ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕರೀಂಖಾನ್, ಎಸ್ ಕೆ

ವಿಕಿಸೋರ್ಸ್ದಿಂದ

ಕರೀಂಖಾನ, ಎಸ್.ಕೆ. : 1908-2006. ಹಿರಿಯ ತಲೆಮಾರಿನ ಜಾನಪದ ವಿದ್ವಾಂಸ, ಗೀತರಚನಕಾರ. ಹುಟ್ಟಿದ್ದು ಬೆಳೆದದ್ದು ಹಾಸನಜಿಲ್ಲೆಯ ಸಕಲೇಶಪುರದಲ್ಲಿ. ತಾಯಿ ಜೈನಬ್ಬಿ ಅರಬ್ ಮೂಲದವರು. ತಂದೆ ಅಬ್ದುಲ್ ರಹಮಾನ್ ಖಾನ್, ಆಫ್ಘ್‌ನ್ ಯೋಧ. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ಇವರು ಅಣ್ಣನ ಆಶ್ರಯದಲ್ಲಿ ಬೆಳೆದರು. ಹಾಸನದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಪಡೆದರು. ಆಚಂಗಿ ನಾರಾಯಣಶಾಸ್ತ್ರಿ ಇವರ ಗುರುಗಳು.

ಉರ್ದು ಮನೆಮಾತಾಗಿದ್ದರೂ ಕರೀಂಖಾನರು ವಿಶೇಷವಾಗಿ ಕನ್ನಡ ಮತ್ತು ಸಂಸ್ಕೃತವನ್ನು ಅಧ್ಯಯನ ಮಾಡಿದರು. ಇವರು ಹೆಚ್ಚು ವಿದ್ಯಾಭ್ಯಾಸ ಮಾಡದಿದ್ದರೂ ಇತಿಹಾಸ, ಜಾನಪದ, ಪುರಾಣ, ಮಹಾಕಾವ್ಯಗಳ ಬಗ್ಗೆ ಅಪಾರವಾದ ಪಾಂಡಿತ್ಯ ಗಳಿಸಿದವರಾಗಿದ್ದಾರೆ. ಚಾರಿತ್ರಿಕ ಸಂಗತಿಗಳನ್ನು ಕುರಿತಂತೆ ನಿಂತಲ್ಲಿಯೇ ಮಾಹಿತಿ ನೀಡುವ ಪ್ರತಿಭಾವಂತರು. ಮೂಲತಃ ಇಸ್ಲಾಂ ಧರ್ಮದವರಾದರೂ ಭಗವದ್ಗೀತೆ, ಭಾಗವತ, ಶಿವಪುರಾಣ, ವಿಷ್ಣು ಪುರಾಣಗಳನ್ನು ಬಲ್ಲವರಾಗಿದ್ದಾರೆ. ತೆಲುಗಿನ ಪೋತನನ ಭಾಗವತವನ್ನು ನಾಟಕರೂಪಕ್ಕೆ ತರುವ ಪ್ರಯತ್ನ ದಲ್ಲೂ ಇವರು ತೊಡಗಿದ್ದರು. ಉರ್ದು ಸಾಹಿತ್ಯದ ಘಾಲಿಬ್, ಇಕ್ಬಾಲ್ರಂತಹ ಕವಿಗಳ ಪ್ರಭಾವಕ್ಕೂ ಒಳಗಾಗಿದ್ದ ಇವರು ಹಿಂದು ಮುಸ್ಲಿಂ ಏಕತೆಗೆ ಸಾಕಷ್ಟು ಕಥೆಗಳನ್ನು ರಚಿಸಿದ್ದುಂಟು. ನಿವಾರ (ಉರ್ದುವಿನಿಂದ ಅನುವಾದಿತ ಕಥೆಗಳು), ನೀಹಾರ (ಚಾರಿತ್ರಿಕ ಕಥಾಸಂಕಲನ) ಬಲಿದಾನಿ ಹುಸೇನ್ ಎಂಬುದು ಚಾರಿತ್ರಿಕ ಕಾದಂಬರಿ, ಮಾತೃಶಾಪ ಪೌರಾಣಿಕ ಕಾದಂಬರಿ. ಇವಲ್ಲದೆ ಇವರು ನಿರ್ದೋಷಿ, ಶ್ರೀ ಕೃಷ್ಣಲೀಲೆ, ಹುಮಾಯುನ್, ಅಂಬರನಾಥ, ಮಹಾಪ್ರಭು ಮಾಗಡಿ ಕೆಂಪೇಗೌಡ ಮೊದಲಾದ ಐತಿಹಾಸಿಕ ಹಾಗೂ ಪೌರಾಣಿಕ ನಾಟಕಗಳನ್ನು ರಚಿಸಿದ್ದಾರೆ. ಪ್ರೌಢಶಾಲಾ ವ್ಯಾಸಂಗದ ಸಮಯದಲ್ಲಿಯೇ ಇವರು ಜಾನಪದದತ್ತ ಆಕರ್ಷಿತರಾದರು. ಹಳ್ಳಿಯ ಸಂಸ್ಕೃತಿ ಮತ್ತು ಸಾಹಿತ್ಯ ಇವರನ್ನು ಕೈ ಬೀಸಿ ಕರೆದುದರಿಂದ ಅವನ್ನು ಸಂಗ್ರಹಿಸುತ್ತಾ ಹಾಡುತ್ತಾ, ಹಳ್ಳಿ ಹಳ್ಳಿ ಸುತ್ತಿದರು. ಜೀವನ ಕಷ್ಟಕರವಾದಾಗ ಜನಪದ ಗೀತೆಗಳನ್ನು ಸಂಗ್ರಹಿಸಿ, ಪ್ರಕಟಿಸಿ ಮಾರಾಟ ಮಾಡಿದರು. ರಂಗಭೂಮಿಯತ್ತಲೂ ಆಕರ್ಷಿತರಾಗಿ ಕಥೆ, ಸಂಭಾಷಣೆ, ಹಾಡು ಬರೆಯತೊಡಗಿದರು. ರಾಯಲ್ ಇಂಡಿಂiÀiನ್ ನೇವಿ ಸಂಸ್ಥೆಯಲ್ಲಿ ಕೆಲಸ ಮಾಡಲು ಮುಂಬೈಗೂ ಹೋಗಿ ಬಂದರು. ಸೇವಾದಳದ ಬೆಳೆವಣಿಗೆಯಲ್ಲೂ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡರು. ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿ ಗಳಾಗಿದ್ದಾಗ ಭಾರತೀಯ ಸೇವಾದಳದ ಸಂಘಟಕರಾಗಿ ಇವರು ಪ್ರವಾಸ ಕೈಗೊಂಡರು.

ಭಾರತ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕರೀಂಖಾನರಂಥ ಕಂಚಿನ ಕಂಠದ ಗಾಯಕರೊಬ್ಬರು ಹೋರಾಟಗಾರರಿಗೆ ಬೇಕಾಗಿದ್ದರು. ತಮ್ಮ ಅದ್ಭುತ ಕಂಠದಿಂದ ಹಾಡುತ್ತಾ ನಿರರ್ಗಳವಾಗಿ ಹರಿಯುವ ತಮ್ಮ ವಾಗ್ಝರಿಯಿಂದ ಜನರನ್ನು ಹುರಿದುಂಬಿಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ ದುಮುಕಿದ್ದರಿಂದಾಗಿ ಸತತ ಏಳು ಸಲ ಜೈಲುವಾಸ ಅನುಭವಿಸಿದರು. ಸ್ವಾತಂತ್ರ್ಯಾನಂತರ ಇವರು ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಆಗಲೂ ಸೆರೆವಾಸ ಅನುಭವಿಸಿದರು. ಗಾಂದಿsೕಜಿಯವರು ವಿಶ್ರಾಂತಿಗೆಂದು ನಂದಿಬೆಟ್ಟಕ್ಕೆ ಬಂದಾಗ ಅವರನ್ನು ಭೇಟಿಯಾಗಿದ್ದರು.

ಏಕಾಂಗಿಯಾಗಿಯೂ ಸ್ವಾಬಿsಮಾನಿಯಾಗಿದ್ದ ಕರೀಂಖಾನ್ ಮದರಾಸಿನ ಸಿನಿಮಾ ಜಗತ್ತಿನಲ್ಲಿ ಅದೃಷ್ಟವನ್ನು ಅರಸಿ ತೆರಳಿದರು. ಪ್ರಸಾದ್ ಮೂವೀಸ್ನ ಆರ್. ನಾಯ್ಡು ಅವರು ಕರೀಂಖಾನರನ್ನು ಮದರಾಸಿಗೆÀ ಬರಮಾಡಿಕೊಂಡರು. ಅಲ್ಲಿ ಸು. 10 ವರ್ಷಗಳ ಕಾಲ ಇದ್ದು ಹಲವಾರು ಚಿತ್ರಗಳಿಗೆ ಕಥೆ, ಸಂಭಾಷಣೆ, ಹಾಡುಗಳನ್ನು ಬರೆದರು. 300ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿದರು. ಸ್ವರ್ಣಗೌರಿ, ಜೀವನ ತರಂಗ, ಬೇವು ಬೆಲ್ಲ, ಚಂದ್ರಕುಮಾರ, ದೇವಮಾನವ, ದೊಂಬರಕೃಷ್ಣ, ರಾಜೇಶ್ವರಿ, ಪತಿತಪಾವನಿ, ಸೂಪರ್ ನೋವ 445 ಮುಂತಾದ ಹದಿನೈದು ಚಿತ್ರಗಳಿಗೆ ಇವರು ಸಾಹಿತ್ಯ ನೀಡಿದ್ದಾರೆ. ಸ್ವರ್ಣಗೌರಿ ಚಿತ್ರಕ್ಕೆ ಬರೆದ ಹಾಡುಗಳಿಂದಾಗಿ ಇವರ ಜನಪ್ರಿಯತೆ ಹೆಚ್ಚಿತು. ರಂಭಾಪುರಿ, ಕೂಡ್ಲಿ, ಶೃಂಗೇರಿ, ಉಡುಪಿ, ಧರ್ಮಸ್ಥಳ, ಆದಮಾರು ಸ್ವಾಮಿಗಳನ್ನು ಕುರಿತಂತೆ ಸ್ವಾಗತ ಗೀತೆಗಳನ್ನು ಇವರು ರಚಿಸಿದ್ದಾರೆ. ಮಂದಾರ ಧರ್ಮಸ್ಥಳ (ಧರ್ಮಸ್ಥಳ ಮಂಜುನಾಥನ ಬಗ್ಗೆ) ಎಂಬ ಧ್ವನಿ ಸುರಳಿಯನ್ನು ಬಿಡುಗಡೆ ಮಾಡಿದ್ದಾರೆ. ನಾಡುನುಡಿಗಳ ಬಗ್ಗೆಯೂ ಹಾಡು ರಚಿಸಿದ್ದಾರೆ. ನಟವರ ಗಾಂಗಾಧರ ಉಮಾಶಂಕರದಂಥ ಭಕ್ತಿಪ್ರಧಾನ ಗೀತೆಗಳಿಂದ ಹಿಡಿದು ಬಾರೇ ನೀ ಚೆಲುವೆಯಂಥ ಶೃಂಗಾರ ರಸದ ಹಾಡುಗಳವರೆಗೆ ಮಧುರ ಮತ್ತು ಜನಪ್ರಿಯ ಗೀತೆಗಳನ್ನು ರಚಿಸಿದರು.

ಇವರ ಸೇವೆಯನ್ನು ಗುರುತಿಸಿ ಇವರನ್ನು ಕರ್ನಾಟಕ ಸರ್ಕಾರ ಕರ್ನಾಟಕ ರಾಜ್ಯ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರನ್ನಾಗಿ ನೇಮಿಸಿತು. ಆಗ ಹಲವರು ಸರ್ಕಾರದ ಕ್ರಮವನ್ನು ಟೀಕಿಸಿದಾಗ ಮನನೊಂದ ಕರೀಂಖಾನ್ ನೇಮಕಾದೇಶ ಕೈ ಸೇರುವ ಮೊದಲೇ ರಾಜೀನಾಮೆ ಪ್ರಕಟಿಸಿಬಿಟ್ಟರು (1990). ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಇವರದು ಅಪರೂಪದ ವ್ಯಕ್ತಿತ್ವ. ಅನಂತರ ಸರ್ಕಾರ ಇವರ ಮನ ಒಲಿಸಿ ಅದಿsಕಾರ ಸ್ವೀಕರಿಸುವಂತೆ ಮಾಡಿತು. ಜಾನಪದ ಕ್ಷೇತ್ರದ ಬೆಳೆವಣಿಗೆಗೆ ಇವರು ಅಪಾರವಾಗಿ ದುಡಿದರು. ಗಿರಿಜನ ಮತ್ತು ಬುಡಕಟ್ಟು ಜನಾಂಗದ ಸಮಗ್ರ ವೀಡಿಯೋ ಚಿತ್ರೀಕರಣ ಕಾರ್ಯವನ್ನು ಕೈಗೆತ್ತಿಕೊಂಡರು. ಇದರಿಂದ ಕಣ್ಮರೆಯಾಗುವಂತಿದ್ದ ಸಂಸ್ಕೃತಿಯೊಂದು ಉಳಿಯುವಂತಾಯಿತು. ಚಲನಚಿತ್ರರಂಗದ ನಿಕಟ ಪರಿಚಯವಿದ್ದುದರಿಂದ ಮತ್ತು ಸ್ವತಃ ಜನಪದ ಗಾಯಕರಾಗಿದ್ದುದರಿಂದ ತಮ್ಮ ಅಧ್ಯP್ಷÁವದಿsಯಲ್ಲಿ ಪ್ರದರ್ಶನ ಕಲೆಗಳ ವಿಷಯದಲ್ಲಿ ವಿಶೇಷ ಗಮನ ಹರಿಸಿದರು. ನಾಡಿನಾದ್ಯಂತ ಜನಪದ ಕಲಾ ಪ್ರದರ್ಶನಗಳನ್ನೇರ್ಪಡಿಸಿ ಕಲಾವಿದರಲ್ಲಿ ಆತ್ಮವಿಶ್ವಾಸ ಮೂಡಿಸಿದರು. ಶಿವಮೊಗ್ಗ ಜಿಲ್ಲೆಯ ಮೇಘಾನೆ ಎಂಬ ಬೆಟ್ಟದ ತುದಿಯಲ್ಲಿ ವಾಸಿಸುತ್ತಿರುವ ಕುಣುಬಿಗೊಂಡ ಎಂಬ ಬುಡಕಟ್ಟು ಜನಾಂಗದ ಅಧ್ಯಯನ ಮಾಡಲು ಕಾಲ್ನಡಿಗೆಯ ಕಾರ್ಯಕ್ರಮ ಹಮ್ಮಿಕೊಂಡರು. ಹಸಲರು, ಹಾಲಕ್ಕಿಗಳು, ಸಿದ್ಧಿಗಳು, ಎರವರು, ಕಾಡುಕುರುಬರು, ಸೋಲಿಗರು ಮುಂತಾದ ಬುಡಕಟ್ಟು ಜನಾಂಗಗಳ ಸಮಗ್ರ ಜೀವನ ಕಲೆಯ ವೈವಿಧ್ಯಗಳನ್ನು ಇವರ ಕಾಲದಲ್ಲಿ ವೀಡಿಯೋ ಟೇಪ್ಗಳಲ್ಲಿ ಸೆರೆ ಹಿಡಿಯಲಾಯಿತು. ಸಾಂಸ್ಕೃತಿಕವಾಗಿ ಮಹತ್ತ್ವ ಹೊಂದಿದ ಹಿರಿಯಡ್ಕದ ಸಿರಿ ಜಾತ್ರೆ, ಮಾಸ್ಯಾಳದ ಚೌಡೇಶ್ವರಿ ಜಾತ್ರೆ, ಮೈಲಾರಲಿಂಗದ ಜಾತ್ರೆಗಳನ್ನು ಚಿತ್ರೀಕರಣ ಗೊಳಿಸಲಾಯಿತು. ಕಲಾವಿದರನ್ನು ಪೋಷಿಸುವ ಸಲುವಾಗಿ ಕರೀಂಖಾನರು ವಿಶೇಷ ಗಿರಿಜನರ ಪ್ರಶಸ್ತಿಯನ್ನು ರೂಪಿಸಿದರು.

ಬೆಂಗಳೂರಿನ ಬಸವನಗುಡಿಯ ಚಿಕ್ಕ ಹೋಟೆಲೊಂದರ ಸಣ್ಣ ಕೋಣೆಯಲ್ಲಿದ್ದ ಇವರು ಈಗ ಬಂಧುಗಳ ಮನೆಯಲ್ಲಿದ್ದು ಸಂತರಂತೆ ಜೀವನ ಸಾಗಿಸುತ್ತಿದ್ದಾರೆ. ಇವರು ಸಾಹಿತ್ಯ, ಸಂಸ್ಕೃತಿ, ಜಾನಪದ ಮತ್ತು ಚಲನಚಿತ್ರ ರಂಗಕ್ಕೆ ಕೊಟ್ಟಕೊಡುಗೆ ಅಪಾರ. ಜನಪದ ಗೀತೆಗಳನ್ನು ಸಂಗ್ರಹಿಸಿ ಒಂಬತ್ತು ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ. ಜನಪದಗೀತೆ ಅನುಭವ ದರ್ಶನ ಇವರ ಇನ್ನೊಂದು ಕೃತಿ. ಇವರು ಸಲ್ಲಿಸಿದ ಸೇವೆಯನ್ನು ಗಮನಿಸಿ ಕರ್ನಾಟಕ ಸರ್ಕಾರ ಜಾನಪದಶ್ರೀ (1995) ಪ್ರಶಸ್ತಿಯನ್ನೂ ಕನ್ನಡ ವಿಶ್ವವಿದ್ಯಾಲಯ ನಾಡೋಜ (1997) ಪ್ರಶಸ್ತಿಯನ್ನೂ ಗುಲ್ಬರ್ಗಾ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟನ್ನೂ ನೀಡಿ ಗೌರವಿಸಿವೆ. ಹುಬ್ಬಳ್ಳಿಯ ಮೂರುಸಾವಿರ ಜಂಗಮ ಮಠದ ಜಾನಪದ ಜಂಗಮ ಪ್ರಶಸ್ತಿ, ಮಂಡ್ಯದ ಜೀಶಂಪ ಪ್ರಶಸ್ತಿ (1995), ಹಂಸಜ್ಯೋತಿ ಸಂಸ್ಥೆಯ ಹಂಸರತ್ನ (1998) ಪ್ರಶಸ್ತಿ -ಇವು ಇವರಿಗೆ ದೊರೆತ ಇನ್ನಿತರ ಪ್ರಶಸ್ತಿಗಳು. (ಜಿ.ಆರ್.ಟಿ.)