ಹೀಗೆ ನಿಷ್ಕಾರಣವಾಗಿ ಪ್ರಬಲ ವಿರೋಧವೊಂದು ರಂಗಣ್ಣನಿಗೆ ಗಂಟು ಬಿತ್ತು.
ಇನ್ನೊಂದು ಕಡೆ ಕರಿಯಪ್ಪನ ಅಣ್ಣನ ಮಗನಿಗೆ ಸ್ಕಾಲರ್ ಷಿಪ್ಪು ನಿಂತು ಹೋಗಿತ್ತಷ್ಟೆ. ಸಾಹೇಬರ ಅಪ್ಪಣೆಪ್ರಕಾರ ಹಾಗೆ ನಿಂತು ಹೋಗಿದ್ದ ಸ್ಕಾಲರ್ ಷಿಪ್ಪನ್ನು ಈಚೆಗೆ ಬೇರೆ ಹುಡುಗನಿಗೆ ಕೊಟ್ಟಿದ್ದಾಯಿತು. ಸ್ಕಾಲರ್ ಷಿಪ್ಪು ನಿಂತುಹೋಗಿದ್ದ ಲಾಗಾಯಿತು ಕರಿಯಪ್ಪನಿಗೆ ಇನ್ ಸ್ಪೆಕ್ಟರ ಮೇಲೆ ದ್ವೇಷವಿದ್ದೇ ಇತ್ತು. ಆದರೆ ನಿಲ್ಲಿಸಿದ್ದ ಸ್ಕಾಲರ್ ಷಿಪ್ಪನ್ನು ತನಗೆ ಹೆದರಿಕೊಂಡು ಪುನಃ ತನ್ನ ಅಣ್ಣನ ಮಗನಿಗೇನೇ ಕೊಟ್ಟು ಬಿಡಬಹುದು ಎಂಬ ಒಂದು ನಿರೀಕ್ಷಣೆ ಇತ್ತು. ಆದರೆ ಈಗ ಆ ಸ್ಕಾಲರ್ ಷಿಪ್ಪು ಅರ್ಜಿದಾರನ ಮಗನಿಗೆ ಸಂದಾಯವಾಯಿತು ; ತನ್ನ ಅಣ್ಣನ ಮಗನಿಗೆ ತಪ್ಪೇ ಹೋಯಿತು. ಈ ಕಾರಣದಿಂದ ಕರಿಯಪ್ಪನಿಗೂ ರಂಗಣ್ಣನ ಮೇಲೆ ಬಲವಾಗಿ ದ್ವೇಷ ಬೆಳೆಯಿತು. ಆದರೆ ಆತ ಏನೊಂದು ಗರ್ಜನೆಗಳನ್ನೂ ಮಾಡದೆ ದಿವಾನರಿಗೆ ಕಾಗದವನ್ನು ಬರೆದುಬಿಟ್ಟನಂತೆ!
ಕೆಲವು ದಿನಗಳಾದಮೇಲೆ ಸಾಹೇಬರ ತನಿಖೆಯ ಮತ್ತು ಭೇಟಿಗಳ ಟಿಪ್ಪಣಿಗಳು ಬಂದುವು. ಕಚೇರಿಯ ವಿಚಾರದಲ್ಲೂ ರಂಗಣ್ಣನ ಕೆಲಸದ ವಿಚಾರದಲ್ಲಿ ಹೆಚ್ಚು ಆಕ್ಷೇಪಣೆ ಇರಲಿಲ್ಲ; ಕೆಲವು ಮೆಚ್ಚಿಕೆಯ ಮಾತುಗಳೇ ಇದ್ದು ವು. ಆದರೆ ಪಾಠ ಶಾಲೆಗಳ ವಿಚಾರದಲ್ಲಿ ಸಾಹೇಬರು ಬಹಳ ಕಠಿನ ಚಿತ್ತರಾಗಿ ಯೂ ಬಹಳ ದುಡುಕಿಯೂ ಆಜ್ಞೆಗಳನ್ನು ಮಾಡಿದ್ದಾರೆಂದು ರಂಗಣ್ಣನು ಬಹಳ ವ್ಯಥೆಪಟ್ಟನು. ದಾಖಲೆಯಲ್ಲಿಲ್ಲದ ಮಕ್ಕಳನ್ನು ಪಾಠಶಾಲೆಯಲ್ಲಿ ಕೂಡಿಸಿಕೊಂಡಿದ್ದ ತಿಪ್ಪೇನಹಳ್ಳಿಯ ಮೇಷ್ಟರಿಗೆ ಮೂರು ರುಪಾಯಿ, ಮತ್ತು ಶತ್ರು' ಎಂಬ ಪದವನ್ನು 'ಶತೃ' ಎಂದು ಬರೆದಿದ್ದ ಸೀತಮ್ಮನಿಗೆ ಮೂರು ರುಪಾಯಿ ಜುಲ್ಮಾನೆಗಳನ್ನು ಹಾಕಿದ್ದರು ! ಸುಂಕೇನಹಳ್ಳಿಯ ಮೇಷ್ಟು ಹಳ್ಳಿಯಲ್ಲೇ ವಾಸಮಾಡಬೇಕೆಂದೂ ಹಳ್ಳಿಯಲ್ಲಿ ಮನೆಗಳಿರುವುದು ಸ್ಪಷ್ಟವಾಗಿರುವುದೆಂದೂ ತಿಳಿಸಿ, ಆ ಬಗ್ಗೆ ಇನ್ಸ್ಪೆಕ್ಟರು ಹಿಂದೆ ಕಳಿಸಿದ್ದ ದಾಖಲೆಗಳು ಕಚೇರಿಯಲ್ಲಿ ದೊರೆಯದ್ದರಿಂದ ದುಯ್ಯಂ ಪ್ರತಿಗಳನ್ನು ಮಾಡಿ ಕಳಿಸಬೇಕೆಂದೂ ಆಜ್ಞೆ ಮಾಡಿದ್ದರು. ಮೇಲಿನವರ ಅಪ್ಪಣೆಗಳನ್ನು ಪಾಲಿಸದಿದ್ದರೆ ಮಹಾಪ