ಪುಟ:Chirasmarane-Niranjana.pdf/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೬೬  ಚಿರಸ್ಮರಣೆ
ಏನು? ಯಾಕೆ? ಎಂದು ಯೋಚಿಸಿದಾಗ, ವಿಷಯ ಸ್ಪಷ್ಟವಾದಂತೆ ಚಿರುಕಂಡನಿಗೆ ಒಮ್ಮೆಲೆ ಅನಿಸಿತು.
ಹತ್ತು ವರ್ಷಗಳ ಹಿಂದೆ ಚಿಕ್ಕವರಿದ್ದಾಗ ಆಟವಾಡುತ್ತಿದ್ದ ಹಾಗೆ ಮರದ ಮರೆಯಲ್ಲಿ ನಿಂತು ಚಿರುಕಂಡ, ಮಲಗಿದ ಅಪ್ಪುವಿನೆಡೆಗೆ ಪುಟ್ಟ ಕಲ್ಲೆಸೆದ. ಎರಡನೆಯದು ತಾಕಿತ್ತು. ಧಿಗ್ಗನೆ ಮಗ್ಗುಲು ಹೊರಳಿ, ಮೊಣಕ್ಕೆಯೂರಿ ಕತ್ತೆತ್ತಿ ಅಪ್ಪು. ಅತ್ತಿತ್ತ ನೋಡಿದ. ಚಿರುಕಂಡ ನಗುತ್ತ ಮರೆಯಿಂದ ಹೊರ ಬಂದ.
"ನಿರಾಶೆಯಾಯ್ತೇನೋ? ಯಾರೂಂತಿದ್ದೆ?"
ಅಪ್ಪುವಿನ ಮುಖ ಕೆಂಪಡರಿತು. ಆತ ಚಿರುಕಂಡನನ್ನು ದುರದುರನೆ ನೋಡಿ ಹೇಳಿದ:"ಬಾ, ಕೂತ್ಕೋ!"
ಬೇರೆ ದಿನವಾಗಿದ್ದರೆ, ಸೋಮಾರಿತನದ ವಿಷಯದಲ್ಲಿ ಚಿರುಕಂಡನ ಟೀಕೆಯ ಪೀಠಿಕೆಯಿಂದಲೇ ಸಂಭಾಷಣೆ ಮೊದಲಾಗುತ್ತಿತ್ತು. ಈ ದಿನ ಹಾಗೆ ಮಾಡದೆ ಚಿರುಕಂಡ ನೆರವಾಗಿಯೇ ವಿಷಯಕ್ಕೆ ಬಂದ.
"ಚರ್ವತ್ತೂರಿನಲ್ಲಿ ನಾಳೆ ರಾತ್ರೆ ಕಾರ್ಯಕರ್ತರ ಸಭೆ ಇಟ್ಟಿದ್ದಾರೆ. ನಿನಗೆ ತಿಳಿಸು ಅಂದರು ಮಾಸ್ತರು."
ಕರ್ತವ್ಯನಿಷ್ಮೆ ಇರುವೆಯ ಕಡಿತದಂತೆ ಅಪ್ಪುವನ್ನು ಎಚ್ಚರಗೊಳಿಸಿತು.
"ಹೂ. ಎಲ್ಲರಿಗೂ ಹೇಳಿದ್ಯಾ?"
"ನಾವಿಬ್ಬರೆ ಸಾಕು ಅಂದರು."
"ಮಾಸ್ತರು ಬರ್ತಾರಾ?"
"ಹೂಂ"
ಮಾಸ್ತರು ಕೂಡಾ ನಾಳೆ ಸಭೆಗೆ ಬರುವರೆಂಬ ಸುದ್ದಿಯಿಂದ, ಅವರು ಬೇಗನೆ ಹೊರಟೇ ಹೋಗುವರೆಂಬ ನೆನಪು ಜಾಗೃತವಾಗಿ, ಅಪ್ಪು ಮತ್ತೆ ಖಿನ್ನನಾದ. ಮುಖದಲ್ಲಾದ ಬದಲಾವಣೆಯನ್ನು ಗಮನಿಸಿದ ಚಿರುಕಂಡ:
"ಸ್ನಾನ ಆಯ್ತೇನು?" ಎಂದು ಕೇಳಿದ.
"ಹೂಂ."
"ನಡಿ ಹಾಗಾದರೆ, ಬಟ್ಟೆ ಹಾಕ್ಕೋ."
....ಅವರು ನಡೆಯುತ್ತಿದ್ದಂತೆ ಚಿರುಕಂಡ ಹೇಳಿದ:
"ಬರ್ತಾ ಕಣ್ಣನ ಮನೆಗೆ ಹೋಗಿದ್ದೆ."
ಅಪ್ಪುಸರಕ್ಕನೆ ಆತನತ್ತ ನೋಡಿದ. ಆ ನೋಟವನ್ನು ಗಮನಿಸಿ ಚಿರುಕಂಡ ಮುಂದುವರಿಸಿದ: