ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ/ಮಹಾಸಮಾಧಿ

ವಿಕಿಸೋರ್ಸ್ದಿಂದ

ಹನ್ನೆರಡನೆಯ ಅಧ್ಯಾಯ

ಮಹಾಸಮಾಧಿ.


ಹನ್ನೆರಡು ವರ್ಷಗಳ ದಿವಸಮಾಡಿದ ಕಠೋರವಾದ ಸಾಧನದಿಂದ ಕಂಚಿನಂತಿದ್ದ ಪರಮಹಂಸರ ದೇಹವು ಝರ್ಝರಿತವಾಗಿಹೋಯಿತು. ಆಮಶಂಕೆಯು ಕಾಣಿಸಿಕೊಂಡಿತು. ಅದು ವಾಸಿಯಾದ ಕೂಡಲೆ ಗಂಟಲೆಲ್ಲ ಹುಣ್ಣಾಗಿ ಅನ್ನ ನೀರು ಹೋಗದಂತಾಯಿತು. ಆಗ ಘನವೈದ್ಯರು ಬಂದು ಚಿಕಿತ್ಸೆ ಮಾಡಿ ಅವರನ್ನುಕಲ್ಕತ್ತೆಯಿಂದ ಒಳ್ಳೆಯ ಹವ ಇರುವ ಯಾವುದಾದರೊಂದು ಕಡೆಗೆಕರೆದುಕೊಂಡು ಹೋಗುವುದು ಉಚಿತವೆಂದು ಸೂಚಿಸಿದರು.ಆದ್ದರಿಂದ ಶಿಷ್ಯರು ಕಲ್ಕತ್ತೆಗೆ ಹತ್ತಿರದಲ್ಲಿರುವ ಕಾಶೀಪುರವೆಂಬಗ್ರಾಮಕ್ಕೆ ಸೇರಿದ ಒಂದು ತೋಟದಲ್ಲಿ ಮನೆಯನ್ನು ಗೊತ್ತು ಮಾಡಿಅಲ್ಲಿಗೆ ಪರಮಹಂಸರನ್ನು ಕರೆದುಕೊಂಡು ಹೋದರು. ಇಷ್ಟುಹೊತ್ತಿಗೆ ಅವರ ಮಾಹಾತ್ಮ್ಯವು ಎಲ್ಲೆಲ್ಲಿಯೂ ಹರಡಿ ಹೋಗಿದ್ದದ್ದರಿಂದ ಹಗಲೂ ಇರುಳೂ ಭಕ್ತಾದಿಗಳು ಇಲ್ಲಿಗೂ ಬರುವುದಕ್ಕೆಮೊದಲು ಮಾಡಿದರು. ವೈದ್ಯರು ಮಾತನಾಡಕೂಡದೆಂದು ಅಡ್ಡಿಮಾಡಿದ್ದರೂ ಪರಮಹಂಸರು ಅದಕ್ಕೆ ಲಕ್ಷ್ಯಕೊಡದೆ ತಮ್ಮ ದರ್ಶನಕ್ಕಾಗಿ ಬಂದ ಭಕ್ತರಿಗೆಲ್ಲ ಎಂದಿಗಿಂತಲೂ ಹೆಚ್ಚಾಗಿ ಬೋಧಿಸತೊಡಗಿದರು. ಈ ಕಾಲದಲ್ಲಿಯೇ ಅವರು ತಮ್ಮ ಮುಖ್ಯಮುಖ್ಯರಾದ ಶಿಷ್ಯರಿಗೆ ಸನ್ಯಾಸಕೊಟ್ಟು ಆಮೇಲೆ ವಿವೇಕಾನಂದಸ್ವಾಮಿಗಳಿಗೆ ತಮ್ಮ ಧರ್ಮಶಕ್ತಿಯನ್ನೆಲ್ಲಾ ಲೋಕಸಂಗ್ರಹಾರ್ಥವಾಗಿ ದಾನಮಾಡಿ, ಮಿಕ್ಕ ಶಿಷ್ಯರ ಯೋಗಕ್ಷೇಮವನ್ನು ಅವರ ವಶಕ್ಕೆ ಒಪ್ಪಿಸಿದರು.
ಯಾವ ಚಿಕಿತ್ಸೆಯಿಂದಲೂ ಉಪಯೋಗವಾಗಲಿಲ್ಲ. ಶಿಷ್ಯರು ನಿದ್ರಾಹಾರಗಳಿಲ್ಲದೆ ಉಪಚಾರ ಮಾಡುತ್ತಿದ್ದರು. ಆದರೂ ರೋಗವು ದಿನದಿನಕ್ಕೆ ಹೆಚ್ಚಾಗಿ ಶ್ರೀ ಶ್ರೀ ಪರಮಹಂಸರವರು (1886 ನೇ ಇಸವಿ ಆಗಸ್ಟು ಹದಿನಾರನೆಯ ತಾರೀಖು ಭಾನುವಾರದಿನ ಪರಂಧಾಮವನ್ನೈದಿದರು.

ಸಂಪೂರ್ಣ.

ಮಂಗಳಮಸ್ತು.