ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಂಜುಂಡಸ್ವಾಮಿ, ಎಸ್

ವಿಕಿಸೋರ್ಸ್ದಿಂದ

ನಂಜುಂಡಸ್ವಾಮಿ, ಎಸ್ 1906-1969. ಕರ್ನಾಟಕದ ವಿಖ್ಯಾತ ವರ್ಣಚಿತ್ರಕಾರರು ಹಾಗೂ ಶಿಲ್ಪಿಗಳಲ್ಲಿ ಅಗ್ರಗಣ್ಯರು. ಇವರು ಶಿಲ್ಪಸಿದ್ಧಾಂತಿ ಸಿದ್ಧಲಿಂಗಸ್ವಾಮಿಗಳ ಅಣ್ಣಂದಿರಾದ ಶಿಲ್ಪಸಿದ್ಧಾಂತಿ ವಿರಕ್ತಸ್ವಾಮಿಗಳ ಮಕ್ಕಳು. ಸ್ಥಳ ಕೊಳ್ಳೆಗಾಲ. ಹುಟ್ಟಿದ್ದು ತಮ್ಮ ತಾಯಿಯವರ ತವರೂರಾದ ಯಳಂದೂರು ತಾಲೂಕು ಯರಂಗಬಳ್ಳಿಯಲ್ಲಿ 26-3-1906ರಲ್ಲಿ. ವಂಶಪಾರಂಪರ್ಯವಾಗಿ ಬಂದ ಶಿಲ್ಪಕಲೆಯ ಸಂಪ್ರದಾಯ ಇವರಲ್ಲೂ ನೆಲಸಿ, ಚಿತ್ರಕಲೆಗೆ ಶಾಸ್ತ್ರೀಯ ಅಡಿಪಾಯವನ್ನು ಹಾಕಿಕೊಟ್ಟಿತ್ತು. ಇವರು ತಮ್ಮ ಚಿಕ್ಕಂದಿನಿಂದ ಬಡತನದಲ್ಲಿ ಅಪಾರ ಕಷ್ಟಗಳನ್ನೆದುರಿಸಿ, ಮೈಸೂರಿನ ಶ್ರೀ ಚಾಮರಾಜೇಂದ್ರ ವೃತ್ತಿಶಿಕ್ಷಣ ಶಾಲೆಯಲ್ಲಿ ಚಿತ್ರಕಲೆಯ ಅಧ್ಯಾಪಕರಾಗಿ ಜೀವನ ನಡೆಸಿದರು. ಕುಶಲಕಲೆಯ ಎಲ್ಲ ಪ್ರಕಾರಗಳಲ್ಲೂ ಅದ್ವಿತೀಯ ಪ್ರೌಢಿಮೆ ಗಳಿಸಿಕೊಂಡಿದ್ದ ಇವರು ರೇಖಾಚಿತ್ರಗಳಲ್ಲಿಯೇ ಆಗಲಿ, ತೈಲಚಿತ್ರ, ಜಲವರ್ಣಚಿತ್ರಗಳಲ್ಲಿಯೇ ಆಗಲಿ ತೋರುತ್ತಿದ್ದ ಚಾಕಚಕ್ಯ ಅಸಾಧಾರಣವಾದದ್ದು. ಪ್ರಕೃತಿಯ ಯಾವುದೇ ವರ್ಣಗಳನ್ನು ಕಣ್ಣಿಗೆ ಕಟ್ಟುವಂತೆ ಸಹಜ ಸುಂದರವಾಗಿ ಕೃತಿಗಳಲ್ಲಿ ಮೂಡಿಸುವ ಶಕ್ತಿಯನ್ನು ಇವರು ಪಡೆದಿದ್ದರು. ಮೈಸೂರಿನ ವಾಣಿವಿಳಾಸ ಮೊಹಲ್ಲಾದಲ್ಲಿರುವ ಮಹಾಜನ ಹೈಸ್ಕೂಲಿನ ಭಿತ್ತಿಯೊಂದರ ಮೇಲೆ ಇವರಿಂದ ರಚಿತವಾದ ಶಾರದಾದೇವಿಯ ಚಿತ್ರವಿದೆ. ಇವರ ಕಬೀರ್ ತೈಲಚಿತ್ರದಲ್ಲಿ ಮುಂಜಾವಿನ ನಸುಗತ್ತಲ ಪ್ರಶಾಂತ ವಾತಾವರಣದ ಕಲ್ಪನೆ ವಿಶಿಷ್ಟವಾದ್ದು. ಕಬೀರ್ ತನ್ನ ಹೆಗಲ ಮೇಲೆ ತನ್ನ ಪತ್ನಿಯನ್ನು ಕೂರಿಸಿಕೊಂಡು ಹೋಗುತ್ತಿದ್ದಾನೆ. ಆಕೆ ಕೈಜೋಡಿಸಿ ದೈವವನ್ನು ಪ್ರಾರ್ಥಿಸುತ್ತಿರುವಂತೆ, ಕಬೀರ್ ತನ್ನ ಪತ್ನಿಯ ಎರಡು ಮೊಣಕಾಲುಗಳನ್ನು ಬಿಗಿದಪ್ಪಿ ಗಂಭೀರಭಾವದಿಂದ ಸಾಗುತ್ತಿದ್ದಾನೆ. ಆಕೆಯ ಸೀರೆ, ಕುಪ್ಪಸದ ಪೀತಾಂಬರ, ಕೈತೋಳು, ಬಳೆ, ಮೂಗಿನ ಬುಲಾಕು ಇವುಗಳ ಮೆರಗು ಸಹಜ ವರ್ಣಗಳಲ್ಲಿ ಮೂಡಿಬಂದಿದೆ. ಮೈಸೂರಿನ ವೃತಿಶಿಕ್ಷಣ ಶಾಲೆಯ ಪ್ರದರ್ಶನಾಲಯದಲ್ಲಿ ಇದ್ದ ರಾಜನ ಒಡ್ಡೋಲಗದ ಚಿತ್ರ ಕೂಡ ಇವರ ಕಲಾವಂತಿಕೆಗೆ ಉತ್ತಮ ನಿದರ್ಶನವಾಗಿದೆ. ಈಗ ಅದು ಅಲ್ಲಿಲ್ಲ, ಮೈಸೂರಿನ ಕಲಾಭಿಮಾನಿಗಳೊಬ್ಬರ ಬಳಿ ಇದೆ.

   ಮೈಸೂರಿನ ವಸ್ತುಪ್ರದರ್ಶನಶಾಲೆಯ ಕಟ್ಟಡವೊಂದರ ಮೇಲೆ ಇವರಿಂದ ರೂಪಿಸಲ್ಪಟ್ಟ ಜಯಚಾಮರಾಜ ಒಡೆಯರ ಭಾವಚಿತ್ರವಿತ್ತು. ಈಗ ಅದು ಅಲ್ಲಿಲ್ಲ. ಆದರೆ ಭಾವಚಿತ್ರ ರಚನೆಯಲ್ಲಿ ಇವರದ್ದು ಪಳಗಿದ ಕೈ ಎನ್ನುವುದಕ್ಕೆ ಇದೊಂದು ಉತ್ತಮ ಮಾದರಿ.
   ನಂಜುಂಡಸ್ವಾಮಿಯವರು ಆಡಂಬರವಿಲ್ಲದ ಸಾಮಾನ್ಯ ಜೀವನ ನಡೆಸಿದವರು. ನಿವೃತ್ತರಾದ ಕೆಲವು ವರ್ಷಗಳ ಮೇಲೆ ಒಂಟಿಕೊಪ್ಪಲಿನಲ್ಲಿದ್ದ ತಮ್ಮ ಮನೆಯನ್ನು ಇದ್ದಕ್ಕಿದ್ದಂತೆಯೇ ಮಾರಿ ತಮ್ಮ ತಾಯಿಯ ಊರಾದ ಯರಗಂಬಳ್ಳಿಗೆ ಹೊರಟುಬಿಟ್ಟರು. ಅಲ್ಲೂ ಬಹಳ ಕಾಲ ಇರಲಿಲ್ಲ. ಮಾರಿ ಬಂದ ಹಣ ದಕ್ಕಲಿಲ್ಲ. ಸಾಲವಾಗಿ ಅದನ್ನು ಪಡೆದವರು ಮತ್ತೆ ಹಿಂದಿರುಗಿಸಲಿಲ್ಲ. ಸ್ವಾಮಿಗಳಿಗೆ ಚಿಂತೆ ಹತ್ತಿ ಮತ್ತೆ ಪತ್ನೀಪುತ್ರರೊಂದಿಗೆ ಮೈಸೂರಿಗೆ ಬಂದು ಒಂಟಿಕೊಪ್ಪಲಿನಲ್ಲಿ ಚಿಕ್ಕ ಮನೆಯೊಂದನ್ನು ಮಾಡಿಕೊಂಡು ಇದ್ದರು.
   ರಾಮಾಯಣ, ಮಹಾಭಾರತ, ಭಾಗವತ, ಶಿವಪುರಾಣಗಳ ಪುಣ್ಯಕಥೆಗಳನ್ನು ಓದುವುದು, ಕೇಳುವುದು ಎಂದರೆ ಸ್ವಾಮಿಗಳಿಗೆ ಬಹಳ ಇಷ್ಟ. ಅಲ್ಲಿಯ ರಸಸನ್ನಿವೇಶಗಳ ಚಿತ್ರಗಳನ್ನು ಮನಸ್ಸಿನಲ್ಲಿ ಮೂಡಿಸಿಕೊಂಡು ಕಲೆಯಲ್ಲವರು ರೂಪಿಸುತ್ತಿದ್ದರು. ಇವರ ಗೆಳೆಯರಲ್ಲಿ ಸಾಹಿತಿಗಳು ಮತ್ತು ಕಲಾವಿದರೇ ಹೆಚ್ಚು. ಇವರ ಮಮತೆಯ ಒಬ್ಬ ಗೆಳೆಯರೆಂದರೆ ಕೈಲಾಸಂ.
   ಅರಮನೆಯ ಕಲಾವಿದರಾಗಿದ್ದ ಕೇಶವಯ್ಯನವರ ನೆರವು ಸಿಕ್ಕಿದ್ದರಿಂದ ಸ್ವಾಮಿಯವರ ಕಲಾಸಾಧನೆ ಪಕ್ವವಾಯಿತು. ಮೈಸೂರಿನ ಶ್ರೀ ಚಾಮರಾಜೇಂದ್ರ ವೃತ್ತಿಶಿಕ್ಷಣ ಕಲಾಶಾಲೆಯಲ್ಲಿ ಕಲಾಭ್ಯಾಸಮಾಡಿದ ಅನಂತರ ಮುಂಬಯಿಯ ಜೆ.ಜೆ. ಕಲಾಶಾಲೆಯಲ್ಲಿ ಅಭ್ಯಾಸಮಾಡಿ ಹೆಚ್ಚಿನ ಅನುಭವ ಪಡೆದುಕೊಂಡಿದ್ದರಾಗಿ ಇವರ ಕಲೆಗೆ ಶಾಸ್ತ್ರದ ಭದ್ರವಾದ ತಳಹದಿ ಸಿಕ್ಕಿದಂತಾಗಿತ್ತು. ನಾಲ್ವಡಿ ಕೃಷ್ಣರಾಜ ಒಡೆಯರ ಪ್ರೋತ್ಸಾಹ ಸಿಕ್ಕಿತಾಗಿ ಇವರ ಕಲಾಪ್ರೌಢಿಮೆ ಪ್ರಕಾಶಕ್ಕೆ ಬರಲು ಅವಕಾಶವಾಯಿತು. ಆಗ ಇವರು ಚಿತ್ರಿಸಿದ ಕೆಲವು ತೈಲವರ್ಣ ಚಿತ್ರಗಳು ಮಹಾರಾಜರ ಮೆಚ್ಚುಗೆಗೆ ಪಾತ್ರವಾಗಿ ಅರಮನೆಯ ಕಲ್ಯಾಣಮಂಟಪವನ್ನು ಅಲಂಕರಿಸಿದವು. ಅವು ಈಗಲೂ ಅಲ್ಲಿವೆ. ಪಾಶ್ಚಾತ್ಯ ಶೈಲಿಯಲ್ಲಿ ರಚಿಸಲಾದ ಈ ಕೃತಿಗಳಲ್ಲಿ ಜನರ ಭಾವಭಂಗಿ, ಚಲನವಲನ ಬಹಳ ಸ್ವಾಭಾವಿಕವಾಗಿ ಮೂಡಿಬಂದಿದೆ.
   ಚಿತ್ರಕಲೆ ಬೇಸರವಾದಾಗ ಇವರು ದಂತ ಮತ್ತು ಗಂಧದಲ್ಲಿ ಸುಂದರ ಮೂರ್ತಿಗಳನ್ನು ನಿರ್ಮಿಸುತ್ತಿದ್ದುದೂ ಉಂಟು. ಬೇಲೂರಿನ ಶಿಲಾಬಾಲಿಕೆಯರಿಂದ ಸ್ಪೂರ್ತಿಗೊಂಡು ಇವರು ರಚಿಸಿದ ಒಂದು ಆಕೃತಿ ಮತ್ತು ಗಣಪತಿ-ಇವು ತುಂಬ ಮೋಹಕವಾಗಿದೆ.
   ಇವರಿಗೆ ವನಸ್ಪತಿ ಔಷಧಿಯ ತಯಾರಿಕೆಯಲ್ಲಿ ಆಸಕ್ತಿ ಇತ್ತು. ತಾವೇ ಮನೆಯಲ್ಲಿ ಅದನ್ನು ತಯಾರಿಸಿಕೊಳ್ಳುತ್ತಿದ್ದರು. ಒಮ್ಮೆ ಯಾವುದೋ ವ್ಯತ್ಯಾಸದಿಂದಾಗಿ ಇವರು ಸಿದ್ಧಪಡಿಸಿ ಸೇವಿಸಿದ ಔಷಧಿ ಇವರ ಮೈಚರ್ಮವನ್ನು ಕಿತ್ತು ತಿಂದಿತು. ಇದರಿಂದಾಗಿ ಇವರು ಮತ್ತೆ ಅಂಥ ಔಷಧಿಗಳ ಗೋಜಿಗೇ ಹೋಗಲಿಲ್ಲ.
   ಚಿನ್ನ ತಯಾರಿಸಬೇಕೆಂಬುದು ಇವರ ಇನ್ನೊಂದು ಹುಚ್ಚು. ಅನೇಕ ವೇಳೆ ಇದು ಅವರ ತಲೆ ಕೆಡಿಸಿದ್ದೂ ಉಂಟು. ತಮ್ಮ ಮನೆಯ ಕೋಣೆಯೊಂದರಲ್ಲಿ ಗಿಡಮೂಲಿಕೆಗಳಿಂದ ರಸ ತೆಗೆದು ಪುಟ ಕೊಡುತ್ತಿದ್ದರು. ಆದರೆ ಇದರಿಂದ ಯಾವ ಲಾಭವೂ ಆಗಲಿಲ್ಲ.
   ಕರ್ನಾಟಕ ರಾಜ್ಯ ಲಲಿತಕಲಾ ಅಕಾಡೆಮಿ ನಂಜುಂಡಸ್ವಾಮಿಗಳನ್ನು ಗುರುತಿಸಿ ಗೌರವಿಸಿದ್ದು ಕಟ್ಟಕಡೆಯಲ್ಲಿ. ಕೊನೆಯ ದಿನಗಳಲ್ಲಿ ದೊಡ್ಡ ಶಿಲೆಯಲ್ಲಿ ಶ್ರೀ ಚಾಮುಂಡೇಶ್ವರಿ ವಿಗ್ರಹವನ್ನು ಕಡೆಯುತ್ತಿದ್ದಾಗ ಅದು ಪೂರ್ಣಗೊಳ್ಳುವಷ್ಟರಲ್ಲಿಯೇ ಸ್ವಾಮಿಯವರು ದಿನಾಂಕ 27-12-1969ರಲ್ಲಿ ದೈವಾಧೀನರಾದರು. 

(ಪಿ.ಆರ್.ಟಿ.)