ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜಾಗ್ಯಕಾರ್ತ

ವಿಕಿಸೋರ್ಸ್ದಿಂದ

ಜಾಗ್ಯಕಾರ್ತ ದಕ್ಷಿಣ ಜಾವದ (ಇಂಡೋನೇಷ್ಯ) ಒಂದು ನಗರ; ಇದೇ ಹೆಸರಿನ ವಿಶೇಷ ಪ್ರದೇಶದ ಆಡಳಿತ ಕೇಂದ್ರ. ಜೀವಂತ ಅಗ್ನಿಪರ್ವತವಾದ ಮೆರಾ ಇರುವುದು ಈ ನಗರದ ಈಶಾನ್ಯಕ್ಕೆ ಸುಮಾರು 20 ಮೈ. ದೂರದಲ್ಲಿ. ಜಕಾರ್ತ-ಸುರಬಾಯ ರೈಲುಮಾರ್ಗದಲ್ಲಿರುವ ಸುರಕಾರ್ತ ನಿಲ್ದಾಣದಿಂದ ದಕ್ಷಿಣಕ್ಕೆ 35 ಮೈ. ದೂರದಲ್ಲೂ ಜಕಾರ್ತದ ಆಗ್ನೇಯಕ್ಕೆ 250 ಮೈ. ದೂರದಲ್ಲೂ ಇರುವ ಈ ನಗರಕ್ಕೆ ರಸ್ತೆ, ರೈಲು ಮತ್ತು ವಾಯುಯಾನ ಸಂಪರ್ಕಗಳಿವೆ.

	ಸುಲ್ತಾನರ ಆಡಳಿತಕ್ಕೆ ಒಳಪಟ್ಟಿದ್ದ ಈ ನಗರವನ್ನು 1942ರಲ್ಲಿ ಜಪಾನ್ ಆಕ್ರಮಿಸಿಕೊಂಡಿತ್ತು.  ಡಿಸೆಂಬರ್ 1948-ಜುಲೈ 1949ರ ಅವಧಿಯಲ್ಲಿ ಡಚ್ ಪಡೆಗಳ ಅಧೀನಕ್ಕೂ ಒಳಪಟ್ಟಿತ್ತು. ಜಪಾನೀಯರು ಆಕ್ರಮಣವನ್ನು ತೆರವು ಮಾಡಿದಾಗ ಇಂಡೋನೇಷ್ಯ ಗಣರಾಜ್ಯದ ತಾತ್ಕಾಲಿಕ ರಾಜಧಾನಿಯೂ ಸುಕಾರ್ನೋ ಅವರ ಅಧಿಕೃತ ಕೇಂದ್ರಕಛೇರಿಯೂ ಆಗಿತ್ತು.   1946-1949ರಲ್ಲಿ ಇಂಡೋನೇಷೈ ಸ್ವಾತಂತ್ರ್ಯಸಂಗ್ರಾಮ ಕೇಂದ್ರವೂ ಆಗಿತ್ತು. ಡಚ್‍ಗವರ್ನರನ ಹಾಗೂ ಇಬ್ಬರು ದೇಶೀಯ ರಾಜರುಗಳ ನಿವಾಸಗಳು ಇಲ್ಲಿಯೇ ಇದ್ದುವು.  ಹಳೆಯ ಡಚ್ ನಗರ ಹಾಗೂ ಕೋಟೆಯನ್ನು ಇಂದಿಗೂ ಈ ನಗರದ ಹೊರವಲಯದಲ್ಲಿ ಕಾಣಬಹುದು.

ಈ ನಗರದ ಬೀದಿಗಳು ತುಂಬವಿಶಾಲವಾಗಿವೆ. ನಗರದ ನಡುವೆ ಹರಿಯುವ ನದಿಯೊಂದು ಇದಕ್ಕೆ ವಿಶೇಷ ಶೋಭೆ ತಂದುಕೊಟ್ಟಿದೆ. ಇಲ್ಲಿ ಮೋಟಾರುವಾಹನಗಳಿಗಿಂತ ಹೆಚ್ಚಾಗಿ ಸೈಕಲ್ಲುಗಳೂ ಸೈಕಲ್ ರಿಕ್ಷ್ಷಾಗಳೂ ಇವೆ. ನೆರೆಹೊರೆಯ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಒದಗಿಸಿರುವ ಈ ನಗರ ಶೈಕ್ಷಣಿಕ ಹಾಗೂ ಸಾಂಸ್ಕøತಿಕ ಕೇಂದ್ರವಾಗಿಯೂ ಹೆಸರು ಗಳಿಸಿದೆ. ಚರ್ಮ, ಹೊಗೆಸೊಪ್ಪು, ರಬ್ಬರ್, ಕೊಬ್ಬರಿ, ಸಾಬೂನು, ಸಕ್ಕರೆ, ಲೋಹದ ಪಾತ್ರೆಗಳು ಮುಂತಾದವುಗಳಿಗೆ ಸಂಬಂಧಿಸಿದ ಉದ್ಯಮಗಳುಂಟು. ಜೊತೆಗೆ ಇದು ಬಾಟಿಕ್ ಕಲೆಯ ಒಂದು ಮುಖ್ಯ ಕೇಂದ್ರ. ಬಳಿಯ ಕುಲೋನ್‍ಪ್ರೋಗೋದಲ್ಲಿ ಮ್ಯಾಂಗನೀಸ್ ಅದುರು ದೊರೆಯುವುದರಿಂದಲೂ ಈ ನಗರ ಗಮನಾರ್ಹ ಪ್ರಗತಿ ಸಾಧಿಸಿದೆ.

ಜಾಗ್ಯಕಾರ್ತ ಪ್ರಮುಖ ಪ್ರವಾಸೀ ಕೇಂದ್ರ. ಕ್ರತೋನ್‍ನಲ್ಲಿ ಇರುವ ಸುಲ್ತಾನನ ಅರಮನೆ (18ನೆಯ ಶತಮಾನ), ನಗರದ ಮಧ್ಯಭಾಗದಲ್ಲಿರುವ ಒಂದು ಚ.ಮೈ. ವಿಸ್ತೀರ್ಣದ ದುರ್ಗ, ಸ್ವಾತಂತ್ರ್ಯಾನಂತರ ಪ್ರಪ್ರಥಮವಾಗಿ ಸ್ಥಾಪಿತವಾದ ಗದ್‍ಜಮಾದ ವಿಶ್ವವಿದ್ಯಾಲಯ, ಹಟ್ಟಾ ಪ್ರತಿಷ್ಥಾನ ಗ್ರ್ರಂಥಾಲಯ, ಸೋನೋ ಬುದೋಯೋ ವಸ್ತುಸಂಗ್ರಹಾಲಯ, ಕಲಾ ಅಕಾಡಮಿ, ಖಾಸಗಿ ವಿಶ್ವವಿದ್ಯಾಲಯ, ಹಲವು ಕಾಲೇಜುಗಳು ಹಾಗೂ ಸ್ಥಳೀಯ ಮಾರುಕಟ್ಟೆ-ಇವು ಇಲ್ಲಿಯ ಪ್ರೇಕ್ಷಣೀಯ ಸ್ಥಳಗಳು. ನಗರದ ಹೊರವಲಯದಲ್ಲಿರುವ ಒಂದು ಆಕರ್ಷಣೆಯೆಂದರೆ ತಯಾಸರಿಯೋ ಉದ್ಯಾನ ಅಥವಾ ಜಲೋದ್ಯಾನ. ಸುಲ್ತಾನ್ ಮಂಗ್-ಕು ಬೂಮಿ ಎಂಬಾತನಿಗೆ 1750ರ ಸುಮಾರಿನಲ್ಲಿ ಪೋರ್ಚುಗೀಸ್ ಎಂಜಿನಿಯರ್ ಒಬ್ಬ ಈ ಉದ್ಯಾನವನ್ನು ರೂಪಿಸಿದನೆಂದು ಹೇಳಲಾಗಿದೆ. ನಗರದ ಸನಿಹದಲ್ಲೇ ಇರುವ ಬೋರೊಬುದೂರ್ ಮತ್ತು ಪ್ರಾಂಬನ್ ನಲ್ಲಿರುವ ದೇವಾಲಯಗಳು ಮತ್ತು ಇತರ ಅವಶೇಷಗಳು ಕಲಿಯೂರಂಗಿನ ನಿಸರ್ಗ ಸೌಂದರ್ಯ ಹಾಗೂ ಕೋತಗೆದೆಯಲ್ಲಿಯ ಬೆಳ್ಳಿ ಪಾತ್ರೆಗಳ ಉದ್ಯಮಕೇಂದ್ರ-ಇವು ಪ್ರವಾಸಿಗಳ ವಿಶೇಷ ಆಕರ್ಷಣೆಗಳು.

ಸ್ವಾತಂತ್ರ್ಯಪ್ರಾಪ್ತಿಯ ತರುವಾಯ ಜಾಗ್ಯಕಾರ್ತ ಪುರಸಭಾಪ್ರದೇಶ, ಬಂಟುಲ್, ಕುಲೋನ್‍ಪ್ರೋಗೋ, ಸ್ಲೆಮನ್ ಹಾಗೂ ಗುನುಂಗ್ ಕಿದುಲ್ ಜಿಲ್ಲೆಗಳನ್ನೊಳಗೊಂಡ ವಿಶೇಷಪ್ರದೇಶವನ್ನು ರಚಿಸಲಾಯಿತು. ಜಾಗ್ಯಕಾರ್ತ ಪ್ರದೇಶದ ವಿಸ್ತೀರ್ಣ 1,193 ಚ.ಮೈ. ಜನಸಂಖ್ಯೆ 27,79,000 (1970 ಅಂ.). ಈ ಪ್ರದೇಶ ಪರ್ವತೀಯ ಅಥವಾ ಅರಣ್ಯಾವೃತಪ್ರದೇಶ. ನೈಋತ್ಯದಿಕ್ಕಿನಲ್ಲಿ ಇಳಿಜಾರಾಗಿದೆ. ಆಗ್ನೇಯ ದಿಕ್ಕಿನಲ್ಲಿ ಸುಣ್ಣಕಲ್ಲಿನ ಬೆಟ್ಟಗುಡ್ಡಗಳುಂಟು. (ಪಿ.ಜಿ.ಡಿ.)