ಪುಟ:Kannadigara Karma Kathe.pdf/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೫೬

ಕನ್ನಡಿಗರ ಕರ್ಮಕಥೆ

೨೮ನೆಯ ಪ್ರಕರಣ

ರಣಮಸ್ತಖಾನನ ಕಪಟನಾಟಕವು

ರಣಮಸ್ತಖಾನನು ತನ್ನ ಮಗನೆಂಬದು ರಾಮರಾಜನಿಗೆ ತೊಂಬತ್ತರೊಂಬತ್ತು ಪಾಲು ಗೊತ್ತಾದಂತಾಗಿತ್ತು. ಅದರಲ್ಲಿ ರಣಮಸ್ತನ ರೂಪ ತೇಜಸ್ವಿತೆಗಳೂ ರಾಯನ ಮನಸ್ಸನ್ನು ಪೂರ್ಣವಾಗಿ ಆಕ್ರಮಿಸಿದ್ದರಿಂದ, ರಣಮಸ್ತನೆಂದರೆ ರಾಮರಾಜನು ಜೀವ ಕಳೆದುಕೊಳ್ಳುತ್ತಿದ್ದನು. ರಣಮಸ್ತನು ಒಂದು ಕ್ಷಣ ಮರೆಯಾದರೆ ರಾಮರಾಜನಿಗೆ ಚಡಪಡಿಕೆಯಾಗುತಿತ್ತು. ರಾಯನು ಪ್ರೇಮಾಂಧನಾಗಿ ಹೋಗಿದ್ದನು; ಆದರೆ ರಣಮಸ್ತನ ಮನಸ್ಸು ಮಾತ್ರ ಶ್ರದ್ಧವಾಗಿದ್ದಿಲ್ಲ. ಆ ದುಷ್ಟನು ನೂರಜಹಾನಳ ಮುಂದೆ ಮಾಡಿದ್ದ ತನ್ನ ಪ್ರತಿಜ್ಞೆಯನ್ನು ಕೊನೆಗಾಣಿಸಲು ಹೊಂಚುಹಾಕಿ ಕುಳಿತಿದ್ದನು. ಕಪಟ ನಾಟಕದ ಹೊರತು ರಾಮರಾಜನ ಶಿರಸ್ಸು ಹಾರಿಸುವದು ಆಗಬೇಕೆಂದು ಆತನು ತಿಳಿದಿದ್ದನು. ವಿಜಾಪುರಕ್ಕೆ ಹೋದಾಗ, ಆ ದುಷ್ಟ ರಣಮಸ್ತನ ಅಪಮಾನವಾದಂತೆ ಜನರಿಗೆಲ್ಲ ತೋರಿತು. ಆದರೆ ಬಾದಶಹನ, ಹಾಗು ರಣಮಸ್ತನ ಗುಪ್ತಾಲೋಚನೆಗಳು ನಡೆದು, ಕಪಟನಾಟಕವನ್ನು ರಚಿಸುವದಕ್ಕಾಗಿಯೇ ಆ ಪ್ರಸಂಗವು ಒದಗಿತ್ತು. ರಣಮಸ್ತನನ್ನು ಮುಖ್ಯವಾಗಿ ಒಂದು ಚಿಂತೆಯು ಯಾವಾಗಲೂ ಬಾಧಿಸುತ್ತಿತ್ತು. ತನ್ನ ಕುಲೀನತೆಯ ಸಂಬಂಧದಿಂದ ಶಂಕಿಸಿ, ನೂರಜಹಾನಳು ತನ್ನನ್ನು ಎಲ್ಲಿ ಲಗ್ನವಾಗದೆ ಬಿಡುವಳೋ ಎಂದು ಆತನು ಯಾವಾಗಲೂ ಆಲೋಚಿಸತ್ತಿದ್ದನು. ಆ ಆಲೋಚನೆಯೊಂದೇ ಆತನ ಶರೀರದ ಕ್ಷೀಣತೆಗೆ ಕಾರಣವಾಗಿತ್ತು. ಅದರಲ್ಲಿ ಮಾಸಾಹೇಬರು ವಿಜಾಪುರಕ್ಕೆ ಹೋಗಿಬಂದು, ನೂರಜಹಾನಳ ಪ್ರಾಪ್ತಿಯ ಸಂಬಂಧದಿಂದ ನಿರಾಶೆಯನ್ನು ಪ್ರಕಟಿಸಿದಾಗಿನಿಂದಂತು, ಆತನ ಚಿಂತೆಯು ಮತ್ತಷ್ಟು ಹೆಚ್ಚಿತು; ಆದರೂ ತಾನು ತನ್ನ ಪ್ರತಿಜ್ಞೆಯನ್ನು ನೆರವೇರಿಸಿ, ನೂರಜಹಾನಳ ಪ್ರಾಣಿಗ್ರಹಣದ ಪ್ರಾತ್ತತೆಯನ್ನು ಪಡೆಯುವದನ್ನಂತು ಪಡೆಯಬೇಕೆಂದು ಆತನು ನಿಶ್ಚಯಿಸಿದ್ದನು. ಈತನ ನಿಶ್ಚಯಕ್ಕೆ ರಾಮರಾಜನ ಪುತ್ರವ್ಯಾಮೋಹವು ಅನಾಯಾಸವಾಗಿ ಅನುಕೂಲಿಸಿತು. ವಿನಾಶಕಾಲಕ್ಕೆ ಅನುಸರಿಸಿ ರಣಮಸ್ತನ