ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕರ್ಣಾಟಕದ ಶಾಸನಗಳು

ವಿಕಿಸೋರ್ಸ್ದಿಂದ

ಕರ್ಣಾಟಕದ ಶಾಸನಗಳು:-

                                                                ಬಹುಶಃ ತಮಿಳುನಾಡನ್ನು ಬಿಟ್ಟರೆ ಕರ್ನಾಟಕದಲ್ಲಿ ದೊರೆಯುವಷ್ಟು ಶಾಸನಗಳು ಭಾರತದ ಯಾವ ಪ್ರಾಂತದಲ್ಲಿಯೂ ಇಲ್ಲ. ಸು. 20,000ಕ್ಕೂ ಹೆಚ್ಚು ಶಾಸನಗಳು ಕರ್ಣಾಟಕದಲ್ಲಿ ಈ ವರೆಗೆ ದೊರಕಿವೆ. ಅವುಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಶಾಸನಗಳು ಅಚ್ಚಾಗಿವೆ. ಕರ್ಣಾಟಕದಲ್ಲಿ ದೊರೆಯುವ ಅತ್ಯಂತ ಪ್ರಾಚೀನವಾದ ಶಾಸನಗಳೆಂದರೆ ಮೌರ್ಯ ವಂಶದ ಅಶೋಕ ಚಕ್ರವರ್ತಿಯ (ಕ್ರಿ.ಪೂ. 272-232) ಧರ್ಮಲಿಪಿಗಳು. ಭಾರತದ ಇತರೆಡೆಗಳಲ್ಲೂ ಈ ವರೆಗೆ ದೊರಕಿರುವ ಅತ್ಯಂತ ಪ್ರಾಚೀನ ಬರಹಗಳೆಂದರೆ ಈತನ ಧರ್ಮಶಾಸನಗಳೇ. ಇದಕ್ಕೂ ಪೂರ್ವದ ಹರಪ್ಪಾ ಸಂಸ್ಕøತಿಯ ಮುದ್ರೆಗಳ ಮೇಲಿರುವ ಚಿತ್ರಲಿಪಿಯನ್ನು ಇನ್ನೂ ಸಮರ್ಪಕವಾಗಿ ಓದಿ ಗುರುತಿಸಿಲ್ಲ. ಇಡೀ ಭಾರತದಲ್ಲಿ ಇದುವರೆಗೆ ದೊರೆತ ಅಶೋಕನ ಒಟ್ಟು 13 ಲಘು ಶಿಲಾಲೇಖಗಳಲ್ಲಿ (ಮೈನರ್ ರಾಕ್ ಈಡಿಕ್ಟ್ಸ್) 6 ಶಾಸನಗಳು ಕರ್ಣಾಟಕದಲ್ಲಿಯ ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ, ಸಿದ್ಧಾಪುರ ಮತ್ತು ಜಟಿಂಗರಾಮೇಶ್ವರಗಳಲ್ಲಿಯೂ ರಾಯಚೂರು ಜಿಲ್ಲೆಯ ಮಾಸ್ಕಿ, ಗವಿಮಠ ಮತ್ತು ಪಾಲ್ಕಿಗುಂಡು ಎಂಬಲ್ಲಿಯೂ ದೊರೆತಿವೆ. ಇವು ಮೌರ್ಯಕಾಲದ ಬ್ರಾಹ್ಮೀ ಲಿಪಿಯಲ್ಲಿ ಪ್ರಾಕೃತ ಭಾಷೆಯಲ್ಲಿವೆ. ಬ್ರಹ್ಮಗಿರಿ ಗುಂಪಿನ ಮೂರು ಶಾಸನಗಳ ಕೊನೆಯ ವಾಕ್ಯವಾದ ಚಪಡೇನ ಲಿಖಿತೇ ಲಿಪಿಕರೇಣ ಎಂಬಲ್ಲಿ ಮೊದಲಿನ ಎರಡು ಶಬ್ದಗಳನ್ನು ಬ್ರಾಹ್ಮೀ ಲಿಪಿಯಲ್ಲಿ ಮತ್ತು ಲಿಪಿಕರೇಣ ಎಂಬ ಶಬ್ದವನ್ನು ಖರೋಷ್ಠೀ ಲಿಪಿಯಲ್ಲಿ ಬರೆಯಲಾಗಿದೆ. ಕರ್ಣಾಟಕ ಶಾಸನಗಳ ಮೊದಲ ಲಿಪಿಕಾರ ಚಪಡ ತನಗೆ ಖರೋಷ್ಠೀಲಿಪಿಯ ಜ್ಞಾನ ಇದ್ದಿತೆಂದು ತಿಳಿಸುವುದಕ್ಕಾಗಿ ಆ ಶಬ್ದವನ್ನು ಖರೋಷ್ಠೀಯಲ್ಲಿ ಬರೆದಿರಬಹುದು. ಅಶೋಕನ ಶಾಸನಗಳಲ್ಲಿ ಉಪಯೋಗಿಸಿದ ಬ್ರಾಹ್ಮೀ ಲಿಪಿಯಿಂದಲೇ ಉತ್ತರ ಹಾಗೂ ದಕ್ಷಿಣ ಭಾರತದ ಎಲ್ಲ ಪ್ರಚಲಿತ ಲಿಪಿಗಳು ಉದ್ಭವಿಸಿರುತ್ತವೆ. ಕರ್ಣಾಟಕದಲ್ಲಿ ದೊರೆತ ಅಶೋಕಚಕ್ರ ವರ್ತಿಯ ಶಾಸನಗಳಿಂದ ಈ ಭಾಗ ಆತನ ರಾಜ್ಯಕ್ಕೆ ಒಳಪಟ್ಟಿತ್ತೆಂದು ಗೊತ್ತಾಗುತ್ತದೆ. ಈ ಭಾಗಕ್ಕೆ ಇಸಿಲ ಎಂಬ ಹೆಸರಿದ್ದು, ಇದು ಸುವರ್ಣಗಿರಿ ಪ್ರಾಂತ್ಯಕ್ಕೆ ಸೇರಿತ್ತೆಂಬುದು ಚಿತ್ರದುರ್ಗ ಜಿಲ್ಲೆಯಲ್ಲಿ ದೊರೆತ ಆತನ ಶಾಸನಗಳಿಂದ ತಿಳಿಯುತ್ತದೆ. ರಾಯಚೂರು ಜಿಲ್ಲೆಯ ಮಾಸ್ಕಿ ಶಾಸನದಲ್ಲಿ ಅಶೋಕನ ಹೆಸರನ್ನೇ ಉಲ್ಲೇಖಿಸಿದ್ದುದರಿಂದ ಉಳಿದ ಶಾಸನಗಳಲ್ಲಿ ಉಕ್ತವಾದ ದೇವಾನಾಂ ಪ್ರಿಯ ಪ್ರಿಯದರ್ಶಿ ರಾಜಾ ಅಥವಾ ದೇವಾನಾಂಪ್ರಿಯ ರಾಜಾ ಎಂಬ ಹೆಸರು ಅಶೋಕನಿಗೆ ಅನ್ವಯಿಸುತ್ತದೆಂಬ ವಿಷಯ ಖಚಿತವಾಯಿತು.

ಮೌರ್ಯರ ತರುವಾಯ ಕರ್ಣಾಟಕದಲ್ಲಿ ರಾಜ್ಯವಾಳಿದ ಸಾತವಾಹನರ ಶಾಸನಗಳು ಈಗಿನ ಮೈಸೂರು ರಾಜ್ಯದಲ್ಲಿ ದೊರೆತಿಲ್ಲವಾದರೂ ಮೊದಲು ಬಳ್ಳಾರಿ ಜಿಲ್ಲೆಗೆ ಸೇರಿದ ಹಾಗೂ ಈಗ ಕರ್ನೂಲು ಜಿಲ್ಲೆಯಲ್ಲಿ ಸಮಾವೇಶಗೊಂಡಿರುವ ಆದವಾನಿ ತಾಲ್ಲೂಕಿನ ಮ್ಯಾಕದೋನಿ ಎಂಬಲ್ಲಿ ಆ ವಂಶದ ಸಿರಿಪುಳುಮಾವಿಯ ಶಾಸನವೊಂದಿದೆ. ಈತ 2ನೆಯ ವಾಸಿಠೀಪುತ ಪುಳುಮಾವಿ (130-59) ಎಂದು ವಿದ್ವಾಂಸರ ಅಭಿಪ್ರಾಯ. ಸಾತವಾಹನರ ಸಾಮಂತರಾದ ಚುಟುಕುಲ ಸಾತಕಣ್ಣಿಗಳು ಬನವಾಸಿ ಪ್ರಾಂತದಲ್ಲಿ 3ನೆಯ ಶತಮಾನದಲ್ಲಿ ಆಳುತ್ತಿದ್ದು, ಆ ವಂಶದ ಅರಸು ಹಾರಿತೀಪುತ ವಿಣ್ಹುಕಡ ಚುಟುಕುಲಾನಂದ ಸಾತಕಣ್ಣಿ ಎಂಬಾತನ ಎರಡು ಶಾಸನಗಳು ಬನವಾಸಿ ಮತ್ತು ಮಳವಳ್ಳಿಗಳಲ್ಲಿ ದೊರೆತಿವೆ. ಇತ್ತೀಚೆಗೆ ಗುಲ್ಬರ್ಗ ಜಿಲ್ಲೆಯ ಸನ್ನತಿ ಎಂಬಲ್ಲಿ ಸು. 3ನೆಯ ಶತಮಾನದ ಲಿಪಿಯಲ್ಲಿ ಬರೆದ ಮತ್ತು ನಾಗಾರ್ಜುನಕೊಂಡದ ಇಕ್ಷ್ವಾಕು ಅರಸರ ಶಾಸನಗಳ ಲಿಪಿಯನ್ನು ಹೋಲುವ 30ರಷ್ಟು ಚಿಕ್ಕಪುಟ್ಟ ಶಾಸನಗಳು ದೊರೆತಿವೆ. ಅವುಗಳಿಂದ ಮತ್ತು ಅಲ್ಲಿ ದೊರೆತ ಬೇರೆ ಅವಶೇಷಗಳಿಂದ ಆ ಸ್ಥಳ 3ನೆಯ ಶತಮಾನದಲ್ಲಿ ಬೌದ್ಧರ ಪ್ರಮುಖ ಕೇಂದ್ರವಾಗಿತ್ತೆಂದು ತಿಳಿಯುವುದು. ಈ ಶಾಸನಗಳು ಪ್ರಾಕೃತ ಭಾಷೆಯಲ್ಲಿವೆ. ಮೇಲೆ ಹೇಳಿದ ಮ್ಯಾಕದೋನಿ ಶಾಸನದಿಂದಲೂ ಬಳ್ಳಾರಿ ಜಿಲ್ಲೆಯ ಹಿರೇಹಡಗಲಿ ಎಂಬಲ್ಲಿ ದೊರೆತ ಪಲ್ಲವ ರಾಜ ಶಿವಸ್ಕಂದ ವರ್ಮನ ಪ್ರಾಕೃತಭಾಷೆಯ ತಾಮ್ರಶಾಸನದಿಂದಲೂ ಬಳ್ಳಾರಿಯ ಬಹುಭಾಗ ಸಾತವಹನಿಹಾರ ಅಥವಾ ಸಾತಾಹನಿರಟ್ಠ ಅಂದರೆ ಸಾತವಾಹನ ರಾಷ್ಟ್ರ ಎಂಬ ಪ್ರಾಂತವನ್ನೊಳಗೊಂಡಿತ್ತೆಂಬುದಾಗಿ ತಿಳಿಯುತ್ತದೆ. ಸಾತವಾಹನರ ತರುವಾಯ ಈ ಭಾಗ ಪಲ್ಲವರ ವಶದಲ್ಲಿತ್ತೆಂಬ ವಿಷಯವೂ ಈ ತಾಮ್ರಶಾಸನದಿಂದ ವಿಶದವಾಗುವುದು. 3-4ನೆಯ ಶತಮಾನದ ಈ ಶಾಸನ ಭಾರತದಲ್ಲಿ ಇದುವರೆಗೆ ದೊರೆತ ಅತ್ಯಂತ ಪ್ರಾಚೀನ ತಾಮ್ರದಾನಪತ್ರವಾಗಿರುತ್ತದೆ.

4ನೆಯ ಶತಮಾನದ ಆದಿಭಾಗದಲ್ಲಿ ಪಲ್ಲವರನ್ನು ಸೋಲಿಸಿ ಕರ್ಣಾಟಕದಲ್ಲಿ ಮೊಟ್ಟಮೊದಲಿಗೆ ಸ್ವತಂತ್ರವಾದ ರಾಜ್ಯವನ್ನು ಸ್ಥಾಪಿಸಿದವರು ಕದಂಬರು. ಈ ವಂಶದ ಮೂಲಪುರಷ ಮಯೂರಶರ್ಮನ ಶಾಸನವೊಂದು ಚಿತ್ರದುರ್ಗ ಜಿಲ್ಲೆಯ ಚಂದ್ರವಳ್ಳಿಯ ಬಳಿ ಬಂಡೆಗಲ್ಲಿನ ಮೇಲಿದೆ. ಇದು ಸು. 4ನೆಯ ಶತಮಾನದ ಬ್ರಾಹ್ಮೀ ಲಿಪಿಯಲ್ಲಿ ಮತ್ತು ಪ್ರಾಕೃತ ಭಾಷೆಯಲ್ಲಿದೆ. ಹೀಗೆ ಕರ್ಣಾಟಕದಲ್ಲಿ ಅಶೋಕನ ಕಾಲದಿಂದ ಮಯೂರಶರ್ಮನ ಕಾಲದವರೆಗೆ ದೊರೆತ ಎಲ್ಲ ಶಾಸನಗಳು ಬಾಹ್ಮೀಲಿಪಿಯಲ್ಲಿ ಮತ್ತು ಪ್ರಾಕೃತ ಭಾಷೆಯಲ್ಲಿವೆ. ಆದುದರಿಂದ ಜನಸಾಮಾನ್ಯರ ಭಾಷೆ ಕನ್ನಡವಾದರೂ ಸುಶಿಕ್ಷಿತರಿಗೆ ಪ್ರಾಕೃತ ಭಾಷೆ ತಿಳಿಯುತ್ತಿತ್ತೆಂದು ತೋರುತ್ತದೆ.

4ನೆಯ ಶತಮಾನದಿಂದ 16-17ನೆಯ ಶತಮಾನದವರೆಗಿನ ನಾಡಿನ ಚರಿತ್ರೆಯನ್ನು ತಿಳಿದುಕೊಳ್ಳಲು ಸಹಸ್ರಾರು ಶಾಸನಗಳು ಮೂಲಾಧಾರವಾಗಿವೆ. ಕದಂಬ, ಬಾದಾಮಿ ಚಾಳುಕ್ಯ, ರಾಷ್ಟ್ರಕೂಟ, ಕಲ್ಯಾಣ ಚಾಳುಕ್ಯ, ಕಳಚುರ್ಯ, ಸೇವುಣ, ಹೊಯ್ಸಳ, ವಿಜಯನಗರದ ಅರಸರು ಮುಂತಾದ ಅರಸುಮನೆತನಗಳ ಮತ್ತು ಅಧೀನ ಅರಸುಮನೆತನಗಳ ಚರಿತ್ರೆಯನ್ನು ರೂಪಿಸಲು ಶಾಸನಗಳು ಬಹಳ ಉಪಯುಕ್ತವಾಗಿವೆ. ಅರಸುಮನೆತನಗಳ ವಂಶಾವಳಿ-ಚರಿತ್ರೆಯಷ್ಟೇ ಅಲ್ಲದೆ ನಾಡಿನ ಸಂಸ್ಕøತಿಯ ಪರಂಪರೆಯನ್ನು ತಿಳಿದುಕೊಳ್ಳಲೂ ಶಾಸನಗಳು ಅತ್ಯಮೂಲ್ಯ ಸಾಧನಗಳಾಗಿವೆ. ಆಯಾ ಕಾಲದ ರಾಜಕೀಯ, ಧಾರ್ಮಿಕ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಭೌಗೋಲಿಕ ಮುಂತಾದ ಅನೇಕ ವಿಷಯಗಳ ಬಗ್ಗೆ ಶಾಸನಗಳು ವಿಪುಲವಾದ ಹಾಗೂ ನಿರ್ದುಷ್ಟವಾದ ಸಾಮಗ್ರಿಗಳನ್ನು ಒದಗಿಸುತ್ತವೆ. ಆಡಳಿತ ಕ್ಷೇತ್ರದಲ್ಲಿ ರಾಜ್ಯದ ವಿವಿಧ ಮಟ್ಟಗಳಲ್ಲಿರುವ ಆಡಳಿತ ವ್ಯವಸ್ಥೆ, ಆಡಳಿತಾಧಿಕಾರಿಗಳು, ಸೈನ್ಯಾಧಿಕಾರಿಗಳು, ಆದಾಯ, ತೆರಿಗೆ, ಸುಂಕ-ಸಾರಿಗೆ, ಸ್ವಾಯತ್ತೆ ಪಡೆದಿರುವ ಸಂಘ-ಸಂಸ್ಥೆಗಳು, ನ್ಯಾಯವಿತರಣೆ, ಭೂಮಿಯ ಸಾಗುವಳಿ, ಒಕ್ಕಲತನ, ನೀರಾವರಿ, ಬೆಳೆ ಮುಂತಾದ ವಿಷಯಗಳ ಬಗ್ಗೆಯೂ ಶಾಸನಗಳಿಂದ ವಿವರಗಳು ದೊರಕುತ್ತವೆ.

ಮೇಲೆ ಉಲ್ಲೇಖಿಸಿದ ಕದಂಬ ಮಯೂರಶರ್ಮನ ಚಂದ್ರವಳ್ಳಿ ಶಾಸನವನ್ನುಳಿದು ಈ ವಂಶದ ರಾಜರ ಎಲ್ಲ ಶಾಸನಗಳು ಸಂಸ್ಕøತ ಭಾಷೆಯಲ್ಲಿವೆ. ರಾಜಸ್ಥಾನದ ಭಾಷೆ ಸಂಸ್ಕøತವಿದ್ದುದರಿಂದ ಈ ಶಾಸನಗಳು ಆ ಭಾಷೆಯಲ್ಲಿ ಬರೆಯಲ್ಪಟ್ಟಿವೆ. ಆದರೆ 5ನೆಯ ಶತಮಾನದ ಕನ್ನಡ ಲಿಪಿಯಲ್ಲಿ ಬರೆದ ಹಲ್ಮಿಡಿ ಶಾಸನದಲ್ಲಿ ಆರಂಭದ ಶ್ಲೋಕ ಸಂಸ್ಕøತ ಭಾಷೆಯಲ್ಲಿಯೂ ಉಳಿದ ಭಾಗ ಕನ್ನಡದಲ್ಲಿಯೂ ಬರೆಯಲ್ಪಟ್ಟಿವೆ. ಇದೇ ಇದುವರೆಗೆ ದೊರೆತ ಅತ್ಯಂತ ಪ್ರಾಚೀನ ಕನ್ನಡ ಶಾಸನ. ಭಾಷಾದೃಷ್ಟಿಯಿಂದ ಕರ್ಣಾಟಕದ ಶಾಸನಗಳನ್ನು ಪ್ರಾಕೃತ, ಸಂಸ್ಕøತ, ಕನ್ನಡ ಹಾಗೂ ಮಿಶ್ರ ಭಾಷೆಯ ಶಾಸನಗಳೆಂದು ವಿಂಗಡಿಸಬಹುದು. ಕದಂಬರ ತರುವಾಯ ಕರ್ಣಾಟಕದಲ್ಲಿ ರಾಜ್ಯವಾಳಿದ ಅರಸರ ಶಾಸನಗಳಲ್ಲಿ ಸಾಮಾನ್ಯವಾಗಿ ತಾಮ್ರಶಾಸನಗಳು ಸಂಸ್ಕøತ ಭಾಷೆಯಲ್ಲಿಯೂ ಶಿಲಾಶಾಸನಗಳು ಕನ್ನಡ ಭಾಷೆಯಲ್ಲಿಯೂ ಇವೆ. ರಾಷ್ಟ್ರಕೂಟರ ತಾಮ್ರಶಾಸನಗಳಲ್ಲಿ ಈಗ ಬ್ರಿಟಷ್ ವಸ್ತುಸಂಗ್ರಹಾಲಯದಲ್ಲಿರುವ 3ನೆಯ ಗೋವಿಂದನ 804ರ ತಾಮ್ರಪತ್ರವೊಂದು ಮಾತ್ರ ಕನ್ನಡದಲ್ಲಿದೆ. ಇದೇ ಕನ್ನಡದ ಅತ್ಯಂತ ಪ್ರಾಚೀನ ತಾಮ್ರಶಾಸನ. ಬಾದಾಮಿ ಚಾಳುಕ್ಯರ 2ನೆಯ ಪುಲಕೇಶಿಯನ್ನು ಸೋಲಿಸಿದ ಪಲ್ಲವ ನರಸಿಂಹವರ್ಮನ ಶಿಲಾಶಾಸನವೊಂದು ಬಾದಾಮಿಯಲ್ಲಿ ದೊರೆತಿದೆ. ಇದು ಸಂಸ್ಕøತ ಭಾಷೆಯಲ್ಲಿ ಪಲ್ಲವರ ಗ್ರಂಥಲಿಪಿಯಲ್ಲಿದೆ. ಇನ್ನು ಕರ್ಣಾಟಕದ ನೆರೆಹೊರೆಯ ಪ್ರಾಂತ್ಯಗಳಾದ ಮಹಾರಾಷ್ಟ್ರ ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದ ಗಡಿ ಪ್ರದೇಶಗಳು ಪ್ರಾಚೀನ ಕರ್ಣಾಟಕದಲ್ಲಿ ಸಮಾವೇಶವಾಗಿದ್ದುದ್ದರಿಂದ ಅಲ್ಲಿ ಕರ್ಣಾಟಕದ ಅರಸುಮನೆತನಗಳಿಗೆ ಸಂಬಂಧಿಸಿದ ಅನೇಕ ಶಾಸನಗಳು ಸಂಸ್ಕøತ ಕನ್ನಡ ಮತ್ತು ಇವೆರಡೆರ ಮಿಶ್ರಭಾಷೆಯಲ್ಲಿಯೂ ದೊರಕಿವೆ. ಹಾಗೂ ರಾಯಚೂರು ಬಳ್ಳಾರಿ, ಬೆಂಗಳೂರು ಮತ್ತು ಮೈಸೂರು ಜಿಲ್ಲೆಗಳಲ್ಲಿ ತಮಿಳು ಭಾಷೆಯ ಅನೇಕ ಶಾಸನಗಳು ದೊರಕಿವೆ.

ಕರ್ಣಾಟಕದ ಶಾಸನಗಳನ್ನು ತಾಮ್ರಶಾಸನ ಮತ್ತು ಶಿಲಾಶಾಸನ ಎಂದು ಎರಡು ವಿಧವಾಗಿ ವಿಂಗಡಿಸಬಹುದು. ತಾಮ್ರಶಾಸನಗಳು ಸಾಮಾನ್ಯವಾಗಿ ರಾಜರಿಂದ ಮನ್ನಣೆ ಪಡೆದ ಮತ್ತು ವೇದ, ಶಾಸ್ತ್ರ, ಪುರಾಣ, ಇತಿಹಾಸಗಳಲ್ಲಿ ಪರಿಣತಿ ಹೊಂದಿದ ಬ್ರಾಹ್ಮಣ ವಿದ್ವಾಂಸರಿಗೆ ತಮ್ಮ ಕರ್ಮಾನುಷ್ಠಾನಕ್ಕಾಗಿ ಅಗ್ರಹಾರ ಗ್ರಾಮಗಳನ್ನೂ ಇತರ ದತ್ತಿಗಳನ್ನೂ ಬಿಟ್ಟ ವಿಷಯವನ್ನು ನಿರೂಪಿಸುತ್ತವೆ. ಶಿಲಾ ಶಾಸನಗಳು ರಾಜರೂ ಅವರ ಪರಿವಾರದವರೂ ನಿರ್ಮಿಸಿದ ದೇವಾಲಯಗಳ ಪೂಜೆ ಪುರಸ್ಕಾರಗಳಿಗೂ ಜೀರ್ಣೋದ್ಧಾರಕ್ಕೂ ಬಿಟ್ಟ ದತ್ತಿಗಳ ವಿವರಗಳನ್ನು ತಿಳಿಸಲು ಬರೆದವುಗಳಾಗಿರುತ್ತವೆ. ಇಂಥ ಶಾಸನಗಳು ದೇವಾಲಯದ ವಿವಿಧ ಭಾಗಗಳಲ್ಲಿ ಗೋಡೆ, ಕಂಬ, ಅಸ್ತಿಭಾರ, ಬಾಗಿಲು, ಚಾವಣಿ, ಬೋದಿಗೆ ಮುಂತಾದ ಕಡೆಗಳಲ್ಲಿಯೂ ಪ್ರತ್ಯೇಕವಾಗಿ ತಯಾರಿಸಿ ನಿಲ್ಲಿಸಿದ ಶಿಲಾಫಲಕಗಳ ಮೇಲೆಯೂ ಕೆತ್ತಲ್ಪಟ್ಟಿರುತ್ತವೆ. ಕರ್ಣಾಟಕದಲ್ಲಿ ದೊರೆತ ಶಾಸನಗಳಲ್ಲಿ 100ಕ್ಕೆ 80ರಷ್ಟು ವ್ಯಕ್ತಿಗಳಿಗೆ ಅಥವಾ ದೇವಾಲಯಗಳಿಗೆ ಕೊಟ್ಟ ದಾನಶಾಸನಗಳಾಗಿರುತ್ತವೆ. ಉಳಿದವು ಕೋಟೆಕೊತ್ತಲ, ಕೆರೆಬಾವಿಗಳ ನಿರ್ಮಾಣ ಮತ್ತು ಅವುಗಳ ನಿರ್ಮಾಪಕರ ವಿಷಯವನ್ನು ತಿಳಿಸುವುದಕ್ಕಾಗಿಯೂ ರಾಜರ ವಿಜಯಯಾತ್ರೆಗಳನ್ನು ವರ್ಣಿಸುವುದಕ್ಕಾಗಿಯೂ ಕೆತ್ತಲ್ಪಟ್ಟಿರುತ್ತವೆ. ಅಲ್ಲದೆ ವೀರಗಲ್ಲು, ಮಾಸ್ತಿಕಲ್ಲು, ಗರುಡಗಲ್ಲು, ಜೈನರು ಸಲ್ಲೇಖನದಿಂದ ಮಡಿದುದನ್ನು ಸೂಚಿಸುವ ನಿಸಿದಿಗಲ್ಲು ಮುಂತಾದ ರೀತಿಯ ಶಾಸನಗಳೂ ಕರ್ಣಾಟಕದಲ್ಲಿ ಹೇರಳವಾಗಿವೆ. ಬಾದಾಮಿ ಚಾಳುಕ್ಯರ ಮೂಲಪುರುಷ 1ನೆಯ ಪುಲಕೇಶಿಯ 543ರ ಶಾಸನದ ಉದ್ದೇಶ ಆ ರಾಜ ವಾತಾಪಿಯಲ್ಲಿ ದುರ್ಗಮವಾದ ಕೋಟೆಯನ್ನು ಕಟ್ಟಿಸಿದನೆಂದು ತಿಳಿಸುವುದು. ಕದಂಬ ಶಾಂತಿವರ್ಮನ ತಾಳಗುಂದ ಶಾಸನದ ಉದ್ದೇಶ ಅವನ ತಂದೆ ಕಾಕುತ್ಸ್ಥವರ್ಮ, ಸ್ಥಾನಕುಂದೂರ ಅಂದರೆ ತಾಳಗುಂದದಲ್ಲಿ ಒಂದು ಕೆರೆಯನ್ನು ಕಟ್ಟಿಸಿದ ವಿಷಯವನ್ನು ತಿಳಿಸುವುದಾಗಿದೆ. 9ನೆಯ ಶತಮಾನದಲ್ಲಿ ಬರೆದ, ಅತ್ಯಂತ ಪ್ರಾಚೀನ ಕನ್ನಡ ಗ್ರಂಥವಾದ ನೃಪತುಂಗ ಕೃತ ಕವಿರಾಜಮಾರ್ಗಕ್ಕೂ ಮೊದಲಿನ ಕನ್ನಡ ಭಾಷೆಯ ಸ್ವರೂಪವನ್ನು ತಿಳಿದುಕೊಳ್ಳುವುದಕ್ಕೆ ಶಾಸನಗಳೇ ಆಧಾರ. 5ನೆಯ ಶತಮಾನದಿಂದ 9ನೆಯ ಶತಮಾನದವರೆಗೆ ದೊರೆತ ಅನೇಕ ಕನ್ನಡ ಶಾಸನಗಳಿಂದ ಆ ಭಾಷೆಯ ಬೆಳೆವಣಿಗೆಯನ್ನು ತಿಳಿದುಕೊಳ್ಳ ಬಹುದು. 9ನೆಯ ಶತಮಾನದ ಅನಂತರವೂ ಕನ್ನಡ ಶಾಸನಗಳು ಸಹಸ್ರಾರು ಸಂಖ್ಯೆಯಲ್ಲಿ ದೊರೆಯುವುದರಿಂದ ಮತ್ತು ಅವುಗಳಲ್ಲಿ ವಿಶೇಷವಾಗಿ ದತ್ತಿಗಳನ್ನು ವಿವರಿಸುವ ಸಂದರ್ಭದಲ್ಲಿ ಜನಸಾಮಾನ್ಯರಿಗೆ ತಿಳಿಯುವ ಭಾಷೆಯನ್ನು ಬಳಸಿರುವುದರಿಂದ ಕನ್ನಡ ಭಾಷೆಯ ಚರಿತ್ರೆಯನ್ನು ತಿಳಿಯಲು ಇವು ಮಹತ್ತ್ವದ ಸಾಧನಗಳಾಗಿವೆ.

ಸಂಸ್ಕøತ ಮತ್ತು ಕನ್ನಡ ಸಾಹಿತ್ಯಾಭ್ಯಾಸಿಗಳಿಗೆ ಕರ್ಣಾಟಕದ ಶಾಸನಗಳು ವಿಪುಲ ಸಾಮಗ್ರಿಗಳನ್ನೊದಗಿಸುತ್ತವೆ. ಅನೇಕ ಕವಿಗಳು ಈ ಶಾಸನಗಳಿಂದಲೇ ನಮಗೆ ಪರಿಚಿತರಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ತಾಲಗುಂದದ ಪ್ರಣವೇಶ್ವರ ದೇವಾಲಯದ ಎದುರಿಗಿನ ಕಂಬದಲ್ಲಿರುವ ಕದಂಬ ಶಾಂತಿವರ್ಮನ ಕಾಲದ ಸಂಸ್ಕøತ ಶಾಸನ ಮಾತ್ರಾ-ಸಮಕವೆಂಬ ಅಪೂರ್ವ ಛಂದಸ್ಸಿನಲ್ಲಿ ಬರೆಯಲ್ಪಟ್ಟಿದೆ. ಇದನ್ನು ಕುಬ್ಜನೆಂಬ ಕವಿ ರಚಿಸಿದ್ದು ಶಾಸನವನ್ನು ಅವನೇ ಕಾವ್ಯವೆಂದು ಕರೆದಿದ್ದಾನೆ. ಕರ್ಣಾಟಕದ ಇನ್ನೊಬ್ಬ ಶಾಸನಕವಿ ರವಿಕೀರ್ತಿ ಬಿಜಾಪುರ ಜಿಲ್ಲೆಯ ಐಹೊಳೆಯ ಮೇಗುಟಿ ದೇವಾಸ್ಥಾನದ ಗೋಡೆಯಲ್ಲಿರುವ ಶಾಸನದಲ್ಲಿ (634) ಬಾದಾಮಿ ಚಾಳುಕ್ಯ 2ನೆಯ ಪುಲಕೇಶಿಯ ಪ್ರಶಸ್ತಿಯನ್ನು ಹಾಡಿದ್ದಾನೆ. ಈ ಕವಿ ತನ್ನನ್ನು ಕಾಳಿದಾಸ ಮತ್ತು ಭಾರವಿಗಳಿಗೆ ಹೋಲಿಸಿಕೊಂಡಿದ್ದಾನೆ. ಪುಲಕೇಶಿಯ ಚಿಕ್ಕಪ್ಪ ಮಂಗಳೀಶನ, 602ರ, ರವಿಕೀರ್ತಿ ರಚಿಸಿರಬಹುದೆಂದು ಊಹಿಸಲಾಗಿರುವ, ಮಹಾಕೂಟದ ಸ್ತಂಭ ಶಾಸನದಲ್ಲಿ ಚಾಳುಕ್ಯ ವಂಶವನ್ನು ವರ್ಣಿಸುವಾಗ ಬರುವ, ಯಥಾವಿಧಿ ಹುತಾಗ್ನೀನಾಂಯಥಾ ಕಾಮಾರ್ಚಿತಾರ್ಥಿನಾಂ ಎಂಬ ಮಾತುಗಳು ರಘುವಂಶದಿಂದ ಉದ್ಧøತವಾಗಿವೆ. ಐಹೊಳೆ ಮತ್ತು ಮಹಾಕೂಟದ ಶಾಸನಗಳು ಕಾಳಿದಾಸನ ಕಾಲನಿರ್ಣಯವಿಷಯದಲ್ಲಿ ಮಹತ್ತ್ವದ್ದಾಗಿವೆ. ಕನ್ನಡದ ಕೆಲವು ಶಾಸನಗಳು ಪುಟ್ಟ ಕಾವ್ಯಗಳಂತಿವೆ. ಧಾರವಾಡ ಜಿಲ್ಲೆಯ ಕಳಸದಲ್ಲಿರುವ ರಾಷ್ಟ್ರಕೂಟ ಗೋವಿಂದನ 930ರ ಶಾಸನ, ಅದೇ ಜಿಲ್ಲೆಯ ಲಕ್ಕುಂಡಿಯಲ್ಲಿರುವ ಕಲ್ಯಾಣ ಚಾಳುಕ್ಯರ ಇ¿ುವಬೆಡಂಗ ಸತ್ಯಾಶ್ರಯನ ಕಾಲದ 1007ರ ಅತ್ತಿಮಬ್ಬೆಯ ಶಾಸನ, ಬೆಳಗಾಂವಿ ಜಿಲ್ಲೆಯ ಶಿರಸಂಗಿಯ 1186ರ ಶಾಸನ, ಶ್ರವಣಬೆಳಗೊಳದ ದೊಡ್ಡಬೆಟ್ಟದ ಮೇಲಿರುವ ಬೊಪ್ಪಣಪಂಡಿತನ ಗೊಮ್ಮಟ ಸ್ತುತಿಯ ಶಾಸನಗಳನ್ನು ಈ ವಿಷಯದಲ್ಲಿ ಉದಾಹರಿಸಬಹುದು. ಕಳಸದ ಶಾಸನವನ್ನು ರಚಿಸಿರುವ ಕವಿರಾಜ. ಈತ ಮಹಾಸ್ರಗ್ಧರೆ, ಉತ್ಪಲಮಾಲೆ, ಚಂಪಕ ಮಾಲೆ ಮತ್ತು ಮತ್ತೇಭವಿಕ್ರೀಡಿತ ವೃತ್ತಗಳಲ್ಲಿ ಸೊಗಸಾದ ಪದ್ಯಗಳನ್ನು ಬರೆದಿದ್ದಾನೆ. ದಾನಚಿಂತಾಮಣಿ ಅತ್ತಿಮಬ್ಬೆಯ ಪ್ರಶಿಸ್ತಿಯಾದ ಲಕ್ಕುಂಡಿಯ ಶಾಸನವನ್ನು ರನ್ನಕವಿಯೇ ರಚಿಸಿರಬಹುದೆಂದು ಕೆಲವು ವಿದ್ವಾಂಸರ ಅಭಿಪ್ರಾಯ. ಬಾದಾಮಿಯ ಕಪ್ಪೆ ಅರಭಟ್ಟನ 7ನೆಯ ಶತಮಾನದ ಶಾಸನ, ದಕ್ಷಿಣ ಕನ್ನಡಜಿಲ್ಲೆಯ ತಳಂಗೆರೆಯ 10-11ನೆಯ ಶತಮಾನದ ಜಯಸಿಂಹನ ಶಾಸನ, ಬಿಜಾಪುರ ಜಿಲ್ಲೆಯ ಚಡಚಣದ 11ನೆಯ ಶತಮಾನದ ಕಳಚರ್ಯ ತನ್ನಮರಸನ ಶಾಸನ ಮುಂತಾದವು ಕನ್ನಡ ಛಂದಸ್ಸಿನ ಅಭ್ಯಾಸದ ದೃಷ್ಟಿಯಿಂದ ಅಮೂಲ್ಯವಾಗಿವೆ. ಅಲ್ಲದೆ ಬಳ್ಳಾರಿ ಜಿಲ್ಲೆಯ ಕೋಗಳಿಯಲ್ಲಿ ದೊರೆತ 11ನೆಯ ಶತಮಾನದ ಶಾಸನವೊಂದರಲ್ಲಿ ಬರೆದ ಪದ್ಯವನ್ನು ತೋಮರ ರಗಳೆಯೆಂದು ಕರೆಯಲಾಗಿದೆ. ಇಲ್ಲಿರುವ ತೋಮರ ರಗಳೆಗೂ ಸುಪ್ರಸಿದ್ಧ ಲಲಿತ ರಗಳೆಗೂ ವ್ಯತ್ಯಾಸವಿಲ್ಲ. ಕರ್ಣಾಟಕದ ಶಾಸನಗಳಲ್ಲಿ ತೇದಿಯ ವಿವರಗಳನ್ನು ವಿವಿಧ ರೀತಿಯಾಗಿ ಕೊಡಲಾಗಿದೆ. ಇಲ್ಲಿ ದೊರೆತ ಅಶೋಕನ ಶಾಸನಗಳಲ್ಲಿ ಯಾವ ತೇದಿಯ ನಿರ್ದೇಶನವೂ ಇಲ್ಲ. ಬನವಾಸಿಯ ವಿಣ್ಹುಕಡ ಚುಟುಕುಲಾನಂದ ಸಾತಕಣ್ಣಿಯ ಶಾಸನದಲ್ಲಿ ರಾಜನ ಆಳ್ವಿಕೆಯ 12ನೆಯ ವರ್ಷ ಹಾಗೂ ಹೇಮಂತಋತುವಿನ 7ನೆಯ ಪಕ್ಷದ 1ನೆಯ ದಿವಸ ಎಂದು ತೇದಿಯನ್ನು ಉಲ್ಲೇಖಿಸಿದೆ. ಇದರಿಂದ ಒಂದು ವರ್ಷವನ್ನು ಹೇಮಂತ, ಶಿಶಿರ, ಗ್ರೀಷ್ಮ ಎಂಬ ಮೂರು ಋತುಗಳಾಗಿ ವಿಂಗಡಿಸಿ ಪ್ರತಿಯೊಂದು ಋತುವಿನಲ್ಲಿ 8 ಪಕ್ಷಗಳನ್ನು ಗಣಿಸುತ್ತಿದ್ದರೆಂದು ತಿಳಿಯುತ್ತದೆ. ಈ ಪದ್ಧತಿ ಕದಂಬರ ಕಾಲದ ಒಂದೆರಡು ಶಾಸನಗಳಲ್ಲಿ ಕಂಡುಬಂದರೂ ಅಲ್ಲಿ ಸಾಮಾನ್ಯವಾಗಿ ರಾಜನ ಆಳ್ವಿಕೆಯ ವರ್ಷವನ್ನೂ ಚೈತ್ರಾದಿ ಮಾಸಗಳು ಮತ್ತು ಶುಕ್ಲ ಹಾಗೂ ಬಹುಳ ಪಕ್ಷಗಳನ್ನು ನಿರ್ದೇಶಿಸಲಾಗಿದೆ. 78ರಲ್ಲಿ ಕುಷಾಣ ಅರಸು ಕನಿಷ್ಕ ಪ್ರಾರಂಭಿಸಿದನೆಂದು ತಿಳಿಯಲಾದ ಶಕವರ್ಷದ ಉಲ್ಲೇಖ ಕರ್ಣಾಟಕ ಶಾಸನಗಳಲ್ಲಿ ಮೊಟ್ಟಮೊದಲು ಬಾದಾಮಿ ಚಾಳುಕ್ಯರ ಶಾಸನಗಳಲ್ಲಿ ಬರುತ್ತದೆ. ಈ ವಂಶದ 1ನೆಯ ಪುಲಕೇಶಿಯ ಬಾದಾಮಿ ಬಂಡೆಗಳಲ್ಲಿನ ಶಾಸನಗಳಲ್ಲಿ ಶಾಸನದಲ್ಲಿ ಶಕವರ್ಷೇಷು ಚತುಶ್ಯತೇಷು ಪಞ್ಚಷಷ್ಟಿಯು ತೇಷು ಎಂದು ತೇದಿಯನ್ನು ಕೊಡಲಾಗಿದೆ. ಶಕ 465 ಅಂದರೆ ಕ್ರಿ.ಶ. 543 ಎಂದಾಗುತ್ತದೆ. ಈ ಶಾಸನ ಹೀಗೆ ಶಕವರ್ಷದ ನಿಶ್ಚಿತ ಉಲ್ಲೇಖವಿರುವ ಭಾರತ ಶಾಸನಗಳಲ್ಲಿ ಅತ್ಯಂತ ಪ್ರಾಚೀನವಾದದ್ದು. 2ನೆಯ ಪುಲಕೇಶಿಯ ಐಹೊಳೆ ಪ್ರಶಸ್ತಿ ಶಾಸನದಲ್ಲಿ ಶಕವರ್ಷ 556ರ ಜೊತೆಗೆ ಭಾರತ ಯುದ್ಧಾನಂತರ 3235ನೆಯ ವರ್ಷದ ಅಪೂರ್ವವಾದ ಉಲ್ಲೇಖವೂ ಇರುತ್ತದೆ. ಚಾಳುಕ್ಯರ ಉಳಿದ ಶಾಸನಗಳಲ್ಲಿ ಶಕವರ್ಷ. ಅರಸನ ಆಳ್ವಿಕೆಯ ವರ್ಷ. ಚೈತ್ರಾದಿಮಾಸ, ಪಕ್ಷ (ಶುಕ್ಲ ಅಥವಾ ಬಹುಳ) ಮತ್ತು ತಿಥಿಗಳನ್ನು ವಿವರಿಸಲಾಗಿದೆ. ಮಂಗಳೇಶನ ಮಹಾಕೂಟಶಾಸನದಲ್ಲಿ ಮಾತ್ರ ಚಾಂದ್ರಮಾನದ 60 ವರ್ಷಗಳ ಸಂವತ್ಸರಗಳ ಪೈಕಿ ಸಿದ್ಧಾರ್ಥಿ ಸಂವತ್ಸರವನ್ನು ಉಲ್ಲೇಖಿಸಿದೆ, ಅದರಂತೆ 1ನೆಯ ವಿಕ್ರಮಾದಿತ್ಯನ ಶಕ 596ರ (674) ಗದ್ವಾಲ ತಾಮ್ರಶಾಸನ ಮತ್ತು ವಿನಯಾದಿತ್ಯನ ಶಕ 614ರ (692) ಸೊರಬ ತಾಮ್ರಶಾಸನ ಮುಂತಾದ ಕೆಲವೇ ಶಾಸನಗಳಲ್ಲಿ ತಿಥಿಯ ಜೊತೆಗೆ ವಾರದ ಉಲ್ಲೇಖವೂ ಇರುತ್ತದೆ. ಮುಂದೆ ರಾಷ್ಟ್ರಕೂಟರ ಶಾಸನಗಳಲ್ಲಿ ಎಲ್ಲ ವಿವರಗಳನ್ನು-ಶಕವರ್ಷ, ಸಂವತ್ಸರ, ಮಾಸ, ಪಕ್ಷ, ತಿಥಿ, ವಾರ, ನಕ್ಷತ್ರ, ವ್ಯತೀಪಾತ, ಗ್ರಹಣ ಮುಂತಾದವುಗಳನ್ನು-ಕೊಡಲಾಗಿದೆ. ಈ ವಿರಗಳು ಕರ್ಣಾಟಕದ ಉಳಿದ ಅರಸುಮನೆತನಗಳ ಶಾಸನಗಳಲ್ಲೂ ಕಂಡುಬರುತ್ತವೆ. ಕಲ್ಯಾಣ ಚಾಳುಕ್ಯ 6ನೆಯ ವಿಕ್ರಮಾದಿತ್ಯ ಪಟ್ಟವನ್ನೇರಿದ ಅನಂತರ (1076) ಚಾಳುಕ್ಯ ವಿಕ್ರಮ ವರ್ಷವೆಂಬ ಕಾಲಮಾನವನ್ನು ಸ್ಥಾಪಿಸಿದ. ಇದು ಆತನ ಆಳ್ವಿಕೆಯ 50-51 ವರ್ಷ ಮತ್ತು ಮುಂದೆ ಕೆಲವೇ ವರ್ಷಗಳವರೆಗೆ ಪ್ರಚಲಿತವಾಗಿದ್ದಿತು. ಈ ಚಾಳುಕ್ಯರ ಮಾಂಡಲಿಕರಾದ ಗೋವೆಯ ಕದಂಬರ ಶಾಸನಗಳಲ್ಲಿ ಕ್ರಿ.ಪೂ. 3102ರಲ್ಲಿ ಪ್ರಾರಂಭವಾದ ಕಲಿಯುವ ಸಂವತ್ಸರದ ತೇದಿಗಳನ್ನು ಉಲ್ಲೇಖಿಸಲಾಗಿದೆ. ಶಕವರ್ಷ ಎಂಬ ಶಬ್ದ ಮೊಟ್ಟಮೊದಲು ಬಾದಾಮಿ ಚಾಳುಕ್ಯರ ಶಾಸನಗಳಲ್ಲಿ ಕಾಣಿಸಿಕೊಂಡರೆ ಶಾಲಿವಾಹನ ಶಕ ಎಂಬ ಪದವನ್ನು ದೇವಗಿರಿಯ ಯಾದವರ ಶಾಸನಗಳಲ್ಲಿ ಮೊದಲಿಗೆ ಬರೆಯಲಾಗಿದೆ. ಅಂತೂ 78ರಲ್ಲಿ ಆರಂಭವಾದ ಶಕ ಅಥವಾ ಶಾಲಿವಾಹನ ಶಕವರ್ಷ ಕರ್ಣಾಟಕದ ಶಾಸನಗಳಲ್ಲಿ ವಿಶೇಷವಾಗಿ ಬಳಕೆಯಲ್ಲಿದ್ದುದಾಗಿ ತಿಳಿಯುತ್ತದೆ. ಬೆಳಗಾಂವಿ ಜಿಲ್ಲೆಯ ಗೋಕಾಕದಲ್ಲಿ ದೊರೆತ ರಾಷ್ಟ್ರಕೂಟ ದೆಜ್ಜ ಮಹಾರಾಜನ 6-7ನೆಯ ಶತಮಾನದ ತಾಮ್ರಶಾಸನದಲ್ಲಿ ತೇದಿಯನ್ನು ಆಗುಪ್ತಾಯಿಕ ಅರಸರ 845 ವರ್ಷಗಳು ಸಂದಾಗ ಎಂದು ಉಲ್ಲೇಖಿಸಿದೆ. ಈ ರೀತಿಯಾಗಿ ತೇದಿಯನ್ನು ಉಲ್ಲೇಖಿಸಿರುವ ಶಾಸನ ಇದೊಂದೇ ಇರುವುದರಿಂದ ಆಗುಪ್ತಾಯಿಕ ಅರಸರು ಯಾರು ಮತ್ತು ಈ ಗಣನೆಯನ್ನು ಯಾವಾಗ ಆರಂಭಿಸಿದರು ಎಂಬುದರ ಬಗ್ಗೆ ಏನೂ ತಿಳಿದಿಲ್ಲ.

ಕರ್ಣಾಟಕ ಶಾಸನಗಳ ಒಂದು ವೈಶಿಷ್ಟ್ಯವೆಂದರೆ ಊರು, ಗ್ರಾಮ, ನಾಡು, ಮುಂತಾದ ಸ್ಥಳನಾಮಗಳ ಮುಂದೆ ಬರುವ ಸಂಖ್ಯಾವಾಚಕಗಳು. ಉದಾ : ಬನವಾಸಿ-12,000 ; ಪಲಸಿಗೆ-12,000 ; ಗಂಗವಾಡಿ-95,000 ; ನೊಳಂಬವಾಡಿ-32,000; ಪಾನುಂಗಲ್ಲ-500 ; ಪುರಿಗೆರೆ-300 ; ಬೆಳ್ವೊಲ-300 ; ಕುಕ್ಕನೂರು-30-ಇತ್ಯಾದಿ. ಈ ಸಂಖ್ಯೆಗಳ ಉದ್ದೇಶದ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ಕೆಲವರು ಈ ಸಂಖ್ಯೆಗಳು ರಾಷ್ಟ್ರಬೊಕ್ಕಸಕ್ಕೆ ಆಯಾ ಭಾಗಗಳಿಂದ ಬರುವ ಆದಾಯದ ಹಣದ ಮೊತ್ತವನ್ನು ಸೂಚಿಸುತ್ತವೆಂದು ಹೇಳಿದರೆ ಇನ್ನು ಕೆಲವರು ಇವು ಜನಸಂಖ್ಯೆಯನ್ನು ಸೂಚಿಸುತ್ತವೆಂದು ಭಾವಿಸಿದ್ದಾರೆ. ಈ ಅಭಿಪ್ರಾಯಗಳು ಸಮಂಜಸವಾಗಿ ತೋರುವುದಿಲ್ಲ. ಕಡಿಮೆ ಸಂಖ್ಯೆಗಳುಳ್ಳ ಸ್ಥಳ ನಾಮಗಳಲ್ಲಿ-ಪುರಿಗೆರೆ-300 ಮತ್ತು ಬೆಳ್ವೊಲ 300-ಆ ಸಂಖ್ಯೆಗಳು ಅವುಗಳ ಆದಾಯ ಅಥವಾ ಜನಸಂಖ್ಯೆಗಳನ್ನು ಸೂಚಿಸುತ್ತವೆಯೆಂದು ತಿಳಿಯುವುದು ಅಸಾಧ್ಯ. ಈ ಸಂಖ್ಯೆಗಳು ಆಯಾ ಭಾಗಗಳಲ್ಲಿ ಸಮಾವೇಶಗೊಂಡಿದ್ದ ಗ್ರಾಮಗಳನ್ನು ಸೂಚಿಸುತ್ತವೆಂಬ ಅಭಿಪ್ರಾಯವನ್ನು ಬಹುಜನ ವಿದ್ವಾಂಸರು ಒಪ್ಪಿಕೊಂಡಿದ್ದಾರೆ. ಕಡಿಮೆ ಸಂಖ್ಯೆಯುಳ್ಳ ಭಾಗಗಳಲ್ಲಿ ನಿಜವಾಗಿ ಸಂಖ್ಯೆಗಳು ಸೂಚಿಸುವಷ್ಟು ಗ್ರಾಮಗಳು ಇರುತ್ತವೆಯೆಂದೂ 12,000, 32,000 ಮತ್ತು 96,000 ಮುಂತಾದ ಭಾಗಗಳಲ್ಲಿ ಸಂಖ್ಯೆಯನ್ನು ಸಾಂಕೇತಿಕವಾಗಿ ಅಥವಾ ಅತಿಶಯೋಕ್ತಿಯಿಂದ ಹೇಳಿದೆಯೆಂದು ತಿಳಿಯುವುದು.

ಮೇಲಿನ ವಿವೇಚನೆಯಿಂದ ಕರ್ಣಾಟಕದ ಶಾಸನಗಳು ಕರ್ಣಾಟಕದ ಮೂಲಕ ಭಾರತ ದೇಶದ ಇತಿಹಾಸ-ಸಂಸ್ಕøತಿಗಳ ಶಾಸ್ತ್ರೀಯ ಅಧ್ಯಯನಕ್ಕೆ ಅಮೂಲ್ಯವಾದ ಸಾಧನಗಳೆಂಬುದು ಸ್ಪಷ್ಟವಾಗುತ್ತದೆ. ಈ ಶಾಸನಗಳ ಬಗ್ಗೆ ಇನ್ನಷ್ಟು ವಿವರಗಳಿಗೆ ಕನ್ನಡ ಶಾಸನಗಳು ಎಂಬ ಲೇಖನವನ್ನೂ ಪ್ರಮುಖ ಶಾಸನಗಳ ಬಗ್ಗೆ ಕೊಟ್ಟಿರುವ ಪ್ರತ್ಯೇಕ ಲೇಖನಗಳನ್ನೂ ನೋಡಿ.

(ನೋಡಿ- ಕನ್ನಡ-ಶಾಸನಗಳು)											(ಜಿ.ಎಸ್.ಜಿ.)