ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಂಬಿಯಣ್ಣ

ವಿಕಿಸೋರ್ಸ್ದಿಂದ

ನಂಬಿಯಣ್ಣ - ಸು.840-865. ತಮಿಳಿನ ಪೆರಿಯ ಪುರಾಣದಲ್ಲಿ ನಿರೂಪಿತರಾಗಿರುವ ಅರುವತ್ತುಮೂರು ಶಿವಭಕ್ತರಲ್ಲಿ ಒಬ್ಬ. ಸೌಂದರನಂಬಿ, ಸುಂದರಮೂರ್ತಿ, ತಿರುನಾವಲೂರರ್ ಮುಂತಾದ ಪರ್ಯಾಯನಾಮವಳಿಗಳಿಂದಲೂ ಪ್ರಖ್ಯಾತನಾಗಿದ್ದಾನೆ. ಈತ ತಮಿಳುನಾಡಿನ ದಕ್ಷಿಣ ಆರ್ಕಾಟ್ ಜಿಲ್ಲೆಯ ತಿರುನಾವಲೂರಿಗೆ ಸೇರಿದವ. ಕಾಲ 840ರಿಂದ 865 ಎಂಬುದಾಗಿ ವಿದ್ವಾಂಸರ ಅಭಿಪ್ರಾಯ. ಶಿವದೇವಾಲಯಗಳನ್ನು ಸಂದರ್ಶಿಸಿ ಗೀತೆಗಳನ್ನು ಹಾಡುವುದೇ ಈತನ ಕಾಯಕವಾಗಿತ್ತು.

ಕನ್ನಡದಲ್ಲಿ ನಂಬಿಯಣ್ಣನನ್ನು ಕುರಿತು ಕಾವ್ಯಗಳನ್ನು ರಚಿಸಿದವರಲ್ಲಿ ಹರಿಹರ ಮೊದಲಿಗ. ಅನಂತರ ಈತನ ಕಥೆ ಉತ್ತರಪ್ರದೇಶದ ಬಸವಲಿಂಗನ ಬಸವೇಶ್ವರ ಪುರಾಣದ ಕಥಾಸಾಗರ, ಸುರಂಗಕವಿಯ ತ್ರಿಷಷ್ಟಿ ಪುರಾತನ ಚರಿತ್ರೆ, ಪಾಲ್ಕುರಿಕೆ ಸೋಮನಾಥನ ಸೋಮೇಶ್ವರ ಪುರಾಣ, ಹರಿಹರದೇವನ ಸೌಂದರಪುರಾಣ, ಶಾಂತಲಿಂಗ ದೇಶಿಕನ ಭೈರವೇಶ್ವರಕಾವ್ಯದ ಕಥಾಸೂತ್ರ ರತ್ನಾಕರ, ಗುಬ್ಬಿ ಮಲ್ಲಣಾರ್ಯನ ವೀರಶೈವಾಮೃತ ಮಹಾಪುರಾಣ, ಲಕ್ಕಣ್ಣದಂಡೇಶನ ಶಿವತತ್ತ್ವ ಚಿಂತಾಮಣಿ, ಪರ್ವತೇಶನ ಚತುರಾಚಾರ್ಯಪುರಾಣ, ಅಣ್ಣಾಜಿಯ ಸೌಂದರ ವಿಳಾಸ, ಶಿವಲಿಂಗನ ಶಿವಾಮೃತಲೀಲೆ, ಮರಿತೋಂಟದಾರ್ಯನ ಸಿದ್ದೇಶ್ವರ ಪುರಾಣ, ವಿರೂಪಾಕ್ಷ ಪಂಡಿತನ ಚೆನ್ನಬಸವಪುರಾಣ, ಸೋಮದೇವನ ಉದ್ಭಟ ಕಾವ್ಯ, ಅದೃಶ್ಯಕವಿಯ ಪ್ರೌಢರಾಯನ ಕಾವ್ಯ, ಚೆನ್ನಣ್ಣನ ದೇಪದ ಕಲಿಯರ ಕಾವ್ಯ, ಸಿದ್ಧನಂಜೇಶನ ಗುರುರಾಜಚಾರಿತ್ರ, ಪಂಚಯ್ಯನ ಭಕ್ತಿರಸದ ಸೋನೆ, ಎಳಂದೂರು ಹರೀಶ್ವರನ ಪ್ರಭುದೇವರ ಪುರಾಣ, ಭೀಮಕವಿಯ ಬಸವಪುರಾಣ ಬಸವಕವಿಯ ಮಹಾಲಿಂಗಲೀಲೆ-ಇವೇ ಮೊದಲಾದ ಕೃತಿಗಳಲ್ಲಿ ಇಡಿಯಾಗಿಯೋ ಬಿಡಿಯಾಗಿಯೋ ಬಂದಿದೆ.

ಪ್ರಸ್ತುತ ಹರಿಹರನ ನಂಬಿಯಣ್ಣನ ರಗಳೆಯ ಕಥಾಸಾರದಂತೆ ಈತ ಪರಶಿವನ ಮಾನಸಪುತ್ರ. ಈತನನ್ನು ಪುಷ್ಪದತ್ತನೆಂದು ಕರೆದು ಪೂಜೆಗೆ ಹೂಗಳನ್ನು ಎತ್ತುವ ಕಾಯಕಕ್ಕೆ ನಿಯೋಜಿಸಲಾಗಿತ್ತು, ಒಮ್ಮೆ ಪುಷ್ಪದತ್ತ ಪಾರ್ವತಿಯ ಪೂಜೆಗಾಗಿ ಹೂ ತಿರಿಯುತ್ತಿದ್ದ ವಿಳಾಸಿನಿಯರಿಬ್ಬರನ್ನು ಕಂಡು ಮೋಹಗೊಂಡ. ಅವರೂ ಈತನಲ್ಲಿ ಅನುರಾಗ ಹೊಂದಿದರು. ಇದನ್ನು ಕಂಡ ಪಾರ್ವತೀಪರಮೇಶ್ವರರು ಭೂಲೋಕಕ್ಕೆ ಹೋಗಿ ಸಕಲಸುಖಗಳನ್ನೂ ಅನುಭವಿಸಿ ಬರುವಂತೆ ಹೇಳಿ ಆ ಮೂವರನ್ನೂ ಕಳಿಸಿಕೊಟ್ಟರು. ಅದರಂತೆ ತಿರುನಾವಲೂರಿನ ಜಡೆಯ ನಾಯನ್ನಾರ್ ಹಾಗೂ ಯಸ್ಯಜ್ಞಾನದೇವಿಯರಿಗೆ ನಂಬಿ ಎಂಬ ಹೆಸರಿನಿಂದ ಪುಷ್ಪದತ್ತ ಮಗನಾಗಿ ಹುಟ್ಟಿದ. ನಂಬಿ ಒಂದು ದಿನ ಓರಗೆಯವರೊಡನೆ ಆಟವಾಡುತ್ತಿದ್ದಾಗ ಅರಮನೆಯ ಆನೆ ಬಂದು ಆತನಿಗೆ ಪ್ರದಕ್ಷಿಣೆಯನ್ನು ಮಾಡಿ ಹಿಂತಿರುಗಿತು. ಈ ವಾರ್ತೆಯನ್ನು ಕೇಳಿದ ರಾಜ ನಂಬಿಯ ತಂದೆತಾಯಿಗಳನ್ನು ಕರೆಸಿ ಕಾರಣಿಕ ಶಿಶುವಾದ ನಂಬಿಯನ್ನು ಅಪುತ್ರವಂತನಾದ ತನಗೆ ಕೊಡಬೇಕೆಂದು ಕೇಳಿಕೊಂಡ. ಇದಕ್ಕೆ ನಂಬಿಯ ತಂದೆಯ ತಾಯಿಗಳು ಸಮ್ಮತಿಸಲಾಗಿ ನಂಬಿ ಅರಮನೆಯನ್ನು ಸೇರಿ ಕ್ರಮೇಣ ಸರ್ವಶಾಸ್ತ್ರಗಳಲ್ಲೂ ಕಲೆಗಳಲ್ಲೂ ಪರಿಣತನಾದ. ವಿವಾಹಯೋಗ್ಯನಾದ ಈತನಿಗೆ ಯೋಗ್ಯ ಕನ್ಯೆಯನ್ನು ಗೊತ್ತು ಮಾಡಿದರು. ಮದುವೆಗೆ ಎಲ್ಲ ಸಿದ್ಧತೆಗಳೂ ನಡೆದು ಮದುವೆಯ ದಿಬ್ಬಣವೂ ಹೊರಟಿತು. ಈ ಸಮಯದಲ್ಲಿ ಸಂಸಾರ ಬಂಧನದಲ್ಲಿ ಅನುವಾಗಿರ್ದ ನಂಬಿಯನ್ನು ಎಚ್ಚರಿಸಲು ಶಿವ ಒಂದು ಆಟವನ್ನು ಹೂಡಿದ. ವೃದ್ಧ ಮಾಹೇಶ್ವರನ ವೇಷ ಧರಿಸಿ ವಿವಾಹ ಮಂಟಪಕ್ಕೆ ನೇರವಾಗಿ ಬಂದು, ಅಲ್ಲಿ ನೆರೆದಿದ್ದವರೆಲ್ಲರ ದೃಷ್ಟಿಯನ್ನು ತನ್ನತ್ತ ಕೇಂದ್ರೀಕರಿಸಿಕೊಂಡು ನಂಬಿ ತನ್ನ ತೊತ್ತಿನ ಮಗ ಎಂದು ಸಾರಿ ಹೇಳಿ ಮದುವೆಗೆ ವಿಘ್ನವನ್ನುಂಟು ಮಾಡಿದ. ಆದರೆ ಅಷ್ಟಕ್ಕೇ ತೃಪ್ತನಾಗದೆ ಕೈಯಲ್ಲಿ ಹಿಡಿದುಕೊಂಡಿದ್ದ ಊರುಗೋಲಿಂದ ಅಲ್ಲಿದ್ದ ಕುಂಭಗಳನ್ನೆಲ್ಲ ಒಡೆದು ರಾದ್ಧಾಂತಮಾಡಿದ. ತನ್ನ ತೊತ್ತಿನ ಮಗ ಎಂಬುದಕ್ಕೆ ಸಾಕ್ಷಿಯಾಗಿ ಪತ್ರವುಂಟು ಎಂದ. ಇದನ್ನೆಲ್ಲ ಕೇಳಿ ಬಹಳವಾಗಿ ಕೋಪಗೊಂಡ ನಂಬಿ ಆ ವೃದ್ಧನನ್ನು ಆಚೆಗೆ ನೂಕುವಂತೆ ಆಜ್ಞೆ ಮಾಡಿದ. ಆದರೇನು ನಂಬಿಯ ಮದುವೆ ನಿಂತುಹೋಯಿತು. ಮಂತ್ರಿ ಆ ಪ್ರಮಾಣಪತ್ರವನ್ನು ವೃದ್ಧನಿಂದ ಪಡೆದು ಅದು ನಿಜವಾದ ಪತ್ರವೆಂದು ಖಚಿತಪಡಿಸಿಕೊಂಡು ರಾಜನಿಗೆ ಸಂಗತಿಯನ್ನು ತಿಳಿಸಿದ. ಆ ಪತ್ರದ ಬಗೆಗೆ ಸಂಶಯಗೊಂಡ ನಂಬಿ ಆದರ ಸಾಕ್ಷಿಗಳಿಂದ ಋಜುವಾತು ಪಡೆಯಬೇಕೆಂದು ತಿರುವಣ್ಣಿನಲ್ಲೂರಿಗೆ ಹೊರಟ. ಅಲ್ಲಿ ಆ ವೃದ್ಧ ಪತ್ರದಲ್ಲಿನ ಸಾಕ್ಷಿಗಳ ಪೂರ್ವಾಪರವನ್ನೆಲ್ಲ ವಿವರಿಸಿದಾಗ ನಂಬಿಗೆ ಕೋಪಬಂದು ಆ ಪತ್ರವನ್ನು ಹರಿದು ಬಿಸುಟ. ಆಗ ಆ ಮುದುಕ ನೀನು ಹರಿದು ಹಾಕಿದ್ದು ನಕಲುಪ್ರತಿ. ಮೂಲಪ್ರತಿ ಬೇರೆ ಇದೆ ಎಂದಾಗ ನಂಬಿ ಆ ಮೂಲಪ್ರತಿಯನ್ನು ತೋರಿಸುವಂತೆ ಹೇಳಿ ಆ ವೃದ್ಧನನ್ನು ಹಿಂಬಾಲಿಸಿದ. ಆ ಊರ ಹೊರಗಿನ ಶಿವದೇವಾಲಯದೊಳಕ್ಕೆ ನಂಬಿಯನ್ನು ಕರೆದುಕೊಂಡು ಹೋದ ಆ ವೃದ್ಧ ಅಲ್ಲೇ ಅದೃಶ್ಯನಾದ. ಆಗ ಶಿವಪಾರ್ವತಿಯರು ಪ್ರತ್ಯಕ್ಷವಾಗಿ ನಂಬಿಗೆ ತಾಳಗಳನ್ನೂ ಮತಿಯನ್ನೂ ದನಿಯನ್ನೂ ಕರುಣಿಸಿ ಹಾಡುವಂತೆ ತಿಳಿಸಿದರು. ನಂಬಿಗೆ ಆಗ ಪೂರ್ವಸ್ಮರಣೆಯುಂಟಾಗಿ ಅಂದಿನಿಂದ ಶಿವದೇವಾಲಯಗಳಿಗೆ ಹೋಗಿ ಶಿವನನ್ನು ಸ್ತುತಿಸಿ ಸಹಸ್ರ ಹೊನ್ನುಗಳನ್ನು ಸಂಪಾದಿಸುತ್ತಿದ್ದ.

ಹೀಗೆ ಕಾಯಕ ಹೊತ್ತ ನಂಬಿ ತಿರುವಾಯೂರಿನ ದೇವಾಲಯಕ್ಕೆ ಹೋಗುತ್ತಿದ್ದಾಗ ಉಪ್ಪರಿಗೆಯಲ್ಲಿ ನಿಂತಿದ್ದ ಪರವೆ ಕಣ್ಣಿಗೆ ಬಿದ್ದಳು. ಕೂಡಲೇ ಪೂರ್ವವಾಸನೆ ಮರುಕಳಿಸಿ ಅವರಿಬ್ಬರಲ್ಲೂ ಪ್ರೇಮವಂಕುರಿಸಿತು. ಇಬ್ಬರೂ ಮದುವೆಯಾದರು. ನಂಬಿ ಶಿವನ ಅನುಗ್ರಹದಿಂದ ಪಂಗುನಿ ತಿರುನಾಳ್ ಹಬ್ಬವನ್ನು ವೈಭವದಿಂದ ಆಚರಿಸಿ ಪರವೆಗೆ ಸಂತೋಷವನ್ನುಂಟುಮಾಡಿದ. ಅನಂತರ ಉತ್ತರ ದಿಕ್ಕಿಗೆ ಪ್ರಯಾಣಮಾಡಿ ನಂಬಿ ತಿರುವತ್ತಾಯೂರಿಗೆ ಬಂದ. ಆ ಊರಿನ ದೇವಮಂದಿರದಲ್ಲಿ ಹೂ ಕಟ್ಟುತ್ತಿದ್ದ ಸಂಕಲಿಯನ್ನು ನೋಡಿದ. ಯಥಾಪ್ರಕಾರ ಪೂರ್ವವಾಸನೆಯಂತೆ ಅವರಲ್ಲಿ ಅನುರಾಗ ಬೆಳೆದು ಶಿವನಿಂದಲೇ ಕುಂಟಣೆ ಕೆಲಸವನ್ನು ಮಾಡಿಸಿ ಆಕೆಯನ್ನು ಮದುವೆಯಾದ.

ಕೆಲಕಾಲ ಕಳೆದ ಅನಂತರ ಪ್ರಾಪಂಚಿಕ ಭೋಗಲಾಲಸೆಗಳಲ್ಲೇ ಮುಳುಗಿ ಹೋಗಿದ್ದ ನಂಬಿಯನ್ನು ಶಿವ ಎಚ್ಚರಿಸಿದ. ನಂಬಿಗೆ ಪರವೆಯ ಜ್ಞಾಪಕ ಬಂದು ಸಂಕಲಿಯನ್ನು ತೊರೆದು ಹೊರಟ. ಇತ್ತ ಸಂಕಲಿ ಅಸುನೀಗಿದಳು. ಏತನ್ಮಧ್ಯೆ ನಂಬಿಯ ಕಣ್ಣುಗಳು ಇಂಗಿಹೋದವು. ಪಾರ್ವತಿಯನ್ನು ಸ್ತುತಿಸಿ ಮತ್ತೆ ದೃಷ್ಟಿ ಪಡೆದ.

ತಿರುವಾಯೂರಿಗೆ ಬಂದ ನಂಬಿ ಪರವೆಯ ಸಿಟ್ಟನ್ನು ನಿವಾರಿಸುವುದಕ್ಕೆ ಮಾರ್ಗ ಕಾಣದೆ ಪರವೆಯನ್ನು ಒಲಿಸಿಕೊಡಬೇಕೆಂದು ಶಿವನನ್ನೇ ಬೇಡಿದ. ಕೊನೆಗೆ ಶಿವನೇ ನಂಬಿ-ಪರವೆಯರ ಸಮಾಗಮವನ್ನುಂಟುಮಾಡಿಸಿದ.

ನಂಬಿಯ ಮಹಿಮೆಯನ್ನು ಕೇಳಿದ್ದ ಚೇರಮರಾಯ ಈತನನ್ನು ತನ್ನ ಮನೆಗೆ ಆಹ್ವಾನಿಸಿದ. ಚೇರಮನ ಅರಮನೆಯಲ್ಲಿ ಆರೋಗಣೆ ಮಾಡಿ ಮತ್ರ್ಯದ ಮಣಿಹವನ್ನು ನಂಬಿ ಮುಗಿಸಿದ. ಆ ಕಡೆ ಪರವೆ ಕೈಲಾಸವಾಸಿಯಾದಳು. ಶಿವ ನಂಬಿಗೆ ಹೇಳಿದ್ದ ತಿರುಮಜಕಳ ದೇವಾಲಯ ಗೋಚರವಾಯಿತು. ಅಲ್ಲಿಗೆ ಬಂದಾಗ ಒಂದು ರಾಯಸ ನಂಬಿಗಾಗಿ ಕಾದಿತ್ತು. ಅದರಲ್ಲಿ `ನರಲೋಕದೊಳಗಿರವು ತನಗೆ ಸಾಲ್ವುದು ನಂಬಿ. ಚರಿತದಿಂದ ಬರ್ಪುದೆಮ್ಮಂಘ್ರಿಯಲ್ಲಿಗೆ ನಂಬಿ, ಐರಾವತಂ ಬರ್ಪುದೇನೆ ಬರ್ಪುದು ನಂಬಿ ಎಂಬ ನಿರೂಪವಿತ್ತು. ಅದರಂತೆ ನಂಬಿ ಕೈಲಾಸವನ್ನು ಸೇರಿದ.

ತಮಿಳುನಾಡಿನಲ್ಲಿ ಈತನ ಕಥೆ ಅತ್ಯಂತ ಪ್ರಸಿದ್ಧವೂ ಪ್ರಚಲಿತವೂ ಆದುದಾಗಿದೆ. (ಎನ್.ಬಿ.) (ಪಿ.ಆರ್.ಎಂ.)