ಶಬ್ದವನ್ನು ಬಳಸಿದ್ದಾನೆ. ಲವಣನಿಗೆ ತನ್ನ ತಂದೆಯ ಪುಣ್ಯದಿಂದ ಶೂಲವು
ದೊರಕಿತ್ತು. ಆದರೆ ಲವಣನ ದುಷ್ಟವರ್ತನೆಯಿಂದ ಅದು ಅವನ ಬಳಿ
ಉಳಿಯಲಿಲ್ಲ. ಹೀಗಿರುವದರಿಂದ ಇದು ಲವಣನಿಗೆ ದೊರೆತ ವರವಲ್ಲ. ಕೇವಲ
ತಂದೆಯಿಂದ ದೊರೆತ ವರದ ಬಾಧ್ಯತೆ ಎಂದೆನ್ನಬಹುದು.
೭೮. ವಸಿಷ್ಠ < ಕಲ್ಮಾಷಪಾದ (ಸೌದಾಸರಾಜ)
ಉತ್ತರಕಾಂಡ/೬೫
ರಾಮನು ಶತ್ರುಘ್ನನಿಗೆ ಅಭಿಷೇಕ ಮಾಡಿ ಲವಣಾಸುರನ ವಧೆಗೆಂದು
ಕಳುಹಿಸಿದನು. ಶತ್ರುಘ್ನನು ವಾಲ್ಮೀಕಿಯ ಆಶ್ರಮದಲ್ಲಿ ಒಂದು ರಾತ್ರಿಯನ್ನು
ಕಳೆದನು. ಅಲ್ಲಿಯೇ ಹತ್ತಿರದಲ್ಲಿ ಸಂಗ್ರಹಿಸಿಟ್ಟ ಯಜ್ಞಸಾಮಗ್ರಿಗಳನ್ನು ನೋಡಿ
ಶತ್ರುಘ್ನನು ವಾಲ್ಮೀಕಿಯನ್ನು ಕೇಳಿದಾಗ, ಆತನು ಸೌದಾಸರಾಜನ ಕಥೆಯನ್ನು
ನಿರೂಪಿಸಿದನು.
ಶಾಪ ಕ್ರಮಸಂಖ್ಯೆ, ೫೭, ವಸಿಷ್ಠ < ಸೌದಾಸ:
ಶಾಪ ಕ್ರಮಸಂಖ್ಯೆ ೫೮, ಸೌದಾಸ < ವಸಿಷ್ಠ- ಪರಿಶೀಲಿಸಿ.
ಸೌದಾಸರಾಜನು ಕಲ್ಮಾಷಪಾದನಾಗಿ ಪರಿವರ್ತಿತನಾದ ನಂತರ ಆತನು
ಪತ್ನಿಯನ್ನೊಡಗೂಡಿ ವಸಿಷ್ಠನಿಗೆ ಆಗಾಗ ವಂದಿಸಿ, ಬ್ರಾಹ್ಮಣವೇಷವನ್ನು ತಾಳಿದ
ಮಾಯಾವೀ ರಾಕ್ಷಸನು ಆಡಿದ ನುಡಿಗಳನ್ನು ಅವನಿಗೆ ವಿವರಿಸಿದನು. ಆಗ
ಮಾಯಾವೀ ರಾಕ್ಷಸನಿಂದ ನಡೆದ ಅನರ್ಥವು ವಸಿಷ್ಠನಿಗೆ ತಿಳಿಯಿತು. ಆತ
ಆತನು ಸೌದಾಸರಾಜನಿಗೆ-
ಮಯಾ ರೋಷಪರೀತೇನ ಯದಿದಂ ವ್ಯಾಹೃತಂ ವಚಃ |
ನೈತಚ್ಛಕ್ಯಂ ವೃಥಾ ಕರ್ತುಂ ಪ್ರದಾಸ್ಯಾಮಿ ಚ ತೇ ವರಮ್ ‖೩೫‖
ಕಾಲೋ ದ್ವಾದಶವರ್ಷಾಣಿ ಶಾಪಸ್ಯಾಂತೋ ಭವಿಷ್ಯತಿ |
ಮತ್ಪ್ರಸಾದಾಚ್ಚ ರಾಜೇಂದ್ರ ಅತೀತಂ ನ ಸ್ಮರಿಷ್ಯಸಿ ‖೩೬‖
“ನಾನು ಕೋಪಗೊಂಡು ಆಡಿದ ನುಡಿಯು ಎಂದಿಗೂ ಸುಳ್ಳಾಗಲಾರದು.
ಈಗ ನಾನು ನನಗೆ ಒಂದು ವರವನ್ನು ಕೊಡುತ್ತೇನೆ. ಹನ್ನೆರಡು ವರ್ಷಗಳು
ಕಳೆದ ನಂತರ ಈ ಶಾಪವು ಇಲ್ಲವಾದೀತು. ಹೇ ರಾಜನೇ, ನನ್ನ ಪ್ರಸಾದದಿಂದ
ನಿನಗೆ ಪೂರ್ವದ ಸ್ಮರಣೆ ಉಳಿಯಲಾರದು!” ಎಂದನು.