ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕನ್ನಡದ ಉಪಭಾಷೆಗಳು

ವಿಕಿಸೋರ್ಸ್ದಿಂದ

ಕನ್ನಡದ ಉಪಭಾಷೆಗಳು :- ಕನ್ನಡ ಭಾಷಾ ಪ್ರದೇಶವನ್ನು ಗಮನಿಸಿ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅದರಲ್ಲಿ ಅನೇಕ ಬಗೆಯ ಭಾಷಾ ಪ್ರಭೇದಗಳು ಕಾಣಿಸಿಕೊಳ್ಳುತ್ತವೆ. ಇವುಗಳಲ್ಲಿ ಮುಖ್ಯವಾಗಿ ಮೈಸೂರು ಕನ್ನಡ, ಕರಾವಳಿಕನ್ನಡ, ಧಾರವಾಡ ಕನ್ನಡ, ಗುಲ್ಬರ್ಗ ಕನ್ನಡ- ಎಂಬ ನಾಲ್ಕು ಉಪಭಾಷಾ ಪ್ರಭೇದಗಳನ್ನು ಗುರುತಿಸಬಹುದು. ಈ ಪ್ರಭೇದಗಳನ್ನು ಪ್ರಾದೇಶಿಕವಾಗಿ ಹಾಗೂ ಸಾಮಾಜಿಕವಾಗಿ ಪರಿಶೀಲಿಸಲು ಹೊರಟಾಗ ಇವುಗಳಲ್ಲೇ ಎಷ್ಟೋ ಬಗೆಯ ಒಳ ಪ್ರಭೇದಗಳು ಇರುವುದು ಕಂಡುಬರುತ್ತದೆ.

ಮೈಸೂರು ಕನ್ನಡ: ಮೈಸೂರು, ಮಂಡ್ಯ, ಬೆಂಗಳೂರು, ಕೋಲಾರ, ತುಮಕೂರು, ಹಾಸನ, ಶಿವಮೊಗ್ಗ, ಚಿತ್ರದುರ್ಗ, ಮತ್ತು ಚಿಕ್ಕಮಗಳೂರು- ಈ ಜಿಲ್ಲೆಗಳಲ್ಲಿ ಆಡುವ ಕನ್ನಡಭಾಷೆಯನ್ನು ಮೈಸೂರುಕನ್ನಡ ಎಂದು ಕರೆಯುವುದು ವಾಡಿಕೆ.

ಈ ಕನ್ನಡದಲ್ಲಿ ಸಾಮಾನ್ಯವಾಗಿ ಸಂಧ್ಯಕ್ಷರಗಳು ಗೋಚರಿಸುವುದಿಲ್ಲ. ವಿದ್ಯಾವಂತರ ಕನ್ನಡದಲ್ಲಿ ಅ, ಆ, ಇ, ಈ, ಉ, ಊ, ಎ, ಏ, ಒ, ಓ, ಎಂಬ ಹತ್ತು ಸ್ವರ ಧ್ವನಿಮಾಗಳಿವೆ. ಅವಿದ್ಯಾವಂತರ ಕನ್ನಡದಲ್ಲಿ ಈ ಹತ್ತು ಸ್ವರ ಧ್ವನಿಮಾಗಳ ಜೊತೆಗೆ ಆ, ಅ್ಯ ಮತ್ತು ಒ ಎಂಬ ಮೂರು ಸ್ವರ ಧ್ವನಿಮಾಗಳು ಸೇರಿ ಒಟ್ಟು 13 ಕ್ಕೂ ಹೆಚ್ಚು ಸ್ವರ ಧ್ವನಿಮಾಗಳು ಗೋಚರವಾಗುತ್ತವೆ; ಮಹಾ ಪ್ರಾಣಾಕ್ಷರಗಳು ಕಂಡುಬರುವುದಿಲ್ಲ. ಅವಿದ್ಯಾವಂತರ ಭಾಷೆಯಲ್ಲಿ ವಿಶೇಷವಾಗಿ ಮಂಡ್ಯ ಪ್ರಾಂತದಲ್ಲಿ ಹ ಕಾರ ಲೋಪವಾಗಿ ಹಾಲು ಎಂಬುದನ್ನು ಆಲು ಎಂತಲೂ ಹಲ್ಲು ಎಂಬುದನ್ನು ಅಲ್ಲು ಎಂತಲೂ ಹೇಳುವುದೂ ರೂಡಿ. ಹಾಗೆಯೇ ಅ ಮತ್ತು ಆ ಕಾರಗಳ ಸ್ಥಳದಲ್ಲಿ ಹ ಮತ್ತು ಹಾ ಕಾರಗಳು ನುಸುಳುವುದುಂಟು. ವಿದ್ಯಾವಂತ ಹಾಗೂ ಅವಿದ್ಯಾವಂತರಿಬ್ಬರಲ್ಲೂ ಞ, ಙ ಎಂಬ ಅನುನಾಸಿಕ ಧ್ವನಿಗಳು ನ ಅನುನಾಸಿಕ ಧ್ವನಿಮಾದ ಉಪಧ್ವನಿಗಳಾಗಿ ಕಂಡುಬರುತ್ತವೆ. ಅವಿದ್ಯಾವಂತರ ಕನ್ನಡದಲ್ಲಿ ಶ,ಷ,ಸ, ಎಂಬ ಊಷ್ಮ ಧ್ವನಿಗಳು ಕಂಡುಬರುತ್ತವೆಯಾದರೂ ಅವು ಬೇರೆ ಬೇರೆ ಧ್ವನಿಮಾಗಳಾಗಿರದೆ ಶ ಮತ್ತು ಷ ಧ್ವನಿಗಳು ಸ ಧ್ವನಿಯ ಉಪಧ್ವನಿಯಾಗಿ ಕಂಡಬರುತ್ತವೆ. ಇಂಗ್ಲಿಷಿನ ಕೆಲವು ಸ್ವೀಕೃತ ಪದಗಳಲ್ಲಿ ಫ (ಜಿ) ಜ (z), ಇತ್ಯಾದಿ ಧ್ವನಿಗಳು ಕಂಡುಬರುತ್ತವೆ. ಆದರೂ ಅವುಗಳನ್ನು ಅವಿದ್ಯಾವಂತರು ಪ (ಕಾಪಿ > ಕಾಪಿ) ಮತ್ತು (ಡಜನ್ > ಡಜನ್) ಎಂದೇ ಉಚ್ಚರಿಸುತ್ತಾರೆ. ಪದದ ಆದಿಯಲ್ಲಿ ಬರುವ ಎ ಮತ್ತು ಒ ಸ್ವರಗಳು ‘ಯೆ’ ಮತ್ತು ‘ಮೊ’ ಎಂದು ಉಚ್ಚಾರವಾಗುತ್ತವೆ. ಈ ಬಗೆಯ ಭಾಷಾ ವ್ಯತ್ಯಾಸ ಒಂದೇ ವರ್ಗದ ಅವಿದ್ಯಾವಂತರಿಗೆ ಮಾತ್ರ ಸೀಮಿತವಾಗಿರದೆ ಎಲ್ಲಾ ಜಾತಿ,ಸಂಸ್ಕೃತಿಯ ಜನರಿಗೂ ಅನ್ವಯಿಸುತ್ತದೆ. ನಿಮ್ನವರ್ಗದ ಜನರ ಆಡುಭಾಷೆಯನ್ನು ಗಮನಿಸಿದರೆ, ಅವರು ‘ಏ’ ಕಾರವನ್ನು ‘ಯಾ’ ಎಂತಲೂ ಮತ್ತೆ ಕೆಲವು ವಿದ್ಯಾವಂತರೂ ಕೂಡ ಈ ಬಗೆಯಲ್ಲಿಯೇ ‘ಬೇಡ’ ಎಂಬುದನ್ನು ‘ಬ್ಯಾಡ’ ಎಂತಲೂ ಪೇಟೆ ಎಂಬುದನ್ನು ಪ್ಯಾಟೆ ಎಂತಲೂ ಬೇಟೆ ಎಂಬುದನ್ನು ಬ್ಯಾಟೆ ಎಂತಲೂ ಉಚ್ಚರಿಸುವುದನ್ನು ಕಾಣಬಹುದು. ಹಾಸನ ಪ್ರಾಂತದ ಕೆಲವು ಕಡೆ ಅವಿದ್ಯಾವಂತರಲ್ಲಿ ‘ಕ’ ಕಾರ ಚಕಾರವಾಗಿ ಉಚ್ಚಾರವಾಗುತ್ತದೆ ಉದಾ: ಕೆಂಡ > ಚೆಂಡ, ಕೆರೆ > ಚೆರೆ, ಕೆಲ > ಚೆಲ. ಕೆಲವರು ಚ ಕಾರವನ್ನು ಸ ಕಾರವನ್ನಾಗಿ (ಚಾಪೆ > ಸಾಪೆ) ಉಚ್ಚರಿಸುವುದೂ ಉಂಟು. ಹಾಗೆಯೇ ಕಾಗದ > ಕಾದಗ, ಕಾಜಗ ಎಂದು ಉಚ್ಚರಿಸುವುದನ್ನು ಅಲ್ಲಲ್ಲಿ ಕಾಣಬಹುದು.

ಮೈಸೂರು ಕನ್ನಡದ ವಿದ್ಯಾವಂತ ಹಾಗೂ ಅವಿದ್ಯಾವಂತರ ಭಾಷೆಗಳ ನಡುವೆ ವ್ಯಾಕರಣ ವಿಚಾರಗಳಲ್ಲಿ ಕೇವಲ ಸ್ವಲ್ಪ ಅಂತರ ಕಂಡುಬರುತ್ತದೆ. ಅವನು ಎಂಬುದನ್ನು ಅವು, ಅವ ಎಂತಲೂ ಕೆಲವು ರೂಪಗಳು ವ್ಯತ್ಯಾಸಗೊಂಡು ಬಳಕೆಯಲ್ಲಿರುವುದನ್ನು ಗಮನಿಸಬಹುದು. ಹಾಗೆಯೇ ಮಾಡುತ್ತೇನೆ, ಮಾಡ್ತೇನೆ, ಮಾಡ್ತಿನಿ, ನೋಡುತ್ತೇನೆ, ನೋಡ್ತೇನೆ, ನೋಡುವ, ಮಾಡೋಣ, ಮಾಡುವ ಎಂಬ ವಿಧ್ಯರ್ಥಕ ರೂಪಗಳೂ ವಿದ್ಯಾವಂತ ಹಾಗೂ ಅವಿದ್ಯಾವಂತರ ನಡುವೆ ವ್ಯತ್ಯಸ್ತಗೊಂಡು ಉಚ್ಚಾರಗೊಳ್ಳುವುದನ್ನು ಕಾಣಬಹುದು. (ಕೆ.ಕೆ.ಜಿ.) ಕರಾವಳಿ ಕನ್ನಡ(ಮಂಗಳೂರು ಕನ್ನಡ):- ದಕ್ಷಿಣ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಎರಡು ರೀತಿಯ ಕನ್ನಡ ಬಳಕೆಯಲ್ಲಿದೆ. ತುಳು, ಕೊಂಕಣಿ, ಮರಾಠಿ, ಮಲೆಯಾಳಂ ಮೊದಲಾದ ಭಾಷೆಗಳನ್ನು ಮನೆಮಾತಾಗಿ ಬಳಸುವ ಜನರು ಪರಸ್ಪರ ಸಾಧನೆಗಾಗಿ ಬಳಸುವ ಕನ್ನಡ ಒಂದು ರೀತಿಯದಾದರೆ, ಹವ್ಯಕ, ಗೌಡ, ಕೋಟ, ಕುಂಬಾರ, ಬೈರ ಮೊದಲಾದ ಸಮಾಜಗಳಿಗೆ ಸೇರಿದ ಜನ ತಮ್ಮತಮ್ಮೊಳಗೆ ಬಳಸುವ ಕನ್ನಡ ಇನ್ನೊಂದು ರೀತಿಯದು. ಇವುಗಳಲ್ಲಿ ಮೊದಲಿನದನ್ನು ಸಾಂಪರ್ಕಿಕ ಕನ್ನಡವೆಂದು ಎರಡನೆಯದನ್ನು ತಾಯಿನುಡಿ ಕನ್ನಡವೆಂದೂ ಪ್ರತ್ಯೇಕಿಸಿ ಹೇಳಬಹುದು. ಹೊರಗಿನಿಂದ ಬಂದವರಿಗೆ ಈ ಜಿಲ್ಲೆಯಲ್ಲಿ ಮೊದಲಿಗೆ ಕೇಳಿಸುವುದು ಸಾಂಪರ್ಕಿಕ ಕನ್ನಡ. ಇದನ್ನು ಆಡುವವರು ಬೇರೆ ಬೇರೆ ಭಾಷೆಗಳನ್ನು ಮನೆಮಾತಾಗಿ ಬಳಸುವವರಾದ್ದರಿಂದ, ಈ ನುಡಿಯಲ್ಲಿ ತುಳು, ಕೊಂಕಣಿ ಮೊದಲಾದ ಭಾಷೆಗಳ ಪ್ರಭಾವ ಹೆಚ್ಚು ಕಾಣಿಸುತ್ತದೆ. ಅಲ್ಲದೆ, ಈ ಕನ್ನಡವನ್ನು ಬಹುಮಂದಿ ಶಾಲೆ, ಕಾಲೇಜು, ಪುಸ್ತಕ, ಪತ್ರಿಕೆ ಇವುಗಳ ಮೂಲಕ ಮತ್ತು ಸಭೆ, ನಾಟಕಗಳ ಮೂಲಕ ಪಡೆದಿರುವರಾದ್ದರಿಂದ ಇದು ಆಡುನುಡಿಗಿಂತಲೂ ಬರೆಹದ ಕನ್ನಡವನ್ನೇ ಹೆಚ್ಚು ಹೋಲುತ್ತದೆ. ಸಾಂಪರ್ಕಿಕ ಕನ್ನಡ ಯಾವ ರೀತಿಯಲ್ಲಿ ಬೆಳೆದುಬಂದಿದೆ. ಅದರ ಬೆಳವಣಿಗೆಗೂ ಆಡುನುಡಿಯ ಬೆಳವಣಿಗೆಗೂ ಏನು ಭೇದವಿದೆ. ಅದರಲ್ಲಿ ಬೇರೆ ಬೇರೆ ಸಮಾಜಗಳಿಗೆ ಮತ್ತು ಆ ಸಮಾಜದವರ ಮಾತೃಭಾಷೆಗಳಿಗೆ ಅನುಗುಣವಾಗಿ ಹೇಗೆ ಪ್ರಭೇದಗಳು ಮೂಡಿಬಂದಿವೆ. ಅದರ ಮೇಲೆ ವಿದ್ಯಾಭ್ಯಾಸದ ಪ್ರಭಾವ ಎಂಥದ್ದು ಇತ್ಯಾದಿ ಪ್ರಶ್ನೆಗಳನ್ನು ಉತ್ತರಿಸಲು ಇನ್ನೂ ಬಹಳಷ್ಟು ಸಂಶೋಧನೆಗಳನ್ನು ನಡೆಸುವ ಆವಶ್ಯಕತೆಯಿದೆ.

ಕನ್ನಡ ಭಾಷೆಯ ಚರಿತ್ರೆಯ ದೃಷ್ಟಿಯಿಂದ ನೋಡುವುದಾದರೆ, ಈ ಸಾಂಪರ್ಕಿಕ ಪ್ರಭೇದಕ್ಕಿಂತಲೂ ಹವ್ಯಕ, ಕೋಟ, ಗೌಡ, ಕುಂಬಾರ ಮೊದಲಾದ ಸಮಾಜಗಳವರು ಮನೆಮಾತಾಗಿ ಬಳಸುವ ಆಡುನುಡಿ ಕನ್ನಡ ಹೆಚ್ಚು ಪ್ರಮುಖವಾದುದೆಂದು ಹೇಳಬಹುದು. ಪಶ್ಚಿಮ ಘಟ್ಟಗಳ ಪಶ್ಚಿಮಕ್ಕಿರುವ ಕರಾವಳಿ ಪ್ರದೇಶದಲ್ಲೆಲ್ಲಾ ಪ್ರಚಾರದಲ್ಲಿರುವ ಕನ್ನಡ ಇತರ ಒಳನಾಡ ಕನ್ನಡದ ಪ್ರಭೇದಗಳಿಂದ ಬೇರೆಯಾಗಿ ಸುಮಾರು ಒಂದೂವರೆ ಸಾವಿರ ವರ್ಷಗಳಾದರೂ ಕಳೆದಿರಬಹುದು. ಕನ್ನಡದ ಆಧುನಿಕ ಪ್ರಭೇದಗಳನ್ನೆಲ್ಲ ತೌಲನಿಕವಾಗಿ ಅಭ್ಯಾಸಮಾಡಿದಾಗ, ಕರಾವಳಿ ಮತ್ತು ಒಳನಾಡ ಕನ್ನಡಗಳೊಳಗೆ ನಡೆದ ಪುರ್ವ ಪಶ್ಚಿಮ ವಿಭಜನೆ ಕನ್ನಡದ ಮಟ್ಟಿಗೆ ಅತ್ಯಂತ ಪ್ರಾಚಿನವಾದುದೆಂದು ತಿಳಿದುಬಂದಿದೆ. ಈ ವಿಭಜನೆ ಹಳಗನ್ನಡದ ಕಾಲಕ್ಕಿಂತಲೂ ಹಿಂದಿನದೆಂಬುದಕ್ಕೆ ಸ್ಪಷ್ಟವಾದ ಆಧಾರಗಳಿವೆ.

ಉದಾಹರಣೆಗಾಗಿ, ಹಳಗನ್ನಡದ ಕಾಲಕ್ಕಿಂತ ಮೊದಲು ಎಂದರೆ, ಆರು ಏಳನೆಯ ಶತಮಾನದಲ್ಲಿ ನಡೆದ ಮಧ್ಯಸ್ವರ ಉಚ್ಚಸ್ವರದೆದುರು ಉಚ್ಚವಾಗಿರುವ ಬದಲಾವಣೇಯನ್ನು ಗಮನಿಸಬಹುದು. ಈ ಬದಲಾವಣೆಯ ಫಲವಾಗಿ ಹಿಂದಿದ್ದ ಬೆಳಿ > ಬಿಳಿ, ಕೆವಿ > ಕಿವಿ, ಬೆಸಿ > ಬಿಸಿ, ಒಳಿ > ಉಳಿ, ತೊದಿ > ತುದಿ, ತೊಳಿ > ತುಳಿ ಇತ್ಯಾದಿಯಾಗಿ ಬದಲಾವಣೆ ಹೊಂದಿತು. ಐದೂ ಆರನೆಯ ಶತಮಾನಗಳ ಶಾಸನಗಳಲ್ಲಿ ಈ ಬದಲಾವಣೆಯಾದಂತೆ ಕಾಣಿಸುವುದಿಲ್ಲ. ಅಲ್ಲದೆ ಇಂದಿನ ಕರಾವಳಿಯ ಆಡುನುಡಿ ಕನ್ನಡದಲ್ಲೂ ಇದು ಕಾಣಿಸುತ್ತಿಲ್ಲ. ಈ ಪರಿಸ್ಥಿತಿಯ ಅರ್ಥವೇನೆಂದರೆ, ಐದು ಆರನೆಯ ಶತಮಾನಗಳು ಈ ಬದಲಾವಣೆ ನಡೆದ ಕಾಲಕ್ಕಿಂತ ಹಿಂದಿನವಾಗಿರಬೇಕು ಮತ್ತು ಕರಾವಳಿಯ ಆಡುನುಡಿ ಕನ್ನಡ ಈ ಬದಲಾವಣೆ ನಡೆದ ಕಾಲಕ್ಕಿಂತ ಹಿಂದೆಯೆ ಒಳನಾಡ ಕನ್ನಡದಿಂದ ಒಡೆದು ಬೇರಾಗಿ ಬಂದಿರಬೇಕು. ಮತ್ತು ಒಳನಾಡಿನಲ್ಲಿ ಮಾತ್ರವೆ ನಡೆದ ಈ ಬದಲಾವಣೆ ಇದಕ್ಕೆ ಒಳಪಡದೆ ಇದ್ದಿರಬೇಕು.

ಕರಾವಳಿಯ ಆಡುನುಡಿ ಕನ್ನಡವನ್ನು ಒಳನಾಡಿನ ಆಡುನುಡಿ ಕನ್ನಡದಿಂದ ಬೇರ್ಪಡಿಸುವ ಅಂಶಗಳು ಇನ್ನೂ ಹಲವಾರಿವೆ. ಉದಾಹರಣೆಗೆ ಒಳನಾಡಿನ ಆಡುನುಡಿ ಕನ್ನಡದ ಪ್ರಭೇದಗಳಲ್ಲೆಲ್ಲ ಮೂರಕ್ಷರದ ಪದಗಳಲ್ಲಿ ಬರುವ ಎರಡನೆಯ ಸ್ವರ ಲೋಪಗೊಂಡಿದೆ (ಹಗಲು- ಹಗ್ಲು, ಅಡಕೆ- ಅಡ್ಕೆ, ಅಂಗಡಿ- ಅಂಗ್ಡಿ, ಬಾಗಿಲು- ಬಾಗ್ಲು ಇತ್ಯಾದಿ.) ಆದರೆ ಈ ಬದಲಾವಣೆ ಕರಾವಳಿಯ ಆಡು ನುಡಿಯಲ್ಲಾಗಿಲ್ಲ. ಹಾಗೆಯೆ ದೀರ್ಘ ಸ್ವರದ ಅನಂತರ ಇಲ್ಲವೆ ಮೂರಕ್ಷರದ ಪದಗಳಲ್ಲಿ ಎರಡನೆಯ ಸ್ವರಕ್ಕೆ ಪರವಾಗಿ ಬರುವ ಅನುನಾಸಿಕಗಳು ಸಮಾನಸ್ಥಾನಿಯಾದ ವ್ಯಂಜನ ಪರವಾದಾಗ ಲೋಪಗೊಂಡಿರುವುದನ್ನು ಒಳನಾಡಿನ ಕನ್ನಡದಲ್ಲಿ ಕಾಣಬಹುದು (ನಾಂಟು- ನಾಟು, ನೂಂಕು- ನೂಕು, ಮುರುಂಟು- ಮುರುಟು, ಕಲಂಕು- ಕಲಕು ಇತ್ಯಾದಿ). ಕರಾವಳಿಯ ದಕ್ಷಿಣ ಭಾಗದಲ್ಲಿ ಈ ಲೋಪ ಸಂಭವಿಸಿಲ್ಲ.

ಈ ಪ್ರಭೇದಗಳ ವ್ಯಾಕರಣವನ್ನು ಗಮನಿಸಿದರೆ, ಕರಾವಳಿಯ ಪ್ರಭೇದಗಳು ಹಳಗನ್ನಡದಲ್ಲಿ ತೋರಿಬರುವ ನಿಷೇಧ ಕ್ರಿಯಾರೂಪ (ಕೇಳೆಂ, ಪೇಳೆಂ ಇತ್ಯಾದಿ) ಮತ್ತು ಭವಿಷ್ಯದ್ರೂಪ (ಕೇಳ್ವೆಂ, ಪೇಳ್ವೆಂ ಇತ್ಯಾದಿ) ಇವುಗಳನ್ನು ಉಳಿಸಿಕೊಂಡು ಬಂದಿರುವುದೂ ಒಳನಾಡಿನ ಪ್ರಭೇದಗಳು ಇವೆರಡನ್ನೂ ಕಳೆದುಕೊಂಡಿರುವುದ ಸ್ಪಷ್ಟವಾಗುತ್ತದೆ. ಅಲ್ಲದೆ ಹಳಗನ್ನಡದಲ್ಲಿ ಕಾಣಿಸದೆ ಇರುವ ಪುರ್ಣ ವರ್ತಮಾನ ರೂಪಮೊಂದು (ಕುಡ್ದೀನಿ, ಮಾಡ್ದೀನಿ, ಇತ್ಯಾದಿ) ಹೊಸತಾಗಿ ಈ ಒಳನಾಡಿನ ಪ್ರಭೇಧಗಳಲ್ಲಿ ಮೂಡಿಬಂದಿದೆಯೆಂಬ ವಿಷಯವ ತಿಳಿಯುತ್ತದೆ. ಕರಾವಳಿಯ ಪ್ರಭೇದಗಳಲ್ಲಿ ಬರುವ ಪುರುಷವಾಚಕ ಪ್ರತ್ಯಯಗಳಿಗೆ ಎಲ್ಲಾ ಕಾಲವಾಚಕ ಕ್ರಿಯಾರೂಪಗಳಲ್ಲೂ ಒಂದೇ ರೂಪವಿದೆಯಾದರೆ, ಒಳನಾಡಿನ ಪ್ರಭೇದಗಳಲ್ಲೆಲ್ಲ ಇವಕ್ಕೆ ಭೂತ ಪ್ರತ್ಯಯದೆದುರು ಹ್ರಸ್ವರೂಪವಿದೆ ಮತ್ತು ಇತರೆಡೆಗಳಲ್ಲಿ ದೀರ್ಘರೂಪವಿದೆ (ಕುಡ್ದೆ- ಕುಡಿತೀನಿ. ಮಾಡ್ದೆ- ಮಾಡ್ತೀನಿ ಇತ್ಯಾದಿ).

ಕರಾವಳಿಯಲ್ಲೂ ಕೂಡ ದಕ್ಷಿಣ ಕನ್ನಡ ಉಡುಪಿಜಿಲ್ಲೆಗಳಲ್ಲಿ ಕಾಣಿಸುವ ಆಡುನುಡಿ ಕನ್ನಡ ಒಂದು ತೆರನಾದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಣಿಸುವ ಆಡುನುಡಿ ಕನ್ನಡ ಇನ್ನೊಂದು ತೆರ. ಸಾಮಾನ್ಯವಾಗಿ ಉತ್ತರ ಕನ್ನಡ ಜಿಲ್ಲೆಯ ಪ್ರಭೇದಗಳ ಮೇಲೆ ಒಳನಾಡ ಕನ್ನಡದ ಪ್ರಭಾವ ಸ್ಪಷ್ಟವಾಗಿಯೆ ಕಾಣಿಸುತ್ತಿದೆಯೆನ್ನಬಹುದು. ತುಳು- ಮಲೆಯಾಳಂಗಳ ಸಂಪರ್ಕವಿದ್ದುದರಿಂದಾಗಿ ಮತ್ತು ಕಳೆದ ನೂರು- ನೂರೈವತ್ತು ವರ್ಷಗಳಲ್ಲಿ ಕೇರಳ ಮತ್ತು ತಮಿಳುನಾಡುಗಳೊಡನೆ ಆಡಳಿತದ ಮಟ್ಟಿಗೂ ಹತ್ತಿರದ ಸಂಪರ್ಕವಿದ್ದುದರಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಆಡುನುಡಿ ಕನ್ನಡ ತನ್ನದೇ ಆದ ವಿಶಿಷ್ಟ ರೂಪವನ್ನು ಪಡೆದಿದೆ.

ಕನ್ನಡ ಭಾಷೆಯ ಸ್ಪರೂಪವನ್ನು ಮತ್ತು ಅದು ಬೆಳೆದು ಬಂದ ರೀತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಕರ್ನಾಟಕದ ಮೂಲೆ ಮೂಲೆಗಳಲ್ಲಿ ಎಂತೆಂತಹ ಪ್ರಭೇದಗಳು ಪ್ರಚಾರದಲ್ಲಿವೆ ಎಂಬುದನ್ನು ಸರಿಯಾಗಿ ತಿಳಿದುಕೊಳ್ಳುವುದು ಆವಶ್ಯ. ಮುದ್ದಣನ ಊರಾದ ದಕ್ಷಿಣ ಕನ್ನಡ ಜಿಲ್ಲೆ ಈ ಮಟ್ಟಿಗೆ ಹಲವಾರು ವಿಶಿಷ್ಟವಾದ ಪ್ರಭೇದಗಳನ್ನು ಪಂಡಿತರ ಕೈಗೆ ಕೊಡಬಲ್ಲುದು. ಭೌಗೋಳಿಕ ಮತ್ತು ರಾಜಕೀಯ ಕಾರಣಗಳಿಂದಾಗಿ ಈ ಭಾಗ ಕರ್ನಾಟಕದ ಇತರ ಭಾಗಗಳಿಂದ 1956ರವರೆಗೂ ಬೇರಾಗಿಯೆ ಉಳಿದಿತ್ತು. ಇದರಿಂದಾಗಿ ಇಲ್ಲಿನ ಆಡುನುಡಿಗಳು ಕನ್ನಡದ ಇತರ ಆಡುನುಡಿಗಳಿಂದ ಬೇರೆಯಾಗಿದ್ದು, ತಮ್ಮವೇ ಆದ ದಿಕ್ಕಿನಲ್ಲಿ ಬೆಳೆದು ಬಂದಿವೆ. ಕೆಲವು ವಿಷಯಗಳಲ್ಲಿ ಇವು ಹೊಸ ಹಾದಿ ಹಿಡಿದಿವೆಯಾದರೆ ಇನ್ನು ಕೆಲವು ವಿಷಯಗಳಲ್ಲಿ ಇವು ಹಳೆಯ ಪ್ರಕಾರಗಳನ್ನು ಹಾಗೆಯೆ ಉಳಿಸಿಕೊಂಡು ಬಂದಿವೆ. (ಡಿ.ಎನ್.ಎಸ್.) ಧಾರವಾಡ ಕನ್ನಡ:- ಇದು ಕನ್ನಡದ ಪ್ರಾದೇಶಿಕ ಉಪಭಾಷೆಗಳಲ್ಲಿ ಪ್ರಮುಖ ಉಪಭಾಷಾಪ್ರಭೇದ. ಇದರಲ್ಲಿ ಧಾರವಾಡ, ಬಿಜಾಪುರ ಮತ್ತು ಬೆಳಗಾಂವಿ ಜಿಲ್ಲೆಗಳಲ್ಲಿ ಪ್ರಚಲಿತವಿರುವ ಭಾಷಾರೂಪಗಳು ಸಮಾವೇಶಗೊಳ್ಳುತ್ತವೆ. ಜಿಲ್ಲೆ ಜಿಲ್ಲೆಗೆ, ತಾಲ್ಲೂಕು ತಾಲ್ಲೂಕಿಗೆ, ಮತ್ತೆ ಒಳಭೇದಗಳು ಕಂಡುಬಂದರೂ ಈ ಪ್ರದೇಶದ ವಿಶಿಷ್ಟ ರೂಪಗಳೆನ್ನಲು ಬರುವಂಥ ಪ್ರಯೋಗಗಳಿವೆ. ಈ ಪ್ರಯೋಗಗಳನ್ನು ಇತರ ಉಪಭಾಷಾ ಪ್ರಭೇದಗಳಲ್ಲಿ ಕಂಡುಬರುವ ರೂಪಗಳೊಡನೆ ಹೋಲಿಸಿ ನೋಡಿದಾಗ ಧಾರವಾಡ ಕನ್ನಡದ ವೈಶಿಷ್ಟ್ಯಗಳು ವಿಶಿಷ್ಟವಾಗಿ ಕಂಡುಬಂದು, ಅದಕ್ಕೆ ಒಂದು ಬಿsನ್ನಸ್ಥಾನ ಒದಗಿಸಿಕೊಡುತ್ತವೆ.

ಗ್ರಂಥಸ್ಥ ಭಾಷೆಯಲ್ಲಿ (ಅದೇ ರೀತಿ, ಮೈಸೂರು ಮುಂತಾದ ಪ್ರಭೇದಗಳಲ್ಲಿ) ಎ ಕಾರದಲ್ಲಿ ಕೊನೆಗೊಳ್ಳುವ ಶಬ್ದಗಳು ಇಲ್ಲಿ ಇ ಕಾರಾಂತವಾಗುತ್ತವೆ. ಉದಾ ಮನೆ- ಮನಿ,ತೆನೆ-ತೆನಿ, ತಲೆ-ತಲಿ, ಬರೆ-ಬರಿ ಇತ್ಯಾದಿ.

ಶಬ್ದಮಧ್ಯದ ಒ ಸ್ವರ ಇಲ್ಲಿ ಆ್ಯ ಆಗುತ್ತದೆ. ಉದಾ ಕೋಟೆ- ಕ್ವಾಟೆ, ದೋಸೆ- ದ್ವಾಸಿ, ಗೋಡೆ- ಗ್ವಾಡಿ ಕೊರೆ - ಕ್ವಾರಿ ಇತ್ಯಾದಿ ಶಬ್ದಮಧ್ಯದ ಎ ಇಲ್ಲಿ ಅ್ಯ ಆಗಿದೆ. ಉದಾ ಮೇಲೆ - ಮ್ಯಾಲೆ ಕೆರೆ - ಕ್ಯಾರಿ ಮೆರೆ - ಮ್ಯಾರಿ ಇತ್ಯಾದಿ ಮಹಾಪ್ರಾಣದ ಉಚ್ಫಾರ ಮೈಸೂರು ಕನ್ನಡದಲ್ಲಿ ಕಂಡುಬರುವುದಕ್ಕಿಂತ ಇಲ್ಲಿ ಹೆಚ್ಚು ಸ್ಪಷ್ಟವಾಗಿದೆ. ಉದಾ ಭಾಸೆ -(ಮೈ ಬಾಸಿ-) ವಿದ್ಯಾರ್ಥಿ -(ಮೈ ವಿದ್ಯಾರ್ತಿ-), ಭೆಟ್ಟಿ -(ಮೈ ಬೆಟ್ಟಿ-) ಇತ್ಯಾದಿ

ಇಲ್ಲಿ ಕಂಡುಬರುವ ಸಂಸ್ಕೃತ ಪದಗಳ ಉಚ್ಚಾರಣೆ (ಅನುಸ್ವಾರದ ಉಚ್ಚಾರ) ಮೈಸೂರು ಕನ್ನಡಕ್ಕಿಂತ ಬಿನ್ನವಾಗಿದೆ. ಉದಾ ಸಂಸಾರ (ಮೈ. ಸಮ್ಸಾರ,) ಸಿಂಹ (ಮೈ. ಸಿಮ್ಮ) ಇತ್ಯಾದಿ.

ಇಲ್ಲಿ ಬಳಕೆಯಾಗುವ ಇಂಗ್ಲಿಷ್ ಪದಗಳ ಉಚ್ಚಾರ ಮೈಸೂರು ಕನ್ನಡಕ್ಕಿಂತ ಬಿನ್ನವಾಗಿದೆ. ಉದಾ: ರೇಲು (ಮೈ.ರೈಲು), ಜಜ್ (ಮೈ.ಜಡ್ಜ್‌), ಜಾಯಿಂಟ್ (ಮೈ.ಜಂಟಿ), ರಜಿಸ್ಟ್ರಾರ್ (ಮೈ.ರಿಜಿಸ್ಟ್ರಾರ್) ಇತ್ಯಾದಿ.

ಕ್ರಿಯಾರೂಪಗಳಲ್ಲಿಯ ಶಬ್ದಾಂತ್ಯ- ಎ ಕಾರ ಇಲ್ಲಿ ಇ ಕಾರಾಂತವಾಗಿದೆ. ಉದಾ: ಹೋಗ್ತೀನಿ (ಹೋಗ್ತೇನಿ), ಬರ್ತೀನಿ (ಬರ್ತೇನೆ), ಕೊಡತೀನಿ (ಕೊಡತೇನೆ) ಇತ್ಯಾದಿ.

ಕ್ರಿಯಾರೂಪಗಳಲ್ಲಿಸಮರೂಪಧಾರಣೆ ಇಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಉದಾ: ತಿನ್ನಿ (ತಿಂದೆ), ಬಾನ್ನಿ (ಬಂದೆ) ಮಲಕೊನ್ನಿ (ಮಲಗಿಕೊಂಡೆ), ತಾನ್ನಿ (ತಂದೆ) ಇತ್ಯಾದಿ.

ಕ್ರಿಯಾರೂಪಗಳಲ್ಲಿ ಇನ್ನೊಂದು ರೀತಿಯ ವೈಶಿಷ್ಟ್ಯವು ಇದೆ. ಉದಾ: ಬರತತಿ (ಮೈ. ಬರುತ್ತೆ), ಹೋಗತತಿ (ಮೈ. ಹೋಗತ್ತೆ), ತಿಂತತಿ (ಮೈ. ತಿನ್ನುತ್ತೆ) ಇತ್ಯಾದಿ.

ಧಾರವಾಡ ಕನ್ನಡಕ್ಕೆ ವಿಶಿಷ್ಟವೆನಿಸುವ ಕೆಲಪದಪ್ರಯೋಗಗಳಿವೆ. ಉದಾ ತಿನಸು (ಮೈ. ತಿಂಡಿ), ಗಿಡ (ಮೈ. ಮರ), ಆಯೆರೀ (ಮೈ. ಉಡುಗೊರೆ), ತೊಪ್ಪಲು (ಮೈ. ಸೊಪ್ಪು), ಚಲೂ (ಮೈ. ಚನ್ನಾಗಿ, ಚನ್ನಾದು, ಅಮ್ಮ (ಮೈ. ಅಜ್ಜಿ), ಸಿರಾ (ಮೈ. ಕೇಸರಿಭಾತ್), ತಿಂದು (ಮೈ. ತಿಂದ್ಕೂಂಡು), ಹಾಲು ಹಿಂಡು (ಮೈ. ಹಾಲುಕರಿ), ಚಲೂ ಐತಿ (ಮೈ. ಚನ್ನಾಗಿದೆ). ದಂಡಿ ಮುಟ್ಟಬೇಕು (ಮೈ. ದಡ ಸೇರಬೇಕು) ಇತ್ಯಾದಿ. ಇಲ್ಲಿಯ ಭೌಗೋಳಿಕ ಪರಿಸರ ಮತ್ತು ಐತಿಹಾಸಿಕ ಕಾರಣಗಳಿಂದ ಧಾರವಾಡ ಕನ್ನಡದ ಮೇಲೆ ಮರಾಠಿಯ ಪ್ರಭಾವ ಕಂಡುಬರುತ್ತದೆ. ಉದಾಹರಣೆಗೆ ಶಂಬರ್ (ನೂರು), ಸವ್ವಾಸೇರು (ಒಂದೂಕಾಲು ಸೇರು), ಪೋನೆ ಏಳು (6 ಮುಕ್ಕಾಲು), ಛತ್ತೀಸ್ (36, ಆಢ್ಯ ಮನುಷ್ಯ), ತಿರಸಟ್ಟಿ (63, ಎಡವಟ್ಟ ಮನುಷ್ಯ), ಟಕ್ಕೆ (ಪ್ರಮಾಣ), ಮಿಸಳ್ (ಒಂದು ತಿಂಡಿ), ಭಾಮಟ್ಯಾ (ಒಂದು ಬೈಗಳು), ಮುಂತಾದ ಪ್ರಯೋಗಗಳ ಬಹುಸಂಖ್ಯೆಯಲ್ಲಿ ಬಳಕೆಯಲ್ಲಿವೆ. ಮೈಸೂರು ಕನ್ನಡ ಗ್ರಂಥಸ್ಥ ಭಾಷೆಗೆ ಸಮೀಪವಾಗಿದ್ದರೆ ಧಾರವಾಡ ಕನ್ನಡ ಗ್ರಂಥಸ್ಥ ಭಾಷೆಗೆ ಬಲು ದೂರವಾಗಿದೆ. (ಜೆ.ಎಸ್.ಕೆ)

ಗುಲ್ಬರ್ಗ ಕನ್ನಡ:- ಕಲರ್ಬುಗಿ, ಬೀದರ, ರಾಯಚೂರು ಜಿಲ್ಲೆಗಳ ಕನ್ನಡವನ್ನು ಹೈದರಾಬಾದ್ ಕರ್ನಾಟಕ ಕನ್ನಡ ಎಂದೂ ಕರೆಯುವುದುಂಟು. ಈ ಉಪಭಾಷೆಯ ಮೇಲೆ ಮರಾಠಿ, ಉರ್ದು, ಸಂಸ್ಕೃತಗಳ ಪ್ರಭಾವ ತೀವ್ರತರವಾಗಿ ಆಗಿದೆ. ಮೊದಲಿಗೆ ಈ ಉಪಭಾಷೆಯನ್ನಾಡುವ ಪ್ರದೇಶ ಹೈದರಾಬಾದ್ ನಿಜಾಮರ ಆಳಿಕೆಗೆ ಒಳಗಾಗಿತ್ತಾದ ಕಾರಣ ಉರ್ದು ಈ ಭಾಷೆಯ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ಈ ಉಪಭಾಷೆಯಲ್ಲೂ ಉಳಿದ ಕನ್ನಡದ ಉಪ ಭಾಷೆಗಳಲ್ಲಿ ಕಂಡುಬರುವಂತೆ ಆ ಧ್ವನಿಮಾ ಆ್ಯ ಮತ್ತು ಆ ಎಂಬ ಎರಡು ಧ್ವನಿಮಾ ಆಗಿ ರೂಪ ತಾಳಿದೆ. ಚ ಮತ್ತು ಜ ಎಂಬ ಈಷತ್ ಸ್ಪರ್ಶ ವ್ಯಂಜನ ಧ್ವನಿಮಾಗಳು ಈ ಕನ್ನಡದಲ್ಲಿ ಕಂಡುಬರುತ್ತವೆ. ಇವುಗಳ ಜೊತೆಗೆ ಚ ಜ ಎಂಬ ತಾಲವ್ಯ ಸ್ಪರ್ಶವ್ಯಂಜನ ಧ್ವನಿಮಾಗಳೂ ಬಳಕೆಯಲ್ಲಿವೆ. ಎಷ್ಟೋ ವೇಳೆ ಉರ್ದುವಿನ ಪ್ರಭಾವದಿಂದ ಕನ್ನಡದ ಜ ವ್ಯಂಜನ ಧ್ವನಿಮಾಕ್ಕೆ ಬದಲು ಜ ಬಳಕೆಯಾಗುತ್ತದೆ ಉದಾ: ಬೀಜ > ಬೀಜ, ಶಿಷ್ಟ ಕನ್ನಡದ ವಕಾರಾಂತ ಶಬ್ದಗಳು ವ್ಯಂಜನಾಂತವಾಗಿವೆ. ಹೆಚ್ಚಿನ ಬದಲಾವಣೆ ವ್ಯಾಕರಣ ಪ್ರಕ್ರಿಯೆಗಳಿಗಿಂತ ಪದಕೋಶಕ್ಕೆ ಸೀಮಿತವಾಗಿದೆ. ಕೆಲಮೊಮ್ಮೆ ಊರುಗಳ ಹೆಸರುಗಳು ಗುರುತು ಸಿಗದಷ್ಟು ರೂಪಾಂತರ ಹೊಂದಿವೆ. ಗುಲ್ಬರ್ಗದ ಮೂಲ ಹೆಸರು ಕಲುಬುರುಗೆ ಎಂದಿದ್ದಿತಾದರೂ ಈಗಿನ ಹೆಸರಿನಲ್ಲಿ ಅದರ ಸುಳಿವು ಸಿಗುವುದಿಲ್ಲ. ಇಂಥ ಬದಲಾವಣೆಗಳು ಕೆಲಮೊಮ್ಮೆ ಸ್ವಾಭಾವಿಕವಾಗಿಯೇ ಆಗಿರದೆ ಆಡಳಿತಗಾರರ ಬಲಾತ್ಕಾರದ ಹೇರಿಕೆಯಿಂದಲೂ ಆಗಿರುವುದುಂಟು. ಬಿಜಾಪುರ ಕನ್ನಡವನ್ನು ಕೆಲಮೊಮ್ಮೆ ಗುಲ್ಬರ್ಗ ಕನ್ನಡದಲ್ಲೆ ಸೇರಿಸುವುದುಂಟು. ಈ ಎರಡೂ ಪ್ರಭೇದಗಳ ನಡುವೆ ಅಂತರ ಹೆಚ್ಚಾಗಿ ಕಂಡುಬರುವುದಿಲ್ಲ. ವ್ಯಾಕರಣಾಂಶಗಳಲ್ಲಿಯೂ ಬಿಜಾಪುರ ಕನ್ನಡ ಗುಲ್ಬರ್ಗ ಕನ್ನಡದೊಂದಿಗೆ ಸಾಮ್ಯ ಹೊಂದಿದೆ. ಈ ಎರಡು ಭಾಷಾರೂಪಗಳಲ್ಲಿ ಕೆಲಮೊಮ್ಮೆ ಆಕಾರಾಂತ ಸಂಬಂಧಸೂಚಕ ಸರ್ವನಾಮಗಳು ಯಕಾರಾದಿಯಾಗುತ್ತವೆ. ಉದಾ: ಅಪ್ಪ > ಯಪ್ಪ, ಅವ್ವ > ಯವ್ವ. ಈ ಭಾಷಾ ಪ್ರಭೇದಗಳಲ್ಲಿ ಅನ್ಯರನ್ನು ಕುರಿತು ಸಂಬೋದಿಸುವಾಗ ‘ರಿ’ ಎಂಬ ಪ್ರತ್ಯಯ ಹೆಚ್ಚಾಗಿ ಬಳಕೆಯಾಗುತ್ತದೆ. ವಿದ್ಯಾವಂತರ ಭಾಷೆಯಲ್ಲಿ ಮಾತ್ರ ಮಹಾಪ್ರಾಣಾಕ್ಷರಗಳು ಉಳಿದಿವೆ. ಅಲ್ಪಪ್ರಾಣವನ್ನೇ ಮಹಾಪ್ರಾಣವಾಗಿ ಉಚ್ಚರಿಸುವ ಪ್ರವೃತ್ತಿ ಅನ್ಯಭಾಷೆಯನ್ನಾಡುವವರಲ್ಲಿ ಕಂಡುಬರುತ್ತದೆ. ಅವಿದ್ಯಾವಂತರಲ್ಲಿ ಹಾಗೂ ಕೆಳವರ್ಗದವರಲ್ಲಿ ಹ ಕಾರ ಲೋಪವಾಗುತ್ತದೆ. ಉಕಾರಾಂತ ಪದಗಳ ವಿದ್ಯಾವಂತರ ನುಡಿಯಲ್ಲಿ ಅಕಾರಾಂತವಾಗುವುದುಂಟು (ಆಕಳು > ಆಕಳ). ಈ ಭಾಷೆಯಲ್ಲಿ ಬಳಕೆಯಾಗುವ ಬಹಳಷ್ಟು ಸಂಖ್ಯಾವಾಚಕಗಳು ಉರ್ದು ಇಲ್ಲವೇ ಮರಾಠಿ ಭಾಷೆಗಳಿಂದ ಎರವಲು ತಂದವಾಗಿವೆ. ತೀಸ್, ಅಡೀಚ್, ದೀಡು, ಶಂಭರ್ ಇತ್ಯಾದಿ. ತಿನ್ನದೆ, ಮಾಡದೆ ಎಂಬ ನಿಷೇಧಾರ್ಥಕ ರೂಪಗಳು ತಿನ್ಲಾರದೆ, ಮಾಡ್ಲಾರದೆ ಎಂಬ ರೂಪತಾಳಿ ಲಾರದೆ ಎಂಬ ಪ್ರತ್ಯಯಗಳನ್ನು ಹೊಂದುತ್ತವೆ. ರಾಯಚೂರು ಕನ್ನಡ ಕೂಡ ಗುಲ್ಬರ್ಗ ಕನ್ನಡವನ್ನೇ ಹೋಲುವುದಾದರೂ ಕೆಲವು ಸಾಮಾನ್ಯ ಬದಲಾವಣೆಗಳೂ ಕಂಡುಬರುತ್ತವೆ. ಈ ಪ್ರಭೇದದಲ್ಲಿ ಅವ, ಇವ, ಮಾವ, ಕಿವುಡ, ಕಿವಿ, ಸೋವಿ ಮುಂತಾದ ಪದಗಳಲ್ಲಿ ವಕಾರ ಅನುನಾಸಿಕವಾಗಿ ಉಚ್ಚಾರಗೊಳ್ಳುತ್ತದೆ.

ಉಪಭಾಷೆಗಳಲ್ಲಿ ಮೇಲೆ ಚರ್ಚಿಸಲಾದ ಪ್ರಾದೇಶಿಕ ಉಪಭಾಷೆಗಳ ಜೊತೆಗೆ ಆಯಾ ವಿಶಿಷ್ಟ ಸಮುದಾಯಕ್ಕೆ ಸೇರಿದ ಉಪಭಾಷೆಗಳೂ ಇವೆ. ಸೋಲಿಗ, ಬಡಗ, ಹವ್ಯಕ, ಕುರುಬ (ಕುರುಂಬ) ಇತ್ಯಾದಿ ಭಾಷೆಗಳು ಈ ಗುಂಪಿಗೆ ಸೇರುತ್ತವೆ. *

ಸೋಲಿಗ:- ಚಾಮರಾಜನಗರ ಜಿಲ್ಲೆ ಬಿಳಿಗಿರಿರಂಗನ ಬೆಟ್ಟ, ಮಹದೇಶ್ವರ ಬೆಟ್ಟ, ಮೈಸೂರು ಜಿಲ್ಲೆಯ, ಹೆಗ್ಗಡದೇವನಕೋಟೆ, ಕಾಕನಕೋಟೆ ಹಾಗೂ ಬೆಂಗಳೂರು, ಮಂಡ್ಯ, ತುಮಕೂರು ಜಿಲ್ಲೆಗಳ ಕೆಲವು ಭಾಗಗಳಲ್ಲಿ ವಾಸವಾಗಿರುವ ಸೋಲಿಗ (ಶೋಲಿಗ) ಎಂಬ ಆದಿವಾಸಿ ಜನಾಂಗದವರ ಆಡು ಭಾಷೆ.

ಸೋಲಿಗ ಭಾಷೆಯನ್ನು ಸಾಮಾನ್ಯವಾಗಿ ಸೋಲಿಗ ಕನ್ನಡ ಎಂದು ಕರೆಯುವುದು ರೂಡಿ. ಮೈಸೂರು ಜಿಲ್ಲೆಯ ಕೊಳ್ಳೇಗಾಲ, ಯಳಂದೂರು ಮತ್ತು ಚಾಮರಾಜನಗರದ ಸುತ್ತಮುತ್ತಲ ಪ್ರದೇಶದ ಕನ್ನಡ ಭಾಷೆಯಲ್ಲಿ. ಸೋಲಿಗಕನ್ನಡದಲ್ಲಿ ಕಂಡುಬರುವ ಕೆಲವು ವೈಶಿಷ್ಟಗಳನ್ನು ಕಾಣಬಹುದು. ಉದಾಹರಣೆಗೆ ಕರೆ > ಕರಿ, ಮರೆ > ಮರಿ, ಬರೆ > ಬರಿ, ತೆರೆ > ತೆರಿ, ಇತ್ಯಾದಿ. ಮಗು, ಮಕ್ಕಳು ಎಂಬ ಪದ ಈ ಸುತ್ತಮುತ್ತಲ ಪ್ರದೇಶಗಳಲ್ಲಿಯ ಕನ್ನಡದಲ್ಲಿ ಮಕ್ಕ, ಮಕ್ಕಗ ಎಂದು ಬಳಕೆಯಲ್ಲಿದೆ. ನಾಸಿಕತ್ವ ಈ ಭಾಷೆಯಲ್ಲಿ ಅರ್ಥವ್ಯತ್ಯಾಸವನ್ನುಂಟುಮಾಡುವ ಸಾಮಥರ್ಯ್‌ವನ್ನು ಪಡೆದಿದೆ. ಉದಾಹರಣೆಗೆ ಆವ > ಅವನು, ಬನ್ನೆ > ಬಂದೆ, ಮಾದ > ಮಾದ ಇತ್ಯಾದಿ. ಸೋಲಿಗರ ಕನ್ನಡಕ್ಕೂ ಹಾಗೂ ಶಿಷ್ಟ ಕನ್ನಡಕ್ಕೂ ಇರುವ ಕೆಲವು ವೈಶಿಷ್ಟ್ಯಗಳನ್ನು ಹೀಗೆ ಗುರುತಿಸಬಹುದು. ಸೋಲಿಗ ಕನ್ನಡದಲ್ಲಿ ಶಕಟರೇಫ ಸ್ವತಂತ್ರ ವರ್ಣವಾಗಿಯೂ ವಿ ಕಾರ ಒಂದು ಧ್ವನಿಪ್ರಭೇದವಾಗಿಯೂ ಬಳಕೆಯಲ್ಲಿವೆ.

ಉದಾಹರಣೆಗೆ: ಸೋ. ಕನ್ನಡ ಶಿ. ಕನ್ನಡ ಅರಬಂಡೆ ಅರೆಬಂಡೆ ಮುರಿ ಮುರಿ ಕೆರೆ ಕೆರೆ ಕೋಳಿ ಕೋಳಿ ಉಳು ಉಳು ಮಳೆ ಮಳೆ ಶಿಷ್ಟ ಕನ್ನಡದಲ್ಲಿ ನಪುಂಸಕಲಿಂಗಗಳಿಗೆ ಹತ್ತುವ ಬಹುವಚನ ಪ್ರತ್ಯಯ ಸೋಲಿಗ ಕನ್ನಡದಲ್ಲಿ ಗ ಆಗಿದೆ.

ಉದಾಹರಣೆಗೆ: ಸೋ. ಕನ್ನಡ ಶಿ. ಕನ್ನಡ ಮರಗ ಮರಗಳು ಆನೆಗ ಆನೆಗಳು ಕುರಿಗ ಕುರಿಗಳು ಎತ್ತುಗ ಎತ್ತುಗಳು

ಚತುರ್ಥಿವಿಭಕ್ತಿ ಪ್ರತ್ಯಯಗಳಲ್ಲೂ ಸೋಲಿಗ ಕನ್ನಡ ಶಿಷ್ಟ ಕನ್ನಡದಿಂದ ಬೇರೆಯಾಗಿದೆ.

ಉದಾಹರಣೆಗೆ : ಸೋ. ಕನ್ನಡ ಶಿ. ಕನ್ನಡ ಕಾಡಿಗ ಕಾಡಿಗೆ ಕರುವಿಗ ಕರುವಿಗೆ ನನಗ ನನಗೆ ಹುಲಿಕ ಹುಲಿಗೆ ಮನೆಕ ಮನೆಗೆ ಮರಕ ಮರಕ್ಕೆ ಅದಕ ಅದಕ್ಕೆ

ಭೂತಕಾಲ ಪ್ರತ್ಯಯವಾದ ನ್ ಕನ್ನಡದ ಬೇರೆ ಯಾವ ಉಪಭಾಷೆಗಳಲ್ಲೂ ಕಂಡುಬರುವುದಿಲ್ಲ, ಸೋಲಿಗ ಭಾಷೆಯಲ್ಲಿ ಕಂಡುಬರುತ್ತದೆ. ಈ ಭೂತಕಾಲ ಪ್ರತ್ಯಯ ಕೇವಲ ಉತ್ತಮಪುರುಷ ಏಕವಚನ ಬಹುವಚನಗಳಲ್ಲೂ ಹಾಗೂ ಪ್ರಥಮ ಪುರುಷ ಏಕವಚನದಲ್ಲೂ ಬರುತ್ತದೆ. ಸೋ. ಕನ್ನಡ ಶಿ. ಕನ್ನಡ ಹೋನೆ ಹೋದೆ ಹೋನೊ ಹೋದೆವು ಹೋನ ಹೋದ (ಹೋದನು) ಈಗ ಸೋಲಿಗರು ಕನ್ನಡದ ಇತರ ಉಪಭಾಷೆಗಳನ್ನಾಡುವ ಜನರ ಸಂಪರ್ಕವನ್ನು ಹೊಂದುತ್ತಿರುವುದರಿಂದ, ಕಾಲಕ್ರಮೇಣ ಇವರ ಕನ್ನಡದಲ್ಲಿಯ ವೈಶಿಷ್ಟ್ಯಗಳು ಮರೆಯಾಗಬಹುದು. ಆದ್ದರಿಂದ ಈ ಉಪಭಾಷೆಯಲ್ಲಿ ದೊರೆಯುವ ಜನಪದ ಸಾಹಿತ್ಯವನ್ನು ಆದಷ್ಟು ಬೇಗ ಸಂಗ್ರಹಿಸುವ ಅವಶ್ಯಕತೆ ಇದೆ. (ಕೆ.ಎಸ್.ಜಿ.)

ಬಡಗ ಭಾಷೆ: ಈ ಭಾಷೆಯನ್ನು ಇತ್ತೀಚೆಗೆ ಕೆಲವು ವಿದ್ವಾಂಸರು ಒಂದು ಸ್ವತಂತ್ರ ದ್ರಾವಿಡ ಭಾಷೆ ಎಂದು ಪರಿಗಣಿಸಿದ್ದಾರೆ. ತಮಿಳುನಾಡು, ಕರ್ನಾಟಕ ಮತ್ತು ಕೇರಳ ರಾಜ್ಯಗಳ ನಡುವೆ ಸಾಲಾಗಿ ಹಬ್ಬಿರುವ ಮಧುಮಲೈ ಮತ್ತು ನೀಲಗಿರಿಬೆಟ್ಟಗಳ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಸವಾಗಿರುವ ಸು.ಒಂದು ಲಕ್ಷಕ್ಕೂ ಹೆಚ್ಚು ಬಡಗರು ಈ ಭಾಷೆಯನ್ನಾಡುವರು. ಬಡಗ ಭಾಷೆಯಲ್ಲಿ ಹತ್ತು ಸ್ವರಧ್ವನಿಮಾಗಳು, 19 ವ್ಯಂಜನ ಧ್ವನಿಮಾಗಳು ಪ್ರಧಾನವಾಗಿ ಕಂಡುಬರುತ್ತವೆ. ಕನ್ನಡದಲ್ಲಿ ಪ ಕಾರ ಹ ಕಾರವಾಗಿ ಪರಿವರ್ತನೆಗೊಂಡಿರುವಂತೆ ಬಡಗದಲ್ಲಿ ಈ ಪರಿವರ್ತನೆ ಕಂಡುಬರುವುದಿಲ್ಲ. ಅನೇಕ ವ್ಯಾಕರಣಾಂಶಗಳಲ್ಲಿ ಬಡಗಭಾಷೆ ಕನ್ನಡ ಭಾಷೆಯನ್ನೇ ಹೆಚ್ಚು ಹೋಲುತ್ತದೆ. ಹಳಗನ್ನಡದ ಎಷ್ಟೋ ಧ್ವನಿಗಳೂ ಧ್ವನಿಮಾಗಳು, ಪದಗಳು ಮತ್ತು ವ್ಯಾಕರಣ ವೈಶಿಷ್ಟ್ಯಗಳು ಈ ಭಾಷೆಯಲ್ಲಿ ಕಂಡುಬರುತ್ತವೆ. ಬಡಗ ಭಾಷೆಯ ಮೇಲೆ ತಮಿಳು ಮತ್ತು ಮಲೆಯಾಳಂ ಭಾಷೆಗಳ ಪ್ರಭಾವ ತೀವ್ರತರವಾಗಿ ಕಂಡುಬಂದರೂ ಇದನ್ನು ತಮಿಳು ಭಾಷೆಯ ಅಥವಾ ಮಲೆಯಾಳಂ ಭಾಷೆಯ ಉಪಭಾಷೆ ಎಂದು ಹೇಳಲು ಬರುವುದಿಲ್ಲ.

ಭಾರತೀಯ ಭಾಷೆಗಳ ಸರ್ವೇಕ್ಷಣಾ ಕಾರ್ಯವನ್ನು ಕೈಗೊಂಡಿದ್ದ "ಜಾರ್ಜ್ ಗ್ರಿಯರ್ಸನ್ "ಬಡಗ ಭಾಷೆಯನ್ನು ಕನ್ನಡದ ಉಪಭಾಷೆ ಎಂದು ಪರಿಗಣಿಸಿ, ಈ ಕಾರಣದಿಂದಲೇ ಇದರ ಪ್ರಸ್ತಾಪವನ್ನು ಕನ್ನಡ ಭಾಷೆಯೊಂದಿಗೆ ಕೈಗೊಂಡಿದ್ದಾನೆ. ಹವ್ಯಕ:- ಹೆಚ್ಚಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ನೆಲಸಿರುವ ಹವ್ಯಕರ ಆಡುಭಾಷೆ. ಇದನ್ನು ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನ ಆಡುವವರಿದ್ದಾರೆ. ಇದು ಕನ್ನಡದ ಉಪಭಾಷೆಯಾಗಿದ್ದರೂ ಇದನ್ನಾಡುವ ಜನ ಹವ್ಯಕ ಕನ್ನಡ ಎಂಬ ಹೆಸರಿನಿಂದ ಕರೆಯುತ್ತಾರೆ. ಈ ಭಾಷೆಗೆ ತನ್ನದೇ ಆದ ಲಿಪಿ ಸೌಲಭ್ಯವಿಲ್ಲ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಶಿರಸಿ, ಸಿದ್ದಾಪುರ, ಯಲ್ಲಾಪುರ, ಕುಮಟ ಮುಂತಾದ ಕಡೆ ಆಡುವ ಹವ್ಯಕ ಭಾಷೆಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸುಳ್ಯ, ಪುತ್ತೂರು, ಮೂಡಬಿದರೆ, ಬಂಟ್ವಾಳ, ಮಂಗಳೂರು, ಉಡುಪಿ ಮುಂತಾದ ಕಡೆ ಆಡುವ ಭಾಷೆಗೂ ತುಂಬ ಅಂತರ ಕಂಡುಬರುತ್ತದೆ. ಈ ಅಂತರ ಅನುನಾಸಿಕತೆ, ತಾಲವ್ಯೀಕರಣ, ಓಷ್ಟ್ಯೀಕರಣ ಇತ್ಯಾದಿ ಧ್ವನಿಲಕ್ಷಣಗಳಲ್ಲಿ ಹೆಚ್ಚು. ಹಾಗೆಯೇ ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಯ ಬೇರೆ ಬೇರೆ ಕಡೆಗಳಲ್ಲಿ ಆಡುವ ಹವ್ಯಕ ಭಾಷೆಯಲ್ಲೂ ಈ ವ್ಯತ್ಯಾಸಗಳಿವೆ. ಇದಕ್ಕೆ ಕಾರಣ ಕೆಲವು ಕಡೆ ತುಳು ಮಲೆಯಾಳಂ ಭಾಷೆಗಳ, ಮತ್ತೆ ಕೆಲವು ಕಡೆ ಕನ್ನಡ ಕೊಡಗು ಮತ್ತು ಕೊಂಕಣಿ ಭಾಷೆಗಳ ಪ್ರಭಾವವೆನ್ನಬಹುದು. ಹವ್ಯಕ ಭಾಷೆಯಲ್ಲಿ ಸಂಸ್ಕೃತ ಪದಗಳು ಹೆಚ್ಚು. ಉಚ್ಚಾರದಲ್ಲಿ ಕೆಲವು ಸಂಸ್ಕೃತ ಪದಗಳು ವಿಕೃತಗೊಂಡಿವೆ; ಕೆಲವು ವ್ಯತ್ಯಾಸಗೊಂಡಿವೆ: ಮತ್ತೆ ಕೆಲವು ಹಾಗೆಯೇ ಉಳಿದುಕೊಂಡಿವೆ. ಈ ಭಾಷೆಯ ಧ್ವನಿಮಾ ಆಕೃತಿಮಾ ವಾಕ್ಯರಚನಾ ವ್ಯವಸ್ಥೆಗಳನ್ನು ಗಮನಿಸಿದಾಗ ಪುರ್ವದ ಹಳಗನ್ನಡ, ಹಳಗನ್ನಡ, ನಡುಗನ್ನಡ, ಹೊಸಗನ್ನಡ ಅಂಶಗಳು ಕಂಡುಬರುತ್ತವೆ. ಅದರಲ್ಲೂ ಪೂರ್ವದ ಹಳಗನ್ನಡ ರೂಪಗಳು ಹೇರಳವಾಗಿ ಕಂಡುಬರುತ್ತವೆ. ವ್ಯಾಕರಣಾಂಶಗಳಲ್ಲಿ ಈ ಭಾಷೆ ನಡುಗನ್ನಡವನ್ನೇ ಹೆಚ್ಚು ಹೋಲುತ್ತದೆ. ಅಬಿsವ್ಯಾಪಕ, ವ್ಯಾವರ್ತಕ, ಪ್ರಥಮಪುರುಷ ಬಹುವಚನಗಳಲ್ಲಿನ ವ್ಯತ್ಯಾಸ ಹಳಗನ್ನಡ, ನಡುಗನ್ನಡಗಳಲ್ಲಿರುವಂತೆಯೇ ಇದೆ.

ಕುರುಬ: -(ಕುರುಂಬ): ಕೇರಳದ ವೈನಾಡು (ಮಲಬಾರು), ತಮಿಳು ನಾಡಿನ ನೀಲಗಿರಿ, ಕರ್ನಾಟಕದ ಮೈಸೂರು ಮತ್ತು ಕೊಡಗು ಜಿಲ್ಲೆಗಳ ಬೆಟ್ಟಗುಡ್ಡಗಳಲ್ಲಿ ವಾಸಿಸುವ ಕುರುಬ ಎಂಬ ಆದಿವಾಸಿ ಜನಾಂಗದವರು ಈ ಭಾಷೆಯನ್ನಾಡುತ್ತಾರೆ. ಕುರುಬರಲ್ಲಿ ಪ್ರಮುಖವಾಗಿ ಊರುಕುರುಬ,ಕಾಡುಕುರುಬ ಎಂಬ ಎರಡು ಪಂಗಡಗಳಿವೆ. ಈ ಪಂಗಡಗಳಲ್ಲಿಯೂ ಹಲವಾರು ಒಳಪಂಗಡಗಳಿವೆ. ಇವರು ಆಡುವ ಭಾಷೆಯನ್ನು ಕುರುಬಕನ್ನಡ ಎಂದು ಕರೆಯುತ್ತಾರೆ. ಕನ್ನಡ ಭಾಷೆಯಲ್ಲಿ ಕಂಡುಬರುವ ಕೆಲವು ಸ್ವರ ಮತ್ತು ವ್ಯಂಜನ ಧ್ವನಿಮಾಗಳು ಈ ಭಾಷೆಯಲ್ಲೂ ಕಂಡುಬರುತ್ತವೆ. ಕಾಡುಕುರುಬರ ಭಾಷೆಯಲ್ಲಿ ಹಳಗನ್ನಡದ ಭಾಷಾಂಶಗಳು ಹೆಚ್ಚು. ಈ ಭಾಷೆಯ ಮೇಲೆ ತಮಿಳು ಮತ್ತು ಮಲೆಯಾಳಂ ಭಾಷೆಗಳು ಪ್ರಭಾವ ಬೀರಿದ್ದು ಕೆಲವರು ಭಾಷಾತಜ್ಞರು ಕುರುಬ ಭಾಷೆಯನ್ನು ಕನ್ನಡದ ಉಪಭಾಷೆ ಎಂದೂ ಮತ್ತೆ ಕೆಲವರು ತಮಿಳಿನ ಉಪಭಾಷೆ ಎಂದೂ ಅನುಮಾನಿಸಿದ್ದಾರೆ. (ಕೆ.ಕೆ.ಜಿ.)