ಚಿರಸ್ಮರಣೆ
೮೯
ಸಾಗಿತು.ತ್ರಿಕರಪುರದ ಚಂದು, ಚಿರುಕಂಡನ ಕುಟುಂಬಕ್ಕೆ ಒದಗಿದ ದುರವಸ್ಥೆ,
ಬಾಲ್ಯದ್ದೊಂದು ಕಹಿನೆನಪು, ತುಂಬ ತಿಳಿದವರಾದ ಮಾಸ್ತರು,ಅವರಿಗಿಂತಲೂ
ಹೆಚ್ಚು ಬಲ್ಲ ಪಂಡಿತರು-ಪಂಡಿತರ ಗಂಭೀರ ಧ್ವನಿ :'ಈ ಮಣ್ಣು ಯಾರದು?
ನಮ್ಮದು. ಇದು ನಮ್ಮ ತಾಯ್ನೆಲ.ಈ ದೇಶ ಯಾರದು? ನಮ್ಮದು.ಇದು
ನಮ್ಮ ರಾಷ್ಟ್ರ.ಹೊಲ ಯಾರದು? ಉಳುವವನದು.ಉಳುವವನೇ ಹೊಲದ
ಒಡೆಯ...ಹೌದೊ ಅಲ್ಲವೊ?'
ಹೌದು.ಸಂದೇಹವಿರಲಿಲ್ಲ. ಅಪ್ಪುವಿಗೆ ಅದೆಲ್ಲವೂ ತಿಳಿದಿತ್ತು.
ಆದರೆ ಚಿರುಕಂಡನ ತಂದೆ ಹೊಲ ಕಳೆದುಕೊಂಡಿದ್ದ.ನಾಳೆ ಆ ಸಂಸಾರವನ್ನು ಜಮೀನ್ದಾರರರು ಹೊಲ ಬಿಡಿಸಿ ಓಡಿಸಬಹುದು.ಚಿರುಕಂಡನ ತಾಯಿ ತಂದೆ ಮಗನೊಡನೆ ಭಿಕಾರಿಗಳಾಗಿ ಊರು ಬಿಡಬೇಕಾಗಿಬರಬಹುದು.ಕ್ರಾಂತಿಗೆ ಈಗತಾನೆ ಸೇರಿದ ಚಿರುಕಂಡನಿಗೇ ಹೀಗಾಗುವುದೆಂದರೆ?ಇದು ಸರಿಯೆ?ಇದುನ್ಯಾಯವೆ?
ಇದು ಸರಿಯಲ್ಲ-ನ್ಯಾಯವಲ್ಲ,ಎಂದು ರೋದಿಸುತ್ತ ಉತ್ತರ ಕೊಡುತ್ತಿತ್ತು
ಮನಸ್ಸು.ಆದರೆ ಆ ಉತ್ತರದ ಹಿಂದೆ ಅಸಹಾಯತೆ ಜೋಲುಮೋರೆ ಹಾಕಿ
ಕುಳಿತಿತ್ತು.
....ಸೂರ್ಯ ಮುಳುಗಿ ಕತ್ತಲಾದಾಗ ಅಪ್ಪುಮನೆ ಸೇರಿದ.
ಆತನ ತಂದೆ ಇನ್ನೂ ಬಂದಿರಲಿಲ್ಲ.ಚಿಮಣಿ ದೀಪದೆದುರು ಮಂಡಿಯೂರಿ
ನೆಲದ ಮೇಲೆ ಒರಗಿಕೊಂಡು ಅಪ್ಪುವಿನ ತಮ್ಮಶಾಲೆಯ ಪಾಠವನ್ನೋದುತ್ತಿದ್ದ.
ಆತನಿಗೆ ಕೀಟಲೆ ಕೊಡುತ್ತಿದ್ದ,ಕಿರಿಯವನು-ಕುಟ್ಟಿ.
ತಮ್ಮನನ್ನು ಕುರಿತು ಅಪ್ಪುವೆಂದ:
"ಮಾಸ್ತರು ಏನಾದರೂ ಕೇಳಿದರೇನೋ?"
ತಮ್ಮ, ಮುಖವೆತ್ತಿ ಅಣ್ಣನನ್ನೊಮ್ಮೆ ನೋಡಿ,ಮತ್ತೆ ಪುಸ್ತಕದಲ್ಲೆ ದೃಷ್ಟಿನೆಟ್ಟು ಹೇಳಿದ:
"ನಿನ್ನೆ ನಿನ್ನಣ್ಣ ಎಷ್ಟು ಹೊತ್ತಿಗೆ ಮನೆ ಸೇರಿದ ಅಂತ ಕೇಳಿದ್ರು."
ಬೇರೇನನ್ನೂ ಮಾಸ್ತರು ಕೇಳುವ ಹಾಗಿರಲಿಲ್ಲ;ತಮ್ಮನಿಗೆ ಅವರೇನನ್ನೂ ಹೇಳುವ ಹಾಗಿರಲಿಲ್ಲ.
ಅಪ್ಪುವಿನ ತಾಯಿ ಹೊರಗೆ ಅಂಗಳದಲ್ಲಿದ್ದ ನೀರೊಲೆಯ ಮಣ್ಣಿನ ಗುಡಾಣಕ್ಕೆ ನೀರು ಸುರಿದು ಉರಿ ಮಾಡಿದಳು. ಅದು,ಹೊಲದಿಂದ ಮರಳುವ ಗಂಡಸಿನ ಸ್ನಾನಕ್ಕೆ ಸಿದ್ಧತೆ.