ, ಶಿವ, ದುರ್ಗಿ, ಗಣೇಶ, ಭೈರವ, ಭೈರವಿ, ವಿಷ್ಣು ಮುಂತಾದ ಶಿಲ್ಪಗಳಿರುವ, ಸಮಾನಾಂತರಗಳಲ್ಲಿ ಅರ್ಧಕಂಭಗಳಿಂದ (ಪಿಲ್ಯಾಸ್ಟರ್) ಛೇದಿಸಲ್ಪಟ್ಟ ಎತ್ತರವಾದ ಭಿತ್ತಿಯಿದೆ. ಇದರಲ್ಲಿ ಮಧ್ಯೆ ಮಧ್ಯೆ ಮಹಿಷಾಸುರಮರ್ದಿನಿ, ಸೂರ್ಯ, ನಟರಾಜ ಮುಂತಾದ ವಿಗ್ರಹಗಳನ್ನೊಳಗೊಂಡ ಜಾಲಂಧ್ರಗಳೂ ಇದ್ದು ದೇವಾಲಯದ ಸೊಬಗನ್ನು ಹೆಚ್ಚಸಿವೆ. ಒಳಭಾಗದ ನವರಂಗದಲ್ಲಿ, ಮಧ್ಯೆ ಉಮಾಮಹೇಶ್ವರ ಮತ್ತು ಸುತ್ತಲೂ ಅಷ್ಟ ದಿಕ್ಪಾಲಕರ ಕೆತ್ತನೆಯಿರುವ ಒಂದು ಮೋಹಕ ಭುವನೇಶ್ವರಿಯಿದೆ. ರಚನಾರೀತಿಯಲ್ಲಿ, ಲಕ್ಷ್ಮಣೇಶ್ವರ ದೇವಾಲಯ ಕಂಚಿಯ ದೇವಾಲಯಗಳ ಸಂಪ್ರದಾಯದಿಂದ ಬೆಳೆದು ಬಂದ ನೊಳಂಬವಾಸ್ತುಶಿಲ್ಪ ಶೈಲಿಯ ಒಂದು ಉತ್ತಮ ಪ್ರತೀಕವಾಗಿದೆ. ವಾಸ್ತುಶೈಲಿಯಿಂದ, ಮತ್ತು ಸ್ಥಳೀಯ ಶಾಸನಗಳ ಸಾಂದರ್ಭಿಕ ಮಾಹಿತಿಗಳಿಂದ ಈ ದೇವಾಲಯ ಕ್ರಿ.ಶ. ಹತ್ತನೆಯ ಶತಮಾನದಲ್ಲಿ ಕಟ್ಟಲಾಗಿರಬೇಕೆಂದು ಹೇಳಬಹುದು. ಆದರೆ ದೇವಾಲಯದ ಮೇಲುಭಾಗದಲ್ಲಿರುವ ಗೋಪುರ ಮುಂತಾದ ಇಟ್ಟಿಗೆಯ ಸೇರ್ಪಡೆಗಳು ಸುಮಾರು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಆದವುಗಳು. ಶತ್ರುಘ್ನೇಶ್ವರ, ಅಂಜನೇಶ್ವರ ಮತ್ತು ಭರತೇಶ್ವರ ದೇವಾಲಯಗಳೂ ಸುಮಾರು ಲಕ್ಷ್ಮಣೇಶ್ವರದ ಮಾದರಿಯವೇ. ಕಾಲದಲೂ ಇವುಗಳಲ್ಲಿ ಬಹಳಷ್ಟು ಅಂತರವಿರಲಾರದೆಂಬುದು ಈ ಕೆಲವು ದೇವಾಲಯಗಳಲ್ಲಿ ಕಂಡುಬಂದಿರುವ ನೊಳಂಬ ಮತ್ತು ಗಂಗರ ಶಾಸನಗಳಿಂದ ಸಿದ್ಧವಾಗುತ್ತದೆ. ಇದೇ ಕಾಲದ ರಾಮೇಶ್ವರ ದೇವಾಲಯ ದ್ರಾವಿಡಶೈಲಿಯ ಮೂಲ ಶಿಖರವನ್ನು ಇನ್ನೂ ಉಳಿಸಿಕೊಂಡಿದೆ. ಈ ದೇವಾಲಯದಲ್ಲಿ ಮೂಲಗರ್ಭಗುಡಿ ಮತ್ತು ನವರಂಗದ ಕೆಲವು ಭಾಗಗಳು ರಚನಾರೀತಿಯಲ್ಲಿ ಇತರ ಸಮಕಾಲೀನ ದೇವಾಲಯಗಳಂತೆಯೇ ಇದ್ದರೂ ಮುಂದೆ 12-13ನೆಯ ಶತಮಾನದ ಕೆಲವು ಸೇರ್ಪಡೆಗಳಿಂದಾಗಿ ಕಟ್ಟಡದ ಅಂದಕ್ಕೆ ಸ್ವಲ್ಪ ಕುಂದು ಬಂದಿದೆ. ಮಧ್ಯದಲ್ಲಿರುವ ಪಾರ್ವತೀ ದೇವಾಲಯ ಗರ್ಭಗೃಹ, ನವರಂಗ ಮತ್ತು ಮುಖಮಂಟಪಗಳನ್ನೊಳಗೊಂಡಿರುವ ಸಾಮಾನ್ಯ ಕಟ್ಟಡ. ಇಲ್ಲಿಯ ವಾಸ್ತುರಚನೆಯಲ್ಲಾಗಲೀ ಶಿಲ್ಪಗಳಲ್ಲಾಗಲೀ ಈ ಹಿಂದಿನ ದೇವಾಲಯಗಳಲ್ಲಿರುವ ಪ್ರಬುದ್ದತೆ ಕಂಡುಬರುವುದಿಲ್ಲ. 13ನೆಯ ಶತಮಾನದಲ್ಲಿ ಕೋಲಾರ ಪ್ರದೇಶದಲ್ಲಿ ಆಳುತ್ತಿದ್ದ ತಮಿಳು ಗಂಗ ಅರಸು ಇಳವಂಜಿ ವಾಸುದೇವರಾಯ ಇದನ್ನು ಕಟ್ಟಿಸಿರಬಹುದೆಂದು ಊಹಿಸಲು ಆಧಾರಗಳಿವೆ. ದೇವಾಲಯದ ಒಳಗೆ ಇಳವಂಜಿ ವಾಸುದೇವರಾಯ ಮತ್ತು ಅವನ ತಮ್ಮನದೆಂದು ಹೇಳಲಾಗುವ ಎರಡು ಭಕ್ತ ವಿಗ್ರಹಗಳಿವೆ. ಈ ದೇವಾಲಯಗಳ ಗುಂಪಿನಲ್ಲೇ ಇರುವ ಕಾಮಾಕ್ಷಿ ಮತ್ತು ಇತರ ಗುಡಿಗಳು ಅನಂತರದ ಕಟ್ಟಡಗಳು.
ಬೆಟ್ಟ ಹತ್ತುವಲ್ಲಿ ಸಿಗುವ ಒಂದು ಗುಹೆಯನ್ನು ವಾಲ್ಮೀಕಿಯ ಗುಹೆಯೆಂದು ಕರೆಯುತ್ತಾರೆ. ಇದರ ಸಮೀಪದಲ್ಲಿ ಚೋಳ ಸಂಪ್ರದಾಯದ ಒಂದು ಸಣ್ಣ ದೇವಾಲಯವಿದೆ. ಇಲ್ಲಿಂದ ಅನತಿ ದೂರದಲ್ಲಿರುವ ಏಕಾಂತರಾಮಯ್ಯನ ದೇವಾಲಯ ಸಹ ಚೋಳ ಸಂಪ್ರದಾಯದ ಕಟ್ಟಡ. ಆದರೆ ಇದರ ನವರಂಗಭಾಗ ಹೊಯ್ಸಳ ಮುಮ್ಮಡಿ ಬಲ್ಲಾಳನ ಕಾಲಕ್ಕೆ ಸೇರಿದುದು. ಬೆಟ್ಟದ ಮೇಲುಗಡೆ ಇರುವ ಸೀತಾಪಾರ್ವತೀ ಗುಡಿ ಹೊರನೋಟಕ್ಕೆ ಈಚಿನ ಬಹುಸಾಮಾನ್ಯ ಕಟ್ಟಡದಂತೆ ಕಂಡರೂ ಒಳಭಾಗ ಪುರಾತನವಾದುದು. ಇದು ನೊಳಂಬ ಅರಸರ ಕಾಲದ (9-10ನೆಯ ಶತಮಾನ) ಗುಹಾದೇವಾಲಯವೆಂದು ಕಾಣುತ್ತದೆ. ಆವನಿ ಗ್ರಾಮದಲೂ ಬೆಟ್ಟದ ಮೇಲೂ 9-10ನೆಯ ಶತಮಾನದಿಂದ ಹಿಡಿದು ಇತ್ತೀಚಿನವರೆಗಿನ ಗಂಗ, ನೊಳಂಬ, ಚೋಳ, ಹೊಯ್ಸಳ, ತಮಿಳುಗಂಗ, ವಿಜಯನಗರ ಮತ್ತು ಪಾಳೆಯಗಾರರ ಆಳ್ವಿಕೆಗಳಿಗೆ ಸಂಬಂಧಿಸಿದ ಐವತ್ತಕ್ಕೂ ಹೆಚ್ಚು ಶಾಸನಗಳು ಬೆಳಕಿಗೆ ಬಂದಿವೆ. (ಎಸ್.ಎನ್.)