ಪುಟ:Kannadigara Karma Kathe.pdf/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಬಾದಶಹನ ಪತ್ರವು

೨೨೫

ಸಂಶಯ ಉತ್ಪನ್ನವಾದರೆ, ಕೆಲಸವೇ ಮುಗಿದು ಹೋಯಿತು ? ಆಮೇಲೆ ಇತ್ತಕಡೆಯಿಂದಲೂ ಅತಂತ್ರನು, ಅತ್ತಕಡೆಯಿಂದಲೂ ಅತಂತ್ರನು ಆಗುವೆನು. ಈವೊತ್ತೇ ನಿಮ್ಮ ಮನಸ್ಸಿಗೆ ಬಂದಂತೆ ಮಾಡಿಬಿಡಿರಿ. ನನಗೆ ಪ್ರಾಯಶ್ಚಿತ್ತವಾಗಿಬಿಟ್ಟರೆ, ಮುಂದೆ ನನ್ನ ವಿಷಯವಾಗಿ ಶಂಕಿಸಲಿಕ್ಕೆ ಯಾರಿಗೂ ಆಸ್ಪದವಾದರೂ ಉಳಿಯಲಿಕ್ಕಿಲ್ಲ...... ಎಂದು ನುಡಿಯುತ್ತಿರಲು, ರಾಮರಾಜನು ನಡುವೇ ಬಾಯಿಹಾಕಿ-ಕ್ಷತ್ರಿಯರು ಒಮ್ಮೆ ಬೆನ್ನಿಗೆ ಹಾಕಿಕೊಂಡರೆ, ಬೆನ್ನು ಬಿದ್ದವನು ವೈರಿಯಾಗಿದ್ದರೂ ಆತನ ಉಪೇಕ್ಷೆಯಾಗಲಾರದು. ಆತನು ಮೃತ್ಯುವಿನ ಮುಖಕ್ಕೆ ಎಂದೂ ಬೀಳನು; ಅಂದಬಳಿಕ ನೀವಂತು ನಾನು ಕರೆದಿದ್ದರಿಂದಲೇ ಅಲ್ಲ, ಆಗ್ರಹದಿಂದ ಕರೆದದ್ದರಿಂದ ನನ್ನ ಕಡೆಗೆ ಬಂದವರು. ಇಂಥವರನ್ನು ಇನ್ನು ನಾನು ಶತ್ರುವಿಗೆ ಒಪ್ಪಿಸಬಹುದೋ ? ಇಂಥ ಸಂಶಯವಾದರೂ ನಿಮ್ಮ ಮನಸ್ಸಿನಲ್ಲಿ ಹ್ಯಾಗೆ ಉತ್ಪನ್ನವಾಯಿತು ? ಛೇ, ಛೇ, ಇಂಥ ಅಂಜಬುರುಕುತನವು ನನ್ನಿಂದ ಎಂದೂ ಆಗಲಿಕ್ಕಿಲ್ಲ. ನಿಮ್ಮ ಮೇಲೆ ನನ್ನ ಸಂಪೂರ್ಣ ಪ್ರೇಮವಿರುತ್ತದೆ, ನೀವು ನನಗೆ ಹೊಟ್ಟೆಯ ಮಗನಂತೆ ಕಾಣುವದರಿಂದ, ನಾನು ಇಷ್ಟು ಆಗ್ರಹಮಾಡಿ ನಿಮ್ಮನ್ನು ನನ್ನ ಕಡೆಗೆ ಬರಮಾಡಿಕೊಂಡು ನೌಕರಿಗೆ ಇಟ್ಟುಕೊಂಡಿರುತ್ತೇನೆ, ಯಾವಾಗಲೂ ನೀವು ನನ್ನ ಬಳಿಯಲ್ಲಿಯೇ ಇರಬೇಕೆಂದು ನಿಮ್ಮನ್ನು ಅಂಗರಕ್ಷಕರನ್ನಾಗಿ ನಿಯಮಿಸಿ ಕೊಂಡಿರುವೆನು. ಇನ್ನು ನಾನು ನಿಮಗೆ ಹೆಚ್ಚಿಗೆಯೇನು ಹೇಳಲಿ ? ಇಂಥ ನಿಮ್ಮನ್ನು ನಾನು ಬಾದಶಹನಿಗೆ ಒಪ್ಪಿಸುವೆನೆ? ಇದೆಂಥ ನಿಮ್ಮ ತಿಳುವಳಿಕೆಯು? ತಿರುಗಿ ನನ್ನಮುಂದೆ ಇಂಥ ಮಾತು ಆಡಬೇಡಿರಿ, ಎಂದೂ ಮಾತಾಡಬೇಡಿರಿ. ನನ್ನ ರಾಜ್ಯದ ಮೇಲೆ ಬೇಕಾದ ಪ್ರಸಂಗ ಬರಲಿ, ಅದನ್ನು ನೋಡಿಕೊಳ್ಳಲಿಕ್ಕೆ ನಾನು ಸಮರ್ಥನಿದ್ದೇನೆ. ಈ ಮುಸಲ್ಮಾನ ರಾಜ್ಯಗಳು ನಮ್ಮ ಸುತ್ತುಮುತ್ತು ಮುತ್ತಿಕೊಂಡಿರುವಾಗ, ಹಿಂದು ರಾಜ್ಯವನ್ನು ನಾವು ಈ ಮುಸಲ್ಮಾನ ಬಾದಶಹರ ಗದರಿಕೆಗೆ ಬೆದರಿ ಸಂರಕ್ಷಿಸಿಕೊಂಡಿರುವೆವೋ ? ಛೇ ಛೇ! ಇಂಥ ವಿಚಾರವನ್ನು ಸಹ ಮನಸ್ಸಿನಲ್ಲಿ ತಂದುಕೊಳ್ಳಬೇಡಿರಿ. ಇನ್ನು ಮೇಲೆ ನೀವು ಹಿಂದೂ ರಾಜರ ನೌಕರರಾಗಿರುತ್ತೀರಿ. ಹಿಂದುಗಳೇ ಆಗಿರುತ್ತೀರಿ, ನಾವು ಇನ್ನು ನಿಮ್ಮ ವಿಷಯವಾಗಿ ಅಭಿಮಾನಪಡುವಂತೆ, ನೀವಾದರೂ ನಮ್ಮ ವಿಷಯವಾಗಿ ಅಭಿಮಾನಪಡಿರಿ; ಮತ್ತು ನಿಮ್ಮ ವಶಕ್ಕೆ ನಾನು ಈಗ ಕೊಡಬೇಕಾಗಿರುವ ಪಠಾಣ ಸೈನ್ಯವನ್ನು ಇನ್ನಿಷ್ಟು ಹೆಚ್ಚಿಸಿರಿ. ಬೇರೆ ಸೈನ್ಯಗಳನ್ನೂ ವ್ಯವಸ್ಥೆಗೊಳಿಸಿರಿ. ಇನ್ನು ಹಿಂದೂ ರಾಜ್ಯವನ್ನು ರಕ್ಷಿಸುವ ವಿಚಾರಗಳು ನಿಮ್ಮ ಮನಸ್ಸಿನಲ್ಲಿ ಸ್ಥಿರವಾಗಲಿ, ಬಾದಶಹರು ನಿಮ್ಮನ್ನು ಅವಮಾನಗೊಳಿಸಿದಂತೆ