ಹೇಳಿಕೊಡುತ್ತಿದ್ದಾರೆ, ನಮ್ಮಲ್ಲಿ ಟ್ರೈನಿಂಗ್ ಆಗಿಲ್ಲದ ಉಪಾಧ್ಯಾಯರು ಹಲವರಿದ್ದಾರೆ. ಟ್ರೈನಿಂಗ್ ಆಗಿಲ್ಲದವರನ್ನೇ ಮೊದಮೊದಲು ನೇಮಕ ಮಾಡುತ್ತೀರಿ. ಆಮೇಲೆ ಯಾವಾಗಲೋ ಟ್ರೇನಿಂಗಿಗೆ ಕಳಿಸಿಕೊಡುತ್ತೀರಿ, ಟ್ರೈನಿಂಗ್ ಸಹ ಸಮರ್ಪಕವಾಗಿಲ್ಲ. ಆದ್ದರಿಂದ ಇಂಗ್ಲೆಂಡನ್ನೂ ನಮ್ಮ ದೇಶವನ್ನೂ ಹೋಲಿಸುವುದು ಬೇಡ ಎಂದು ಹೇಳಿದರೂ ಅವರು ಕೇಳಲಿಲ್ಲ ' ಸಿಟ್ ಡೌನ್ –ಕುಳಿತುಕೊಳ್ಳಿ' ಎಂದು ಹೇಳಿ ನನ್ನನ್ನು ಕೂಡಿಸಿ ಬಿಟ್ಟರು. ಇಂಗ್ಲೆಂಡ್ ಮೊದಲಾದ ಕಡೆಗಳಲ್ಲಿ ಉಪಾಧ್ಯಾಯರ ಮಾತೃಭಾಷೆಯಲ್ಲೇ ಸಾವಿರಾರು ಪುಸ್ತಕಗಳು ದೊರೆಯುತ್ತವೆ. ಅವರಿಗೆ ಇತರ ಸೌಕರ್ಯಗಳೂ ಇವೆ. ನಮ್ಮಲ್ಲಿ ಮೇಷ್ಟರಿಗೆ ಇಂಗ್ಲೀಷು ಬರುವುದಿಲ್ಲ ; ಕನ್ನಡದಲ್ಲಿ ತಕ್ಕಷ್ಟು ಪುಸ್ತಕಗಳಿಲ್ಲ. ಇರುವ ಸ್ಥಿತಿಯನ್ನು ನಾವು ಹೇಳಲು ಹೋದರೆ ಆ ದೊಡ್ಡ ದೊಡ್ಡ ಸಾಹೇಬರುಗಳು ನಮ್ಮನ್ನು ಬಹಳ ಕೀಳಾಗಿ ಕಾಣುತ್ತಾರೆ. ನನಗೇಕೋ ಬಹಳ ಬೇಜಾರಾಗಿ ಹೋಯಿತು ತಿಮ್ಮರಾಯಪ್ಪ !?
ರಂಗಣ್ಣ ! ನನಗೆ ಇದೆಲ್ಲ ಗೊತ್ತು ಕಾಣಪ್ಪ , ಅದಕ್ಕೇನೇ ನಾನು ನಿನಗೆ ಹೇಳಿದ್ದು : ಯಾವುದನ್ನೂ ಹೆಚ್ಚಾಗಿ ಮನಸ್ಸಿಗೆ ಹಚ್ಚಿಸಿಕೊಂಡು ಹೋಗಬೇಡ ಎಂದು. ಶಿವನಾಣೆ ! ನಿನಗೆ ಹೇಳುತ್ತೇನೆ, ಕೇಳು, ದೇಶ ಉದ್ಧಾರವಾಗಬೇಕು, ಜನ ಮುಂದಕ್ಕೆ ಬರಬೇಕು- ಎಂದು ಯಾವ ಮಹಾರಾಯನಿಗೂ ಮನಸ್ಸಿನಲ್ಲಿಲ್ಲ. ತಾವು ತಾವು ನಾಲ್ಕು ಜನರ ಹತ್ತಿರ ಒಳ್ಳೆಯವರು ಎಂದು ಅನ್ನಿಸಿಕೊಂಡು, ಬೋರೇಗೌಡನ ಹಣವನ್ನು ದಾಮಾಷಾ ಪ್ರಕಾರ ಹಂಚಿಕೊಂಡು ಕಾಲ ಕಳೆಯಬೇಕು ಎಂಬುವುದೇ ಅವರ ಹಂಚಿಕೆ.'
ಅದು ಹೇಗೆ ಮನಸ್ಸಿಗೆ ಹಚ್ಚಿ ಸಿಕೊಳ್ಳದೇ ಇರುವುದು ? ಹೇಳು ತಿಮ್ಮರಾಯಪ್ಪ, ನಿನ್ನೆಯ ದಿನ ರೈಲಿನಲ್ಲಿ ನಿಮ್ಮ ಜನರ ಮುಖಂಡರೊಬ್ಬರು ಕಲ್ಲೇಗೌಡರು- ಕಾಲು ಕೆರೆದುಕೊಂಡು ಜಗಳಕ್ಕೆ ನಿಂತರು. ಅವರ ಕಟ್ಟಡವೊಂದನ್ನು ಸ್ಕೂಲಿಗೆ ಹತ್ತು ರುಪಾಯಿ ಬಾಡಿಗೆಗೆ ತೆಗೆದುಕೊಂಡಿದ್ದೆವೆ. ಕಟ್ಟಡ ಯುಗಾಂತರದ್ದು ; ರಿಪೇರಿ ಆದದ್ದು ಕ್ರಿಸ್ತ ಪೂರ್ವದಲ್ಲೋ ಏನೋ ! ಸ್ವಲ್ಪ ರಿಪೇರಿ ಮಾಡಿಸಿಕೊಡಿ ಎಂದರೆ