ರಾಮಾಯಣ ದರ್ಶನಂ

ವಿಕಿಸೋರ್ಸ್ದಿಂದ
ಶ್ರೀ ರಾಮಯಣ ದರ್ಶನಂ
by ಕುವೆಂಪು


ರಾಷ್ಟ್ರಕವಿ ಕುವೆಂಪು ಅವರ ಮಹಾಕಾವ್ಯ "ಶ್ರೀರಾಮಾಯಣದರ್ಶನಂ" ಕನ್ನಡ ಸಾರಸ್ವತ ಪ್ರಪಂಚದ ಮಹಾಸಿದ್ದಿಗಳಲ್ಲಿ ಒಂದು. ’ಮಹಾಕಾವ್ಯ’ದ ಕಾಲ ಮುಗಿದು ಹೋಯಿತು ಎನ್ನುವವರಿಗೆ ಒಂದು ಸವಾಲಾಗಿ, ಮಹತ್ತಾದುದಕ್ಕೆ ಕಾಲದ ಕಟ್ಟಿಲ್ಲವೆನ್ನುವುದಕ್ಕೆ ಒಂದು ಸಾಕ್ಶಿಯಾಗಿ ’ರಾಮಾಯಣದರ್ಶನಂ’ ಸೃಷ್ಟಿಯಾಗಿದೆ. ಹಳೆಯ ಕಥೆ ಯುಗಧರ್ಮವನ್ನು ಮೈಗೂಡಿಸಿಕೊಂಡು ಎಷ್ಟರ ಮಟ್ಟಿಗೆ ಹೊಸದಾಗಬಹುದೆಂಬುದಕ್ಕೆ ಈ ಮಹಾಕಾವ್ಯ ಉಜ್ವಲ ಉದಾಹರಣೆಯಾಗಿದೆ. ಇದಕ್ಕೆ ಭಾರತೀಯ ಸಾಹಿತ್ಯದಲ್ಲಿಯೇ ಒಂದು ಅನನ್ಯವಾದ ಸ್ಥಾನವಿದೆ. "ಮಿಲ್ಟನ್ ಕವಿಯ ’ಪ್ಯಾರಡೈಸ್ ಲಾಸ್ಟ್’, ಪ್ಯಾರಡೈಸ್ ರೀಗೇನ್ಡ್’ ಆದಮೇಲೆ ಯಾವ ಭಾಷೆಯಲ್ಲೇ ಆಗಲಿ ಈ ಪ್ರಮಾಣದ ಒಂದು ಮಹಾಕಾವ್ಯ ಬಂದದ್ದನ್ನು ಕಾಣೆ" ಎಂಬ ದಿವಂಗತ ರಾಷ್ಟ್ರಕವಿ ಗೋವಿಂದ ಪೈ ಅವರ ಮಾತುಗಳಲ್ಲಿ ’ರಾಮಾಯಣದರ್ಶನಂ’ ಬೃಹತ್ತು ಮಹತ್ತುಗಳು ಸ್ಪಷ್ಟವಾಗಿ ವ್ಯಕ್ತಗೊಂಡಿವೆ.........ಹಾ ಮಾ ನಾಯಕ.

ಸುಮಾರು ಒಂಭತ್ತು ವರ್ಷಗಳ ಸುದೀರ್ಘ ಕಾಲಾವಧಿಯಲ್ಲಿ ಈ ಕಾವ್ಯ ರಚಿತವಾಗಿದೆ. 1949ರಲ್ಲಿ ಮೊದಲ ಭಾಗ ಮತ್ತು 1951ರಲ್ಲಿ ಎರಡನೆಯ ಭಾಗ ಪ್ರಕಟವಾದವು. ನಂತರ, ಎರಡೂ ಭಾಗಗಳನ್ನು ಸೇರಿಸಿ ಒಂದೇ ಗ್ರಂಥವನ್ನಾಗಿಸಿ ಪ್ರಕಟಿಸಲಾಯಿತು. ಇದುವರೆಗೆ ಸುಮಾರು 20ಕ್ಕು ಹೆಚ್ಚಿನ ಮರುಮುದ್ರಣಗಳಾಗಿವೆ. ಕಾವ್ಯದ ವಾಚನ, ವ್ಯಾಖ್ಯಾನಗಳಿಗೆ ಸಂಬಂದಿಸಿದಂತೆ ಹಲವಾರು ಧ್ವನಿಮುದ್ರಿಕೆಗಳು ಹೊರಬಂದಿವೆ. ಸಂಸ್ಕೃತ, ಇಂಗ್ಲಿಷ್‌ ಮತ್ತು ಹಿಂದಿ ಭಾಷೆಗಳಿಗೆ ಅನುವಾದಗೊಂಡು ಸಹೃದಯ ಓದುಗರನ್ನು ಸಂಪಾದಿಸಿದೆ. ಕನ್ನಡಕ್ಕೆ ಮೊದಲ ಜ್ಞಾನಪೀಠ ಪುರಸ್ಕಾರವನ್ನೂ, ಕೇಂದ್ರ ಸಾಹಿತ್ಯ ಅಕಾಡೆಮಿಯ ಸಾಹಿತ್ಯ ಪುರಸ್ಕಾರವನ್ನೂ ಒದಗಿಸಿಕೊಟ್ಟ ಕೃತಿರತ್ನವೂ ಇದಾಗಿದೆ. ಮಹಾಕಾವ್ಯದ ನಡೆಗೆ ಅನ್ವಯವಾಗುವಂತೆ ಸರಳರಗಳೆಯನ್ನು ಪುನರ್ ರೂಪಿಸಿಕೊಂಡ ಮಹಾಛಂದಸ್ಸಿನಲ್ಲಿ ರಚಿತವಾಗಿದೆ. ಲಲಿತ ರಗಳೆಯ ಬಂಧದಲ್ಲಿ ಅಂತ್ಯ ಪ್ರಾಸವನ್ನು ತ್ಯಜಿಸಿ ಸರಳ ರಗಳೆಯಾಗಿ ಪರಿವರ್ತಿಸಿ ಮಹಾಛಂದಸ್ಸನ್ನು ಕವಿ ನಿರ್ಮಿಸಿಕೊಂಡಿದ್ದಾರೆ. ಕಾವ್ಯದ ನಡೆಗೆ ಹಲವಾರು ಮಹೋಪಮೆಗಳನ್ನೂ ಕವಿ ಬಳಸಿದ್ದಾರೆ. ಹೀಗೆ, ಪ್ರಸ್ತುತಿ, ಛಂದಸ್ಸು, ಅಲಂಕಾರ, ಯುಗ ಧರ್ಮ ಹೀಗೆ ಎಲ್ಲಾ ವಿಷಯಗಳಲ್ಲೂ ಇದೊಂದು ಆಚಾರ್ಯ ಕೃತಿಯೆನಿಸಿದೆ. ಅಯೋಧ್ಯಾ ಸಂಪುಟಂ, ಕಿಷ್ಕಿಂಧಾ ಸಂಪುಟಂ, ಲಂಕಾ ಸಂಪುಟಂ ಮತ್ತು ಶ್ರೀ ಸಂಪುಟಂ ಎಂಬ ನಾಲ್ಕು ಸಂಪುಟಗಳ ಅಡಿಯಲ್ಲಿ ವಿಸ್ತರಿಸಿರುವ, ಒಟ್ಟು ಐವತ್ತು ಸಂಚಿಕೆಗಳಲ್ಲಿ, ಒಟ್ಟು ೨೨೨೯೧ ಸಾಲುಗಳ ಮಹಾಕಾವ್ಯ ಅಡಕವಾಗಿದೆ. ಕೃತಿಯ ಆರಂಭದಲ್ಲೇ, ಕವಿಯು ತಮ್ಮ ನೆಚ್ಚಿನ ಗುರುಗಳಾದ ಶ್ರೀ ವೆಂಕಣ್ಣಯ್ಯನವರಿಗೆ ಕಾವ್ಯವನ್ನು ಅರ್ಪಣೆ ಮಾಡಿದ್ದಾರೆ. ನಿತ್ಯ ಸತ್ಯವನ್ನು ಸಾರುವ ಕಾವ್ಯೋದ್ದೇಶವನ್ನು ಕೆಳಗಿನಂತೆ ಸ್ಪಷ್ಟಪಡಿಸಿದ್ದಾರೆ.

ಬಹಿರ್ಘಟನೆಯಂ ಪ್ರತಿಕೃತಿಸುವಾ ಲೌಕಿಕ ಚರಿತ್ರೆಯಲ್ತಿದು, ಅಲೌಕಿಕ ನಿತ್ಯ ಸತ್ಯಂಗಳಂ ಪ್ರತಿಮಿಸುವ ಸತ್ಯಸ್ಯ ಸತ್ಯ ಕಥನಂ ಕಣಾ, ಶ್ರೀ ಕುವೆಂಪುವ ಸೃಜಿಸಿದೀ ಮಹಾಛಂದಸ್ಸಿನ ಮೇರುಕೃತಿ, ಮೇಣ್ ಜಗದ್ಭವ್ಯ ರಾಮಾಯಣಂ! ಹಳೆಯ ಕಥೆ ಹೊಸ ಯುಗಧಮವನ್ನು ಮೈಗೂಡಿಸಿಕೊಂಡು, ಎಷ್ಟರಮಟ್ಟಿಗೆ ಹೊಸದಾಗಬಹುದು ಎಂಬುದಕ್ಕೆ ಈ ಮಹಾಕಾವ್ಯ ಉಜ್ವಲ ಉದಾಹರಣೆಯಾಗಿದೆ. ಮಿಲ್ಟನ್‌ ಕವಿಯ ʼಪ್ಯಾರಡೈಸ್‌ ಲಾಸ್ಟ್‌ʼ ʼಪ್ಯಾರಡೈಸ್‌ ರಿಗೇನ್ಡ್‌ʼ ಆದ ಮೇಲೆ ಯಾವ ಭಾಷೆಯಲ್ಲೇ ಆಗಲಿ ಈ ಪ್ರಮಾಣದ ಒಂದು ಮಹಾಕಾವ್ಯ ಬಂದದ್ದನ್ನು ಕಾಣೆ -ಎಂದು ರಾಷ್ಟ್ರಕವಿ ಗೋವಿಂದ ಪೈ ಅವರು ಹೇಳಿದ್ದರೆ, ಶ್ರೀ ದೇವೇಂದ್ರ ಕುಮಾರ ಹಕಾರಿಯವರು ಇಪ್ಪತ್ತನೆಯ ಶತಮಾನದ ಜಟಿಲ ಮತ್ತು ಸಂಕೀರ್ಣ ಅನುಭವಗಳನ್ನು ಅಭಿವ್ಯಕ್ತಿಯ ಸಂಭವನೀಯ ಆಯಾಮಗಳಿಗೆ ಅಳವಡಿಸಿ, ಅದಕ್ಕನುಗುಣವಾದ ಬೃಹತ್‌ ಪರಿಧಿಗಳನ್ನು ಸೃಷ್ಟಿಸಿ ರೂಪಗೊಂಡ ಶ್ರೀ ಕುವೆಂಪು ಅವರ ʼಶ್ರೀರಾಮಾಯಣ ದರ್ಶನಂʼ ಸಹಜ ಸಂವೇದನೆಯ ಒಂದು ಮಹೋನ್ನತ ಕೃತಿ ಎಂದಿದ್ದಾರೆ.




ಹೊರ ಸಂಪರ್ಕ[ಸಂಪಾದಿಸಿ]

  • ಕನ್ನಡ ಗಮಕ ವಾಚನ ಹಾಗು ವಾಚಕ ವಿವರಣೆಯನ್ನು ಕೇಳಿ ಆನಂದಿಸಲು ಈ ಕೆಳಗೆ ಕ್ಲಿಕ್ಕಿಸಿ.

೧. ಅಯೋಧ್ಯಾ ಸಂಪುಟಂ

೨. ಕಿಷ್ಕಿಂದಾ ಸಂಪುಟಂ

೩. ಲಂಕಾ ಸಂಪುಟಂ

೪. ಶ್ರೀ ಸಂಪುಟಂ


ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ