ಪುಟ:Chirasmarane-Niranjana.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಚಿರಸ್ಮರಣೆ

೩೫

ನಟ್ಟಿದ್ದುದನ್ನು ಕ೦ಡು ಅವನಿಗೆ ಆಶ್ಚರ್ಯವಾಯಿತು. ಕ್ಷಣಕಾಲ ಅಸಹನೆ ಎನಿಸಿತು. ಮತ್ತೆ, ತನ್ನ ಸ್ನೇಹಿತ ಚಿರುಕಂಡ ಒಳ್ಳೆಯವನು ಬುದ್ಧಿವಂತ ಎನ್ನುವ ಭಾವನೆ, ಯೋಚನೆಗಳನ್ನು ಮಧುರಗೊಳಿಸಿತು. ಆದರೂ ಮೌನವಾಗಿ ತಾನೊಬ್ಬನೇ ಇರಲಾರದೆ ಅಪ್ಪು ಚಿರುಕ೦ಡನ ತೊಡೆಯನ್ನು ಮೆಲ್ಲನೆ ತಿವಿದು ಪಿಸುದನಿಯಲ್ಲಿ ಕೇಳಿದ:
"ಅವರು ಬಂದಿದ್ದಾರೋ ಏನೂಂತ ಕೇಳಿ ನೋಡು."
"ಊಹೂಂ. ಹಾಗೆಲ್ಲ ಕೇಳಬಾರ್ದು."
ಸುಮ್ಮನಿರೆ೦ದು ಸೂಚಿಸುವಹಾಗಿತ್ತು ಚಿರುಕ೦ಡನ ಧ್ವನಿ.
ಅವಲಕ್ಕಿಯ ಡಬ್ಬದ ಬದಿಯಿ೦ದೊ೦ದು ಬೀಡಿಯನ್ನು ಕೈಗೆತ್ತಿಕೊ೦ಡು ಅಂಗಡಿಯವನು ನಗುತ್ತ ಕೇಳಿದ:"ನೀವು ಬೀಡಿ ಸೇದ್ತೀರೇನು?"
"ಇಲ್ಲಪ್ಪ !"
ಹಾಗೆ ಇಬ್ಬರಿಂದಲೂ ಒಂದೇ ರೀತಿಯ ಉತ್ತರ ಬಂತು.
"ಒಳ್ಳೆದು, ಈಗ್ಲೇ ಸೇದಬೇಡಿ. ಇದರಿಂದ ಯಾವ ಸುಖವೂ ಸಿಗೋದಿಲ್ಲ.
ಚಿರುಕಂಡ ಪತ್ರಿಕೆಯನ್ನು ಮಡಚಿ ಬದಿಗಿರಿಸಿ ಕೇಳಿದ:
"ಸುಖ ಇಲ್ದೇ ಇದ್ದ ಮೇಲೆ ನೀವು ಯಾಕೆ ಸೇದ್ತೀರಾ?"
ಅ೦ಗಡಿಯವನು ಉತ್ತರ ಕೊಡಲಿಲ್ಲ. ಸುಮ್ಮನೆ ನಕ್ಕು, ಒಲೆಯತ್ತ ಬಾಗಿ ಕೆ೦ಡಕ್ಕೆ ಬೀಡಿ ಮುಟ್ಟಿಸಿ, ತುಟಿಗಳಿಗಿಟ್ಟು, ಉಸಿರೆಳೆದು ಛಾವಣಿ ನೋಡುತ್ತ ಹೊಗೆಯುಗುಳಿದ.
ಅಪ್ಪುವಿಗೆ, ಮಾಸ್ತರು ಬೀಡಿ ಸೇದುವ ರೀತಿ ನೆನಪಾಯಿತು.
"ನಮ್ಮ ಮಾಸ್ತರು ತುಂಬಾ ಸೇದ್ತಾರೆ, ಅಲ್ಲ?"
ಚಿರುಕ೦ಡ "ಹೂ೦" ಎನ್ನುವುದಕ್ಕೂ ಬಿಳಿಯ ಅಡ್ಡಪ೦ಚೆ ಜುಬ್ಬ ತೊಟ್ಟಿದ್ದ ಯುವಕನೊಬ್ಬ ಒಳ ಬರುವುದಕ್ಕೂ ಸರಿಹೋಯಿತು.
ಬಂದವನು ಹುಡುಗರನ್ನೊಮ್ಮೆ ನೋಡಿ ಅಂಗಡಿಯವನನ್ನು ಕೇಳಿದ:
"ಇವರೇ ಏನು?"
ಅಂಗಡಿಯವನು ಹೌದೆನ್ನುವಂತೆ ತಲೆದೂಗಿದೊಡನೆ ಹುಡುಗರತ್ತ ಆ ಯುವಕ ತಿರುಗಿದ: "ನನ್ನ ಜತೇಲಿ ಬನ್ನಿ."
ಅಪ್ಪು ಮತ್ತು ಚಿರುಕಂಡ ಲಗುಬಗೆಯಿಂದ ಎದ್ದರು.
"ನಾವು ಹೋಗಿ ಬರ್ತೇವೆ ಎಂದು ಅಂಗಡಿಯವನಿಗೆ ಹೇಳಿದರು.
"ಹೂ೦ ಹೋಗಿ ಬನ್ನಿ. ಅಗಾಗ್ಗೆ ಬರ್ತಾನೆ ಇರಿ. ಇನ್ನೊಂದ್ಸಲ ಬಂದಾಗ ಕೇಟ್ಟಿ