ಪುಟ:Chirasmarane-Niranjana.pdf/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



೯೪

ಚಿರಸ್ಮರಣೆ

ಆ ಮಾತಿನ ಧ್ವನಿಯಿಂದ ಮಾಸ್ತರನ್ನು ಆಳೆಯಲೆತ್ನಿಸುತ್ತ ನಂಬಿಯಾರರೆಂದರು:
"ಅವಸರವೇನೂ ಇಲ್ಲವಷ್ಟೆ?"
"ಛೆ! ಛೆ! ಎಂಧ ಅವಸರ?"
"ಹುಡುಗರೆಲ್ಲ ಆಗಲೇ ಮನೆಗೆ ಹೋಗಿರಬೇಕು."

   "ಹೌದು, ಹೌದು. ಆಟಗಳನ್ನು ಆಡಿಸಿ ಕಳಿಸ್ಟಿಟ್ಟೆ."
"ಅಂದಮೇಲೆ ಬೇಕಾದಷ್ಟು ಬಿಡುವಿದೆ ಅಂತಾಯ್ತು."

ರೈತರಿಗೆ ಪತ್ರಿಕೆಯೋದಿ ಹೇಳುವ ಕೆಲಸವಿದೆಯೆಂದು ಮಾಸ್ತರರ ಬಾಯಿಯಿಂದಲೇ ಹೊರಡಿಸಲು ನಂಬಿಯಾರರು ಯತ್ನಿಸಿದರು. ಆದರೆ ಆ ಮಾಸ್ತರು ಅಷ್ಟು ಸುಲಭವಾಗಿ ಬಲೆಯ ಬಳಿಗೆ ಸುಳಿಯುವ ಮೀನಾಗಿರಲಿಲ್ಲ. ಅವರು ಎಂದರು:
"ನೀವು ಸರಿಯಾಗೇ ಹೇಳಿದಿರಿ. ಹೊತ್ತು ಕಳೆಯೋದು ಕಷ್ಟ ಅಂತ ಪತ್ರಿಕೆ ತರಿಸ್ಕೊಂಡು ಓದ್ತಾ ಇರ್ತೇನೆ."
'ಎಲಾ!' ಎಂದರು ನಂಬಿಯಾರರು ಮನಸ್ಸಿನೊಳಗೇ. 'ನನಗೇ ಇಟ್ಟನಲ್ಲ!' ಬಹಿರಂಗವಾಗಿ ಗಾಂಭೀರ್ಯದ ಮುಖವಾಡ ಧರಿಸುತ್ತ, ಅವರು ಹೇಳಿದೆರು: "ಆ ವಿಷಯವಾಗಿಯೇ ಮಾತನಾಡೋಣಾಂತ ನಿಮ್ಮನ್ನು ಕರೆಸ್ದೆ. ರೈತರೆಲ್ಲ ಸಾಯಂಕಾಲದ ಹೊತ್ತು ಶಾಲೆಯ ಜಗಲೀಲಿ ಸೇರ್ತಾರಂತೆ. ಅವರಗೇನೊ ಬುದ್ದಿ ಇಲ್ಲ, ಹೊಲಸು ಜನ. ನೀವು ಪಾಪ, ಏನೂ ತೀಳೀದೆ ಅವರ ಜತೇಲಿ ಮಾತಾಡ್ತಾ ಇರ್ತೀರಿ. ಅವರೆಂಥವರು ಅನ್ನೋದು ನಿಮಗೆ ಗೊತ್ತಿಲ್ಲ. ಬೆಟ್ಟು ಕೊಟ್ಟರೆ ಸಾಕು, ಕ್ಕೆಯನ್ನೇ ನುಂಗೋ ಜಾತಿ."
ಮುಖ ಕೆಂಪೇರುವ ಹಾಗಾದರೂ ಮಾಸ್ತರು ತಾಳ್ಮೆಯಿಂದಿದ್ದು, ಸದ್ದಿಲ್ಲದೆ, ಜಮೀನ್ದಾರರ ಕಣ್ಣು ತಪ್ಪಿಸಿ ಉಗುಳು ನುಂಗಿದರು.
"ಹಾಗೇನೂ ಇಲ್ಲ" ಎಂದು ಅವರ ನಾಲಿಗೆ ಮೆಲ್ಲನೆ ನುಡಿಯಿತು.
"ನಿಮಗೆ ತಿಳಿಯೋದಿಲ್ಲ ಮಾಸ್ತರೆ. ಈ ಜನ ಎಂಥವರು ಅನ್ನೋದು ನನಗೆ ಗೊತ್ತಿದೆ! ನಾವು ಅವರನ್ನು ದೂರವಿಟ್ಟರೆ ಮಾತ್ರ ಅವರು ನಮ್ಮನ್ನು ಗೌರವಿಸುತ್ತಾರೆ. ವಿದ್ಯೆ ಇಲ್ಲದೋರು. ಸಂಸ್ಕತದಲ್ಲಿ ಅದೇನೋ ಗಾದೆ ಇದೆಯಲ್ಲ, ಹಾಗೆ-ಬರೇ ಮೃಗಗಳು. ಅವರನ್ನು ಮೃಗಗಳೆಂದೇ ನೋಡ್ಬೇಕು. ಅವಕ್ಕೆ ಅರ್ಥ ಒಂದೇ ಭಾಷೆ, ಬಾರುಕೋಲಿನ ಭಾಷೆ. ಏನು ಹೇಳ್ತೀರಾ?ಮಾಸ್ತರು ಏನೂ ಹೇಳಲಿಲ್ಲ. ಅವರ ಮುಖ ಮತ್ತೂ ಕೆಂಪಗಾಯಿತು, ತುಟಿಗಳು ಸೂಕ್ಷ್ಮವಾಗಿ ಕಂಪಿಸಿದುವು. ಪತ್ರಿಕೆಯನ್ನು ಹಿಡಿದಿದ್ದ ಮುಷ್ಠಿ