ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರನ್ನ

ವಿಕಿಸೋರ್ಸ್ದಿಂದ

ರನ್ನ ಸು. 949-1020. ಹತ್ತನೆಯ ಶತಮಾನದ ಕನ್ನಡ ಸಾಹಿತ್ಯದ ಕವಿ ರತ್ನತ್ರಯಲ್ಲಿ ಒಬ್ಬ. ಹಳಗನ್ನಡದ ಮಹತ್ತ್ವದ ಕವಿ. ಪಂಪನ ಕಿರಿಯ ಸಮಕಾಲೀನ ಅಜಿತತೀರ್ಥಂಕರಪುರಾಣತಿಲಕ, ಸಾಹಸಭೀಮವಿಜಯ (ಗದಾಯುದ್ಧ) ಎಂಬ ಕಾವ್ಯಗಳ ಕರ್ತೃ. ಶಕ್ತಿಕವಿ ಎಂದೇ ಖ್ಯಾತನಾಗಿರುವ ಈತ ರನ್ನನಿರುವ ಕನ್ನಡಕ್ಕೆ ಅನ್ಯರಿಂದ ಬಹುದೆ ಧಕ್ಕೆ? ಬರಿಯ ಕವಿಯೆ ಸಿಡಿಲ ಚಕ್ಕೆ ಎಂಬ ಹೊಗಳಿಕೆಗೂ (ಕುವೆಂಪು) ಪಾತ್ರನಾಗಿದ್ದಾನೆ.

ರನ್ನನ ಜೀವನ ಚರಿತ್ರೆಗೆ ಸಂಬಂಧಿಸಿದ ಅನೇಕ ವಿಚಾರಗಳು ಇವನ ಎರಡೂ ಕೃತಿಗಳಿಂದ ದೊರೆಯುತ್ತವೆ. ಘಟಪ್ರಭಾ ಮತ್ತು ಕೃಷ್ಣಾ ನದಿಗಳು ಹರಿಯುವಲ್ಲಿ ತದ್ದವಾಡಿಗೆ ದಕ್ಷಿಣಕ್ಕೂ ತೊರಗಲಿಗೆ ಉತ್ತರಕ್ಕೂ ಬೆಳುಗಲಿ ದೇಶವಿದೆ. ಈ ಬೆಳುಗುಲಿ 500ರಲ್ಲಿ ಅಗ್ಗಳವೆನಿಸುವ ಜಂಬುಖಂಡಿ ಎಂಬ ಪ್ರಾಂತ್ಯವಿದೆ. ಇದಕ್ಕೆ ತಿಲಕಪ್ರಾಯವಾಗಿ ಪ್ರಸಿದ್ಧಿ ಪಡೆದ ಮುದುವೊಳಲ್ (ಈಗಿನ ಮುಧೋಳ) ಎಂಬುದೇ ರನ್ನನ ಜನ್ಮಸ್ಥಳ. ತಾಯಿ ಅಬ್ಬಲಬ್ಬೆ; ತಂದೆ ಜಿನವಲ್ಲಭ; ಅಣ್ಣಂದಿರು ರೇಚಣ ಮತ್ತು ಮಾರಯ್ಯ. ರನ್ನನ ಸಾಂಸಾರಿಕ ಜೀವನ ಕೂಡ ಚೆನ್ನಾಗಿತ್ತು. ಇವನಿಗೆ ಶಾಂತಿ ಮತ್ತು ಜಕ್ಕಿ ಎಂಬ ಇಬ್ಬರು ಹೆಂಡತಿಯರು. ಧರ್ಮದಲ್ಲಿ ನಿಷ್ಠೆಯುಳ್ಳವರೆಂದು ಇವರ ವರ್ಣನೆ. ಇವರಿಗೆ ರಾಯ ಮತ್ತು ಅತ್ತಿಮಬ್ಬೆ ಎಂಬ ಇಬ್ಬರು ಮಕ್ಕಳಿದ್ದರು. ತನ್ನ ಮಕ್ಕಳಿಗೆ ಚಾವುಂಡರಾಯ ಮತ್ತು ಅತಿಮಬ್ಬೆಯರ ಹೆಸರುಗಳನ್ನು ಇಡುವುದರ ಮೂಲಕ ಕವಿ ಅವರ ಉಪಕಾರಕ್ಕೆ ಗೌರವವನ್ನು ತೋರಿದ್ದಾನೆ.

ರನ್ನ ಜೈನಧರ್ಮೀಯನಾದರೂ ವೈಶ್ಯ ಪಂಗಡದವನೆಂದು ಹೇಳಲಾಗಿದೆ. ಕವಿ ತನ್ನ ಕಾವ್ಯಗಳಲ್ಲಿ ಪುಟ್ಟಿದ ಬಳೆಗಾರ ಕುಲದೊಳ್ ಎಂದು ಸ್ಪಷ್ಟವಾಗಿ ಹೇಳಿಕೊಂಡಿದ್ದಾನೆ. ಜೊತೆಗೆ ವೈಶ್ಯಧ್ವಜ, ವಣಿಕ್ಕುಳಾರ್ಕ ಎಂಬ ಪದಗಳನ್ನು ಪದೇ ಪದೇ ಬಳಸಿದ್ದಾನೆ. ಇಂತಹ ವರ್ಗವೊಂದರಿಂದ ಬಂದ ವ್ಯಕ್ತಿಯೊಬ್ಬ ಕವಿಯಾದದ್ದು ವಿಶೇಷ. ಆದರೂ ಈ ವರ್ಗಸಂವೇದನೆ ಇವನ ಕಾವ್ಯಗಳಲ್ಲಿ ಇಲ್ಲ. ಅಷ್ಟರಮಟ್ಟಿಗೆ ಜೈನಧರ್ಮ ಇವನನ್ನು ಆವರಿಸಿದೆ.

ರನ್ನನಿಗೆ ತಂದೆಯಿಂದ ಬಳುವಳಿಯಾಗಿ ಬಂದದ್ದು ಬಳೆಗಾರವೃತ್ತಿ. ಆದರೆ ರನ್ನ ಪ್ರತಿಕೂಲ ಪರಿಸ್ಥಿತಿಯೊಡನೆ ಹೋರಾಡಿ ಕವಿಯಾದವನು. ಚಿಕ್ಕಂದಿನಿಂದಲೂ ಓದಿನಲ್ಲಿ ಆಸಕ್ತನಾಗಿದ್ದ ಈತ ತನ್ನ ಆಸಕ್ತಿಯನ್ನು ಪೂರೈಸಿಕೊಳ್ಳಲು ದಕ್ಷಿಣದ ಗಂಗರಾಜ್ಯಕ್ಕೆ ಬರಬೇಕಾಯಿತು. ಇದಕ್ಕೆ ಆ ಕಾಲದಲ್ಲಿ ಶ್ರವಣಬೆಳಗೊಳ ಜೈನ ಸಂಸ್ಕøತಿಯ ಕೇಂದ್ರವಾಗುತ್ತಿದ್ದುದ್ದು ಕಾರಣವಿರಬೇಕು. ಜೊತೆಗೆ ಚಾವುಂಡರಾಯನ ವ್ಯಕ್ತಿತ್ವ ಕೀರ್ತಿಗಳೂ ಸೇರಿರಬೇಕು. ಪುಣ್ಯ ವಿಶೇಷದಿಂದ ಇವನಿಗೆ ಗಂಗಮಂತ್ರಿ ಚಾಮುಂಡರಾಯನ ಆಶ್ರಯ ಸಿಕ್ಕಿತು. ಗಂಗರಾಜರ ಗುರುಗಳಾದ ಅಜಿತಸೇನಾಚಾರ್ಯರು ಇವನಿಗೆ ಗುರುಗಳಾಗಿ ದೊರೆತಂದು ಇವನಲ್ಲಿದ್ದ ಧಾರ್ಮಿಕ ಆಸಕ್ತಿ ಬೆಳೆಯಲು ಅನುಕೂಲವಾಯಿತು. ಈ ಸನ್ನಿವೇಶದಲ್ಲಿ ರನ್ನ ಕವಿಯಾಗಿಯೂ ವಿದ್ವಾಂಸನಾಗಿಯೂ ಹೊರಹೊಮ್ಮಲು ಸಾಧ್ಯವಾಯಿತು.

ಚಾವುಂಡರಾಯನ ನೆರವಿನಿಂದ ಸಕಲ ವಿದ್ಯಾಪಾರಂಗತನಾದ ರನ್ನ ಗಂಗರಾಜ್ಯದಿಂದ ಹಿಂದಿರುಗಿ ಚಾಳುಕ್ಯ ತೈಲಪನಲ್ಲಿ ಆಶ್ರಯ ಪಡೆದ. ತೈಲಪನ ಮಗನಾದ ಸತ್ಯಾಶ್ರಯ ಇರಿವಬೆಡಂಗ ಈತನಿಗೆ ಆಶ್ರಯ ನೀಡಿದ. ಹೀಗೆ ರನ್ನ ಗಂಗರಾಜ್ಯದಿಂದ ಹಿಂದಿರುಗಲು ಅತ್ತಿಮಬ್ಬೆಯ ಪ್ರಭಾವಿ ವ್ಯಕ್ತಿತ್ವ ಕಾರಣವಿರಬೇಕು. ಅತ್ತಿಮಬ್ಬೆ ಶ್ರವಣಬೆಳಗೊಳಕ್ಕೆ ಬಂದು ಗೊಮ್ಮಟದರ್ಶನ ಪಡೆದ ವಿಚಾರ ಅಜಿತಪುರಾಣದಲ್ಲಿ ಬಂದಿದೆ. ಹಾಗೆ ಬಂದಿದ್ದಾಗ ರನ್ನ ಅವಳ ವ್ಯಕ್ತಿತ್ವಕ್ಕೆ ಆಕರ್ಷಿತನಾಗಿ ತನ್ನ ರಾಜ್ಯಕ್ಕೆ ಮರಳಲು ಮನಸ್ಸುಮಾಡಿರಬೇಕು. ಕವಿ ಇದ್ದಕ್ಕಿದ್ದಂತೆ ಮೇಲೇರಿದವನಲ್ಲ; ಹಂತ ಹಂತವಾಗಿ ಮುಂದೆ ಬಂದವನು. ಇದನ್ನು ತಿಳಿಸುವ ಪದ್ಯವೊಂದು 'ಗದಾಯುದ್ಧ ದಲ್ಲಿದೆ. ಆರಂಭಕ್ಕೆ ಸಾಮಂತರ ನೆರವು ದೊರೆತ್ತಿದ್ದು, ಇವರಾರೆಂಬುದರ ಬಗ್ಗೆ ಚರ್ಚೆಯಿದೆ. ಆದರೆ ಕವಿಗೆ ನೆರವಾದ ಈ ಸಾಮಂತ ರಟ್ಟರಾಜ ಒಂದನೆಯ ಕಾರ್ತವೀರ್ಯನಿರಬೇಕೆಂಬ ಊಹೆಯಿದೆ. ಮುಂದೆ ಅಭ್ಯುದಯಕ್ಕೆ ಕಾರಣನಾದವನು ಮಂಡಲೇಶ್ವರನಾದ ಚಾವುಂಡರಾಯನೆಂಬುದು ಸ್ಪಷ್ಟ. ಗಂಗದಂಡನಾಯಕನಾದ ಚಾವುಂಡರಾಯನಿಂದ ತಾನು 'ರತ್ನವಾಗಿ ರೂಪುಗೊಂಡೆನೆಂದು ಈತನೇ ಹೇಳಿಕೊಂಡಿದ್ದಾನೆ. ಹೀಗೆ ಬೆಳೆದ ರನ್ನ ಚಕ್ರವರ್ತಿ ತೈಲಪನಲ್ಲಿ 'ಮಹಿಮೋನ್ನತಿ'ಯನ್ನೇ ಪಡೆದ. ಅವನಿಂದ 'ಕವಿಚಕ್ರವರ್ತಿ ಎಂಬ ಬಿರುದನ್ನೂ ಗಳಿಸಿದ. 'ಗದಾಯುದ್ಧ ವನ್ನು ದಂಡನಾಯಕ ಕೇಶಿ ತಿದ್ದಿದವನೆಂದು ಹೇಳಿಕೊಂಡಿರುವುದರಿಂದ, ಈ ಕೇಶಿಯೇ ರನ್ನನನ್ನು ಚಕ್ರವರ್ತಿಗೆ ಪರಿಚಯಿಸಿರಬೇಕೆಂದು ತೋರುವುದು.

ರನ್ನನ ಪೋಷಕರಲ್ಲಿ ಚಾವುಂಡರಾಯ, ತೈಲಪರಂತೆಯೇ ಅತ್ತಿಮಬ್ಬೆಯೂ ಮುಖ್ಯಳಾಗಿದ್ದಾಳೆ. ಚಕ್ರವರ್ತಿಗಳಲ್ಲಿ ತೈಲಪ ಶ್ರೇಷ್ಠನಾಗಿರುವಂತೆ ದಾನದಲ್ಲಿ ದಾನಚಿಂತಾಮಣಿ ಅತ್ತಿಮಬ್ಬೆ ಹಾಗೆ ಎಂಬುದು ಕವಿಯ ಹೇಳಿಕೆ. ರನ್ನನಿಂದ ಅಜಿತಪುರಾಣವನ್ನು ಹೇಳಿಸಿದವಳು ಅತ್ತಿಮಬ್ಬೆ. ಆದಿಪುರಾಣ, ಶಾಂತಿಪುರಾಣಗಳಿಗೆ ಸಮಾನವಾದ ಈ ಕೃತಿಯನ್ನು 'ಆಶ್ರಿತ ಚಿಂತಾಮಣಿಗತ್ತಿಮಬ್ಬೆಗರ್ತಿಯೆ ಪೇಳ್ದಂ' ಎಂದಿದ್ದಾನೆ. ಕವಿ. ಇದರಿಂದ ಅತ್ತಿಮಬ್ಬೆ ಪರವಾಗಿರುವ ಇವನ ಗೌರವ ವ್ಯಕ್ತವಾಗುತ್ತದೆ. ಹೀಗಾಗಿ ರನ್ನ ಪ್ರತಿಭಾವಂತನಾಗಿದ್ದು, ಅದನ್ನು ಗುರುತಿಸುವ ಜನರ ಸಹವಾಸ ದೊರಕಿದ್ದರಿಂದ ಸುಲಭವಾಗಿ ಮೇಲೇರಲು ಸಾಧ್ಯವಾಯಿತು. ಕವಿ ತಾನು ಸೌಮ್ಯ ಸಂವತ್ಸರದಲ್ಲಿ ಹುಟ್ಟಿದವನೆಂದು ಹೇಳಿಕೊಂಡಿದ್ದಾನೆ. ಇದು 949 ಆಗುತ್ತದೆ. ಆದ್ದರಿಂದ ರನ್ನ ಹುಟ್ಟಿದ್ದು 949ರಲ್ಲಿ ಎನ್ನುವುದು ಖಚಿತ. ರನ್ನನ ಕಾಲವನ್ನು ಸಾಮಾನ್ಯವಾಗಿ 993 ಎಂದು ನಿಗದಿಪಡಿಸುವುದು ವಾಡಿಕೆ. ಇದಕ್ಕೆ ಅಜಿತಪುರಾಣದ ಕಾಲ 993 ಎಂದು ಸ್ಪಷ್ಟವಾಗಿರುವುದೇ ಕಾರಣ. ರನ್ನ ಅಜಿತಪುರಾಣವನ್ನು ಅತ್ತಿಮಬ್ಬೆಯ ಆಶ್ರಯದಲ್ಲಿ ಬರೆದಿರುವನಾದರೂ ಒಂದು ರೀತಿಯಲ್ಲಿ ಬರೆದನೆಂದು ಹೇಳಬಹುದಾಗಿದೆ. ಆದ್ದರಿಂದ ರನ್ನನ ಕಾಲಗ್ರಹಿಕೆಯಲ್ಲಿ ತೈಲಪನ ಆಳ್ವಿಕೆಯ ಕಾಲ ಸಹಜವಾಗಿಯೇ ಗಮನಕ್ಕೆ ಬರುತ್ತದೆ. ಸತ್ಯಾಶ್ರಯವನ್ನು ಸಮೀಕರಿಸಿ ಗದಾಯುದ್ಧವನ್ನು ಬರೆದಿದ್ದರಿಂದ ಈ ಕಾವ್ಯದ ಕಾಲ ಸತ್ಯಾಶ್ರಯನ ಕಾಲಕ್ಕಿಂತ ಬೇರೆಯಾಗುವುದು ಸಾಧ್ಯವಿಲ್ಲ. ಈ ಕಾರಣದಿಂದ ಗದಾಯುದ್ಧದ ಕಾಲವನ್ನು 1005 ಎಂದು ಗುರುತಿಸಲಾಗಿದೆ. ಕವಿ 1020ರಲ್ಲಿ ತೀರಿಕೊಂಡಿರಬೇಕೆಂದು ಅಭಿಪ್ರಾಯವಿದೆ.

ರನ್ನನಿಗೆ ಕವಿರತ್ನ, ಕವಿಮುಖಚಂದ್ರ, ಕವಿಚಕ್ರವರ್ತಿ, ಕವಿರಾಜಶೇಖರ, ಕವಿಜನಚೂಡಾರತ್ನ, ಕವಿಚರ್ತುಮುಖ, ಉಭಯಕವಿ ಮೊದಲಾದ ಬಿರುದುಗಳಿವೆ. 'ಉಭಯ ಕವಿನ ಎಂದಿರುವುದರಿಂದ ಸಂಸ್ಕøತದಲ್ಲಿಯೂ ಬರೆದಿರಬಹುದೆ ಎಂಬ ಅನುಮಾನ ಬರುವುದು ಸಹಜ. ಆದರೆ ಅದಕ್ಕೆ ಆಧಾರಗಳಿಲ್ಲ. ರನ್ನ ತನ್ನನ್ನು 'ಉಭಯ ವ್ಯಾಕರಣ ಪಂಡಿತ ಎಂದು ಹೇಳಿಕೊಂಡಿರುವುದರಿಂದ, ಇವನಿಗೆ ವ್ಯಾಕರಣದಲ್ಲಿಯೂ ಪ್ರವೇಶವಿದ್ದಿರಬೇಕೆಂದು ತೋರುವುದು. ರನ್ನನು 'ರನ್ನಂವೈಯಾಕರಣಂ ಎಂದು ಹೇಳಿರುವುದರಿಂದ ಇದು ಮತ್ತಷ್ಟು ಬಲಪಡುವುದು. ಈತ 'ರನ್ನ ನಿಘಂಟು ರಚಿಸಿರುವ ಹಿನ್ನೆಲೆಯಲ್ಲಿ ನೋಡಿದರೆ, ಇಂತಹ ಪ್ರಯೋಗವನ್ನು ಇವನು ಮಾಡಿರಲೂಬಹುದು.

ರನ್ನ ತನ್ನ ಕಾವ್ಯದಲ್ಲಿ ವ್ಯಾಸ ವಾಲ್ಮೀಕಿಯರನ್ನೂ ಕಾಳಿದಾಸ ಬಾಣವನ್ನೂ ನೆನೆದಿದ್ದಾನೆ. 'ಗದಾಯುದ್ಧ ದ ಮೇಲೆ ಪ್ರಭಾವ ಬೀರಿದ ಪಂಪ, ಭಾಸ, ಭಟ್ಟ ನಾರಾಯಣರನ್ನು ನೆನೆಯದಿರುವುದು ಆಶ್ಚರ್ಯ. ಆದರೆ ಅಜಿತಪುರಾಣದಲ್ಲಿ ಪಂಪನ ಸ್ಮರಣೆಯಿದೆ. ಪಂಪ, ಪೊನ್ನ, ರನ್ನ-ಈ ಮೂವರು ಜಿನ ಸಮಯ ದೀಪಕರ್ ಎಂದು ಹೇಳುತ್ತಾನೆ. ಕವಿಗಳಲ್ಲಿ ಪುಣ್ಯವಂತರೂ ಕೃತಾರ್ಹರೂ ಸೊಬಗರೂ ಆದವರು ಇಬ್ಬರೇ; ಕವಿತಾಗುಣಾರ್ಣದ ಮತ್ತು ಕವಿರತ್ನ ಎಂದು ಹೇಳುವಲ್ಲಿಯೂ ಪಂಪನ ಉಲ್ಲೇಖವಿದೆ. ರನ್ನ ತನ್ನ ಕಾವ್ಯಶಕ್ತಿಯನ್ನು ಕುರಿತು ಅನೇಕ ಮಾತುಗಳಲ್ಲಿ ಹೇಳಿಕೊಂಡಿದ್ದಾನೆ. ಅವುಗಳಲ್ಲಿ ವಾಗ್ದೇವಿಯ ಭಂಡಾರದ ಮುದ್ರೆಯ ನೋಡೆದಂಎಂಬುದು ಒಂದು; ತನ್ನ ಕೃತಿಯನ್ನು ಪರೀಕ್ಷಿಪಂಗೆಂಟೆರ್ದೆಯೇ ಎಂಬುದು ಮತ್ತೊಂದು. ಇದು ತನ್ನ ಕಾವ್ಯಶಕ್ತಿಯ ಬಗ್ಗೆ ಪೂರ್ಣ ವಿಶ್ವಾಸವಿರುವ ಕವಿಯ ಸವಾಲು.

ರನ್ನ ಬರೆದಿರುವ ಕೃತಿಗಳು ಎಷ್ಟು ಎಂಬ ಬಗ್ಗೆ ಜಿಜ್ಞಾಸೆಯಿದೆ. ಕವಿಯೇ ಹೇಳಿರುವಂತೆ ಪರಶುರಾಮ ಚರಿತೆ, ಚಕ್ರೇಶ್ವರ ಚರಿತೆ, ಅಜಿತಪುರಾಣ, ಸಾಹಸಭೀಮವಿಜಯ, ರನ್ನಕಂದ-ಈ ಐದು ಕೃತಿಗಳನ್ನು ರಚಿಸಿರುವಂತೆ ತೋರುತ್ತದೆ. ಮೊದಲೆರಡು ಕೃತಿಗಳು ದೊರೆಯದಿರುವುದರಿಂದ, ಅನೆಕ ಊಹೆಗಳಿಗೆ ಎಡೆಮಂಡಿ ಕೊಟ್ಟಿದೆ. ಪರಶುರಾಮಚರಿತ, ಚಾವುಂಡರಾಯನನ್ನು (ಸಮರ ಪರಶುರಾಮ ಎಂಬ ಬಿರುದಾಂಕಿತ) ಕುರಿತ ಕೃತಿಯಾಗಿರಬೇಕು. ರನ್ನನಿಗೆ ಮೊದಲು ಆಶ್ರಯ ಕೊಟ್ಟವನು ಚಾವುಂಡರಾಯನಾದುದರಿಂದ, ತನ್ನ ಮೊದಲ ಕೃತಿಯನ್ನು ಅವನ ಪರವಾಗಿ ಬರೆದಿರಬೇಕು. ಇದರಲ್ಲಿ ಚಾವುಂಡರಾಯನ ಚರಿತೆಯಂತೆಯೇ ಪುರಾಣ ಪರಶುರಾಮನ ಕಥೆಯೂ ಸೇರಿರಬೇಕು. 'ಚಕ್ರೇಶ್ವರಚರಿತ ತೈಲಪ ಚಕ್ರವರ್ತಿಯನ್ನು ಕುರಿತದ್ದೆಂಬುದಕ್ಕೆ ಆಧಾರಗಳಿವೆ. ರನ್ನನಿಗೆ ತೈಲಪ ಪ್ರಮುಖ ಆಶ್ರಯದಾತ; 'ಕವಿಚಕ್ರವರ್ತಿ ಬಿರುದನ್ನು ಕೊಟ್ಟವನು. ಆದ್ದರಿಂದ 'ಚಕ್ರೇಶ್ವರ ಚರಿತ ತೈಲಪನನ್ನು ಕುರಿತದ್ದೆಂಬುದು ಸ್ಪಷ್ಟ. ಇದು ಪೂರ್ಣ ಐತಿಹಾಸಿಕ ಕಾವ್ಯವಾಗಿರುವ ಸಾಧ್ಯತೆಯೂ ಇದೆ. 'ರನ್ನಕಂದ ಒಂದು ನಿಘಂಟು. ಪದಗಳಿಗೆ ಅರ್ಥವನ್ನು ಕಂದಪದ್ಯ ರೂಪದಲ್ಲಿ ಬರೆದಿರುವುದ ಇದರ ವಿಶೇಷ. ನಿಘಂಟುಗಳಲ್ಲಿ ಇದು ಪ್ರಾಚೀನವಿರಬೇಕೆಂದು ತೋರುವುದು. ಅಸಮಗ್ರವಾಗಿ ದೊರೆತಿರುವುದರಿಂದ ಕವಿ, ಕೃತಿ ವಿಷಯವಾಗಿ ಹೆಚ್ಚಿನ ವಿಚಾರಗಳು ತಿಳಿಯುವುದಿಲ್ಲ. ದೊರೆತಿರುವ ಪದ್ಯಗಳಲ್ಲಿ ಕವಿರತ್ನ ಎಂದಿರುವುದರಿಂದ ಇದು ರನ್ನನ ಕೃತಿ ಎಂದು ಭಾವಿಸಲು ಯಾವ ಅಡ್ಡಿಯೂ ಇಲ್ಲ.

ಅಜಿತತೀರ್ಥಂಕರಪುರಾಣ ಧಾರ್ಮಿಕ ಕಾವ್ಯ. ಎರಡನೆಯ ತೀರ್ಥಂಕರನ ಕಥೆ ಇದರ ವಸ್ತು. ಇದನ್ನು 'ಪುರಾಣ ತಿಲಕ ಎಂದು ಕವಿಯೇ ಹೇಳಿಕೊಂಡಿದ್ದಾನೆ. ಆದಿಪುರಾಣ ಮತ್ತು ಶಾಂತಿಪುರಾಣಗಳಿಗೆ ಸಮಾನವಾದ ಕೃತಿಯೆಂದು ಇದರ ಅಭಿಪ್ರಾಯ. 'ಆದಿಪುರಾಣ' ದ ಕಥಾವೈಭವ ಇದಕ್ಕಿಲ್ಲದಿರುವುದರಿಂದ, ಅದರ ಎತ್ತರಕ್ಕೆ ಏರಲಾರದೆಂದೇ ತೋರುತ್ತದೆ. ಆದರೆ ಪೊನ್ನನ ಶಾಂತಿಪುರಾಣಕ್ಕಿಂತ ಇದು ಉತ್ತಮ ಕೃತಿ ಎಂದು ದೃಢವಾಗಿ ಹೇಳಬಹುದು. ಇದರಲ್ಲಿ ಹನ್ನೆರಡು ಆಶ್ವಾಸಗಳಿದ್ದು, ಮೊದಲನೆಯ ಆಶ್ವಾಸ ಪೂರ್ಣವಾಗಿ ಆಶ್ರಯದಾತೆ ಅತ್ತಿಮಬ್ಬೆಯ ಚಿತ್ರಣಕ್ಕೆ ಮೀಸಲಾಗಿದೆ. ಕೊನೆಯ ಆಶ್ವಾಸದಲ್ಲಿ ಗ್ರಂಥಸಮಾಪ್ತಿ. ಕವಿಕಾವ್ಯ ಆಶ್ರದಾತರ ವಿಚಾರವಿದೆ. ಇನ್ನುಳಿದ ಹತ್ತು ಆಶ್ವಾಸಗಳಲ್ಲಿ ಏಳರಲ್ಲಿ ಅಜಿತತೀರ್ಥಂಕರನ ಕಥೆಯೂ ಆಮೇಲಿನ ಮೂರರಲ್ಲಿ ಸಾಗರ ಚಕ್ರವರ್ತಿಯ ಕಥೆಯೂ ಬಂದಿದೆ. ಭವಾವಳಿಯ ಗೊಂದಲವಿಲ್ಲದಿರುವುದು ಈ ಕೃತಿಯ ವಿಶೇಷ. ಗ್ರಂಥದ ರಸವತ್ತಾದ ಭಾಗಗಳೆಂದರೆ ಅತ್ತಿಮಬ್ಬೆ ಮತ್ತು ಸಾಗರಚಕ್ರವರ್ತಿ ಕಥೆಗಳ ಭಾಗಗಳೆ ಆಗಿವೆ. ಜೈನಧರ್ಮಕ್ಕೆ ಸಂಬಂಧಿಸಿದ ವಿಷಯಗಳನ್ನು ತೊಡಕಿಲ್ಲದೆ ನಿರೂಪಿಸಿರುವುದರಿಂದ ಆ ಕುರಿತು ಒಂದು ಶಾಸ್ತ್ರೀಯ ಗ್ರಂಥವೂ ಆಗಿದೆ.

ರನ್ನನ ಕೃತಿಗಳಲ್ಲಿ ಸಾಹಸಭೀಮವಿಜಯ ಅತಿ ಮುಖ್ಯವಾದುದು. ಇವನ ಲೌಕಿಕ ಕೃತಿಗಳಲ್ಲಿ ಉಪಲಬ್ಧವಿರುವಂಥದು ಇದೊಂದೇ. ಗದಾ ಸೌಪ್ತಿಕ ಪರ್ವಗಳ ಕಥೆಯೇ ಇದರ ವಸ್ತು. ಸಂದರ್ಭ ಒದಗಿದಾಗಲೆಲ್ಲಾ ಹಿಂದಿನ ಕಥೆಯನ್ನು ಸೂಚಿಸುವ ವಿಧಾನವನ್ನು ಅನುಸರಿಸುವುದರಿಂದ (ಸಿಂಹಾವಲೋಕನ) ಕಾವ್ಯಕ್ಕೆ ಸಮಗ್ರತೆ ಪ್ರಾಪ್ತವಾಗಿದೆ. ಹತ್ತು ಆಶ್ವಾಸಗಳಲ್ಲಿ ಹರಡಿಕೊಂಡಿರುವ ಈ ಕಾವ್ಯದಲ್ಲಿ ಭೀಮ-ದುರ್ಯೋಧನರ ಗದಾಯುದ್ಧವೇ ಕೇಂದ್ರಬಿಂದು. ಅದರ ಕಾರಣ ಮತ್ತು ಪರಿಣಾಮಗಳನ್ನು ಕೃತಿ ಆದ್ಯಂತ ಸೂಚಿಸುತ್ತದೆ. ಕೃತಿಗೆ 'ಸಾಹಸಭೀಮವಿಜಯ ಎಂದು ಹೆಸರಿದ್ದರೂ ಗದಾಯುದ್ಧ ಎಂದೇ ಇದರ ಖ್ಯಾತಿ. ಮಹಾಭಾರತದ ಭೀಮನೊಡನೆ ಆಶ್ರದಾತನಾದ ಸತ್ಯಾಶ್ರಯ ಚಕ್ರವರ್ತಿಯಾದ ಮೇಲೆಯೇ ರನ್ನ ಈ ಕಾವ್ಯವನ್ನು ಬರೆದಿರಬೇಕೆನಿಸುತ್ತದೆ. ಪುರಾಣಕಥೆಯಲ್ಲಿ ಸಮಕಾಲೀನ ಇತಿಹಾಸವನ್ನು ಸಮೀಕರಿಸುವುದರ ಮೂಲಕ ಕಾವ್ಯದಲ್ಲಿ ಹೊಸಧ್ವನಿಯನ್ನು ಉಂಟುಮಾಡಬೇಕೆಂಬ ರನ್ನನ ಧೋರಣೆಗೆ ಪಂಪನೇ ಆದರ್ಶ. ಕಥಾನಾಯಕ ಭೀಮನಾದರೂ ದುರ್ಯೋಧನನ ಪಾತ್ರವೇ ಹೆಚ್ಚು ಜೀವಂತವಾಗಿ ಚಿತ್ರಣಗೊಂಡಿದೆ. ಈತ ಕಾವ್ಯದಲ್ಲಿ ದುರಂತನಾಯಕನಾಗಿ ಕಂಡರಣೆಗೊಂಡಿದ್ದಾನೆ. ಪಂಪನನ್ನು ಅನುಸರಿಸಿಯೂ ಅವನಿಗೆ ಸಾಕಷ್ಟು ಋಣಿಯಾಗಿಯೂ ರನ್ನ ಮಹತ್ವದ ಕಾವ್ಯ ನಿರ್ಮಿಸಿದ ಎಂಬುದು ಮುಖ್ಯ ವಿಚಾರ. (ಆರ್.ಜಿ.)