ಈ ಪುಟವನ್ನು ಪರಿಶೀಲಿಸಲಾಗಿದೆ
188 ಮಿಂಚು ನೆಟ್ಟ ದೃಷ್ಟಿಯಿಂದ ಮುಖ್ಯಮಂತ್ರಿಯನ್ನು ನೋಡಿದರು. ಆಕೆ ಬಿಳಿಹಾಳೆಯನ್ನು ಮುಂದಕ್ಕೆ ತಳ್ಳಿ ಅಂದರುಃ "ವಿದ್ಯಾಧರ್,ಆಗ ಹೇಳಿದೆನಲ್ಲ? ಅದನ್ನು ಬರೆದು ಬಿಡಿ. ಸಹಿ ಸಂಗ್ರಹ ಇಲ್ಲಿಂದಲೇ ಶುರುವಾಗಲಿ. ಅಂದ ಹಾಗೆನಮ್ಮ ಬೆಂಬಲಿಗರಿಂದ ಸಹಿ ಸಂಗ್ರಹಿಸುವುದು ನಿಮ್ಮದೇ ಹೊಣೆ." * * * ಅ ರಾತ್ರೆ ವಿಶ್ವಂಭರನ ಮನೆಯ ಮೇಲೆ ಕಲ್ಲುಗಳು ಬಿದ್ದು ವು. ವಿಶ್ವಂಭರನ ಫೋನ್ ಐ.ಜಿ.ಪಿ ಯನ್ನು ಎಬ್ಬಿಸಿತು. "ಕಿಟಿಕಿ ಗಾಜು ಒಡೆದಿದೆ." "ಪೋಲೀಸ್ ರಕ್ಷಣೆ ಬೇಕೂಂತ ನಾಳೆ ಕಮಿಾಷನರಿಗೆ ಒಂದು ಕಾಗದ ಬರೆದು ಬಿಡಿ. ಪೋಲೀಸರನ್ನು ಬೇಕಾದರೆ ಈಗಲೇ ಕಳಿಸ್ತೇನೆ." "ಥ್ಯಾಂಕ್ಸ್." ಸೋಜಿಗವೆಂದರೆ ಅದೇ ರಾತ್ರೆ ಮುಖ್ಯಮಂತ್ರಿಯ ನಿವಾಸ (ಗೃಹ ಕಾರಾಲಯ)ದ ಮೇಲೂ ಕಲ್ಲುಗಳು ಬಿದ್ದುವು. ಫೋನ್ ಬಂದಾಗ ಐ.ಜಿ.ಪಿ.ಯ ನಿದ್ದೆ ಪೂರ್ತಿ ಕರಗಿತು, ಮುಖ್ಯಮಂತ್ರಿಯ ಸ್ವರ. "ಕಲ್ತಾಣನಗರದಲ್ಲಿ ಇನ್ನು ಬದುಕೋದು ಹ್ಯಾಗ್ರಿ ? ಯಾರದು ಈ ಪುಂಡಾಟಿಕೆ ? ಇವರು ಯಾರು ಅನ್ನೋದು ನಿಮಗೆ ಗೊತ್ತಿದೆ. ಬೆಳಗಾಗೋದ ರೊಳಗೆ ಅವರನ್ನು ಬಂಧಿಸಿ ಲಾಕಪ್ಪಿನಲ್ಲಿಟ್ಟು ವಿಚಾರಣೆ ನಡೆಸಿ. ಇದು ಕಟ್ಟಪ್ಪಣೆ." "ಏನು ? ಏನಾಯಿತು ?" ಎಂದು ಕೇಳುತ್ತ ಐ.ಜಿ.ಪಿ.ಯ ಪತ್ನಿ ಗಡಬಡಿಸಿ ಎದ್ದರು. "ಮೋಹಿನಿಕಾಟ ! ಮೋಹಿನಿಕಾಟ !" ಎನ್ನುತ್ತ ಐ.ಜಿ.ಪಿ ಕಮಿಾಷನರಿಗೆ ಫೋನ್ ಮಾಡಿ, ರೌಡಿಗಳ ಒಂದು ತಂಡವನ್ನು ಹಿಡಿದು ಕೇಂದ್ರ ಸ್ಟೇಷನಿನ ಲಾಕಪ್ಪಿ ನಲ್ಲಿಡಲು ಹೇಳಿದರು. ಬೆಳಗಾಯಿತು. ಐ.ಜಿ.ಪಿ.ಗೆ ವರದಿ ಬಂತು : "ಎರಡೂ ಕಡೆ ಕಲ್ಲೆಸೆದದ್ದು ಒಂದೇ ರೌಡಿ ತಂಡ. ಎರಡು ಕಡೆಗಳಿಂದಲೂ ಅವರು ಹಣ ಪಡೆದಿದ್ದಾರೆ." "ಎಚ್ಚರಿಕೆ ಕೊಟ್ಟಿ ಬಿಟ್ಟಿಡಿ." ವಿಶ್ವಂಭರರ ಮನೆಯ ಮೇಲೆ ಬಿದ್ದ ಕಲ್ಲುಗಳಿಗೂ ಮುಖ್ಯಮಂತ್ರಿಯ ನಿವಾಸದ ಮೇಲೆ ಬಿದ್ದ ಕಲ್ಲುಗಳಿಗೂ ಸಂಬಂಧವಿದೆಯೆ ? ಅವೆಲ್ಲ ಒಂದೇ ಬಂಡೆಯ ಮಕ್ಕಳೆ ? ಎಂಬ ಜಿಜ್ಞಾಸೆ ಆ ದಿನ ಪತ್ರಿಕಾ ವಾಚಕರಲ್ಲಿ ನಡೆಯಿತು.