ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದ್ರೌಪದಿ

ವಿಕಿಸೋರ್ಸ್ದಿಂದ

ದ್ರೌಪದಿ - ದೃಪದ ರಾಜನ ಮಗಳು. ಪಾಂಡವರ ಹೆಂಡತಿ. ಕೃಷ್ಣೆಯೆಂಬುದು ಈಕೆಯ ನಾಮಾಂತರ. ದ್ರೋಣನಿಂದ ಅವಮಾನಿತನಾದ ದ್ರುಪದ ಅರ್ಜುನನನ್ನು ಮದುವೆಯಾಗುವ ಮಗಳನ್ನು ದ್ರೋಣನನ್ನು ಸಂಹರಿಸಬಲ್ಲ ಮಗನನ್ನು ಪಡೆಯಲು ತಪಸ್ಸು ಮಾಡಿದ. ಆತ ನಿರ್ಮಿಸಿದ ಯಾಗ ಕುಂಡದಿಂದ ದ್ರೌಪದಿಯೂ ದೃಷ್ಟದ್ಯುಮ್ನನೂ ಜನಿಸಿದರು. ಮತ್ಸ್ಯ ಯಂತ್ರವನ್ನು ಭೇದಿಸಿದ ಅರ್ಜುನ ತನ್ನ ನಾಲ್ವರು ಸೋದರರೊಡನೆ ಈಕೆಯನ್ನು ವರಿಸಿದ. ದ್ರೌಪದಿ ಯುಧಿಷ್ಠಿರನಿಂದ ಪ್ರತಿವಿಂಧ್ಯ, ಭೀಮನಿಂದ ಶ್ರುತಸೋಮ, ಅರ್ಜುನನಿಂದ ಶ್ರತುಕೀರ್ತಿ, ನಕುಲನಿಂದ ಶತಾನೀಕ, ಸಹದೇವನಿಂದ ಶ್ರುತಸೇನ ಎಂಬ ಐದು ಜನ ಮಕ್ಕಳನ್ನು ಪಡೆದಳು. ಪಾಂಡವರಿಗೂ ಕೌರವರಿಗೂ ಇದ್ದ ಬದ್ಧದ್ವೇಷದ ಫಲವಾಗಿ ಈಕೆ ಪಡಬಾರದ ಕಷ್ಟಗಳನ್ನು ಪಟ್ಟಳು. ರಾಜಸೂಯಯಾಗ ಸಂದರ್ಭದಲ್ಲಿ ದೂರ್ಯೋಧನನನ್ನು ಕಂಡು ಈಕೆ ಪರಿಹಾಸ ಮಾಡಿದಳಾಗಿ ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು ದುರ್ಯೋಧನ ಮುಂದೆ ದ್ಯೂತದಲ್ಲಿ ಪಾಂಡವರು ತಮ್ಮ ಸರ್ವಸ್ವವನ್ನು ಹೆಂಡತಿಯನ್ನು ಪಣವಾಗಿಟ್ಟು ಸೋತ ಕಾಲದಲ್ಲಿ ಈಕೆಯನ್ನು ತುಂಬಿದ ಸಭೆಗೆ ಕರೆಸಿ ವಸ್ತ್ರಾಪಹರಣ ಮಾಡಲು ಯತ್ನಿಸಿದ. ಇಲ್ಲಿಂದ ದ್ರೌಪದಿಯ ಕಷ್ಟದ ಕತೆ ಮೊದಲಾಯಿತು ತನ್ನ ಮುಡಿಯನ್ನು ಹಿಡಿದೆಳೆದ ದುಶ್ಯಾಸನನ್ನು ಆಹುತಿ ತೆಗೆದುಕೊಳ್ಳುವವರೆಗೂ ತಾನು ಮುಡಿಗಟ್ಟೆನೆಂದು ಪಣತೊಟ್ಟಳು. ಹಾಗೆಯೇ ತೊಡೆಯೇರೆಂದು ತೊಡೆತಟ್ಟಿದ ದುರ್ಯೋಧನನ ತೊಡೆಗಳನ್ನು ಮುರಿಯುವುದಾಗಿ ಭೀಮ ಪಣ ತೊಟ್ಟ. ಈ ಎರಡು ಪ್ರತಿಜ್ಞೆಗಳು ಪೂರೈಸುವವರೆಗೆ, 12 ವರ್ಷ ವನವಾಸದಲ್ಲಿ, ಒಂದು ವರ್ಷ ಅಜ್ಞಾತವಾಸದಲ್ಲಿ ಅನಂತರದ 18 ದಿನಗಳ ಭಾರತಯುದ್ಧ ಸಮಯದಲ್ಲಿ ತುಂಬ ನವೆದವಳೆಂದರೆ ದ್ರೌಪದಿಯೇ. ವನವಾಸ ಕಾಲದಲ್ಲಿ ಜಯದ್ರಥ ಈಕೆಯನ್ನು ಅಪಹರಿಸಬಂದು ಪರಾಜಿತನಾದ. ಅಜ್ಞಾತವಾಸದಲ್ಲಿ ಕೀಚಕ ಈಕೆಯನ್ನು ಕೆಣಕಿ ಅಸುನೀಗಿದ. ಉಪಕೀಚಕರೂ ಸತ್ತರು. ಈಕೆಯ ಒಂದೇ ಒಂದು ಸಂತಸದ ಸಂಗತಿಯೆಂದರೆ ವಿರಾಟಪರ್ವದ ಕೊನೆಯಲ್ಲಿ ಜರುಗಿದ ಅಭಿಮನ್ಯುವಿನ ವಿವಾಹ. ಉದ್ಯೋಗ ಪರ್ವದಲ್ಲಿ ಪಾಂಡವರು ಸಂಧಿಗೆ ಒಪ್ಪಿದರೂ ಈಕೆ ಒಪ್ಪದೆ ದೌತ್ಯಕ್ಕಾಗಿ ಹೊರಟ ಶ್ರೀಕೃಷ್ಣನಿಗೆ ತಾನು ಮಾಡಿದ ಪ್ರತಿಜ್ಞೆಗಳನ್ನು ನೆನಪಿಸಿ ಯುದ್ಧವನ್ನೇ ಖಚಿತ ಮಾಡಬೇಕೆಂದು ಅವನನ್ನು ಬೇಡಿದಳು. ಯುದ್ಧಕಾಲದಲ್ಲಿ ಭೀಮನಿಂದ ದುಶ್ಯಾಸನ ಹತನಾಗಲು ಈಕೆ ಅವನ ರಕ್ತದಿಂದ ತನ್ನ ತಲೆಗೂದಲನ್ನು ನೆನೆಸಿಕೊಂಡು ಮುಡಿಗಟ್ಟಿದಳು. ಯುದ್ಧದ ಕೊನೆಯಲ್ಲಿ ಭೀಮ ತನ್ನ ಗಧೆಯಿಂದ ದುರ್ಯೋಧನನ ತೊಡೆಗಳನ್ನು ಒಡೆದು ಅವನನ್ನು ಕೊಂದಾಗ ಈಕೆಯ ಎರಡನೆಯ ಬಯಕೆಯೂ ಪೂರ್ಣವಾಗುತ್ತದೆ. ದ್ರೌಪದಿಯ ದಾರುಣ ಕತೆಗೆ ಕಲಶದಂತಿರುವ ಸಂಗತಿಯೆಂದರೆ ಮಕ್ಕಳಾದ ಉಪಪಾಂಡವರನ್ನು ಪಾಂಡವರೆಂದೇ ಗ್ರಹಿಸಿ ಅಶ್ವತ್ಥಾಮ ಕೊಲೆ ಮಾಡುವುದು. ಅಂತೂ ಇಂತೂ ಕುಂತಿಯ ಮಕ್ಕಳಿಗೆ ರಾಜ್ಯ ಸಿಕ್ಕಿದ್ದು ತೀರ ಕೊನೆಯಲ್ಲಿ. ಅಲ್ಲಿಯವರೆಗೂ ಜೀವನದ ಮೂಸೆಯಲ್ಲಿ ನಿರಂತರ ನವೆಯುವ ದೌರ್ಭಾಗ್ಯ ಮಾತ್ರ ಪಾಂಡವರ ಅದರಲ್ಲೂ ದ್ರೌಪದಿಯ ಪಾಲಿನದಾದುದು ಆಶ್ಚರ್ಯದ ಸಂಗತಿ. (ಎಸ್.ಎಸ್.ಜೆಎ.)